BBK 12: "ತುಂಬಾ ಮನಸ್ಸಿಗೆ ನೋವು ಮಾಡಿದ್ದೇನೆ.. ಸಾರಿ"; ಅಶ್ವಿನಿ ಗೌಡಗೆ ಗಿಲ್ಲಿ ಕ್ಷಮೆ
ಬಿಗ್ ಬಾಸ್ ಕನ್ನಡ ಸೀಸನ್ 12 ಇನ್ನೇನು ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಮುಗಿದು, ಈ ಬಾರಿ ವಿನ್ನರ್ ಯಾರು ಅನ್ನೋ ಸತ್ಯ ಹೊರಬೀಳಲಿದೆ. ಇಲ್ಲಿವರೆಗೂ ಬಿಗ್ ಬಾಸ್ ಕಿರೀಟ ಗೆಲ್ಲುವುದಕ್ಕೆ ಸ್ಪರ್ಧಿಗಳು ಪರಸ್ಪರ ಪೈಪೋಟಿಗೆ ಬಿದ್ದಿದ್ದರು. ಕೆಲವೊಮ್ಮೆ ಕಿತ್ತಾಡಿಕೊಂಡಿದ್ದರು. ಕೆಲವೊಮ್ಮೆಯಂತೂ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದರು.
ಅದರಲ್ಲೂ ಇಡೀ ಸೀಸನ್ನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಕಿತ್ತಾಡಿಕೊಂಡಷ್ಟು ಬೇರೆ ಯಾರು ಕಿತ್ತಾಡಿಕೊಂಡಿಲ್ಲ. ನಾ ಮೇಲು.. ನಾ ಮೇಲು ಎಂದು ಹೋಗಿದ್ದೇ ಹೆಚ್ಚು. ಕೆಲವೊಮ್ಮೆ ಇಬ್ಬರೂ ಏಕವಚನ ಬಳಸಿದ್ದೂ ಉಂಟು. ಕೂಗಾಡಿ ರಂಪಾಟ ಮಾಡಿದ್ದೂ ಕೂಡ ಉಂಟು. ಈ ಬಾರಿ ಬಿಗ್ ಬಾಸ್ ಗೆಲ್ಲುವ ಪ್ರಬಲ ಸ್ಪರ್ಧಿಗಳಲ್ಲಿ ಇವರಿಬ್ಬರ ಹೆಸರು ಮುಂಚೂಣಿಯಲ್ಲಿ ಇದೆ.

ಇನ್ನೇನು ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹಂತದಲ್ಲಿರುವಾಗ ಮನೆಯೊಳಗೆ ಅಚ್ಚರಿಯೊಂದು ನಡೆದಿದೆ. ಹಾವು-ಮುಂಗೂಸಿಯಂತೆ ಕಿತ್ತಾಡುತ್ತಿದ್ದ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಇಬ್ಬರೂ ಪರಸ್ಪರ ಕ್ಷಮೆ ಕೇಳುವ ಹಂತಕ್ಕೆ ಬಂದಿದ್ದಾರೆ. ಅದರಲ್ಲೂ ಇಡೀ ಸೀಸನ್ ಉದ್ದಕ್ಕೂ ಕ್ಷಮೆ ಕೇಳುವುದಕ್ಕೆ ಹಿಂದೇಟು ಹಾಕುತ್ತಿದ್ದ ಗಿಲ್ಲಿ ನಟ ಈಗ ತನ್ನ ಎದುರಾಳಿ ಅಶ್ವಿನಿ ಗೌಡಗೆ ಕ್ಷಮೆ ಕೇಳಿದ್ದಾರೆ.
ಬಿಗ್ ಬಾಸ್ ಕನ್ನಡ 12 ಭಾನುವಾರ ಅಂದರೆ, ಜನವರಿ 18ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಅಖಾಡದಲ್ಲಿ ಆರು ಮಂದಿ ಸ್ಪರ್ಧಿಗಳು ಇದ್ದಾರೆ. ಅದರಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಕೂಡ ಇದ್ದಾರೆ. ಉಳಿದಂತೆ ರಘು, ಕಾವ್ಯಾ, ರಕ್ಷಿತಾ ಶೆಟ್ಟಿ ಹಾಗೂ ಧನುಷ್ ಉಳಿದುಕೊಂಡಿದ್ದಾರೆ. ಇವರಲ್ಲಿ ಯಾರು ಬಿಗ್ ಬಾಸ್ ಸೀಸನ್ 12 ಅನ್ನು ಗೆಲ್ಲುವರೋ ಅನ್ನೋದು ಕುತೂಹಲಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ.
ಬಿಗ್ ಬಾಸ್ ಫಿನಾಲೆಗೂ ಮುನ್ನ ಮನೆಯೊಳಗೆ ಉಳಿದುಕೊಂಡಿರುವ ಸ್ಪರ್ಧಿಗಳಿಗೆ ಟಾಸ್ಕ್ ಒಂದನ್ನು ನೀಡಲಾಗಿತ್ತು. ಇಲ್ಲಿವರೆಗೂ ಅವರು ಮಾಡಿ ತಪ್ಪುಗಳನ್ನು ಹೇಳಬೇಕಿತ್ತು. ಹಾಗೇ ಮನೆಯ ಯಾವ ಸದಸ್ಯರಿಗಾದರೂ ನೋವಾಗುವಂತೆ ಮಾಡಿದ್ದರೂ ಅವರಿಗೆ ಕ್ಷಮೆ ಕೇಳುವ ಅವಕಾಶವನ್ನು ನೀಡಲಾಗಿತ್ತು. ಈ ಟಾಸ್ಕ್ನಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಇಬ್ಬರೂ ಪರಸ್ಪರ ಕ್ಷಮೆ ಕೇಳಿದ್ದಾರೆ.
ಅದರಲ್ಲೂ ಗಿಲ್ಲಿ ತನ್ನ ಪ್ರತಿಸ್ಪರ್ಧಿ ಅಶ್ವಿನಿ ಗೌಡಗೆ ಕ್ಷಮ ಕೇಳಿದ್ದು ಹೈಲೈಟ್ ಆಗಿದೆ. "ಜಗಳ ಆಡುವ ಭರದಲ್ಲಿ ನಾನೇ ನಿಮಗೆ ಹೋಗೆ ಬಾರೆ ಅಂತ ಮಾತಾಡಿದೀನಿ. ಅದರ ಅವಶ್ಯಕತೆ ಇರಲಿಲ್ಲ. ಯಾಕೆಂದ್ರೆ ನೀವು ವಯಸ್ಸಿನಲ್ಲಿ ದೊಡ್ಡವರು. ಅದೆನ್ನೆಲ್ಲ ನೆನಪಿಸಿಕೊಂಡಾಗ ಸಿಕ್ಕಾಪಟ್ಟೆ ಬೇಜಾರಾಗುತ್ತದೆ. ತುಂಬಾ ಮನಸ್ಸಿಗೆ ನೋವು ಮಾಡಿದ್ದೀನಿ. ಅದಕ್ಕೆ Sorry:" ಎಂದು ಗಿಲ್ಲಿ ಕ್ಷಮೆ ಕೇಳಿದ್ದಾರೆ.
ಇತ್ತ ಅಶ್ವಿನಿ ಗೌಡ ಕೂಡ ಗಿಲ್ಲಿ ಪರವಾಗಿ ಮಾತಾಡಿದ್ದಾರೆ. "ಜೀವನವನ್ನು ನಿನ್ನ ಹಾಗೆ ಲೈಟ್ ಆಗಿ ತಗೊಂಡು ಎಂಜಾಯ್ ಮಾಡ್ಬೋದು. ಎಲ್ಲವೂ ಸೀರಿಯಸ್ ಆಗಿಯೇ ತಗೆದುಕೊಳ್ಳಬೇಕು ಅಂತೇನು ಇಲ್ಲ. ಇದಕ್ಕಾಗಿ ನಿನಗೆ ಥ್ಯಾಂಕ್ಸ್ ಕೂಡ ಹೇಳುತ್ತೇನೆ. ಯಾಕಂದ್ರೆ ನಿನ್ನಿಂದ ಪಾಠ ಕಲಿತಿದ್ದೀನಿ" ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಇಬ್ಬರೂ ಪರಸ್ಪರ ಅಪ್ಪಿಕೊಂಡು ಮುನಿಸು, ಕೋಪನ್ನು ಮರೆತಿದ್ದು, ಸ್ನೇಹಕ್ಕೆ ಬರೆದ ಮುನ್ನುಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











