ಬೆಟ್ಟದ ಹೂ: ರಾಹುಲ್ಗೆ ಡಿವೋರ್ಸ್ ಕೊಡಲು ನಿರ್ಧರಿಸಿದ ಹೂವಿ..!
ಹೂವಿ ಮತ್ತು ರಾಹುಲ್ ಸತ್ಯವನ್ನು ಮನೆಯವರೆಲ್ಲರ ಎದುರು ಹೇಳುತ್ತೇನೆ ಎಂದು ನಿಶಾಂತ್ ಹೇಳಿ ಆಗಿದೆ. ಮಾಲಿನಿ ಬೇಕಾ ಅಥವಾ ಹೂವಿ ಬೇಕಾ ಅಂತ ನಿರ್ಧರಿಸಿ ಒಬ್ಬರಿಗೆ ಡಿವೋರ್ಸ್ ಕೊಡು ಅಂತಾನೂ ರಾಹುಲ್ಗೆ ನಿಶಾಂತ್ ಆಯ್ಕೆ ಕೊಟ್ಟಿದ್ದಾನೆ. ಈ ಮಧ್ಯೆ ಹೂವಿಯೇ ನಿರ್ಧಾರ ಮಾಡಿಯಾಗಿದ್ದು, ನಾನೇ ಡಿವೋರ್ಸ್ ಕೊಡುತ್ತೇನೆಂದು ಹೇಳುತ್ತಿದ್ದಾಳೆ.
ನಿಶಾಂತ್ಗೆ ಹೂವಿ ಸಾಕಷ್ಟು ಮನವಿಯನ್ನು ಮಾಡಿಕೊಂಡಿದ್ದಾಳೆ. ಆದರೂ ನಿಶಾಂತ್ ತನ್ನ ಹಠವನ್ನು ಮುಂದುವರೆಸಿದ್ದಾನೆ. ನಾನು ಎಲ್ಲರ ಮುಂದೆ ಹೇಳುತ್ತೇನೆ ಎಂದಿದ್ದಾನೆ. ಎಲ್ಲರೂ ಊಟಕ್ಕೆ ಕುಳಿತಾಗ ನಿಶಾಂತ್, ಯಾವುದೋ ಒಂದು ವಿಚಾರವನ್ನು ಹೇಳಬೇಕು. ಊಟ ಆದ ಮೇಲೆ ಸಿಗೋಣಾ ಎಂದಿದ್ದಾನೆ. ಇದು ರಾಹುಲ್ ಮತ್ತು ಹೂವಿಯ ಆತಂಕವನ್ನು ಹೆಚ್ಚು ಮಾಡಿದೆ.

ರಾಹುಲ್-ಹೂವಿಯ ನಡವಳಿಕೆ ಅರಿತ ಮಾಲಿನಿ
ನಿಶಾಂತ್ ಈ ರೀತಿ ಹೇಳಿದ್ದನ್ನು ಕೇಳಿ ಹೂವಿಗೆ ಟೆನ್ಶನ್ ಶುರುವಾಗಿದೆ. ರಾಹುಲ್ ಗೆ ಆತಂಕವಿದ್ದರೂ ಏನಾದರೂ ಆಗಲಿ ಎಂದು ಸುಮ್ಮನೆ ಆಗಿ ಬಿಟ್ಟಿದ್ದಾನೆ. ಹೂವಿ ನಿಶಾಂತ್ಗೆ ಊಟ ಬಡಿಸುವಾಗ ಅನ್ನವನ್ನು ಕೆಳಗೆ ಹಾಕಿದ್ದನ್ನು ಮನೆಯವರೆಲ್ಲಾ ಗಮನಿಸಿದ್ದಾರೆ. ಮಾಲಿನಿಗೆ ಒಳಗೊಳಗೆ ಸಂಶಯ ಶುರುವಾಗಿದೆ. ಚನ್ನವಲ್ಸೆಯಿಂದ ಯಾವುದೋ ವಿಚಾರವನ್ನು ಮುಚ್ಚಿಟ್ಟಿಕೊಂಡು ಬಂದಿದ್ದಾರೆ. ಏನೋ ನಡೆಯುತ್ತಿದೆ ಎಂದು ತಿಳಿಯುವ ಯತ್ನ ಮಾಡಿದ್ದಾಳೆ. ಯಾಕೆಂದರೆ ಚನ್ನವಲ್ಸೆಯಲ್ಲೂ ಹೂವಿ ಮತ್ತು ರಾಹುಲ್ ಮದುವೆ ಬಗ್ಗೆ ಮುಚ್ಚಿಟ್ಟಿದ್ದರು. ಹೂವಿಗೆ ಮತ್ತೊಂದು ಮದುವೆ ಮಾಡೋಣಾ ಎಂದಾಗಲೂ ದೀಪ್ತಿ ಹೂವಿಯ ಪರವಾಗಿ ನಿಂತಿದ್ದಳು ಇದು ಅನುಮಾನಕ್ಕೆ ಕಾರಣವಾಗಿದೆ.

ಹೂವಿ ನಿರ್ಧಾರ ಕೇಳಿ ರಾಹುಲ್ ಶಾಕ್
ಮನೆಯಲ್ಲಿ ಈ ಸಮಸ್ಯೆಗೆ ಏನಾದರೂ ಪರಿಹಾರ ಕಂಡುಕೊಳ್ಳಲೇಬೇಕು ಎಂದುಕೊಂಡ ಹೂವಿ ಒಂದು ನಿರ್ಧಾರಕ್ಕೆ ಬಂದಿದ್ದಾಳೆ. ನಾನೇ ದೂರವಾಗಬೇಕು ಎಂದುಕೊಂಡಿದ್ದ ಹೂವಿ, ದೀಪ್ತಿಯಿಂದ ಡಿವೋರ್ಸ್ ಬಗ್ಗೆ ಸರಿಯಾಗಿ ಮಾಹಿತಿ ಪಡೆದಿದ್ದಾಳೆ. ಬಳಿಕ ಮಾಲಿನಿ ಮತ್ತು ರಾಹುಲ್ ಚೆನ್ನಾಗಿರಬೇಕೆಂದು ಬಯಸಿ ನಾನೇ ಡಿವೋರ್ಸ್ ಕೊಡುತ್ತೀನಿ ಎಂದು ಹೇಳಿದ್ದಾಳೆ. ಇದನ್ನು ಕೇಳಿದ ರಾಹುಲ್ಗೆ ಶಾಕ್ ಆಗಿದೆ. ಹೂವಿಯನ್ನು ಗದರಿದ್ದಾನೆ. ತನ್ನಲ್ಲಿರುವ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಆಗದೆ ರಾಹುಲ್ ಸಂಕಟ ಪಡುತ್ತಿದ್ದಾನೆ.

ಹೂವಿ ಹೆಸರಿಗೆ ಆಸ್ತಿ ಬರೆದ ಗೌತಮ್
ಹೂವಿಯ ಹಿಂದೆ ಎರಡು ಸತ್ಯ ಒಂದೇ ಮನೆಯಲ್ಲಿ ಅಡಗಿದೆ. ಒಂದು ತಂದೆ ಯಾರು ಎಂಬುದು ತಿಳಿದಿಲ್ಲ. ಮತ್ತೊಂದು ಗಂಡ ಯಾರೆಂಬುದು ಮನೆಯವರಿಗೆ ಗೊತ್ತಿಲ್ಲ. ಸತ್ಯ ಹೇಳಿ ಬಿಡುತ್ತೀನಿ ಅಂತ ರಾಹುಲ್ ಮುಂದೆ ಹೋದಾಗಲೂ ಹೂವಿ ತಡೆದಿದ್ದಾಳೆ. ಸತ್ಯ ಹೇಳಲೇಬೇಕು ಎಂದು ಗೌತಮ್ ಬಂದಾಗಲೂ ಗೌತಮ್ ತಾಯಿ ತಡೆದಿದ್ದಾರೆ. ಆದರೆ ಗೌತಮ್ಗೆ ಸಾಕಷ್ಟು ಗಿಲ್ಟ್ ಫೀಲ್ ಆಗುತ್ತಿದ್ದು, ಹೂವಿಯ ಹೆಸರಿಗೆ ಆಸ್ತಿ ಬರೆದು, ಆ ಪತ್ರಗಳನ್ನು ಅಮ್ಮನ ಬಳಿ ಜೋಪಾನವಾಗಿ ಇರಿಸಿದ್ದಾನೆ. ಆದಷ್ಟು ಬೇಗ ಸತ್ಯ ಹೇಳುತ್ತೀನಿ ಎಂದಿದ್ದಾನೆ. ಹೀಗಾಗಿ ಗೌತಮ್ ಸತ್ಯವೇ ಬೇಗ ತಿಳಿದು, ರಾಹುಲ್ಗೆ ಅರ್ಧ ಟೆನ್ಶನ್ ಕಡಿಮೆಯಾಗಬಹುದು.

ಮನೆಯವರಿಂದ ನಿಶಾಂತ್ ಹೇಗೆ ಬಚಾವ್ ಆಗುತ್ತಾನೆ..?
ಇವತ್ತು ಸತ್ಯವನ್ನು ಹೇಳಿಯೇ ಹೇಳುತ್ತೀನಿ ಅಂತ ನಿಶಾಂತ್ ನಿರ್ಧಾರ ಮಾಡಿದ ಮೇಲೆ ಹೂವಿ ಡಿವೋರ್ಸ್ ನಿರ್ಧಾರಕ್ಕೆ ಬಂದಿದ್ದಾಳೆ. ಇದು ನಿಶಾಂತ್ನ ಗೊಂದಲಕ್ಕೆ ದೂಡಿದೆ. ಅತ್ತ ಮನೆಯವರೆಲ್ಲ ನಿಶಾಂತ್ಗಾಗಿ ಕಾದೂ ಕಾದು ಸಾಕಾಗಿದ್ದಾರೆ. ಎಲ್ಲರೂ ಒಟ್ಟಿಗೆ ಟೆರೆಸ್ ಮೇಲೆಯೇ ಬಂದಿದ್ದಾರೆ. ಒಟ್ಟಾಗಿ ನಿಂತು ಮಾತನಾಡುತ್ತಿರುವುದು ಏನು ಎಂದು ಕೇಳಿದ್ದಕ್ಕೆ ಎಲ್ಲರ ಮುಖದಲ್ಲೂ ಭಯ ಕಾಡುತ್ತಿದೆ. ಈಗ ನಿಶಾಂತ್ ಯಾವ ಸತ್ಯ ಹೇಳುತ್ತಾನೆ ಎಂಬುದೇ ಭಯವಾಗಿದೆ.


Click it and Unblock the Notifications











