ಬಿಗ್ಬಾಸ್ ಫಿನಾಲೆಯಲ್ಲಿ ಸುದೀಪ್ ಮುಂದೆ ರಕ್ಷಕ್ ಫುಲ್ ಸೈಲೆಂಟ್; ಕಿಚ್ಚನ ಟ್ರೀಟ್ಮೆಂಟ್ ಹೇಗಿತ್ತು?
ಬಿಗ್ ಬಾಸ್ ಕನ್ನಡ ಸೀಸನ್ 10 ಫಿನಾಲೆ ಈ ಬಾರಿ ಡಿಫ್ರೆಂಟ್ ಆಗಿದೆ. ಈ ಹಿಂದಿನ ಸೀಸನ್ಗಳಲ್ಲೆಲ್ಲ ಒಂದು ದಿನ ನಡೆಯುತ್ತಿತ್ತು. ಆದರೆ, ಈ ಬಾರಿ ಫಿನಾಲೆ ಎರಡೆರಡು ದಿನ ನಡೆಯುತ್ತಿದೆ. ಮೊದಲ ದಿನದ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಈ ಲಾಂಗ್ ಜರ್ನಿಯನ್ನು ಸ್ಪರ್ಧಿಗಳೊಂದಿಗೆ ಮೆಲುಕು ಹಾಕಿದ್ದಾರೆ.
ಕಿಚ್ಚ ಸುದೀಪ್ ಗ್ರ್ಯಾಂಡ್ ಎಂಟ್ರಿ ಬಳಿಕ ವೇದಿಕೆ ಮೇಲೆ ನಗು, ಅಳು, ಮಸ್ತಿ ಎಲ್ಲವೂ ನೋಡೋಕೆ ಸಿಗುತ್ತಿದೆ. ಆದರೆ, ಇದೇ ವೇದಿಕೆ ಮೇಲೆ ನಿರೀಕ್ಷೆ ಮಾಡಿದಂತೆ ಮತ್ತೊಂದು ಇಂಟ್ರೆಸ್ಟಿಂಗ್ ಸನ್ನಿವೇಶವೂ ಎದುರಾಗಿತ್ತು. ಈಗಾಗಲೇ ಎಲಿಮಿನೇಟ್ ಆಗಿರುವ ಸ್ಪರ್ಧಿಗಳೊಂದಿಗೆ ರಕ್ಷಕ್ ಕೂಡ ಆಗಮಿಸಿದ್ದರು. ಈ ವೇಳೆ ಕಿಚ್ಚ ಸುದೀಪ್ ಹಾಗೂ ರಕ್ಷಕ್ ನಡುವೆ ಮಾತುಕತೆ ನಡೆದಿತ್ತು.

ಕೆಲವು ದಿನಗಳ ಹಿಂದಷ್ಟೇ ರಕ್ಷಕ್ ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ಬಗ್ಗೆ ನೆಗೆಟಿವ್ ಆಗಿ ಮಾತಾಡಿದ್ದರು. ಬಿಗ್ಬಾಸ್ ಮನೆಯಲ್ಲಿರೋ ಸ್ಪರ್ಧಿಗಳು ಸುದೀಪ್ ಬಂದರೆ ಒಂದು ರೀತಿ ಇರುತ್ತಾರೆ. ಅವರನ್ನು ನೋಡಿದ ಕೂಡಲೇ ಸ್ಪರ್ಧಿಗಳ ಅಭಿಪ್ರಾಯಗಳು ಬದಲಾಗುತ್ತವೆ ಎಂದಿದ್ದರು.
ಬಿಗ್ಬಾಸ್ನಲ್ಲಿ ಸ್ಪರ್ಧಿಗಳು ಡ್ರಾಮ ಮಾಡುತ್ತಾರೆ ಎಂದು ರಕ್ಷಕ್ ಸಂದರ್ಶನದಲ್ಲಿ ಹೇಳಿದ್ದರು. "ನನಗೆ ದೊಡ್ಡ ಡ್ರಾಮ ಅನಿಸಿದ್ದು ಅಂದ್ರೆ, ಕಳಪೆ ಉತ್ತಮ ಅನ್ನೋದು ಕೊಡುತ್ತೇವೆ. ನನಗೆ ಇಷ್ಟ ಬಂದಂಗೆ ಕೊಟ್ಟಿದ್ದೇನೆ ಅನ್ನೋ ಲೆವೆಲ್ನಲ್ಲೇ ಇರುತ್ತಾರೆ. ಸುದೀಪಣ್ಣ ಬಂದ ಕೂಡಲೇ ಹೆಂಗೆ ಆಗ್ಬಿಡ್ತಾರೆ ಅಂದ್ರೆ, ಅವರು ಹೆಂಗೆ ಹೇಳ್ತಾರೆ ಹಂಗೆ ಕೇಳ್ಬೇಕು. ಅವರು ದೇವರು, ನಾವು ಭಕ್ತಾಧಿಗಳು ಅಂತ ಅಂದ್ಕೊಳ್ತಾರೆ." ಎಂದು ಸ್ಪರ್ಧಿಗಳು ನಿರ್ಧಾರ ಬದಲಿಸುವ ಬಗ್ಗೆ ರಕ್ಷಕ್ ಮಾತಾಡಿದ್ದರು.
ರಕ್ಷಕ್ ಕೊಟ್ಟ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಆ ಬಳಿಕ ರಕ್ಷಕ್ ಬುಲೆಟ್ ಕಣ್ಣೀರು ಹಾಕುತ್ತಾ ಕಿಚ್ಚ ಸುದೀಪ್ಗೆ ಕ್ಷಮೆ ಕೇಳಿದ್ದರು. ಕಿಚ್ಚ ಸುದೀಪ್ ಪಂಚಾಯ್ತಿಯಲ್ಲಿ ರಕ್ಷಕ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಹಾಗೂ ರಕ್ಷಕ್ ಮುಖಾ-ಮುಖಿಯಾಗಿದ್ದಾರೆ.

ಸ್ಪರ್ಧಿಗಳನ್ನು ಮಾತಾಡಿಸುತ್ತಾ ಬರುತ್ತಿದ್ದಂತೆ ರಕ್ಷಕ್ ಕಡೆಗೆ ತಿರುಗುತ್ತಿದ್ದಂತೆ "ನಾನು ನಿಮಗೆ ಕ್ಷಮೆ ಕೇಳಬೇಕು" ಎಂದರು. ಆಗ ಕಿಚ್ಚ ಸುದೀಪ್ "ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ" ಎಂದು ಕಾಲೆಳೆದರು. ಇಷ್ಟೇ ಅಲ್ಲದೆ ಕಾರ್ಯಕ್ರಮದ ಮಧ್ಯೆದಲ್ಲಿ ಮತ್ತೆ ರಕ್ಷಕ್ ಕಡೆಗೆ ಬಂದು ಕಿಚ್ಚ ಸುದೀಪ್ ಬುದ್ದಿವಾದ ಹೇಳಿದರು. " ನಿಮಗೆ ಯಾರ ಬಗ್ಗೆ ಬೇಕಾದರೂ ಮಾತಾಡುವ ಅಧಿಕಾರವಿದೆ. ಅದರಲ್ಲೇನು ಸಮಸ್ಯೆಯಿಲ್ಲ. ಆದರೆ, ಇನ್ನೊಬ್ಬರಿಗೆ ನೋವು ಕೊಡುವ ಅಧಿಕಾರವಿಲ್ಲ." ಎಂದು ರಕ್ಷಕ್ ಹೇಳಿದ್ರು.
ಹಾಗೇ.. "ಇಲ್ಲಿರುವ ಕೆಲವರು ಸಂದರ್ಶನಗಳಲ್ಲಿ ಮನೆಯೊಳಗೆ ಇರುವ ಸ್ಪರ್ಧಿಗಳ ಬಗ್ಗೆ ಮಾತಾಡಿದ್ದಾರೆ. ಆದರೆ, ಒಂದು ಕ್ಷಣ ರೋಷದಲ್ಲಿ ಮಾತಾಡುತ್ತೇವೆ. ಅದು ಅರ್ಥ ಆಗುತ್ತೆ. ಆದರೆ, ಅದರಿಂದ ಎಷ್ಟು ಜನರನ್ನು ಕಳೆದುಕೊಳ್ಳುತ್ತೇವೆ ಎಂದು ಯೋಚನೆ ಮಾಡಿದ್ದೀರಾ? ಬುಲೆಟ್ ಪ್ರಕಾಶ್ ಅವರನ್ನು ಹೃದಯದಲ್ಲೇ ಇಟ್ಟುಕೊಂಡಿದ್ದೇವೆ. ಅಂದ್ಮೇಲೆ ನಿಮ್ಮನ್ನು ಬಿಡೋಕೆ ಹೇಗೆ ಸಾಧ್ಯ" ಎಂದು ಕಿಚ್ಚ ಸುದೀಪ್ ಬುದ್ದಿಮಾತು ಹೇಳಿದ್ದಾರೆ.


Click it and Unblock the Notifications











