ಶ್ರೀಕಾಂತ್ ಕಶ್ಯಪ್ ಜೊತೆ ಸಪ್ತಪದಿ ತುಳಿದ ಚೈತ್ರಾ ಕುಂದಾಪುರ; ತಾಳಿ ಕಟ್ಟುವ ಶುಭ ವೇಳೆ ಫೈಯರ್ಬ್ರ್ಯಾಂಡ್ ಭಾವುಕ
ಬಿಗ್ ಬಾಸ್ ಕನ್ನಡ ಸೀಸನ್ 11ರ ಚೈತ್ರಾ ಕುಂದಾಪುರ ಅವರ ಹೊಸ ಜೀವನ ಆರಂಭ ಆಗಿದೆ. ಇಂದು (ಮೇ 9) ಕುಂದಾಪುರದ ದೇವಸ್ಥಾನದಲ್ಲಿ ಕೌಟುಂಬಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಚೈತ್ರಾ ಅವರ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಮೆಹಂದಿ ಹಾಗೂ ಮದುವೆ ಶಾಸ್ತ್ರಗಳು ಜೋರಾಗಿಯೇ ಆರಂಭ ಆಗಿದ್ದವು. ಈಗ ಶ್ರೀಕಾಂತ್ ಕಶ್ಯಪ್ ಜೊತೆಯಲ್ಲಿ ಸಪ್ತಪದಿ ತುಳಿದಿದ್ದಾರೆ.
ಕಿಚ್ಚ ಸುದೀಪ್ ಅವರಿಂದ ಫೈಯರ್ ಬ್ರ್ಯಾಂಡ್ ಎನ್ನುವ ಪಟ್ಟ ಪಡೆದುಕೊಂಡು ಬಿಗ್ ಬಾಸ್ ಮನೆಯೊಳಗೆ ಚೈತ್ರಾ ಕುಂದಾಪುರ ಪ್ರವೇಶ ಪಡೆದಿದ್ದರು. ಅಲ್ಲಿಯೇ ಇವರ ಮದುವೆ ಮ್ಯಾಟರ್ ರಿವೀಲ್ ಆಗಿತ್ತು. ಬಿಗ್ ಬಾಸ್ ಮನೆಯಲ್ಲಿ ಮದುವೆ ಫಿಕ್ಸ್ ಆಗಿದೆ ಎನ್ನುವ ಮಾತನ್ನು ಕೂಡ ಕೇಳಿದ್ದರು. ಈಗ ಅದೇ ಹುಡುಗನೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಉಡುಪಿಯ ಹಿರಿಯಡ್ಕ ಮೂಲಕ ಶ್ರೀಕಾಂತ್ ಕಶ್ಯಪ್ ಅವರನ್ನು ಚೈತ್ರಾ ಕುಂದಾಪುರ ಕಾಲೇಜು ದಿನಗಳಿಂದ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರದ್ದು ಸುಮಾರು 12 ವರ್ಷಗಳ ಪ್ರೀತಿ. ಈ ಪ್ರೀತಿ ಈಗ ಹಿರಿಯರ ಸಮ್ಮತಿಯ ಮೇಲೆಗೆ ದಾಂಪತ್ಯಕ್ಕೆ ಕಾಲಿಟ್ಟಿದೆ. ಕುಂದಾಪುರದ ದೇವಸ್ಥಾನದಲ್ಲಿ ಕುಟುಂಬಸ್ಥರು, ಆತ್ಮೀಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶ್ರೀಕಾಂತ್ ಕಶ್ಯಪ್ ತಾಳಿ ಕಟ್ಟುತ್ತಿದ್ದಂತೆ ಚೈತ್ರಾ ಕುಂದಾಪುರ ಭಾವುಕರಾಗಿದ್ದಾರೆ.
ಚೈತ್ರಾ ಕುಂದಾಪುರ ವಿವಾಹ ಹಿಂದೂ ಸಂಪ್ರದಾಯದಂತೆ ನಡೆದಿದೆ. ಕುಂದಾಪುರದ ದೇವಸ್ಥಾನದಲ್ಲಿ ನಡೆದ ಈ ಮದುವೆಗೆ ಕೆಲವು ಮಂದಿಗಷ್ಟೇ ಆಹ್ವಾನ ನೀಡಲಾಗಿತ್ತು. ಚೈತ್ರಾ ಕುಂದಾಪುರ ಮಾಧ್ಯಮಗಳಿಗೆ ಮಾಹಿತಿ ನೀಡಿದಂತೆ ಕೇವಲ 100 ಮಂದಿಗಷ್ಟೇ ಆಹ್ವಾನ ನೀಡಲಾಗಿತ್ತು. ಅದರಲ್ಲಿ ಎರಡೂ ಕಡೆಯ ಕುಟುಂಬಸ್ಥರು, ಆತ್ಮೀಯರಿಗೆ ಆಹ್ವಾನ ನೀಡಲಾಗಿತ್ತು. ತನ್ನ ಬಿಗ್ಬಾಸ್ ಸ್ನೇಹಿತರಿಗೂ ಆಹ್ವಾನ ನೀಡಲಾಗಿತ್ತು.
ಚೈತ್ರಾ ಕುಂದಾಪುರ ಮದುವೆಯಲ್ಲಿ ಬಿಗ್ಬಾಸ್ ಮನೆಯಲ್ಲಿ ಅವರನ್ನು ಕಾಲೆಳೆಯುತ್ತಿದ್ದ ರಜತ್ ಭಾಗಿಯಾಗಿದ್ದರು. ನವದಂಪತಿಗೆ ರಜಯ್ ದಂಪತಿ ಆಶೀರ್ವಾದ ಮಾಡಿದ್ದಾರೆ. ಇನ್ನು ಉಳಿದಂತೆ ಯಾವೆಲ್ಲ ಸೆಲೆಬ್ರೆಟಿಗಳು ಚೈತ್ರಾ ಕುಂದಾಪುರ ಮದುವೆ ಆಗಮಿಸಿದ್ದರು ಎನ್ನುವ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ. ಸದ್ಯಕ್ಕೆ ಕುಟುಂಬಸ್ಥರು ಹಾಗೂ ಆತ್ಮೀಯರು ಭಾಗಿಯಾಗಿದ್ದಾರೆಂದು ಗೊತ್ತಾಗಿದೆ.
ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಇಬ್ಬರೂ ಕಾಲೇಜಿನಲ್ಲಿ ಓದುವಾಗಲೇ ಪರಿಚಯವಿತ್ತು. ಇವರದ್ದು ಸುಮಾರು 12 ವರ್ಷಗಳ ಪ್ರೀತಿ ಎಂದು ಚೈತ್ರಾ ಕುಂದಾಪುರ ಅವರೇ ಹೇಳಿಕೊಂಡಿದ್ದಾರೆ. ಶ್ರೀಕಾಮತ್ ಕಶ್ಯಪ್ ಅವರೂ ಕೂಡ ಚೈತ್ರಾ ಅವರೊಂದಿಗೆ ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದ್ದರು. ಆದ್ರೀಗ ಮಾಧ್ಯಮಗಳಿಂದ ದೂರವಿದ್ದು, ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಪೌರೋಹಿತ್ಯದಲ್ಲಿ ನಿರತರಾಗಿದ್ದಾರೆ.
ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯ ಫೈಯರ್ ಬ್ರ್ಯಾಂಡ್ ಎಂದೇ ಖ್ಯಾತಿಯನ್ನು ಪಡೆದಿದ್ದರು. ಅಷ್ಟೇ ಅಲ್ಲ, ಅವರು ತಮ್ಮ ಭಾಷಣಗಳಿಂದಲೂ ಜನಪ್ರಿಯತೆಯನ್ನು ಪಡೆದುಕೊಂಡಿದ್ದರು. ಇತ್ತೀಚೆಗೆ ವಿವಾದದಲ್ಲಿಯೂ ಸಿಕ್ಕಿಕೊಂಡಿದ್ದರು. ಇಂತಹ ಸಂದರ್ಭದಲ್ಲಿಯೂ ಇವರ ಪ್ರೀತಿ ಧಕ್ಕೆಯಾಗಿಲ್ಲ. ಚೈತ್ರಾ ಕುಂದಾಪುರ ಅವರ ಬೆನ್ನೆಲುವಾಗಿ ಶ್ರೀಕಾಂತ್ ಕಶ್ಯಪ್ ನಿಂತಿದ್ದರು ಎಂದು ಹೇಳಲಾಗುತ್ತಿದೆ. ಈಗ ಇವರಿಬ್ಬರೂ ಎರಡೂ ಕುಟುಂಬಗಳನ್ನು ಒಪ್ಪಿಸಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಹೊಸ ಜೀವನವನ್ನು ಆರಂಭ ಮಾಡಿದ್ದಾರೆ.
ಚೈತ್ರಾ ಕುಂದಾಪುರ ವಿವಾಹವಾಗುತ್ತಿದ್ದಂತೆ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಶುಭವನ್ನು ಕೋರುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ವಿವಾಹದ ಫೋಟೊಗಳು ಹಾಗೂ ವಿಡಿಯೋಗಳು ಹರಿದಾಡುತ್ತಿವೆ. ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಜೋಡಿಯನ್ನು ಮೆಚ್ಚಿಕೊಂಡಿದ್ದಾರೆ. ಆರತಕ್ಷತೆ ಇರುತ್ತಾ? ಸೆಲೆಬ್ರಿಟಿಗಳು ಬರುತ್ತಾರಾ? ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











