BBK 11: 2ನೇ ಬಾರಿ ಹನುಮಂತ ಕ್ಯಾಪ್ಟನ್; ಪಾಪ, ಪೆದ್ದ ಅಂತಿದ್ದವರೆಲ್ಲ ಮುಗಿಬಿದ್ದರು.. ಮುಂದೇನು?
ಬಿಗ್ಬಾಸ್ ಕನ್ನಡ ಸೀಸನ್ 11 ಐದನೇ ವಾರಕ್ಕೆ ಕಾಲಿಟ್ಟಿದೆ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಹನುಮಂತ ಶೈನ್ ಆಗೋಕೆ ಶುರುವಾಗಿದ್ದಾರೆ. ಆರಂಭದ ದಿನಗಳಲ್ಲಿ ಮನೆಯೊಳಗೆ ಬಂದು ಸ್ಪರ್ಧಿಗಳ ಕಿತ್ತಾಟ ನೋಡಿ ಹನುಮಂತ ಕಂಗಾಲಾಗಿದ್ದರು. ಈಗ ನಿಧಾನವಾಗಿ ಒಗ್ಗಿಕೊಳ್ಳುತ್ತಿರುವುದು ಕಾಣಿಸುತ್ತಿದೆ.
ಬಿಗ್ ಬಾಸ್ ಮನೆಯೊಳಗೆ ಕಾಲ ಕಳೆಯೋದು ಅಷ್ಟು ಸುಲಭ ಅಲ್ಲ ಅನ್ನೋದು ಹನುಮಂತನಿಗೆ ಗೊತ್ತಾಗಿ ಹೋಗಿದೆ. ಮನೆಯೊಳಗೆ ಎಂಟ್ರಿ ಕೊಟ್ಟ ಕೂಡಲೇ ಹನುಮಂತನನ್ನು ಕ್ಯಾಪ್ಟನ್ ಮಾಡಲಾಗಿತ್ತು. ಆಗ ನಿಜಕ್ಕೂ ಕ್ಯಾಪ್ಟನ್ಸಿ ಮಾಡುವುದಕ್ಕೆ ಹನುಮಂತ ಪರದಾಡದ್ದರು. ಈಗ ಎರಡನೇ ಬಾರಿಗೆ ಹನುಮಂತ ಕ್ಯಾಪ್ಟನ್ ಆಗಿದ್ದಾರೆ. ಈಗ ಹಳ್ಳಿ ಹೈದ ಅಸಲಿ ಆಟ ಶುರು ಮಾಡಿದ್ದಾನೆ ಅಂತ ನೆಟ್ಟಿಗರು ಕಾಮೆಂಟ್ ಮಾಡುವುದಕ್ಕೆ ಶುರು ಮಾಡಿದ್ದಾರೆ.

ಲಾಯರ್ ಜಗದೀಶ್ ಅವರಿಂದ ಬೇಸತ್ತಿದ್ದ ಮನೆ ಮಂದಿ ಹಳ್ಳಿ ಹೈದ ಹನುಮಂತನನ್ನು ನೋಡಿ ದಿಲ್ ಖುಷ್ ಆಗಿದ್ದರು. ಹನುಮಂತನ ಮುಗ್ಧತೆಗೆ ವೈಲೆಂಟ್ ಆಗಿದ್ದ ಮನೆ ಮಂದಿ ಸೈಲೆಂಟ್ ಆಗಿದ್ದರು. ಹನುಮಂತ ಕೂಡ ತನ್ನ ಮ್ಯಾನರಿಸಂನಿಂದ ತಮಾಷೆ ಮಾಡುತ್ತಾ ಮನೆ ಮಂದಿಯನ್ನು ರಂಜಿಸುತ್ತಿದ್ದರು. ಉತ್ತರ ಕರ್ನಾಟಕ ಭಾಷೆಯಲ್ಲಿ ನಕ್ಕು ನಲಿಸುತ್ತಿದ್ದಾರೆ.
ಕ್ಯಾಪ್ಟನ್ ಆಗುತ್ತಿದ್ದಂತೆ ನಾಮಿನೇಷನ್
ಹನುಮಂತ ಕ್ಯಾಪ್ಟನ್ ಆಗುವುದಕ್ಕೆ ಗೇಮ್ ಮಾಡಲಿಲ್ಲ. ಅದಾಗಿಯೇ ಎರಡನೇ ಬಾರಿ ಕ್ಯಾಪ್ಟನ್ ಆಗುವ ಅವಕಾಶ ಒಲಿದು ಬಂದಿದೆ. ಹೀಗಾಗಿ ಕ್ಯಾಪ್ಟನ್ ಆಗುತ್ತಿದ್ದಂತೆ ಮೂವರು ಮಂದಿಯನ್ನು ನಾಮಿನೇಟ್ ಮಾಡಿದ್ದಾರೆ. ಒಬ್ಬೊಬ್ಬರಿಗೂ ಒಂದೊಂದು ಕಾರಣ ಕೊಟ್ಟು ಗೋಲ್ಡ್ ಸುರೇಶ, ಭವ್ಯಾ ಗೌಡ ಹಾಗೂ ಮಾನಸ ತುಕಾಲಿ ಸಂತೋಷ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದು ಅಸಮಧಾನ ಹೊರಗೆ ಹೊತ್ತಿ ಉರಿಯುವಂತೆ ಮಾಡಿದೆ.
ಹನುಮಂತ ಕೊಟ್ಟ ಕಾರಣವೇನು?
ಹನುಮಂತ ಕ್ಯಾಪ್ಟನ್ ಆಗುತ್ತಿದ್ದಂತೆ ನಾಮಿನೇಷನ್ ಪ್ರಕ್ರಿಯೆ ಬಂದಿದೆ. ಹೀಗಾಗಿ ಕೋಳಿ ನಿದ್ದೆ ಮಾಡುತ್ತಾರೆಂದು ಗೋಲ್ಡ್ ಸುರೇಶ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಹಾಗೇ ಭವ್ಯಾ ಗೌಡಗೆ ಯಾವುದರಲ್ಲೂ ಹೆಚ್ಚಾಗಿ ಭಾಗವಹಿಸುತ್ತಿಲ್ಲ ಎಂದು ಕಾರಣ ಕೊಟ್ಟಿದ್ದಾರೆ. ಇನ್ನು ಮಾನಸ ಬಾಂಬ್ ಇದ್ದಂತೆ ಇನ್ನೇನು ಸೌಂಡ್ ಮಾಡುತ್ತೆ ಅನ್ನುವಾಗಲೇ ಠಸ್ ಆಗುತ್ತೆ ಎಂದು ಹನುಮಂತ ಕಾರಣವನ್ನು ಕೊಟ್ಟಿದ್ದಾರೆ.
ಹನುಮಂತ ವಿರುದ್ಧ ಅಸಮಧಾನ
ಈ ನಾಮಿನೇಷನ್ ಪ್ರಕ್ರಿಯೆಯಿಂದ ಮನೆ ಮಂದಿಯ ನಡುವೆ ಅಸಮಧಾನ ಮೂಡಿದೆ. ಹನುಮಂತ ಕೊಟ್ಟ ಕಾರಣ ಭವ್ಯಾ ಗೌಡಗೆ ಇಷ್ಟ ಆಗಿಲ್ಲ. ಹಾಗೇ ಗೋಲ್ಡ್ ಸುರೇಶ ಕೂಡ ತಿರುಗೇಟು ಕೊಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಹನುಮಂತ ಅವರ ಬಾಯಿ ಮುಚ್ಚಿಸಿದ್ದಾರೆ. ಇನ್ನು ಭವ್ಯಾ ಗೌಡ ನೇರವಾಗಿಯೇ ನೀವು ಕೊಟ್ಟ ಕಾರಣ ಸರಿಯಿರಲಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಇನ್ನೂ ಮಾನಸ ತುಕಾಲಿ ಕಣ್ಣೀರು ಹಾಕಿದ್ದಾರೆ. ಅದ್ಯಾಕೆ ಅನ್ನೋದು ಪ್ರೋಮೊದಲ್ಲಿ ರಿವೀಲ್ ಆಗಿಲ್ಲ.
ಚೈತ್ರಾ ಕುಂದಾಪುರ ಟೀಕೆ
ಹನುಮಂತನ ಬಗ್ಗೆ ಮನೆ ಮಂದಿ ಅಸಮಧಾನ ಹೊರ ಹಾಕುತ್ತಿದ್ದಾರೆ. ಗೋಲ್ಡ್ ಸುರೇಶ್, ಭವ್ಯಾ ಗೌಡ, ಮಾನಸ ಹಾಗೂ ಚೈತ್ರಾ ಕುಂದಾಪುರ ಅಸಮಧಾನ ಹೊರ ಹಾಕಿದ್ದಾರೆ. ಚೈತ್ರಾ ಕುಂದಾಪುರ "ಗಳಿಗೆ ಸಿದ್ದ ಒಳಗೊಳಗೆ ಮೆದ್ದ" ಎಂದು ಕಾಮೆಂಟ್ ಮಾಡಿದ್ದಾರೆ. ಮಾನಸ ಅಂತೂ ಪ್ಲ್ಯಾನ್ ಮಾಡಿಕೊಂಡು ಬಂದಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ. ಗೋಲ್ಡ್ ಸುರೇಶ್ ಕೂಡ ಇವರನ್ನು ನಂಬಬಾರದು ಎಂದಿದ್ದಾರೆ. ಒಟ್ಟಿನಲ್ಲಿ ಹನುಮಂತನ ಅಸಲಿ ಆಟ ಶುರುವಾಗಿದೆ ಎಂದು ಹೇಳಬಹುದು.


Click it and Unblock the Notifications











