"ನನ್ನ ಹೀರೋ ಸುದೀಪ್.. ನನ್ನನ್ನು ದಯವಿಟ್ಟು ಕ್ಷಮಿಸಿ"; ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಹೊರಬಂದಿರೋದು ಪಕ್ಕಾ!
ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ 11ನೇ ಸೀಸನ್ ಆರಂಭ ಆಗಿ ಮೂರನೇ ವಾರ ಮುಗಿಯುತ್ತಾ ಬಂದಿದೆ. ಇನ್ನೇನು ನಾಲ್ಕನೇ ವಾರಕ್ಕೆ ಅಣಿಯಾಗುತ್ತಿರುವ ಹೊತ್ತಿನಲ್ಲಿಯೇ ಮನೆಯೊಳಗೆ ಅಹಿತಕರ ಘಟನೆ ನಡೆದು ಹೋಗಿದೆ. ಲಾಯರ್ ಜಗದೀಶ್ ಹಾಗೂ ರಂಜಿತ್ ನಡುವಿನ ಕಿತ್ತಾಟದಿಂದ ಇಬ್ಬರೂ ಮನೆಯಿಂದ ಹೊರಬರುವಂತಹ ಸ್ಥಿತಿ ನಿರ್ಮಾಣ ಆಗಿದೆ.
ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಹಾಗೂ ರಂಜಿತ್ ಹೊರ ಬಂದಿರುವ ವಿಷಯ ಕಳೆದ ಎರಡು ದಿನಗಳಿಂದ ಚರ್ಚೆಯಾಗುತ್ತಲೇ ಇದೆ. ಆದರೆ, ಬಿಗ್ಬಾಸ್ನಿಂದ ಲಾಯರ್ ಜಗದೀಶ್ ಹೊರ ಬಂದಿದ್ದಾರಾ? ಇಲ್ವಾ? ಗೊಂದಲ ಅಂತೂ ಇದೆ. ಯಾಕಂದ್ರೆ, ಬಿಗ್ಬಾಸ್ನಿಂದ ಎಲಿಮಿನೇಟ್ ಆದ ಮೇಲೆ ಮನೆಗೆ ಬರಬೇಕು. ಆದರೆ, ಎರಡು ದಿನ ಆದರೂ ಮನೆ ಬಂದಿಲ್ಲ ಅನ್ನೋ ವಿಷಯ ಕೂಡ ಚರ್ಚೆಯಾಗುತ್ತಿದೆ.

ಆದರೆ, ಸ್ವತ: ಲಾಯರ್ ಜಗದೀಶ್ ಮಾಧ್ಯಮಗಳಿಗೆ ಸಂದೇಶವನ್ನು ರವಾನೆ ಮಾಡಿದ್ದಾರೆ. ಈ ಮೂಲಕ ಬಿಗ್ಬಾಸ್ ಮನೆಯಿಂದ ಹೊರಬಂದಿರೋದು ಬಹುತೇಕ ಖಚಿತ ಅಂತಾಗಿದೆ. ಬಿಗ್ಬಾಸ್ ಮನೆಯೊಳಗೆ ಹೋದ ದಿನದಿಂದ ಲಾಯರ್ ಜಗದೀಶ್ ಆರ್ಭಟ ಹೆಚ್ಚಾಗಿತ್ತು. ಮನೆಯ ಸದಸ್ಯರೊಂದಿಗೆ ಕಿತ್ತಾಡುತ್ತಾ ಮೂರು ವಾರಗಳ ಕಾಲ ಒಂಟಿಯಾಗಿಯೇ ಇದ್ದರು. ಹಾಗಿದ್ದರೆ, ಲಾಯರ್ ಜಗದೀಶ್ ನೀಡಿದ ಸಂದೇಶದಲ್ಲಿ ಏನಿದೆ? ತಿಳಿಯಲು ಮುಂದೆ ಓದಿ.
ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಮಾಧ್ಯಮ ಪ್ರತಿನಿಧಿಗಳಿಗೆ ಲಾಯರ್ ಜಗದೀಶ್ ಸಂದೇಶ ರವಾನೆ ಮಾಡಿದ್ದಾರೆ. ಇದರಲ್ಲಿ ಬಿಗ್ಬಾಸ್ಗೆ, ತಂತ್ರಜ್ಞರಿಗೆ, ಅವರ ಅಭಿಮಾನಿಗಳಿಗೆ, ರಂಜಿತ್, ಮಾನಸ ಸೇರಿದಂತೆ ಹಲವರಿಗೆ ಕ್ಷಮೆಯನ್ನು ಕೋರಿದ್ದಾರೆ. ತನ್ನಿಂದ ತಪ್ಪು ಆಗಿದೆ. ಅದು ಮನರಂಜನೆಯ ಒಂದು ಭಾಗವೆಂದು ಲಾಯರ್ ಜಗದೀಶ್ ಹೇಳಿದ್ದಾರೆ.
"ಬಿಗ್ಬಾಸ್ ಒಬ್ಬ ವ್ಯಕ್ತಿಯ ಜೀವನವನ್ನು ತೋರಿಸುವಂತಹ ನಾನು ಸಹ ಅಲ್ಲಿ ಸ್ಪರ್ಧಿಸಿದಾಗ ನನ್ನ ನಿಜವಾದ ಮುಖ ನೋಡಿ ನನಗೆ ಆಶ್ವರ್ಯ ಆಯ್ತು. ನನ್ನಲ್ಲಿ ಅಡಗಿದಂತಹ ಪ್ರತಿಭೆ ಆಗಿರಬಹುದು, ಕೋಪ ಆಗಿರಬಹುದು ಎಲ್ಲವೂ ನೋಡಿದ್ದೇನೆ. ನಿಜವಾಗಲೂ ನಾವು ಅದೃಷ್ಟವಂತರು. ಎಷ್ಟೋ ಕೋಟಿಗಳ ಮಧ್ಯೆ ಬಿಗ್ಬಾಸ್ನಲ್ಲಿ ಭಾಗವಹಿಸುವುದಕ್ಕೆ ನನಗೆ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಅಂದುಕೊಳ್ಳಬಹುದು. ಅದನ್ನು ವಿಭಿನ್ನವಾಗಿ ತೋರಿಸವಂತಹ ಮೀಡಿಯಾ. ಎಂಜಾಯ್ ಮಾಡುವಂತಹ ನಮ್ಮ ವೀಕ್ಷಕರು, ನಮ್ಮ ಅಭಿಮಾನಿ ದೇವರುಗಳು ಕೋಟಿ ಕೋಟಿ ನಮನಗಳು" ಎಂದು ಹೇಳಿರುವ ಆಡಿಯೋ ಕ್ಲಿಕ್ ಹರಿದಾಡುತ್ತಿದೆ.

ಇದರೊಂದಿಗೆ ನನ್ನ ಹೀರೋ ಸುದೀಪ್ ಎಂದು ಹೇಳಿದ್ದಾರೆ. ಹಾಗೇ ಬಿಗ್ಬಾಸ್ ಮನೆಯ ಕೊನೆಯ ದಿನ ನಡೆದ ಘಟನೆಯಲ್ಲಿ ರಂಜಿತ್, ಮಾನಸ ಸೇರಿದಂತೆ ಎಲ್ಲಾ ಸ್ಪರ್ಧಿಗಳ ಕ್ಷಮೆಯನ್ನು ಕೋರಿದ್ದಾರೆ. ನೀವೆಲ್ಲ ಅದ್ಭುತ ಕಲಾವಿದರು. ನಿಮ್ಮ ಜೊತೆ ಒಬ್ಬನಾಗಿರುವುದಕ್ಕೆ ಪ್ರಯತ್ನ ಪಟ್ಟಿದ್ದೇನೆ. ನನ್ನಿಂದಲೂ ಕೆಲವು ತಪ್ಪುಗಳು ಆಗಿವೆ. ಅದು ಮನರಂಜನೆಯ ಒಂದು ಭಾಗ ಅಷ್ಟೇ ಎಂದಿದ್ದಾರೆ.
ಇನ್ನು ಲಾಯರ್ ಜಗದೀಶ್ ಅವರನ್ನು ಬಿಗ್ಬಾಸ್ ಅಧಿಕೃತವಾಗಿ ಬಿಟ್ಟಂತೆ ಇಲ್ಲ. ಒಮ್ಮೆ ಹೊರಬಂದ್ಮೇಲೆ ಜಗದೀಶ್ ಮಾಧ್ಯಮಗಳ ಜೊತೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಈ ವಿಷಯವನ್ನು ಮಾಧ್ಯಮ ಪ್ರತಿನಿಧಿಗಳ ಜೊತೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ಲಾಯರ್ ಜಗದೀಶ್ ಮನೆಯಿಂದ ಹೊರಬಂದಿಲ್ಲ ನಂಬಿಕೆಯಲ್ಲಿ ಇದ್ದವರಿಗೆ ನಿರಾಸೆಯಾಗಿದೆ.


Click it and Unblock the Notifications











