BBK 11: ಕಣ್ಣೀರಿಡುತ್ತಲೇ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮಾನಸ ತುಕಾಲಿ; ಉಗ್ರಂ ಮಂಜುಗೆ ಜೈಲು ಶಿಕ್ಷೆ ಯಾಕೆ?
ಬಿಗ್ ಬಾಸ್ ಕನ್ನಡ ಸೀಸನ್ 11 ಐದನೇ ವಾರವನ್ನು ಮುಗಿಸಿದೆ. ಈ ಐದು ವಾರಗಳಲ್ಲಿ ಬಿಗ್ ಬಾಸ್ ಮನೆಯಿಂದ ಒಬ್ಬೊಬ್ಬರೇ ಸ್ಪರ್ಧಿಗಳು ಹೊರಬೀಳುತ್ತಿದ್ದಾರೆ. ಕಳೆದ ವಾರ ಬಿಗ್ ಬಾಸ್ ಮನೆಯಿಂದ ನಟಿ ಹಂಸಾ ಎಲಿಮಿನೇಟ್ ಆಗಿದ್ದರು. ಈ ವಾರ ತುಕಾಲಿ ಸಂತೋಷ್ ಪತ್ನಿ ಮಾನಸ ತುಕಾಲಿ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದಾರೆ.
ಕಳೆದ ವರ್ಷ ಬಿಗ್ ಬಾಸ್ ಮನೆಯೊಳಗೆ ಮಾನಸ ತುಕಾಲಿಯನ್ನು ಮನೆಯೊಳಗೆ ಕಳಿಸುವಂತೆ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದರು. ಅದಂತೆ ಮಾನಸ ತುಕಾಲಿ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದರು. ಆದರೆ, ಮಾನಸ ಅವರ ಮಾತುಗಳು ನೆಟ್ಟಿಗರಿಗೆ ಯಾಕೋ ಹಿಡಿಸಿಲ್ಲ. ಅಲ್ಲದೆ ಅವರಿಂದ ಹಾಸ್ಯವನ್ನು ನಿರೀಕ್ಷೆ ಮಾಡಿದ್ದ ವೀಕ್ಷಕರಿಗೆ ಅದೂ ಸಿಕ್ಕಿಲ್ಲ. ಹೀಗಾಗಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

ಮಾನಸ ತುಕಾಲಿ ಐದು ವಾರಗಳ ಬಿಗ್ ಬಾಸ್ ಮನೆಯೊಳಗೆ ಇದ್ದರು. ಬಿಗ್ ಬಾಸ್ ಮನೆಯೊಳಗೆ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಾರೆ ಅನ್ನೋ ನಿರೀಕ್ಷೆಯಿತ್ತು. ಆದರೆ, ಹಾಗಲಿಲ್ಲ. ಮನೆಯೊಳಗೆ ಹೋದ ದಿನದಿಂದಲೂ ಮಾನಸ ಮನರಂಜನೆ ನೀಡಿದ್ದಕ್ಕಿಂತ ಹೆಚ್ಚಾಗಿ ಕಿತ್ತಾಟಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಹಾಗೇ ಅವರ ಮಾತುಗಳು ಕೂಡ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದವು.
ಲಾಯರ್ ಜಗದೀಶ್ ಹಾಗೂ ಮಾನಸ ತುಕಾಲಿ ನಡುವಿನ ಕಿತ್ತಾಟ ಬಿಗ್ಬಾಸ್ ಮನೆಯಿಂದ ಹೊರ ಬರುವುದಕ್ಕೆ ಮತ್ತೊಂದು ಕಾರಣವಾಯ್ತು. ಲಾಯರ್ ಜಗದೀಶ್ ವಿರುದ್ಧ ಮಾನಸ ಬಳಸಿದ ಪದಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪಣೆ ವ್ಯಕ್ತವಾಗಿದ್ದವು. ಅಲ್ಲಿಂದ ಹೆಚ್ಚಾಗಿ ಮಾನಸ ಟ್ರೋಲ್ಗೆ ಒಳಗಾಗಿದ್ದರು. ಜೊತೆಗೆ ಇವರಿಂದ ಮನರಂಜನೆಯನ್ನು ಹೆಚ್ಚಾಗಿ ನಿರೀಕ್ಷೆ ಮಾಡಿದ್ದ ವೀಕ್ಷಕರಿಗೆ ನಿರಾಸೆ ಆಗಿತ್ತು. ಈ ಕಾರಣಕ್ಕೆ ಮನೆಯಿಂದ ಹೊರ ಬಿದ್ದಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರ ಈ ವಾರ ಒಟ್ಟು 12 ಮಂದಿ ನಾಮಿನೇಟ್ ಆಗಿದ್ದರು. ಅವರಲ್ಲಿ ಕೊನೆಯದಾಗಿ ಮಾನಸ ಹಾಗೂ ಅನುಷಾ ಇಬ್ಬರು ಉಳಿದುಕೊಂಡಿದ್ದರು. ಇವರಿಬ್ಬರಲ್ಲಿ ಮಾನಸ ಅವರ ಹೆಸರನ್ನು ಕಿಚ್ಚ ಸುದೀಪ್ ಕರೆಯುತ್ತಿದ್ದಂತೆ ಕಣ್ಣೀರು ಹಾಕಿ ಹೊರ ಬಂದಿದ್ದಾರೆ. ಈ ವಾರ ಮಾನಸ ಹೊರ ಬರುತ್ತಾರೆಂದು ನಿರೀಕ್ಷೆ ಮಾಡಿದ್ದರು. ನಿರೀಕ್ಷೆಯಂತೆ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ.
ಮನೆಯಿಂದ ಹೊರ ಬರುತ್ತಾ ಬಿಗ್ ಬಾಸ್ ಜೈಲಿಗೆ ಕಳುಹಿಸಲು ಇಷ್ಟ ಪಡುವ ಒಬ್ಬ ಸದಸ್ಯರ ಹೆಸರನ್ನು ಸೂಚಿಸುವಂತೆ ಕೇಳಿದ್ದರು. ಅದಕ್ಕೆ ಮಾನಸ ನೇರವಾಗಿ ಉಗ್ರಂ ಮಂಜು ಅವರನ್ನು ಹೆಸರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ತನಗೆ ಇರುವಂತೆ ಸಿಟ್ಟು, ಕೋಪ, ತಾಳ್ಮೆ ಮಂಜಣ್ಣನಲ್ಲಿ ಇದೆ. ಮಾನಸಳ ಇನ್ನೊಂದು ಅವತಾರವನ್ನು ನೋಡಿದಂತೆ ಆಗುತ್ತೆ ಎಂದು ಹೇಳಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.
ಈಗಾಗಲೇ ಬಿಗ್ ಬಾಸ್ ಮನೆಯಿಂದ ಯಮುನಾ ಶ್ರೀನಿಧಿ, ರಂಜಿತ್, ಲಾಯರ್ ಜಗದೀಶ್, ಹಂಸ ಹಾಗೂ ಈ ವಾರ ಮಾನಸ ತುಕಾಲಿ ಹೊರ ಬಂದಿದ್ದಾರೆ. ಐದು ವಾರ ಮನೆಯೊಳಗೆ ಇದ್ದ ಮಾನಸಗೆ ಬಿಗ್ಬಾಸ್ ಕಡೆಯಿಂದ ಬಹುಮಾನ ಸಿಕ್ಕಿದೆ. ಈ ವೇಳೆ ಮಾನಸ ಗಂಡ ತುಕಾಲಿ ಸಂತೋಷ್ ಕೂಡ ಉಪಸ್ಥಿತಿ ಇದ್ದರು. ಮನೆಯಿಂದ ಹೊರ ಬಂದ ಪತ್ನಿಗೆ ಧೈರ್ಯ ತುಂಬಿದ್ದು ವೀಕ್ಷಕರ ಗಮನ ಸೆಳೆದಿದೆ.


Click it and Unblock the Notifications











