"ಹುಡುಗಿ ಚೆನ್ನಾಗಿಲ್ಲ ಅಂತ 6 ತಿಂಗಳು ಬಿಟ್ಟೋಗಿದ್ದ"; ಬಿಗ್ಬಾಸ್ ಖ್ಯಾತಿಯ ತುಕಾಲಿ ಸಂತು ಪತ್ನಿ ಮಾನಸ
ಬಿಗ್ಬಾಸ್ ಕನ್ನಡ ಸೀಸನ್ 11 ಆರಂಭಕ್ಕೆ ಕ್ಷಣಗಣನೆ ಆಗಿರುವಾಗಲೇ 10ನೇ ಸೀಸನ್ನ ಸ್ಪರ್ಧಿಗಳು ಕಣ್ಮುಂದೆ ಬರುವುದಕ್ಕೆ ಶುರುವಾಗಿದ್ದಾರೆ. ಅದರಲ್ಲಿ ಬಿಗ್ಬಾಸ್ ಮುಗಿಯುವರೆಗೂ ಗೆಲ್ಲುವುದಕ್ಕೆ ಪೈಪೋಟಿ ಕೊಟ್ಟಿದ್ದ ತುಕಾಲಿ ಸಂತೋಷ್ ಕೂಡ ಒಬ್ಬರು. ತಮ್ಮ ಹಾಸ್ಯ ಪ್ರಜ್ಞೆಯಿಂದಲೇ ವೀಕ್ಷಕರನ್ನು ತನ್ನೆಡೆಗೆ ಸೆಳೆದುಕೊಂಡಿದ್ದರು.
ಬಿಗ್ ಬಾಸ್ ಟಾಸ್ಕ್ಗಳಲ್ಲಿ ತುಕಾಲಿ ಸಂತೂ ಹಾಸ್ಯ ಪ್ರಜ್ಞೆ ಹೈಲೈಟ್ ಆಗುತ್ತಿತ್ತು. ಕೆಲವೊಮ್ಮೆ ಆವೇಶಕ್ಕೆ ಒಳಗಾಗಿದ್ದು ಕೂಡ ಇದೆ. ಪ್ರತಿಸ್ಪರ್ಧಿಯೊಂದಿಗೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದೂ ಕೂಡ ಇದೆ. ಅದು ಬಿಟ್ಟರೆ ಪ್ರತಿಯೊಬ್ಬ ಸ್ಪರ್ಧಿಯೊಂದಿಗೂ ತುಕಾಲಿ ಸಂತೂ ಉತ್ತಮ ಬಾಂಧವ್ಯವನ್ನೇ ಹೊಂದಿದ್ದರು. ಅದರಲ್ಲೂ ವರ್ತೂರು ಸಂತೋಷ್ ಜೊತೆ ಒತ್ತಮ ಒಡನಾಟವಿತ್ತು.

ತುಕಾಲಿ ಸಂತೂ ಹಾಗೂ ಅವರ ಪತ್ನಿ ಮಾನಸ ಇಬ್ಬರು ಕಾಲೆದುಕೊಳ್ಳುವ ಸನ್ನಿವೇಶಗಳು ವೀಕ್ಷಕರಿಗೆ ಸಖತ್ ಮನರಂಜನೆ ಕೊಟ್ಟಿತ್ತು. ಸೀಸನ್ 10 ಮುಗಿಯುವುದರೊಳಗೆ ವೀಕ್ಷಕರೇ ಮುಂದಿನ ಸೀಸನ್ಗೆ ಮಾನಸ ಅವರು ಕೂಡ ಬಿಗ್ಬಾಸ್ಗೆ ಬರಬೇಕು ಅಂತ ಆಸೆ ಪಟ್ಟಿದ್ದರು. ಇದೇ ಬೇಡಿಕೆ ಮೇರೆಗೆ ಈಗ ಅವರ ಹೆಸರು ಕೂಡ ಹೇಳಿ ಬರುತ್ತಿದೆ. ಫಿಲ್ಮಿಬೀಟ್ ಕನ್ನಡಗೆ ನೀಡಿದ ಸಂದರ್ಶನದಲ್ಲಿ ತುಕಾಲಿ ಸಂತೂ ಹುಡುಗಿ ಚೆನ್ನಾಗಿಲ್ಲ ಅಂತ ಬಿಟ್ಟು ಹೋಗಿದ್ದ ಸನ್ನಿವೇಶವನ್ನು ನೆನಪಿಸಿಕೊಂಡಿದ್ದಾರೆ.
ತುಕಾಲಿ ಸಂತೂ ಹಾಗೂ ಮಾನಸ ಇಬ್ಬರೂ ಅಕ್ಕ ಪಕ್ಕದ ಊರಿನವರೇ. ಆದರೂ ಮಾನಸ ತಮ್ಮೂರಿನ ಸುತ್ತಮುತ್ತ ಅವರನ್ನು ನೋಡಿರಲಿಲ್ಲ. ಈಗ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ್ಮೇಲೆ ಇಬ್ಬರದ್ದೂ ಲವ್ ಮ್ಯಾರೇಜ್ ಇರಬಹುದಾ? ಅಂತ ಊಹಿಸಿದ್ದವರೇ ಹೆಚ್ಚು. ಆದರೆ, ಇವರದ್ದು ಪಕ್ಕಾ ಅರೇಂಜ್ಡ್ ಮ್ಯಾರೇಜ್. "ಮೊದಲು ನಾನು ಸಂತು ಅವರನ್ನು ನೋಡಿದ್ದು ಹೆಣ್ಣು ನೋಡುವುದಕ್ಕೆ ಬಂದಾಗಲೇ. ಅಕ್ಕ ಪಕ್ಕದ ಊರಿನವರಾದರೂ ಇವರನ್ನು ನಾನು ನೋಡಿರಲಿಲ್ಲ. ಸಿಟಿಯಲ್ಲೇ ಕೆಲಸ ಮಾಡಿಕೊಂಡು ಇದ್ದರಲ್ಲ ಅದಕ್ಕೆ. ಲವ್ ಮ್ಯಾರೇಜ್ ಏನಲ್ಲ. ಅರೇಂಜ್ಡ್ ಮ್ಯಾರೇಜ್ ಆಗಿದ್ದು. ಮನೆಯವರೇ ನೋಡಿ ಮದುವೆ ಮಾಡಿದ್ದು. ಒಪ್ಪಿಕೊಳ್ಳುವುದಕ್ಕೆ ತುಂಬಾನೇ ಕಾಡಿಸಿದ್ದರು." ಎಂದು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಮೊದಲು ಹೆಣ್ಣು ನೋಡುವುದಕ್ಕೆ ಬಂದಿದ್ದಾಗ ಹುಡುಗಿ ಚೆನ್ನಾಗಿಲ್ಲ ಅಂತ ಆರು ತಿಂಗಳು ಗಾಯಬ್ ಆಗಿದ್ದರಂತೆ. "ಇಲ್ಲ ಹುಡುಗಿ ಚೆನ್ನಾಗಿಲ್ಲ. ಇಷ್ಟವಿಲ್ಲ ಎಂದು ಬಿಟ್ಟು ಬೇರೆ ಊರಿಗೆ ಆರು ತಿಂಗಳು ಹೋಗಿದ್ದರು. ಇವನು ಬಿಟ್ಟು ಹೋದ್ನಲ್ಲ ಅಂತ ನಾನು ಫೀಲಿಂಗ್ನಲ್ಲಿ ಇದ್ದೆ. ಯಾಕಂದ್ರೆ, ನಾನು ಇವನನ್ನು ಮದುವೆ ಆಗುತ್ತಿನೋ ಬಿಡ್ತಿನೋ. ನಾನು ನೋಡಿದ ಮೊದಲ ಸೆಲೆಬ್ರಿಟಿ ಇವನು. ಒಂದು ಫೋಟೊ ತೆಗೆದುಕೊಳ್ಳಬೇಕು ಅಂತ ಆಸೆ. ಇವನು ಹುಡುಗಿ ಚೆನ್ನಾಗಿಲ್ಲ ಅಂತ ಬಿಟ್ಟು ಹೋದ್ನಲ್ಲ ಅದಕ್ಕೆ ಸ್ವಲ್ಪ ಬೇಜಾರು ಆಯ್ತು. ಬೇರೆ ಏನಾದರೂ ಕಾರಣ ಕೊಟ್ಟಿದ್ದರೆ ಅಷ್ಟು ಬೇಜಾರ ಆಗುತ್ತಿರಲಿಲ್ವೇನೋ" ಎಂದು ಆ ದಿನವನ್ನು ನೆನಪಿಸಿಕೊಂಡಿದ್ದಾರೆ.
ಇದೇ ಸಿಟ್ಟಿನಲ್ಲಿ ತುಕಾಲಿ ಸಂತೋಷ್ಗೆ ಹೆಣ್ಣು ಸಿಗಲೇ ಬಾರದು ಅಂತ ದೇವರಲ್ಲಿ ಬೇಡಿಕೊಂಡಿದ್ದರಂತೆ. "ಚೆನ್ನಾಗಿಲ್ಲ ಅಂತ ಬಿಟ್ಟು ಹೋಗಿದ್ನಲ್ಲ ನನಗೆ ಸಿಕ್ಕಾಪಟ್ಟೆ ಬೇಜಾರಾಗಿತ್ತು. ದೇವರ ಹತ್ತಿರ ಜೀವನದಲ್ಲಿ ಮದುವೆ ಆಗಬಾರದು ಅಂತೆಲ್ಲ ಬೇಡಿಕೊಂಡಿದ್ದೆ. ಬ್ರಹ್ಮಚಾರಿಯಾಗಿಯೇ ಸಾಯಬೇಕು ಅಂತೆಲ್ಲ ಬೇಡಿಕೊಂಡಿದ್ದೆ. ಪಾಪ ಆರು ತಿಂಗಳು ಬಿಟ್ಟು ಯಾವುದೇ ಹೆಣ್ಣು ಸಿಗದೆ, ಕೊನೆಗೆ ನನ್ನನ್ನೇ ಹುಡುಕಿಕೊಂಡು ಬಂದ. ವಾಪಾಸ್ ಬಂದಾಗ ಮದುವೆ ಆಗಲ್ಲ ಅಂದೆ. ಮನೆಯವರು ನಿನ್ನ ಮೂತಿಗೆ ಇದೇ ಸಾಕು. ಮದುವೆ ಆಗು ಇಲ್ಲ ಅಂದರೆ ತುಳಿದು ಸಾಯಿಸಿಬಿಡ್ತೀನಿ ಅಂತ ಹೇಳಿದ್ದರು." ಎಂದು ತಮ್ಮ ಮದುವೆ ಪ್ರಸಂಗದ ಬಗ್ಗೆ ಹೇಳಿಕೊಂಡಿದ್ದಾರೆ.
ಮಾನಸ ತನ್ನ ಪತಿಯನ್ನು ಹೋಗೋ ಬಾರೋ ಅಂತ ಕರೆಯುವುದಕ್ಕೆ ಕೆಲವರು ಟೀಕೆ ಮಾಡುತ್ತಿದ್ದರು. ಅದ್ಯಾಕೆ ಮಾನಸ ಹೀಗೆ ಕರೆಯುತ್ತಾರೆ? ಅನ್ನೋದನ್ನು ಹೇಳಿದ್ದಾರೆ. "ನಾನು ಮೊದಲಿನಿಂದಲೂ ರಫ್ ಅಂಡ್ ಟಫ್ ಆಗಿಯೇ ಬೆಳೆದಿದ್ದೆ. ಹುಡುಗನ ಹಾಗೇ ಬೆಳೆದಿದ್ದೆ. ಮನೆ ಒಳಗೂ ಹಾಗೇ ಇತ್ತು. ಮನೆ ಹೊರಗೂ ಹಾಗೇ ಇತ್ತು. ಯಾಕಂದ್ರೆ ಪರಿಸ್ಥಿತಿ ಹಾಗಿತ್ತು. ನಾನು ಹಾಗೇ ಬೆಳೆದಿದ್ದರಿಂದ ಸಂತೂ ಜೊತೆನೂ ಹಾಗೇ ಬಂತು. ಸಂತೂ ಜೊತೆನೂ ಏನೋ, ಹೋಗೋ ಬಾರೋ ಅಂತಾನೇ ಬೆಳೆದುಕೊಂಡು ಬಂದೆವು. ಇವರೂ ಹಾಗೇ ಆರಾಮಾಗಿ ತೆಗೆದುಕೊಂಡರಲ್ಲ. ಅದು ಹಾಗೇ ಮುಂದುವರೆಯಿತು." ಎಂದಿದ್ದಾರೆ.


Click it and Unblock the Notifications











