ಋಣಕ್ಕೂ ಗುಣಕ್ಕೂ ಅಂದದ ನಂಟು: ಜೀ ಕನ್ನಡದಲ್ಲಿ ಹೊಸ ಧಾರಾವಾಹಿ 'ಬ್ರಹ್ಮಗಂಟು'
ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಆಗುವುದಕ್ಕೆ ಸಜ್ಜಾಗುತ್ತಿದೆ. ಅದರಲ್ಲೂ ಜೀ ಕನ್ನಡದಲ್ಲಿ ಹೊಸ ಧಾರಾವಾಹಿಯೊಂದು ಪ್ರಸಾರ ಆಗುವುದಕ್ಕೆ ಸಜ್ಜಾಗಿ ನಿಂತಿದೆ. ಕಳೆದ ಹಲವು ದಿನಗಳಿಂದ ಈ ಧಾರಾವಾಹಿ ಫೋಮೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಅದಕ್ಕೆ ಮೆಚ್ಚುಗೆ ಕೂಡ ಸಿಕ್ಕಿವೆ. ಹೀಗಾಗಿ ಕಿರುತೆರೆ ವೀಕ್ಷಕರು ಕೂಡ ತುದಿಗಾಲಲ್ಲಿ ನಿಂತಿದ್ದಾರೆ. ಆ ಧಾರಾವಾಹಿಯೇ 'ಬ್ರಹ್ಮಗಂಟು'.
'ಬ್ರಹ್ಮಗಂಟು' ಜೀ ಕನ್ನಡದ ಹೊಚ್ಚ ಹೊಸ ಧಾರಾವಾಹಿ. ಈಗಾಗಲೇ ಹಲವು ಜನಪ್ರಿಯ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಅದಕ್ಕೆ ಕಿರುತೆರೆ ವೀಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕನ್ನಡದ ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ 'ಪುಟ್ಟಕ್ಕನ ಮಕ್ಕಳು' ಭರ್ಜರಿ ರೇಟಿಂಗ್ ಮೂಲಕ ಈಗಲೂ ನಂಬರ್ ಒನ್ ಧಾರಾವಾಹಿಯಾಗಿ ಮುಂದುವರೆದಿದೆ.

'ಪುಟ್ಟಕ್ಕನ ಮಕ್ಕಳು' ಜೊತೆಗೆ 'ಸತ್ಯ' ಧಾರಾವಾಹಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹಾಗೇ ಸುಧಾರಾಣಿ ನಟಿಸುತ್ತಿರುವ 'ಶ್ರೀರಸ್ತು ಶುಭಮಸ್ತು', ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ನಟನೆಯ 'ಅಮೃತಧಾರೆ'ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಕೂಡು ಕುಟುಂಬದ ಕಥೆ 'ಲಕ್ಷ್ಮಿ ನಿವಾಸ', 'ಶ್ರಾವಣಿ ಸುಬ್ರಹ್ಮಣ್ಯ', 'ಸೀತಾ ರಾಮ' ಧಾರಾವಾಹಿಗಳು ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿವೆ. ಇದೀಗ ಈ ಜನಪ್ರಿಯ ಧಾರಾವಾಹಿಗಳ ಜೊತೆಗೆ 'ಬ್ರಹ್ಮಗಂಟು' ಸೇರ್ಪಡೆಯಾಗಿದೆ.
ಅಂದ್ಹಾಗೆ 'ಬ್ರಹ್ಮಗಂಟು' ಧಾರಾವಾಹಿ ಕೂಡ ಅದೇ ಹೇಳುತ್ತೆ. "ಮುಖದ ಸೌಂದರ್ಯ ಚರ್ಮ ಇರೋ ತನಕ. ಮನಸಿನ ಸೌಂದರ್ಯ ಜನ್ಮ ಇರೋ ತನಕ" ಎಂಬಂತೆ ಸೌಂದರ್ಯಕ್ಕಿಂತ ಗುಣ ಮುಖ್ಯ ಅನ್ನುವ ಸಂದೇಶ ಸಾರುವ ಕಥೆ ಇದಾಗಿದೆ. ತನಗೆ ಮದುವೆಯೇ ಬೇಡ ಎಂದು ನಿರ್ಧಾರಿಸಿದ್ದ ಸಾಧಾರಾಣ ಸೌಂದರ್ಯದ ನಾಯಕಿ ದೀಪಾ. ತನ್ನ ಸೌಂದರ್ಯದ ಬಗ್ಗೆ ಅತಿಯಾದ ಅಹಂಕಾರ ಹೊಂದಿರುವ ಇವಳ ಅಕ್ಕ ರೂಪಾ. ಅತ್ತಿಗೆ ಸೌಂದರ್ಯಳನ್ನು ಅಮ್ಮನಿಗಿಂತಲೂ ಮಿಗಿಲಾಗಿ ಗೌರವಿಸುವ ನಾಯಕ ಚಿರಾಗ್. ರೂಪಾ ಜೊತೆ ಚಿರಾಗ್ ಮದುವೆ ನಿಶ್ಚಯ ಮಾಡೋ ಸೌಂದರ್ಯ. ಆಕಸ್ಮಿಕ ಸನ್ನಿವೇಶದಲ್ಲಿ ಅಕ್ಕನ ಬದಲು ಚಿರಾಗ್ ಜೊತೆ ಮದುವೆಯಾಗೋ ದೀಪಾ. ತಿರಸ್ಕಾರದಿಂದ ನೋಡೋ ಗಂಡನ ಮನೆಯವರ ಮಧ್ಯೆ ಹೋರಾಡುವ ದೀಪಾಳ ಬದುಕು. ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ, ಅವರ ಮನಸಿನ ಸೌಂದರ್ಯ ಅನಾವರಣ ಮಾಡುವ ಅಪರೂಪದ ಕಥೆಯೇ ಈ 'ಬ್ರಹ್ಮಗಂಟು'.

ಈ ಹಿಂದೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ನಿರ್ಮಾಣ ಮಾಡಿದ್ದ ನಟ ದಿಲೀಪ್ ರಾಜ್ ಹಾಗೂ ಶ್ರೀವಿದ್ಯಾ ರಾಜ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಉದಯ್ ನಿರ್ದೇಶನ, ಪ್ರಭು ಛಾಯಾಗ್ರಹಣದಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದೆ. ಸುಧೀಂದ್ರ ಭಾರದ್ವಾಜ್, ನಿಶ್ಚಿತಾ ಶರತ್, ಸುಶಾಂತ್ ಮುಂಗರವಳ್ಳಿ ಚಿತ್ರಕತೆ ಬರೆಯುತ್ತಿದ್ದಾರೆ. ಹಾಗೇ ನಂದಿನಿ ನಂಜಪ್ಪ ಸಂಭಾಷಣೆ ಬರೆದಿದ್ದಾರೆ. ಸುನಾದ್ ಗೌತಮ್ ಸಂಗೀತ ನೀಡಿದ್ದಾರೆ.
ಪ್ರೀತಿ ಶ್ರೀನಿವಾಸ್, ರೋಹಿತ್ ಶ್ರೀನಾಥ್, ಶ್ವೇತಾ ರಾವ್, ಭುವನ್, ದಿಯಾ, ಕಾವ್ಯಾ, ಶರಣ್ಯಾ, ರೋಹಿತ್, ಶಿವಾಜಿ ರಾವ್ ಜಾಧವ್, ಅಭಿನಯಾ, ಸಿತಾರಾ, ಸುರೇಶ್ ರೈ, ಹರ್ಷಾ ಮುಂತಾದವ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಟಿಸಿದ್ದಾರೆ. ಈ ಧಾರಾವಾಹಿ ಇದೇ ಜೂನ್ 17 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 10 ಗಂಟೆಗೆ ಜೀ಼ ಕನ್ನಡದಲ್ಲಿ ಪ್ರಸಾರವಾಗಲಿದೆ.


Click it and Unblock the Notifications











