3 ದಿನ ಕಲರ್ಸ್ ಕನ್ನಡದಲ್ಲಿ 'ಅನುಬಂಧ ಅವಾರ್ಡ್ಸ್'; ಕಿರುತೆರೆಯಲ್ಲಿ ದಿಗ್ಗಜರ ಸಮಾಗಮ
ಇತ್ತೀಚೆಗೆ ಬಿಗ್ ಬಾಸ್ ಕನ್ನಡ ಸೀಸನ್ 12 ಅನ್ನು ಯಶಸ್ವಿಯಾಗಿ ಮುಗಿಸಿರುವ ಕಲರ್ಸ್ ಕನ್ನಡ ಮತ್ತೊಂದು ಗ್ರ್ಯಾಂಡ್ ಇವೆಂಟ್ಗೆ ನಡೆಸುತ್ತಿದೆ. 12 ವರ್ಷ ತುಂಬಿದ ಈ ಸಂದರ್ಭದಲ್ಲಿ 'ಅನುಬಂಧ ಅವಾರ್ಡ್ಸ್' ಸಂಭ್ರಮಕ್ಕೆ ಸಜ್ಜಾಗಿದೆ.
ಕಲರ್ಸ್ ಕನ್ನಡ ಹೇಳಿಕೊಂಡಂತೆ 'ಅನುಬಂಧ ಅವಾರ್ಡ್ಸ್' ಕೇವಲ ಒಂದು ಪ್ರಶಸ್ತಿ ಪ್ರದಾನ ಸಮಾರಂಭವಲ್ಲ, ಬದಲಿಗೆ ಅದೊಂದು ಕೋಟ್ಯಂತರ ವೀಕ್ಷಕರ ನಡುವಿನ ಅವಿನಾಭಾವ ಸಂಬಂಧದ ಸಂಭ್ರಮ. ನಮ್ಮ ಕಥೆಗಳನ್ನು ತಮ್ಮದೇ ಕಥೆಗಳಂತೆ ಸ್ವೀಕರಿಸಿ ಅಪ್ಪಿಕೊಂಡಿರುವ ಪ್ರೇಕ್ಷಕರು ಮತ್ತು ನಮ್ಮ ನಡುವಿನ ಅಳಿಸಲಾಗದ ಬಂಧಕ್ಕೆ ಸಲ್ಲುವ ಗೌರವವೇ ಈ 'ಅನುಬಂಧ ಅವಾರ್ಡ್ಸ್' ಎಂದಿದೆ.

ಹೀಗಾಗಿ ಕಲರ್ಸ್ ಕನ್ನಡದ ಕಿರುತೆರೆ ಲೋಕದ ಅತ್ಯುತ್ತಮ ಪ್ರತಿಭೆಗಳಿಗೆ ಪ್ರಶಸ್ತಿ ನೀಡಿ ಗೌರವಿಸುವುದು ಈ ಸಂಭ್ರಮದ ಉದ್ದೇಶ. ಈ ವರ್ಷದ 'ಅನುಬಂಧ ಅವಾರ್ಡ್ಸ್' ಮತ್ತಷ್ಟು ಶ್ರೀಮಂತ ಹಾಗೂ ಅದ್ಧೂರಿಯಾಗಿ ಮೂಡಿಬಂದಿದೆ. ಜನವರಿ 24 ರಿಂದ ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದ ಹೈಲೈಟ್ ಇಲ್ಲಿದೆ.
ಮುಖ್ಯಮಂತ್ರಿ ಚಂದ್ರು-ಸುಷ್ಮಾ ರಾವ್ಗೆ ವಿಶೇಷ ಗೌರವ
ಸಿನಿಮಾ ಹಾಗೂ ಕಿರುತೆರೆ ಲೋಕದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಮುಖ್ಯಮಂತ್ರಿ ಚಂದ್ರು ಹಾಗೂ ಸುಷ್ಮಾ ರಾವ್ಗೆ ಕಲರ್ಸ್ ಕನ್ನಡ ವಿಶೇಷ ಗೌರವ ಸಲ್ಲಿಸಿದೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಸಿನಿಮಾ ಹಾಗೂ ಕಿರುತೆರೆ ಲೋಕದಲ್ಲಿ 50 ವರ್ಷಗಳನ್ನು ಪೂರೈಸಿದರೆ, 'ಭಾಗ್ಯ' ಪಾತ್ರದ ಮೂಲಕ ಮನೆಮಾತಾಗಿರುವ ಸುಷ್ಮಾ ರಾವ್ ಕಿರುತೆರೆಯಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರ ಸಾಧನೆಗಳನ್ನು ಗುರುತಿಸಿ ವೇದಿಕೆಯ ಮೇಲೆ ಇಬ್ಬರಿಗೂ ಗೌರವ ಸಲ್ಲಿಸಲಾಗಿದೆ.
ರವಿಚಂದ್ರನ್ ಜೊತೆ ಸಾವಿರದ ಸಂಭ್ರಮ
ಕಲರ್ಸ್ ಕನ್ನಡದ ಮತ್ತೊಂದು ಜನಪ್ರಿಯ ಧಾರಾವಾಹಿ 'ರಾಮಾಚಾರಿ'. ಇತ್ತೀಚೆಗಷ್ಟೇ ಅಂತ್ಯ ಕಂಡ ಈ ಧಾರಾವಾಹಿ 1000 ಸಂಚಿಕೆಗಳನ್ನು ಪೂರೈಸಿತ್ತು. ಹೀಗಾಗಿ ಬೆಳ್ಳಿತೆರೆಯ ರಾಮಾಚಾರಿ ವಿ. ರವಿಚಂದ್ರನ್ ಆಗಮಿಸಿ ಕಿರುತೆರೆಯ ರಾಮಾಚಾರಿ ಜೊತೆ ಕಾಣಿಸಿಕೊಂಡಿದ್ದಾರೆ. ವಿಶೇಷ ಸಾಧನೆ ಮಾಡಿದ ಈ ಧಾರಾವಾಹಿ ತಂಡಕ್ಕೆ ಶುಭ ಕೋರಿದ್ದಾರೆ.
'ಸು ಫ್ರಂ ಸೋ' ತಂಡಕ್ಕೆ ಪ್ರಶಸ್ತಿ
2025ರಲ್ಲಿ ಸ್ಯಾಂಡಲ್ವುಡ್ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ 'ಸು ಫ್ರಂ ಸೋ' ತಂಡಕ್ಕೆ ವಿಶೇಷ ಪ್ರಶಸ್ತಿಯನ್ನು ನೀಡಲಾಗಿದೆ. ಥಿಯೇಟರ್ ಹಾಗೂ ಓಟಿಟಿಯಲ್ಲಿ ವಿಶೇಷ ಸಾಧನೆ ಮಾಡಿದ ಈ ಸಿನಿಮಾದ ನಿರ್ದೇಶಕ ಜೆ.ಪಿ.ತುಮಿನಾಡ್, ಶನೀಲ್ ಗೌತಮ್, ಪುಷ್ಪರಾಜ್ ಬೋಳಾರ್ 'ಅನುಬಂಧ ಅವಾರ್ಡ್ಸ್'ನ ಪ್ರಮುಖ ಆಕರ್ಷಣೆಯಾಗಿದ್ದರು.

ಪುನೀತ್ ಹೆಸರಲ್ಲಿ 'ಕಲರ್ಸ್ ಕನ್ನಡಿಗ' ಪ್ರಶಸ್ತಿ
ಅನುಬಂಧ ಅವಾರ್ಡ್ಸ್ನಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೂಡ ಪುನೀತ್ ರಾಜ್ಕುಮಾರ್ ಹೆಸರಲ್ಲಿ 'ಕಲರ್ಸ್ ಕನ್ನಡಿಗ' ಪ್ರಶಸ್ತಿ ನೀಡಲಾಗಿದೆ. ಬಾಲ್ಯ ವಿವಾಹದ ವಿರುದ್ಧ ಹೋರಾಡುತ್ತಿರುವ ಬಾಗಲಕೋಟೆಯ ಗಟ್ಟಿಗಿತ್ತಿ ಗುರಮ್ಮ ಸಂಕಿನಮಠ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಗಟ್ಟಿಗಿತ್ತಿ ಗುರಮ್ಮ ಸಂಕಿನಮಠ ಅವರ ಹೋರಾಟದ ಕಥೆಯನ್ನು ಕೇಳಿ ತಾರೆಯರೆಲ್ಲರೂ ಭಾವುಕರಾದರು.
ರೇಖಾ ಕಂಬ್ಯಾಕ್ ಕೌತುಕ
ಸ್ಯಾಂಡಲ್ವುಡ್ನ ಬಹುಬೇಡಿಕೆಯ ನಟ ಕಮ್ ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಅಮ್ಮ ವೇದಿಕೆ ಮೇಲೆ ಕಂಡಿದ್ದು ವೀಕ್ಷರಿಗೊಂದು ಸರ್ಪ್ರೈಸ್. ಇದರೊಂದಿಗೆ, 'ಹುಚ್ಚ' ಸಿನಿಮಾ ಖ್ಯಾತಿಯ ನಟಿ ರೇಖಾ ವೇದವ್ಯಾಸ್ ಬಹಳ ವರ್ಷಗಳ ನಂತರ ಈ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. 'ಥಟ್ ಅಂತ ಹೇಳಿʼ ಕಾರ್ಯಕ್ರಮದ ಮೂಲಕ ಜನಪ್ರಿಯರಾಗಿರುವ ಡಾ. ನಾ. ಸೋಮೇಶ್ವರ್ ಇದೀಗ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ವೇದಿಕೆ ಮೇಲೆ ತಮಾಷೆಯಾಗಿ ಪ್ರಶ್ನೆ ಕೇಳಿ ಕಲಾವಿದರಿಂದ ಉತ್ತರ ಪಡೆದಿದ್ದಾರೆ. ಶಾಸಕರಾದ ಪ್ರದೀಪ್ ಈಶ್ವರ್ ಮೋಟಿವೇಷನಲ್ ಸ್ಪೀಚ್ ಹೈಲೈಟ್. ಹಾಗೇ ಸ್ಯಾಂಡಲ್ವುಡ್ ಜೋಡಿಗಳಾದ ನಿರ್ದೇಶಕ ತರುಣ್ ಸುಧೀರ್- ಸೋನಲ್ ಮೊಂತೇರೋ ಮತ್ತು ಅನು ಪ್ರಭಾಕರ್- ರಘು ಮುಖರ್ಜಿ ಆಗಮಿಸಿದ್ದು ಮತ್ತೊಂದು ಹೈಲೈಟ್.
37 ಪ್ರಶಸ್ತಿಗಳು.. 15ಕ್ಕೂ ಹೆಚ್ಚು ಪ್ರದರ್ಶನಗಳು
ಈ ಬಾರಿಯ ಕಾರ್ಯಕ್ರಮದಲ್ಲಿ ಒಟ್ಟು 37 ಪ್ರಶಸ್ತಿಗಳನ್ನು ವಿತರಿಸಲಾಗುತ್ತಿದ್ದು, 15ಕ್ಕೂ ಹೆಚ್ಚು ಮನಮೋಹಕ ಪ್ರದರ್ಶನಗಳಿವೆ. ಗಿಚ್ಚಿ ಗಿಲಿಗಿಲಿ ತಂಡದ ಕಾಮಿಡಿ ಸ್ಕಿಟ್ಗಳು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿವೆ. ಅಂದ್ಹಾಗೆ ಈ 'ಅನುಬಂಧ ಅವಾರ್ಡ್ಸ್' ಜನವರಿ 24, 25 ಮತ್ತು 26ರಂದು ಸತತ ಮೂರು ದಿನಗಳ ಕಾಲ ಸಂಜೆ 7ಕ್ಕೆ ಪ್ರಸಾರವಾಗಲಿದೆ.


Click it and Unblock the Notifications











