ಮಕ್ಕಳನ್ನು ಹೀರೋ ಮಾಡೋಕೆ ಹೊರಟ ಅಪ್ಪನ 'ನಂದ ಗೋಕುಲ', ಸ್ವಾಭಿಮಾನದ 'ಭಾರ್ಗವಿ'; ಎರಡೂ ಸೇರಿದರೆ 'ಮಹಾಸಂಗಮ'
ಕಲರ್ಸ್ ಕನ್ನಡದಲ್ಲಿ ಮಹಿಳೆ ಹಾಗೂ ಕೌಟುಂಬಿಕ ಹಿನ್ನೆಲೆಯುಳ್ಳ ಕಥೆಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅದರಲ್ಲಿ ಈಗಾಗಲೇ ಜನಪ್ರಿಯತೆಯನ್ನು ಪಡೆದುಕೊಂಡಿರುವ ಧಾರಾವಾಹಿಗಳೆಂದು 'ಭಾರ್ಗವಿ ಎಲ್ಎಲ್ಬಿ' ಹಾಗೂ 'ನಂದ ಗೋಕುಲ'. ಈ ಎರಡೂ ಧಾರಾವಾಹಿಗಳು ವೀಕ್ಷಕರ ಮನಗೆದ್ದಿವೆ. ಭಾರ್ಗವಿ ಎಲ್ಎಲ್ ಬಿ ಅಪ್ಪಟ ಮಹಿಳಾ ಪ್ರಧಾನ ಧಾರಾವಾಹಿ. 'ನಂದ ಗೋಕುಲ' ಪಕ್ಕಾ ಕೌಟುಂಬಿಕ ಸೀರಿಯಲ್. ಈ ಎರಡೂ ಸೀರಿಯಲ್ಗಳ ಮಹಾ ಸಂಗಮ ಆಗುತ್ತಿದೆ.
ಮಕ್ಕಳನ್ನು ಹೀರೋ ಮಾಡ್ಬೇಕು ಅಂತ ಹೋರಾಡುವ ಅಪ್ಪನ ಕಥೆಯೇ 'ನಂದ ಗೋಕುಲ'. ಇತ್ತೀಚೆಗೆ ಆರಂಭ ಆಗಿದ್ದ ಈ ಧಾರಾವಾಹಿ ಹಲವು ಸಂಚಿಕೆಗಳಿಂದ ತನ್ನ ಟಿಆರ್ಪಿಯನ್ನು ಹೆಚ್ಚಿಸಿಕೊಳ್ಳುತ್ತಾ ಮುಂದೆ ಸಾಗಿದೆ. ಇನ್ನೊಂದು ಕಡೆ ಸ್ವಾಭಿಮಾನದ ಮಹಾ ಸಂಘರ್ಷದ ಕಥೆ ಹೇಳುತ್ತಿರುವ 'ಭಾರ್ಗವಿ ಎಲ್ ಎಲ್ ಬಿ' ಕೂಡ ಜನರ ಮನಗೆದ್ದಿದೆ. 'ಭಾರ್ಗವಿ ಎಲ್ಎಲ್ಬಿ' ರಾತ್ರಿ 8.30 ಕ್ಕೆ ಹಾಗೂ 'ನಂದ ಗೋಕುಲ' ರಾತ್ರಿ 9ಕ್ಕೆ ಪ್ರಸಾರವಾಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಇವೆರಡೂ ಧಾರಾವಾಹಿಗಳ 'ಮಹಾ ಸಂಗಮ' ಆಗುತ್ತಿದೆ.

ಯುವತಿ ಭಾರ್ಗವಿ ಧೈರ್ಯ ಹಾಗೂ ಚಾಣಾಕ್ಷ ತನಕ್ಕೆ ಪ್ರತ್ಯೇಕ ಫ್ಯಾನ್ ಬೇಸ್ ಇದೆ. ಈಕೆ ಅತ್ಯಂತ ಪ್ರಭಾವಶಾಲಿ ಮತ್ತು ಬಲಿಷ್ಠ ವಕೀಲನಾಗಿರುವ ಜಯಪ್ರಕಾಶ್ ಪಾಟೀಲ್ ಅನ್ನು ಎದುರು ಹಾಕಿಕೊಂಡಿದ್ದಾರೆ. ಇವರಿಬ್ಬರ ನಡುವೆ ಸ್ವಾಭಿಮಾನದ ಮಹಾ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರ್ಗವಿಯ ತಂದೆ ಕೂಡ ಲಾಯರ್ ಆಗಿದ್ದು, ಕೋರ್ಟಿನಲ್ಲಿ ಅವರನ್ನು ಅವಮಾನಿಸಿ ತಲೆ ತಗ್ಗಿಸುವಂತೆ ಮಾಡಿಬಿಡುತ್ತಾರೆ. ಇದರಿಂದ ಬೇಸರಗೊಂಡ ಭಾರ್ಗವಿ ತಂದೆ ವಕೀಲಿಕೆ ವೃತ್ತಿಯನ್ನೇ ತೊರೆಯುವಂತೆ ಜೆಪಿ ಪಾಟೀಲ್ ಮಾಡುತ್ತಾನೆ.
ತನ್ನ ವೃತ್ತಿಜೀವನದಲ್ಲಿ ಒಂದೇ ಒಂದು ಸೋಲು ಕಾಣದ ಜೆಪಿ ಪಾಟೀಲ್ ಗೆಲ್ಲುವುದಕ್ಕೆ ಏನು ಬೇಕಾದರೂ ಮಾಡುತ್ತಾನೆ. ವಕೀಲಿಕೆಯನ್ನು ಅಧಿಕಾರ, ಪ್ರಭಾವ ಎಂದು ನಂಬಿದ್ದಾನೆ. ಆದರೆ, ಇತ್ತ ಭಾರ್ಗವಿ ತದ್ವಿರುದ್ಧ. ಅಧಿಕಾರ, ಹಣ, ಪ್ರಭಾವ, ಆಸೆ ಆಮೀಷಗಳಿಗೆ ಬೆಲೆ ಕೊಡುವುದಿಲ್ಲ. ಯಾರಿಗೂ ಹೆದರದ ಈ ಯುವತಿಯಾಗಿ ಭಾರ್ಗವಿ ಕಡಕ್ ಲುಕ್ ಕೊಟ್ಟಿದ್ದಾರೆ. ತಂದೆಗೆ ಮಗಳು ದೊಡ್ಡ ವಕೀಲರಾಗಿ ಮೆರೆಯಬೇಕು ಅಂತ ಆಸೆ. ಆದರೆ ಅಮ್ಮನಿಗೆ ಅನಗತ್ಯ ತೊಂದರೆಗಳು ಬೇಕಾ? ಎನ್ನುವ ಆತಂಕ. ಮದುವೆ ಮಾಡಿಕೊಂಡು ಆರಾವಾಗಿ ಇರಬೇಕು ಎನ್ನುವ ಹಠ.

ಈಗ ಭಾರ್ಗವಿಯ ಬಾಳಲ್ಲಿ ಅನಿರೀಕ್ಷಿತ ಟ್ವಿಸ್ಟ್ ಬಂದು ಬಿಟ್ಟಿದೆ. ಜೆಪಿ ಪಾಟೀಲನ ಮಗ ಅರ್ಜುನ್ ಪಾಟೀಲ್ ಅನ್ನು ಭೇಟಿ ಮಾಡಿದ ಕ್ಷಣದಿಂದ ಮನಸ್ಸು ಬದಲಾಗುತ್ತೆ. ಶ್ರೀಮಂತ ಕುಟುಂಬದಲ್ಲಿ ಬೆಳೆದರೂ ಸಹೃದಯಿಯಾಗಿರುವ ಅರ್ಜುನ್ಗೆ ಭಾರ್ಗವಿಯ ಮೇಲೆ ಮೊದಲ ನೋಟದಲ್ಲೇ ಪ್ರೀತಿ ಹುಟ್ಟುತ್ತೆ.ಆತನಿಗೆ ತಂದೆಯ ವಿರುದ್ಧ ಹೋರಾಟ ಮಾಡುತ್ತಿರುವ ವಕೀಲೆ ಇವರೇ ಎಂಬ ಅರಿವು ಇರದೆ ಭಾರ್ಗವಿಗೆ ಅರ್ಜುನ್ ಹತ್ತಿರವಾಗುತ್ತಾನೆ.
ಇತ್ತ ನಂದ ಗೋಕುಲದಲ್ಲೂ ಸ್ವಾಭಿಮಾನ ದ ಎಪಿಸೋಸ್ ನಡೆಯುತ್ತಿದೆ. ಅಣ್ಣ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿಸಿದ್ದಕ್ಕೆ ತಂದೆಯ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಹೀಗಾಗಿ ಮನೆಬಿಟ್ಟು ಬೇರೆ ಕಡೆಯಲ್ಲಿ ವಾಸವಿದ್ದಾನೆ. ಮಗ ಮನೆಯಿಂದ ಹೊರ ಹೋಗಿದ್ದಕ್ಕೆ ತಾಯಿಯ ಕರುಳು ಚುರುಕ್ ಎಂದಿದೆ. ಹೀಗಾಗಿ ಮಗನನ್ನು ಮನೆಗೆ ಕರೆದುಕೊಂಡು ಹೋಗುವುದಕ್ಕೆ ತಾಯಿಯ ಪ್ರಯತ್ನ ನಡೆದಿದೆ.
ಮಹಾಸಂಗಮದಲ್ಲಿ ಏನು ನಡೀತಿದೆ?
'ನಂದ ಗೋಕುಲ'ದ ನಾಯಕ 'ವಲ್ಲಭ' ಹಾಗೂ ಭಾರ್ಗವಿಯ ಭೇಟಿಯಾಗಿದೆ. ಭಾರ್ಗವಿಗೆ ಜೆಪಿ ಪಾಟೀಲನ ಮಗ ಅರ್ಜುನ್ ಮೇಲೆ ಇರುವ ಪ್ರೀತಿಯನ್ನು ತಿಳಿಸಿಕೊಡುತ್ತಾನೆ ಇನ್ನೊಂದು ಕಡೆ ಅಪ್ಪನ ಮಾತಿನಿಂದ ಬೇಸರಗೊಂಡು 'ನಂದ ಗೋಕುಲ'ದಿಂದ ಹೊರ ಬಿದ್ದಿರುವ ವಲ್ಲಭನಿಗೆ ತಂದೆ ತಾಯಿಯ ಮಹತ್ವವನ್ನು ಭಾರ್ಗವಿ ತಿಳಿಸಿ, ಮನೆಗೆ ಮರಳುವಂತೆ ಭಾರ್ಗವಿ ಮನವರಿಕೆ ಮಾಡಿಕೊಡುತ್ತಾಳೆ. ಹೀಗೆ ಒಬ್ಬರಿಗೊಬ್ಬರು ದಿಕ್ಕು ತೋರಿಸುವ ಈ ಮಹಾ ಸಂಗಮದಲ್ಲಿ'ಭಾರ್ಗವಿ LL. B.' ಹಾಗೂ 'ನಂದ ಗೋಕುಲ'ದ ಕಲಾವಿದರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. ಕಲರ್ಸ್ ಕನ್ನಡದಲ್ಲಿ ಈ ಮಹಾಸಂಭ್ರಮ ಜುಲೈ 21ರಿಂದ ಜುಲೈ 25 ರ ವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗಲಿದೆ.


Click it and Unblock the Notifications











