Rani Serial: ಅಮ್ಮ-ಮಗಳ ಭಾವುಕ ಪಯಣ; ಮನೆ-ಮನ ಗೆಲ್ಲಲು ಬರ್ತಿದ್ದಾಳೆ ʻರಾಣಿʼ.. ಎಲ್ಲಿ? ಯಾವತ್ತಿನಿಂದ ಆರಂಭ?
ಕನ್ನಡ ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳು ಪ್ರಸಾರ ಲಾಂಚ್ ಆಗುತ್ತಲೇ ಇರುತ್ತವೆ. ಕಿರುತೆರೆ ವೀಕ್ಷಕರಿಗೆ ಮನರಂಜನೆ ನೀಡಲೇಬೇಕು ಅಂತ ಪಣ ತೊಟ್ಟು ಕೌಟುಂಬಿಕ ಧಾರಾವಾಹಿಗಳನ್ನು ಸೆಟ್ಟೇರಿಸುತ್ತಲೇ ಇರುತ್ತವೆ. ಹೀಗೆ ಹೊಸ ಧಾರಾವಾಹಿಯೊಂದನ್ನು ಕಿರುತೆರೆ ವೀಕ್ಷಕರ ಮುಂದಿಡುವುದಕ್ಕೆ ರೆಡಿಯಾಗಿದೆ ಕಲರ್ಸ ಕನ್ನಡ.
ಕಲರ್ಸ್ ಕನ್ನಡ ಈಗಾಗಲೇ ಕೌಟುಂಬಿಕ ಹಾಗೂ ಮಹಿಳಾ ಪ್ರಧಾನ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಆ ಸಾಲಿಗೆ ಮತ್ತೊಂದು ಧಾರಾವಾಹಿ ಸೇರ್ಪಡೆಯಾಗುತ್ತಿದೆ. ಆ ಹೊಚ್ಚ ಹೊಸ ಧಾರಾವಾಹಿಯೇ 'ರಾಣಿ'. ಅಮ್ಮ ಹಾಗೂ ಮಗಳ ಬಾಂಧವ್ಯದ ಕಥೆಯನ್ನು ಹೊತ್ತು ಬರ್ತಿದೆ. "ತಾಯಿ ಇದ್ದರೂ ಅನಾಥೆಯಾಗಿ ಜೈಲಿಂದ ಹೊರ ಬರ್ತಿದಾಳೆ ರಾಣಿ. ಕಣ್ಣಲ್ಲಿ ಕಣ್ಣಿಟ್ಟು ನೋಡ್ಕೊಳ್ತೀರಲ್ವಾ?" ಅಂತ ಪ್ರಶ್ನೆ ಮಾಡುತ್ತಾ ಪ್ರೋಮೋ ರಿಲೀಸ್ ಮಾಡಲಾಗಿದೆ.

'ರಾಣಿ' ಧಾರಾವಾಹಿ ಬಗ್ಗೆ ಕಲರ್ಸ್ ಕನ್ನಡ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದೆ. ಇದು ಕೇವಲ ಅಪರಾಧ ಅಥವಾ ಜೈಲಿನ ಕಥೆಯಲ್ಲ. ಬದಲಾಗಿ ವಿಧಿಯಾಟದಿಂದ ಸೆರೆಮನೆಯ ಕಂಬಿಗಳ ನಡುವೆಯೇ ಹುಟ್ಟಿ, ಹೊರಗಿನ ಜಗತ್ತನ್ನೇ ಕಾಣದ ಮುಗ್ಧ ಮಗು ರಾಣಿ ಹಾಗೂ ಮಗಳಿಗಾಗಿ ಹಂಬಲಿಸುವ ತಾಯಿಯ ಎದೆತುಂಬಿ ಬರುವ ಕತೆ. ಜೈಲಿನ ಕಲ್ಲು ಗೋಡೆಗಳೇ ತನ್ನ ಪ್ರಪಂಚ ಎಂದು ನಂಬಿರುವ ಪುಟ್ಟ ರಾಣಿಗೆ, ಅಲ್ಲಿನ ಕತ್ತಲಲ್ಲೂ ಸೂರ್ಯನ ಕಿರಣವಾಗಿ ಅಮ್ಮನ ಪ್ರೀತಿ ಸಿಗುತ್ತದೆ. ಆದರೆ, ಕಾನೂನು ಮತ್ತು ವಿಧಿ ಇಬ್ಬರನ್ನೂ ಬೇರ್ಪಡಿಸಲು ನಿಂತಾಗ, ಆ ಪುಟ್ಟ ಜೀವ ತನ್ನ ತಾಯಿಯನ್ನು ಮರಳಿ ಪಡೆಯಲು ನಡೆಸುವ ಹೋರಾಟ ವೀಕ್ಷಕರ ಕಣ್ಣಂಚನ್ನು ಒದ್ದೆ ಮಾಡುವುದು ಖಚಿತ. ಪ್ರೋಮೋಗಳಲ್ಲಿ ಕಂಡ ಆ ಪುಟ್ಟ ಮಗುವಿನ ಆರ್ದ್ರತೆ ಕನ್ನಡಿಗರ ಹೃದಯಕ್ಕೆ ನೇರವಾಗಿ ತಟ್ಟಿದೆ." ಎಂದು ಹೊಸ ಧಾರಾವಾಹಿ 'ರಾಣಿ' ಬಗ್ಗೆ ಸುಳಿವು ಕೊಟ್ಟಿದೆ.
"ತಾಯಿಯಿಂದ ದೂರವಾಗುವುದೇ ರಾಣಿಗೆ ಸಿಗುವ ಅತಿದೊಡ್ಡ ಶಿಕ್ಷೆ" ಎಂಬ ಸೂಕ್ಷ್ಮ ಎಳೆಯೇ ಈ ಹೊಸ ಹೊಚ್ಚ ಹೊಸ ಧಾರಾವಾಹಿ ರಾಣಿಯ ಸಾರಾಂಶ. ಪ್ರತಿ ಮನೆಯಲ್ಲೂ ಮಗುವಿನ ಮೊದಲ ಗುರು ತಾಯಿ. ಹಾಗೇ ಆ ಮಗುವಿನ ರಕ್ಷಕಿ ಕೂಡ ಅವಳೇ. ಆದರೆ ಇಲ್ಲಿ ಅಮ್ಮನೇ ಬಂಧಿಯಾಗಿದ್ದು, ತನ್ನ ತಪ್ಪಿನಿಂದಲೋ, ಇಲ್ಲ ಇಲ್ಲದೆಯೋ ಸಮಾಜದ ದೃಷ್ಟಿಯಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಾಯಿಯಾಗಿದ್ದಾಳೆ. ತನ್ನ ನೋವನ್ನು ಲಾಲಿ ಹಾಡಿನ ಹಿಂದೆ ಅಡಗಿಸಿ ಮಗಳಿಗೆ ಪ್ರೀತಿ ನೀಡುತ್ತಾಳೆ. ಈ ಮೌನ ಸಂಕಟ ಮತ್ತು ಮಗುವಿನ ಅಚಲ ನಂಬಿಕೆಯ ನಡುವಿನ ಸಂಘರ್ಷವು ಪ್ರತಿಯೊಬ್ಬ ವೀಕ್ಷಕರ ಎದೆ ಬಡಿತವನ್ನು ಹೆಚ್ಚಿಸುವಂತೆ ಚಿತ್ರಿಸಲಾಗಿದೆ. ಪ್ರೋಮೋದ ಒಂದೊಂದು ದೃಶ್ಯವೂ ಈ ವೀಕ್ಷಕರನ್ನು ಭಾವುಕರನ್ನಾಗಿಸುತ್ತೆ.
'ರಾಣಿ' ಧಾರಾವಾಹಿಯನ್ನು ನಿರ್ದೇಶಕಿ ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಸ್ವಪ್ನ ಕೃಷ್ಣ ಈ ಧಾರಾವಾಹಿಯನ್ನು ನಿರ್ದೇಶನ ಮಾಡುವುದಲ್ಲದೆ, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಇನ್ನು ರಾಣಿಯಾಗಿ ಬಾಲ ನಟಿ ಧನ್ವಿ ತನ್ನ ಮುಗ್ಧ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಈಗಾಗಲೇ 'ರಾಣಿ' ಧಾರಾವಾಹಿಯ ಪ್ರೋಮೋ ಮೂಲಕ ವೀಕ್ಷಕರ ಗಮನ ಸೆಳೆದಿದ್ದಾರೆ. ಈ ಸೀರಿಯಲ್ಗೆ ನಾಯಕನಾಗಿ ಆರವ್ ಸೂರ್ಯ ಮತ್ತು ನಾಯಕಿಯಾಗಿ ಐಶ್ವರ್ಯಾ ಕಾಣಿಸಿಕೊಳ್ಳಲಿದ್ದಾರೆ.
ಜೈಲಿನಲ್ಲಿ ಇರುವವರನ್ನು ಹಾಗೂ ಅಲ್ಲಿಂದ ಬಂದವರನ್ನು ಸಮಾಜ ಹೇಗೆ ನೋಡುತ್ತದೆ ಅನ್ನೋ ದೃಷ್ಟಿಕೋನ ಈ ಸೀರಿಯಲ್ನಲ್ಲಿ ಇದೆ. ರಾಣಿಯ ಮುಗ್ಧ ಕಣ್ಣುಗಳು ಕಾಣುವ ಪ್ರಪಂಚಕ್ಕೂ ಈಗಿನ ಸಮಾಜಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಗೆತನ, ಸೇಡು, ಜೈಲಿನ ಕಂಬಿಗಳಿಗಿಂತಲೂ ಪ್ರೀತಿಯೇ ಶಕ್ತಿಶಾಲಿ ಎಂಬುದನ್ನು 'ರಾಣಿ' ಧಾರಾವಾಹಿ ಸಾರಲಿದೆ. ಈ ಧಾರಾವಾಹಿಯಲ್ಲಿ ರಾಣಿ ಕೇಳುವ ಪ್ರತಿಯೊಂದು ಪ್ರಶ್ನೆಯೂ ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನೆ ಮಾಡಲಿದೆ. ವೀಕ್ಷಕರನ್ನು ಚರ್ಚೆಗೆ ಒಳಪಡಿಸುತ್ತದೆ. ಮನರಂಜನೆಯ ಜೊತೆಗೆ ಸಮಾಜ, ಅಲ್ಲಿನ ತಾರತಮ್ಯಗಳು, ತಾಯಿ ಮತ್ತು ಮಗುವಿನ ಭಾವನಾತ್ಮಕ ಸಂಬಂಧವನ್ನು ಬಿಂಬಿಸಲಾಗುತ್ತಿದೆ.
'ರಾಣಿ' ಕೇವಲ ಒಂದು ಧಾರಾವಾಹಿ ಅಷ್ಟೇ ಅಲ್ಲ. ಇದು ಮಗಳೊಬ್ಬಳ ಹಠ ಹಾಗೂ ಹೋರಾಟದ ಕಥೆ. ಗುಣಮಟ್ಟದ ಮೇಕಿಂಗ್ ಮತ್ತು ಭಾವುಕ ಕಥಾಹಂದರದ ಮೂಲಕ ಮತ್ತೆ ಕನ್ನಡಿಗರ ಹೃದಯ ಗೆಲ್ಲಲುವುದಕ್ಕೆ ಬರುತ್ತಿದೆ. ಕಲರ್ಸ್ ಕನ್ನಡದ ಈ ಹೊಚ್ಚ ಹೊಸ ಧಾರಾವಾಹಿ 'ರಾಣಿ' ಮಾರ್ಚ್ 9 ರಿಂದ ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ.


Click it and Unblock the Notifications











