'ಭಾರ್ಗವಿ LLB' ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್; ಚಿತೆಯ ಮುಂದೆ ಭೀಷ್ಮ ಪ್ರತಿಜ್ಞೆ.. ವಕೀಲಿ ವೃತ್ತಿಗೆ ವಿದಾಯ?
ಕನ್ನಡದ ಧಾರಾವಾಹಿಗಳು ಆಗಾಗ ಟ್ವಿಸ್ಟ್ ಅಂಡ್ ಟರ್ನ್ ಅನ್ನು ಪಡೆದುಕೊಳ್ಳುತ್ತಲೇ ಇರುತ್ತವೆ. ಕಿರುತೆರೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಕತೆಗಳು ಬದಲಾಗುತ್ತಲೇ ಇರುತ್ತವೆ. ಮನರಂಜನಾ ವಾಹಿನಿಗಳು ಇಂತಹ ಪ್ರಯತ್ನಕ್ಕೆ ಆಗಾಗ ಕೈ ಹಾಕುತ್ತಲೇ ಇರುತ್ತವೆ. ಅದರಲ್ಲಿ ಕಲರ್ಸ್ ಕನ್ನಡದ ಧಾರಾವಾಹಿ 'ಭಾರ್ಗವಿ LLB' ಕೂಡ ಒಂದು. ಈ ಧಾರಾವಾಹಿಯ ವೀಕ್ಷಕರಿಗೆ ತಂಡ ಸಡನ್ ಶಾಕ್ ಕೊಟ್ಟಿದೆ.
ಕಲರ್ಸ್ ಕನ್ನಡದಲ್ಲಿ ಕಳೆದ ಕೆಲವು ತಿಂಗಳಿನಿಂದ 'ಭಾರ್ಗವಿ LLB' ಧಾರಾವಾಹಿ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ. ಇಲ್ಲಿವರೆಗೂ ಭಾರ್ಗವಿಯ ಹೋರಾಟವನ್ನು ನೋಡಿದ್ದ ವೀಕ್ಷಕರಿಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಂದರೆ, ಕತೆ ರೋಚಕ ಘಟ್ಟಕ್ಕೆ ಬಂದು ತಲುಪಿದೆ. ವಿಶಿಷ್ಟ ಕಥಾಹಂದರದ ಮೂಲಕ ವೀಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿರುವ ಈ ಧಾರಾವಾಹಿ ಈಗ ಕಥೆಯ ದಿಕ್ಕನ್ನೇ ಬದಲಿಸುವ ಹಂತದಲ್ಲಿದೆ. ವಕೀಲೆಯಾಗಿ ಭಾರ್ಗವಿ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದಳು. ಈಗ ಆಕೆಯ ಬದುಕಿನಲ್ಲಿ ವಿಧಿ ದೊಡ್ಡ ಆಟ ಆಡಿ ಭೀಕರ ಸಂಚಲನ ಮೂಡಿಸಿದೆ. ಈ ಮೂಲಕ ವೀಕ್ಷಕರಲ್ಲಿಯೂ ಹತ್ತಾರು ಪ್ರಶ್ನೆಗಳನ್ನು ಮೂಡುವಂತೆ ಮಾಡಿದೆ.

'ಭಾರ್ಗವಿ LLB' ಧಾರಾವಾಹಿ ಕತೆ ತಿರುಳು, ಪ್ರಭಾವಿ ವಕೀಲ ಜೆಪಿ ಪಾಟೀಲ್ನಿಂದ ವಕೀಲಿಕೆ ತ್ಯಜಿಸಿದ್ದ ತನ್ನ ತಂದೆ ರವೀಂದ್ರ ಭಟ್ಕಳ್ನನ್ನು ಮತ್ತೆ ಅದೇ ಕೋರ್ಟ್ಗೆ ಕರೆದುಕೊಂಡು ಬರಬೇಕು ಅನ್ನೋ ದಿಟ್ಟ ಗುರಿಯನ್ನು ಭಾರ್ಗವಿ ಹೊಂದಿದ್ದಳು. ಅವಳು ಅಂದುಕೊಂಡಂತೆ ಆ ಕನಸನ್ನೂ ಭಾರ್ಗವಿ ಈಡೇರಿಸಿಕೊಂಡಿದ್ದಾಳೆ. ಆದರೆ, ಇದೀಗ ಅವಳ ದೊಡ್ಡ ಗೆಲುವನ್ನು ಸಂಭ್ರಮಿಸೋಕೆ ಅಪ್ಪನೇ ಇಲ್ಲ. ಭಾರ್ಗವಿ ಜೀವನದಲ್ಲಿ ಇಂತಹದ್ದೊಂದು ವಿಧಿಯಾಟ ನಡೆದೇ ಹೋಗಿದೆ. ಇದು ಅವಳ ಸಾಧನೆಗೆ ಸಿಕ್ಕಿರೋ ಸೋಲಾ? ಇಲ್ಲ ವಿಧಿಯ ಆಟನಾ? ಈ ಪ್ರಶ್ನೆ ಉತ್ತರ ಸಿಗಬೇಕಿದೆ.
ಭಾರ್ಗವಿಯ ಪ್ರತಿಯೊಂದು ಹೆಜ್ಜೆಯಲ್ಲಿಯೂ ಅಪ್ಪ ಧೈರ್ಯದ ಸಂಕೇತವಾಗಿದ್ದರು. ಈಗ ಅಪ್ಪನನ್ನು ಕಳೆದುಕೊಂಡು ಭಾರ್ಗವಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಭೀಕರ ರಸ್ತೆ ಅಪಘಾತದಲ್ಲಿ ಭಾರ್ಗವಿ ತಂದೆ ರವೀಂದ್ರ ಭಟ್ಕಳ್ ಅಕಾಲಿಕ ಸಾವು ಸಂಭವಿಸಿದೆ. ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಈ ಸಾವು ಕೇವಲ ಅಪಘಾತವೋ ಅಥವಾ ಭಾರ್ಗವಿಯ ವೃತ್ತಿ ವೈರಿಗಳು ಮಾಡಿದ ಕೃತ್ಯವೋ ಎಂಬ ಅನುಮಾನ ಮೂಡಿದೆ. ಇದು ವೀಕ್ಷಕರನ್ನು ಗೊಂದಲಕ್ಕೆ ಬೀಳುವಂತೆ ಮಾಡಿದೆ.
ತಂದೆ ರವೀಂದ್ರ ಭಟ್ಕಳ್ ಸಾವಿನಿಂದ ಭಾರ್ಗವಿ ಕುಟುಂಬದಲ್ಲಿ ಆಕಾಶವೇ ತಲೆಕೆಳಗಾಗುವಂತಹ ವಾತಾವರಣ. ಈ ಘಟನೆ ಬಳಿಕ ಅಮ್ಮ ವಕೀಲೆ ವೃತ್ತಿಯನ್ನೇ ಬಿಡುವಂತೆ ತಾಕೀತು ಮಾಡಿದ್ದಾರೆ. ಇನ್ನು ಅಮ್ಮನ ನೋವನ್ನು ಅರಿತುಕೊಂಡ ಭಾರ್ಗವಿ ಅಪ್ಪನ ಚಿತೆಯ ಮುಂದೇನೆ ಶಪಥ ಮಾಡಿದ್ದಾಳೆ. ಇನ್ನು ಅಮ್ಮ ಹೇಳುವವರೆಗೂ ಕಪ್ಪು ಕೋಟ್ ಧರಿಸುವುದಿಲ್ಲ ಎಂದು ಮಾತು ಕೊಟ್ಟಿದ್ದಾಳೆ. ಹಾಗಿದ್ದರೆ, ಇನ್ಮುಂದೆ ಭಾರ್ಗವಿ ವಕೀಲೆ ವೃತ್ತಿ ಮಾಡುವುದಿಲ್ವಾ? ಧಾರಾವಾಹಿಯಲ್ಲಿ ಮುಂದೇನಾಗುತ್ತೆ? ಅನ್ನೋ ಕುತೂಹಲ ಮೂಡಿದೆ.

ಭಾರ್ಗವಿ ಲಾಯರ್ ಕೋಟ್ ಕಳಚಿಟ್ಟು ಮುಂದೆ ಏನು ಮಾಡುತ್ತಾಳೆ? ವಕೀಲೆ ವೃತ್ತಿಗೆ ಗುಡ್ ಬೈ ಹೇಳಿದ ಭಾರ್ಗವಿ ಸಾಮಾನ್ಯ ಮಹಿಳೆಯಂತೆ ಬದುಕುತ್ತಾಳಾ? ಅವಳ ಮುಂದಿನ ಜೀವನ ಏನು? ರವೀಂದ್ರ ಭಟ್ಕಳ ಅವರ ಸಾವು ಪೂರ್ವನಿಯೋಜಿತವೇ? ಒಂದು ವೇಳೆ ಕೊಲೆಯೇ ಆಗಿದ್ದರೆ, ಈ ಕೃತ್ಯದ ಹಿಂದಿರುವ ಅಸಲಿ ಮುಖ ಯಾರು? ಕೋರ್ಟ್ ಮೆಟ್ಟಿಲೇರದೇ ಭಾರ್ಗವಿ ತನ್ನ ತಂದೆಯ ಸಾವಿಗೆ ನ್ಯಾಯ ಕೊಡಿಸುವುದಕ್ಕೆ ಆಗುತ್ತಾ? ಇಂತಹದ್ದೊಂದು ಟ್ವಿಸ್ಟ್ ಕೊಟ್ಟಿರೋ ತಂಡ, ಕಥೆಯನ್ನು ಇಲ್ಲಿಗೆ ಮುಗಿಸುತ್ತಾ? ಇಲ್ಲ ಇದು ಹೊಸ ಅಧ್ಯಾಯದ ಆರಂಭನಾ? ಸದ್ಯಕ್ಕಂತೂ ವೀಕ್ಷಕರಲ್ಲಿ ಕುತೂಹಲ ಮೂಡಿದೆ.
ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನಿಂದ (ಫೆಬ್ರವರಿ 11) ಉತ್ತರ ಸಿಗುತ್ತಾ ಹೋಗುತ್ತೆ. 'ಭಾರ್ಗವಿ LLB'ಯ ಮುಂದಿನ ಸಂಚಿಕೆಗಳಲ್ಲಿ ಕಥೆ ಎಳೆ ಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತೆ. ಭಾರ್ಗವಿಯ ಈ ಹೊಸ ಅವತಾರ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಬಹುದು. ಸಾಮಾಜಿಕ ಕಳಕಳಿ ಹಾಗೂ ಕೌಟುಂಬಿಕ ಹಿನ್ನೆಲೆಯುಳ್ಳ 'ಭಾರ್ಗವಿ LLB', ಸೋಮವಾರದಿಂದ ಶುಕ್ರವಾರದ ವರೆಗೆ ಬದಲಾದ ಸಮಯದಲ್ಲಿ ಅಂದರೆ, ರಾತ್ರಿ 9:30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ.


Click it and Unblock the Notifications











