ದೂರದರ್ಶನದಲ್ಲಿ ಮತ್ತೆ ಶುರುವಾಗಲಿದೆ 'ಶ್ರೀ ಕೃಷ್ಣ'ನ ತುಂಟಾಟ
ಲಾಕ್ಡೌನ್ ಅವಧಿಯಲ್ಲಿ ವೀಕ್ಷಕರನ್ನು ಪೌರಾಣಿಕ ಯುಗಕ್ಕೆ ಕರೆದೊಯ್ಯುವ ಪ್ರಯತ್ನದಲ್ಲಿದೆ ದೂರದರ್ಶನ. ಈಗಾಗಲೇ 80-90ರ ದಶಕದಲ್ಲಿ ಜನಪ್ರಿಯವಾಗಿದ್ದ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುವ ಮೂಲಕ ಜನರಿಗೆ ಮತ್ತೆ ಹತ್ತಿರವಾಗಿರುವ ದೂರದರ್ಶನ, ಈಗ ಮತ್ತೊಂದು ಪೌರಾಣಿಕ ಧಾರಾವಾಹಿಯನ್ನು ಮರಳಿ ತರುತ್ತಿದೆ.
Recommended Video
ರಮಾನಂದ ಸಾಗರ್ ನಿರ್ದೇಶನದ ಪೌರಾಣಿಕ ಸರಣಿ 'ಶ್ರೀ ಕೃಷ್ಣ' ದೂರದರ್ಶನದಲ್ಲಿ ಪುನಃ ಪ್ರಸಾರವಾಗಲಿದೆ. ಈ ಬಗ್ಗೆ ಭಾನುವಾರ ಮಾಹಿತಿ ನೀಡಿರುವ ಪ್ರಸಾರ ಭಾರತಿ, ಧಾರಾವಾಹಿಯ ಪ್ರೋಮೋ ಕ್ಲಿಪ್ ಹಂಚಿಕೊಂಡಿದ್ದು, 'ಶೀಘ್ರವೇ ಬರಲಿದೆ' ಎಂದು ತಿಳಿಸಿದೆ. ದೂರದರ್ಶನ ಮಾತ್ರವೇ ಲಭ್ಯವಿದ್ದ ಸಂದರ್ಭದಲ್ಲಿ ಈ ಪೌರಾಣಿಕ ಧಾರಾವಾಹಿಗಳು ಅಪಾರ ಜನಪ್ರಿಯತೆ ಪಡೆದುಕೊಂಡಿದ್ದವು. ಈಗ ಮರುಪ್ರಸಾರದ ವೇಳೆಯಲ್ಲಿಯೂ ಪೌರಾಣಿಕ ಧಾರಾವಾಹಿಗಳನ್ನು ಜನರು ವೀಕ್ಷಿಸುತ್ತಿರುವುದು ಅವುಗಳ ಮಹತ್ವ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಇನ್ನೂ ದಿನಾಂಕ ಪ್ರಕಟಿಸಿಲ್ಲ
ಶ್ರೀ ಕೃಷ್ಣ ತನ್ನ ಕಿರುಬೆರಳಲ್ಲಿ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದಿರುವ ಮತ್ತು ಸರ್ಪದ ನೆತ್ತಿಯ ಮೇಲೆ ನರ್ತಿಸುವ ದೃಶ್ಯಗಳು ಈ ಪ್ರೋಮೋ ಕ್ಲಿಪ್ನಲ್ಲಿವೆ. ಈ ಧಾರಾವಾಹಿ ಡಿಡಿ ನ್ಯಾಷನಲ್ನಲ್ಲಿ ಪ್ರಸಾರವಾಗಲಿದ್ದು, ಅದರ ದಿನಾಂಕ ಮತ್ತು ಸಮಯವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುತ್ತದೆ.

ಭಾರಿ ಸಂಖ್ಯೆಯ ವೀಕ್ಷಕರು
'ರಾಮಾಯಣ' ಮತ್ತು 'ಮಹಾಭಾರತ' ಧಾರಾವಾಹಿಗಳ ಮರುಪ್ರಸಾರವು ಭಾರಿ ಪ್ರಮಾಣದಲ್ಲಿ ವೀಕ್ಷಕರನ್ನು ತನ್ನತ್ತ ಸೆಳೆದುಕೊಂಡಿದ್ದವು. ಸಾಮಾಜಿಕ ಜಾಲತಾಣದಲ್ಲಿಯೂ ಅವುಗಳ ಬಗ್ಗೆ ತೀವ್ರ ಚರ್ಚೆಗಳು ನಡೆದಿದ್ದವು. ಪ್ರಸ್ತುತ 'ಉತ್ತರ ರಾಮಾಯಣ' ಡಿಡಿ ನ್ಯಾಷನಲ್ನಲ್ಲಿ ಮರುಪ್ರಸಾರವಾಗುತ್ತಿದೆ.
ಡಿಡಿ ಮೆಟ್ರೋದಲ್ಲಿ ಪ್ರಸಾರವಾಗಿತ್ತು
'ರಾಮಾಯಣ' ಖ್ಯಾತಿಯ ರಮಾನಂದ ಸಾಗರ್ ಅವರ 'ಶ್ರೀ ಕೃಷ್ಣ' 1993-1996ರ ಅವಧಿಯಲ್ಲಿ ದೂರದರ್ಶನದ ಮೆಟ್ರೋ ಚಾನೆಲ್ನಲ್ಲಿ (DD-2) ಮೊದಲು ಪ್ರಸಾರವಾಗಿತ್ತು. ಆದರೆ 1996ರಲ್ಲಿ ಅದನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಗಿತ್ತು. 221 ಕಂತುಗಳ ಧಾರಾವಾಹಿಯಲ್ಲಿ ಬಾಲ ಕೃಷ್ಣನಾಗಿ ಸ್ವಪ್ನಿಲ್ ಜೋಷಿ ನಟಿಸಿದ್ದರೆ, ಯೌವನದ ಕೃಷ್ಣನಾಗಿ ಸರ್ವದಮನ್ ಬ್ಯಾನರ್ಜಿ ಅಭಿನಯಿಸಿದ್ದರು.

'ಕುಶ'ನಾಗಿಯೂ ನಟಿಸಿದ್ದ ಸ್ವಪ್ನಿಲ್
ಈಗ ಡಿಡಿ ನ್ಯಾಷನಲ್ನಲ್ಲಿ ಮರು ಪ್ರಸಾರವಾಗುತ್ತಿರುವ 'ರಾಮಾಯಣ ಉತ್ತರಕಾಂಡ'ದಲ್ಲಿ ಕುಶನ ಪಾತ್ರದಲ್ಲಿಯೂ ಸ್ವಪ್ನಿಲ್ ಜೋಷಿ ನಟಿಸಿದ್ದರು. ಶ್ರೀ ಕೃಷ್ಣ ಧಾರಾವಾಹಿಯಲ್ಲಿ ಪಿಂಕಿ ಪರೀಖ್, ರೇಷ್ಮಾ ಮೋದಿ, ಶೀಬಾ ಚಡ್ಡಾ ಮತ್ತು ದೀಪಕ್ ದಿಯುಲ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.


Click it and Unblock the Notifications











