Drishtibottu:ದೃಷ್ಟಿಯ ಅಸಲಿ ಬಣ್ಣ ದತ್ತಭಾಯ್ ಎದುರೇ ಮಳೆಯಲ್ಲಿ ಕೊಚ್ಚಿ ಹೋಯ್ತು..ಏನಾಗುತ್ತೆ ಈ ಪ್ರೀತಿ?
ಕಿರುತೆರೆ ವೀಕ್ಷಕರನ್ನು ಸೆಲೆಯುತ್ತಿರುವ ಧಾರಾವಾಹಿಗಳಲ್ಲಿ 'ದೃಷ್ಟಿಬೊಟ್ಟು' ಕೂಡ ಒಂದು. ಈ ಸೀರಿಯಲ್ನಲ್ಲೀಗ ಟ್ವಿಸ್ಟ್ಗಳ ಮೇಲೆ ಟ್ವಿಸ್ ಬರುತ್ತಿದೆ. ಸೀರಿಯಲ್ ವೀಕ್ಷಿಸುವವರಿಗೆ ಕಥೆ ಕುತೂಹಲ ಕೆರಳಿಸುತ್ತಿದೆ. ಅದರಲ್ಲೂ ಇವತ್ತಿನ ಎಪಿಸೋಡ್ನಲ್ಲಿ ವೀಕ್ಷಕರು ದೃಷ್ಟಿಯ ಬಣ್ಣ ಹಾಗೂ ಸತ್ಯದ ಅನಾವರಣ ಆಗುವುದನ್ನು ವೀಕ್ಷಿಸಲಿದ್ದಾರೆ. ಇದು 'ದೃಷ್ಟಿ ಬೊಟ್ಟು' ಧಾರಾವಾಹಿಯ ಬಹುಮುಖ್ಯ ಘಟ್ಟ.
ದತ್ತಾಭಾಯ್ಗೆ ಸುಂದರವಾಗಿರೋ ಹುಡುಗೀರು ಮೋಸ ಮಾಡುತ್ತಾರೆ. ಅವರು ನಂಬಿಕೆಗೆ ಅರ್ಹರಲ್ಲ ಅನ್ನೋದನ್ನ ತುಂಬನೇ ಗಟ್ಟಿಯಾಗಿ ನಂಬಿದ್ದರು. ಇತ್ತ ದೃಷ್ಟಿ ತನಗೆ ಮುಳುವಾಗಿದ್ದ ಸೌಂದರ್ಯವನ್ನು ಮರೆಮಾಚುವುದಕ್ಕೆ ಮೈಗೆಲ್ಲ ಕಪ್ಪು ಬಣ್ಣ ಹಚ್ಚಿಕೊಳ್ಳುತ್ತಿದ್ದಳು. ಇಬ್ಬರನ್ನೂ ವಿಧಿಯೇ ಒಂದು ಮಾಡಿತ್ತು. ದತ್ತನ ಜೀವನವನ್ನು ದೃಷ್ಟಿ ಕಾಪಾಡಿದ್ದು, ಬಳಿಕ ಅವರಿಬ್ಬರ ನಡುವೆ ಪ್ರೀತಿ ಮೂಡಿದ್ದು, ಈಗ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಸಲಿಗೆ ಬೆಳೆದಿದ್ದು ಇದೂವರೆಗೂ ವೀಕ್ಷಕರು ನೋಡಿರುವ ಕತೆ.

ಇನ್ನೊಂದು ಲೈನ್ನಲ್ಲಿ ತಮ್ಮನ ವಿರುದ್ಧ ಒಳಗಿಂದೊಳಗೇ ಶರಾವತಿ ದ್ವೇಷ ಸಾಧಿಸುತ್ತಿದ್ದಾಳೆ. ಆದರೆ, ದತ್ತನ ಜೀವನಕ್ಕೆ ಯಾವಾಗ ದೃಷ್ಟಿ ಬಂದಳೋ ಅಲ್ಲಿಂದ ಆಕೆಗೆ ಅಡಚಣೆಯಾಗುತ್ತಿದೆ. ಶರಾವತಿಯ ಎಲ್ಲಾ ಕುತಂತ್ರಗಳಿಗೂ ದೃಷ್ಟಿ ಬ್ರೇಕ್ ಹಾಕಿದ್ದಾಳೆ. ಅತ್ತಿಗೆಯ ಕುತಂತ್ರಗಳ ಎದುರು ಸೆಡ್ಡು ಹೊಡೆದು ದತ್ತನನ್ನ ಕಾಪಾಡುತ್ತಿದ್ದಾಳೆ. ತನ್ನ ಹಗೆತನಕ್ಕೆ ಗೋಡೆಯಾಗಿರುವ ದೃಷ್ಟಿ ನುಂಗಲಾರದ ತುತ್ತಾಗಿದ್ದಾಳೆ. ಹೀಗಾಗಿ ದೃಷ್ಟಿಗೆ ಸಮಸ್ಯೆಗಳ ಮೇಲೆ ಸಮಸ್ಯೆ ಬರುವಂತೆ ಮಾಡುತ್ತಲೇ ಇದ್ದಾಳೆ. ಇವೆಲ್ಲವನ್ನೂ ಮೆಟ್ಟಿನಿಂತು ಇನ್ನೇನು ದತ್ತನ ಜೊತೆ ಸುಂದರ ಸಂಸಾರ ಶುರು ಮಾಡಬೇಕು. ಇಬ್ಬರೂ ಪ್ರೀತಿಯಿಂದ ಬಾಳ್ವೆ ಮಾಡಬೇಕು ಎನ್ನುವಷ್ಟರಲ್ಲಿ ನಿರ್ದೇಶಕರು ಕಥೆಗೆ ದೊಡ್ಡ ಟ್ವಿಸ್ಟ್ ಕೊಟ್ಟಿದ್ದಾರೆ.
ದೃಷ್ಟಿಯನ್ನು ಎದುರಿಸುವುದಕ್ಕೆ ಶರಾವತಿ ಹೊಸ ದಾರಿ ಕಂಡುಕೊಂಡಿದ್ದಳು. ದೃಷ್ಟಿಯ ಅಕ್ಕ ಸೀಮಾಳನ್ನ ದಾಳವಾಗಿ ಬಳಸಿಕೊಂಡು ರಣತಂತ್ರ ರೂಪಿಸುತ್ತಿದ್ದಳು. ಆದ್ರೀಗ ದೃಷ್ಟಿ ಎಲ್ಲರಿಂದ ಮುಚ್ಚಿಟ್ಟಿರೋ ಗುಟ್ಟು ಬಯಲಾಗಿದೆ. ದೃಷ್ಟಿಯ ಅಕ್ಕ ಸೀಮಾಳಿಗೆ ತನ್ನ ಸ್ವಂತ ತಂಗಿಯ ಜೀವನ ಹಾಳು ಮಾಡುವ ದುರುದ್ದೇಶವಿಲ್ಲ. ಆದರೂ ಅವಳು ಬಾಯಿ ಬಿಡಲೇಬೇಕಾದ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ಇನ್ನೊಂದು ಕಡೆ ಶರಾವತಿಯ ಬಲಗೈ ಕರೀಂ ದತ್ತನನ್ನ ಮುಗಿಸೋದಕ್ಕೆ ದುಬೈನಿಂದ ಬಳ್ಳಾರಿಗೆ ಬಂದಿಳಿದಿದ್ದಾನೆ. ದತ್ತನಿಗೆ ಅರಿವಿಲ್ಲದೆ ಅವನ ಸುತ್ತ ಒಂದು ಚಕ್ರವ್ಯೂಹವನ್ನೇ ರಚಿಸಿದ್ದಾನೆ. ದೃಷ್ಟಿ ಅಕ್ಕ ಸೀಮಾಳನ್ನ ಸಾವು-ಬದುಕಿನ ನಡುವೆ ಹೋರಾಡುವ ಪರಿಸ್ಥಿತಿಗೆ ತಂದು ದತ್ತನನ್ನ ಎಲ್ಲಿಗೋ ಕಳಿಸಿ, ದೃಷ್ಟಿಯನ್ನ ಕಿಡ್ನಾಪ್ ಮಾಡಿದ್ದಾನೆ. ಇದೀಗ ದೃಷ್ಟಿಯನ್ನು ಹುಡುಕಿಕೊಂಡು ಹೊರಟ ದತ್ತನಿಗೆ ತನ್ನ ಪತ್ನಿ ಇಲ್ಲಿವರೆಗೂ ಕಾಡಿಕೊಂಡಿದ್ದ ಸತ್ಯ ಹೊರಬರಲಿದೆ.
ದತ್ತಾಭಾಯ್ಗೆ ಮೊದಲಿಂದಲೂ ಸುಂದರವಾಗಿರೋ ಹುಡುಗಿಯರ ಮೇಲೆ ನಂಬಿಕೆನೇ ಇಲ್ಲ. ಹಾಗೇ ನಂಬಿಕೆ ದ್ರೋಹ ಮಾಡಿದವರನ್ನ ಕ್ಷಮಿಸೋ ಮತೇ ಇಲ್ಲ. ಹೀಗಿರುವಾಗ ದೃಷ್ಟಿಯೇ ತನ್ನ ಪ್ರಪಂಚ, ತನ್ನ ಜೀವ ಎಂದುಕೊಂಡಿದ್ದ ದತ್ತನಿಗೆ ಆಕೆ ಜೋಪಾನವಾಗಿ ಕಾಪಾಡಿಕೊಂಡಿದ್ದ ಸತ್ಯ ಗೊತ್ತಾದರೆ ಸಹಿಸಿಕೊಳ್ತಾನಾ? ಸುಳ್ಳು ಹೇಳಿರುವ ದೃಷ್ಟಿಯನ್ನು ಕ್ಷಮಿಸುತ್ತಾನಾ? ಈಗ ತಾನೇ ಹುಟ್ಟಿಕೊಂಡಿರುವ ಪ್ರೀತಿಯ ಗತಿಯೇನು? ಇಲ್ಲ ಅವಳ ಪರಿಸ್ಥಿತಿಯನ್ನು ಒಪ್ಪಿಕೊಳ್ಳುತ್ತಾನಾ? ಈ ಪ್ರಶ್ನೆಗಳಿಗೆ ಎಪಿಸೋಡ್ನಲ್ಲಿ ಉತ್ತರ ಸಿಗಲಿದೆ.
ಇತ್ತ ದೃಷ್ಟಿ ತನ್ನ ರಕ್ಷಣೆಗೋಸ್ಕರ, ದುರುಳರ ಕೆಂಗಣ್ಣಿನಿಂದ ಪಾರಾಗಲು ತನ್ನ ಅಸಲಿ ಮೈ ಬಣ್ಣವನ್ನು ಮುಚ್ಚಿಟ್ಟಿದ್ದಾಳೆ. ಅದೇ ಈಗ ಮತ್ತೆ ತೊಂದರೆಗೆ ಸಿಲುಕುವಂತೆ ಮಾಡುತ್ತಿದೆ. ಇಷ್ಟರೊಳಗೆ ದತ್ತನ ಬಳಿ ದೃಷ್ಟಿ ತನ್ನ ಅಸಲಿ ಸತ್ಯವನ್ನು ಹೇಳಿಕೊಳ್ಳಬಹುದಿತ್ತು. ಆದರೆ, ಯಾವುದೋ ಪರಿಸ್ಥಿತಿಗೆ ಸಿಲುಕಿ ಅದು ಸಾಧ್ಯವಾಗಿರಲಿಲ್ಲ. ಕಿಡ್ನಾಪ್ ಆಗಿದ್ದ ದೃಷ್ಟಿ, ಮರಳಿ ದತ್ತನ ಸೇರುವ ಹೊತ್ತಿಗೆ ಮೈಗೆ ಹಚ್ಚಿಕೊಂಡಿರುವ ಬಣ್ಣ ಮಳೆಯಲ್ಲಿ ಕೊಚ್ಚಿ ಹೋಗುತ್ತೆ. ಈಗ ದತ್ತ ಈ ಸತ್ಯವನ್ನು ಹೇಗೆ ಸ್ವೀಕರಿಸುತ್ತಾನೆ? ಶರಾವತಿ ಅಂದುಕೊಂಡಿದ್ದನ್ನು ಸಾಧಿಸಿಬಿಟ್ಟಳೇ? ಇವೆಲ್ಲವನ್ನೂ ತಿಳಿದುಕೊಳ್ಳೋಕೆ ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಆಗುತ್ತಿದೆ.


Click it and Unblock the Notifications











