Drone Prathap: "ಹಣ.. ಬೈಕ್ ಏನೂ ಬೇಡ.. ಇನ್ಮುಂದೆ ಕೆಲಸ ಮೂಲಕ ಉತ್ತರ ಕೊಡ್ತೀನಿ"; ಡ್ರೋನ್ ಪ್ರತಾಪ್
ಬಿಗ್ಬಾಸ್ ಕನ್ನಡ ಸೀಸನ್ 10ಗೆ ಅದ್ಧೂರಿಯಾಗಿ ತೆರೆಬಿದ್ದಿದೆ. ನಿನ್ನೆ ನಡೆದ ಬಿಗ್ಬಾಸ್ ಫಿನಾಲೆಯಲ್ಲಿ ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿ ಹೊರಬಂದಿದ್ದಾರೆ. ಅವರೇ ಗೆಲ್ಲಬಹುದು ಅನ್ನೋ ನಿರೀಕ್ಷೆಯನ್ನು ಹುಟ್ಟಾಕಿದ್ದರೂ, ಕೊನೆಯ ಹಂತದಲ್ಲಿ ಗೆಲುವು ಕಾರ್ತಿಕ್ ಕಡೆಗೆ ವಾಲಿತ್ತು.
ಡ್ರೋನ್ ಪ್ರತಾಪ್ ಮೊದಲ ರನ್ನರ್ ಆಗಿ ಹೊರಹೊಮ್ಮಿದ್ದಾರೆ. ಇವರಿಗೆ 10 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಹಾಗೂ ಬೌನ್ಸ್ ಕಡೆಯಿಂದ ಒಂದು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಹುಮಾನವಾಗಿ ನೀಡಲಾಗಿದೆ. ಬಿಗ್ಬಾಸ್ನಿಂದ ಹೊರಬರುತ್ತಿದ್ದಂತೆ ಡ್ರೋನ್ ಪ್ರತಾಪ್ ಇದೆಲ್ಲವನ್ನೂ ಅಸಹಾಯಕರಿಗೆ ನೀಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ.

ಬಿಗ್ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಡ್ರೋನ್ ಪ್ರತಾಪ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ತಮ್ಮ ಮುಂದಿನ ಯೋಜನೆಗಳೇನು? 10 ಲಕ್ಷ ರೂಪಾಯಿ ಹಣ ಹಾಗೂ ಬೈಕ್ ಅನ್ನು ಯಾರಿಗೆ ಕೊಡುತ್ತೇನೆ ಅನ್ನೋದನ್ನು ಹೇಳಿದ್ದಾರೆ.
ಬಿಗ್ಬಾಸ್ನಿಂದ ಗೆದ್ದಿರೋ 10 ಲಕ್ಷ ರೂಪಾಯಿ ಹಣವನ್ನು ಬಡ ಮಕ್ಕಳ ಚಿಕಿತ್ಸೆಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ. "ನಾನು ಗೆದ್ದಿರೋ ಹಣವನ್ನು ಯಾವುದಾದರೂ ಬಡ ಮಕ್ಕಳ ಚಿಕಿತ್ಸೆಗೆ ಕೊಡುತ್ತೇನೆ. ಅದೇ ರೀತಿ ಸಾಕಷ್ಟು ಕಷ್ಟ ಪಡುತ್ತಿರೋ ಡಿಲೇವರಿ ಬಾಯ್ಸ್ ಇದ್ದಾರೆ. ಒಂದು ಬೈಕ್ ಸಿಕ್ಕಿದೆ. ಎಷ್ಟೋ ಜನ ಸೈಕಲ್ನಲ್ಲಿ ಡಿಲೇವರಿ ಮಾಡುತ್ತಾರೆ. ಅವರಿಗೆ ಆ ಬೈಕ್ ಕೊಡುತ್ತೇನೆ." ಎಂದು ಪ್ರತಾಪ್ ಹೇಳಿದ್ದಾರೆ.
ಡ್ರೋನ್ ಪ್ರತಾಪ್ಗೆ ಸುಮಾರು ಎರಡೂವರೆ ಕೋಟಿ ವೋಟ್ ಬಂದಿದೆ ಎಂದು ಕಿಚ್ಚ ಸುದೀಪ್ ವೇದಿಕೆ ಮೇಲೆಯೇ ಅನೌನ್ಸ್ ಮಾಡಿದ್ದರು. ಹೀಗಾಗಿ ಆ ವೋಟ್ಗಳೇ ಸಾಕು ನನಗೆ ಎಂದು ಪ್ರತಾಪ್ ಹೇಳಿಕೊಂಡಿದ್ದಾರೆ. "ನನಗೆ ಏನೂ ಬೇಡ. ಯಾರೆಲ್ಲ ವೋಟ್ ಮಾಡಿದ್ದೀರಾ? ಅಷ್ಟೇ ಸಾಕು. ಎರಡೂವರೆ ಕೋಟಿ ವೋಟು ಸಾಮಾನ್ಯವಾದ ಮಾತಲ್ಲ. ಅದು ಈ ಜೀವ ಇರುವ ತನಕ ಮರೆಯೋದಿಲ್ಲ. ಅದೇ ಉತ್ತರ." ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.
ಇಷ್ಟೇ ಅಲ್ಲದೆ.. ಬಿಗ್ ಬಾಸ್ನಿಂದ ಈಗತಾನೇ ಹೊರಗೆ ಬಂದಿರೋ ಡ್ರೋನ್ ಪ್ರತಾಪ್ ತಮ್ಮ ಮುಂದಿನ ನಡೆಯ ಬಗ್ಗೆನೂ ಹೇಳಿಕೆ ಕೊಟ್ಟಿದ್ದಾರೆ. ಇದೂವರೆಗೂ ಕೊಟ್ಟಿರುವ ಪ್ರೀತಿಯನ್ನು ಮುಂದೆನೂ ಕೊಡಿ ಎಂದಿದ್ದಾರೆ. ಹಾಗೇ ಸಾಮಾಜಿಕ ಜಾಲ ತಾಣದಲ್ಲಿ ಇನ್ಮುಂದೆ ಅವರು ಮಾಡುವ ಕೆಲಸಗಳನ್ನು ನೋಡಿ, ಪ್ರೀತಿಸಿ. ಕೆಲಸ ಮುಖಾಂತರ ಉತ್ತರ ಕೊಡುತ್ತೇನೆ. ಇನ್ಮುಂದೆ ಜಾಸ್ತಿ ಮಾತಾಡಲ್ಲ ಎಂದು ಹೇಳಿದ್ದಾರೆ.
ಡ್ರೋನ್ ಪ್ರತಾಪ್ ತೆಗೆದುಕೊಂಡ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚಿಗೆ ವ್ಯಕ್ತವಾಗುತ್ತಿದೆ. ಡ್ರೋನ್ ಪ್ರತಾಪ್ ಮುಂದಿನ ಹೆಜ್ಜೆ ಶುಭಕೋರಿದ್ದಾರೆ. ಮತ್ತೆ ಕೆಲವರು ಬದಲಾಗಿ ಬಂದ ಡ್ರೋನ್ ಪ್ರತಾಪ್ಗೆ ಜಾಗರೂಕರಾಗಿ ಹೆಜ್ಜೆ ಇಡುವಂತೆ ಸಲಹೆಯನ್ನೂ ನೀಡುತ್ತಿದ್ದಾರೆ.


Click it and Unblock the Notifications











