ಕಿರುತೆರೆಗೆ ಬರ್ತಿದೆ ವಿಜಯ್, ರಚಿತಾ, ರಾಜ್ 'ಲ್ಯಾಂಡ್ಲಾರ್ಡ್'; ಎಲ್ಲಿ? ಯಾವಾಗ?
ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಅಂತಹ ಸ್ಯಾಂಡಲ್ವುಡ್ನ ಸ್ಟಾರ್ ನಟರು ನಟಿಸಿರುವ ಸಿನಿಮಾ 'ಲ್ಯಾಂಡ್ಲಾರ್ಡ್'. ಈ ವರ್ಷದ ಆರಂಭದಲ್ಲಿ ಈ ಸಿನಿಮಾ ಥಿಯೇಟರ್ಗೆ ಲಗ್ಗೆ ಇಟ್ಟಿತ್ತು. ಗ್ರಾಮೀಣ ಭಾಗದ ನೈಜ ಘಟನೆಯನ್ನು ಆಧರಿಸಿದ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. 'ಸಾರಥಿ' ಸಿನಿಮಾ ನಿರ್ಮಾಣ ಮಾಡಿದ್ದ ಕೆವಿ ಸತ್ಯಪ್ರಕಾಶ್ ಈ ಸಿನಿಮಾಗೂ ಹಣ ಹೂಡಿಕೆ ಮಾಡಿದ್ದಾರೆ.
'ಕಾಟೇರ'ಗೆ ಕಥೆಯನ್ನು ಹೆಣೆದಿದ್ದ ಜಡೇಶ್ ಕೆ ಹಂಪಿ 'ಲ್ಯಾಂಡ್ಲಾರ್ಡ್' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ದುನಿಯಾ ವಿಜಯ್ ಮೊದಲ ಪುತ್ರಿ ರಿತಾನ್ಯಾ ವಿಜಯ್ ಈ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರೇಕ್ಷಕರ ಕಂಟೆಂಟ್ ಸಿನಿಮಾಗಳ ಬೇಡಿಕೆಯನ್ನು ಗಮನದಲ್ಲಿ ಇಟ್ಕೊಂಡು ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಗೊಳ್ಳಲಾಗಿತ್ತು.

ಈಗಾಗಲೇ ಥಿಯೇಟರ್ನಲ್ಲಿ ಈ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು, ಓಟಿಟಿಗೂ ಪ್ರವೇಶ ಮಾಡಿತ್ತು. ಈ ಎರಡೂ ಕಡೆಗಳಲ್ಲಿ 'ಲ್ಯಾಂಡ್ಲಾರ್ಡ್' ಸಿನಿಮಾ ನೋಡದೇ ಇರುವವರು ಕಿರುತೆರೆಯಲ್ಲಿ ನೋಡಬಹುದು. ಹಾಕಿದ್ದರೆ, ಎಲ್ಲಿ ನೋಡಬಹುದು? ಯಾವಾಗ ನೋಡಬಹುದು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
'ಲ್ಯಾಂಡ್ಲಾರ್ಡ್' ಪ್ರಸಾರ ಎಲ್ಲಿ? ಯಾವಾಗ?
1980ರ ದಶಕದ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು 'ಲ್ಯಾಂಡ್ಲಾರ್ಡ್' ಕತೆಯನ್ನು ಹೆಣೆಯಲಾಗಿತ್ತು. ಇದೊಂದು ಶಕ್ತಿಯುತ ಸಾಮಾಜಿಕ ಕಥಾಹಂದರದ ಸಿನಿಮಾ. ಈ ಸಿನಿಮಾವು ಆತ್ಮಗೌರವ, ದಬ್ಬಾಳಿಕೆ, ನ್ಯಾಯ, ಪ್ರತಿರೋಧದ ಹಾಗು ಮತ್ತಿತರ ಅಂಶಗಳಿಗೆ ಅತೀ ಹೆಚ್ಚು ಒತ್ತು ನೀಡಿದೆ. ಸಮಾಜದಲ್ಲಿನ ಜಾತಿ ತಾರತಮ್ಯ, ಅಸಮಾನತೆ ಮತ್ತು ಬಡವರ ಮೇಲಿನ ಸಿರಿವಂತರ ದಬ್ಬಾಳಿಕೆಯನ್ನು ಈ ಸಿನಿಮಾ ಕಣ್ಣಿಗೆ ಕಟ್ಟುವಂತೆ ತೋರಿಸಲಾಗಿದೆ. ಸಾಮಾನ್ಯ ಜನರು ಜಮೀನ್ದಾರನ ಅನ್ಯಾಯದ ವಿರುದ್ಧ ಒಟ್ಟಾಗಿ ಹೋರಾಟ ಮಾಡುವ ಕಥೆಯೇ ಈ ಚಿತ್ರದ ಜೀವಾಳ.
ಇದೊಂದು ಕುಟುಂಬ ಸಿನಿಮಾ ಆಗಿದ್ದು, ಜೀ ಕನ್ನಡ 'ಲ್ಯಾಂಡ್ಲಾರ್ಡ್' ಸಿನಿಮಾವನ್ನು ನಾಳೆ (ಮೇ 23) ಶನಿವಾರದಂದು ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಮಾಡುತ್ತಿದೆ. ಸಂಜೆ ನಾಲ್ಕು ಗಂಟೆಗೆ ವರ್ಲ್ಡ್ ಟೆವಿವಿಷನ್ ಪ್ರೀಮಿಯರ್ ಆಗುತ್ತಿದೆ. ದುನಿಯಾ ವಿಜಯ್, ರಚಿತಾ ರಾಮ್ ಹಾಗೂ ರಾಜ್ ಬಿ ಶೆಟ್ಟಿಯನ್ನು 'ಲ್ಯಾಂಡ್ ಲಾರ್ಡ್' ಸಿನೆಮಾವನ್ನು ನೋಡಬಹುದಾಗಿದೆ.

'ಲ್ಯಾಂಡ್ಲಾರ್ಡ್' ಕಥೆಯೇನು?
'ಲ್ಯಾಂಡ್ಲಾರ್ಡ್' ಸಿನಿಮಾದ ಕಥೆಯ ಬಗ್ಗೆ ನೋಡುವುದಾರೇ, ಶಾಂತ ಜೀವನ ಬಯಸುವ ರಾಚಯ್ಯ(ದುನಿಯಾ ವಿಜಯ್) ತನ್ನ ಮಡದಿ ನಿಂಗವ್ವ (ರಚಿತಾರಾಮ್ ) ಮತ್ತು ಮಗಳು ಭಾಗ್ಯಾಳೊಂದಿಗೆ ಒಂದು ಸಣ್ಣ ಜಮೀನನ್ನು ಹೊಂದುವ ಕನಸಿನೊಂದಿಗೆ ಬದುಕುತ್ತಿರುವವನಾಗಿದ್ದಾನೆ. ಆದರೆ, ಅವನ ಗ್ರಾಮವನ್ನು ಪ್ರಭಾವಶಾಲಿ ಜಮೀನುದಾರ ಸಣ್ಣ ಧಣಿ (ರಾಜ್ ಬಿ. ಶೆಟ್ಟಿ) ಆಳುತ್ತಿದ್ದು, ಅವನ ಪ್ರಭಾವ ಜಮೀನು ಮಾಲೀಕತ್ವ, ರಾಜಕೀಯ ಮತ್ತು ಸಾಮಾಜಿಕ ವ್ಯವಸ್ಥೆಯವರೆಗೂ ವ್ಯಾಪಿಸಿರುತ್ತೆ.
ರಾಚಯ್ಯ ಕಾನೂನಿನ ಮೇಲೆ ಬಹಳ ನಂಬಿಕೆ ಇಟ್ಟು, ನ್ಯಾಯವು ಸಾಮಾನ್ಯ ಜನರನ್ನು ಕಾಪಾಡುತ್ತದೆ ಎಂದು ನಂಬಿದ್ದರೂ, ಧಣಿಯ ಆಡಳಿತದಡಿಯಲ್ಲಿ ಗ್ರಾಮಸ್ಥರು ಅನುಭವಿಸುವ ಶೋಷಣೆ, ಭಯ ಮತ್ತು ಹಿಂಸೆ ಆತನ ಗಮನಕ್ಕೆ ಬರುತ್ತದೆ. ಯಾವಾಗ ಒಂದು ಮುಗ್ಧ ಕುಟುಂಬ ಅನ್ಯಾಯವಾಗಿ ಸಾವನ್ನಪ್ಪುತ್ತದೆಯೋ, ಆಗ ಗ್ರಾಮಸ್ಥರ ಆಕ್ರೋಶ ಸ್ಫೋಟಗೊಳ್ಳುತ್ತದೆ. ಶಾಂತ ಸ್ವಭಾವದ ರಾಚಯ್ಯ ಧಣಿಯ ಶೋಷಣೆ ನೋಡಲಾರದೆ ನಿಧಾನವಾಗಿ ಬದಲಾಗಿ ಇವೆಲ್ಲದರ ವಿರುದ್ಧ ಧ್ವನಿ ಎತ್ತುವ ನಾಯಕನಾಗಿ ಬದಲಾಗುತ್ತಾನೆ. ಚಿತ್ರದಲ್ಲಿ ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಅವರ ನಟನೆ ಅದ್ಭುತವಾಗಿದ್ದು, ಕಥೆಗೆ ಜೀವ ತುಂಬಿದ್ದಾರೆ. ಇನ್ನು ಜಮೀನ್ದಾರ್ ಸಣ್ಣ ಧಣಿಯ ಪಾತ್ರದಲ್ಲಿ ಮಿಂಚಿದ ರಾಜ್ ಬಿ. ಶೆಟ್ಟಿ ತನ್ನ ನಟನೆಯ ಮೂಲಕ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಾರೆ.
ಯಾವಾಗ ನೋಡಬಹುದು?
ರಾಚಯ್ಯ ಮತ್ತು ಗ್ರಾಮಸ್ಥರು ಒಟ್ಟಾಗಿ ತಮ್ಮ ಗ್ರಾಮದ ಸಣ್ಣ ಧಣಿಯ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಾರಾ? ಅದರಲ್ಲಿ ಯಶಸ್ವಿಯಾಗುತ್ತಾರಾ? ಇನ್ನೂ ಈ ಸಿನಿಮಾ ನೋಡದೇ ಇದ್ದರೆ, ಜೀ ಕನ್ನಡದಲ್ಲಿ 'ಲ್ಯಾಂಡ್ಲಾರ್ಡ್' ಸಿನಿಮಾವನ್ನು ಇದೇ ಶನಿವಾರ ಮಧ್ಯಾಹ್ನ 4 ಗಂಟೆಗೆ ವೀಕ್ಷಣೆ ಮಾಡಬಹುದು.


Click it and Unblock the Notifications
