'ಬಿಗ್ ಬಾಸ್' ಮನೆ ಭಸ್ಮ: ಶಾಕ್ ಆದ ಸ್ಪರ್ಧಿಗಳು.!
ನಡುರಾತ್ರಿ ಸುಮಾರು 3 ಗಂಟೆ ಹೊತ್ತಿಗೆ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದಾಗಿ 'ಬಿಗ್ ಬಾಸ್' ಮನೆ ಧಗಧಗ ಉರಿದಿದೆ.
ಬಿಡದಿ ಬಳಿ ಇರುವ ಇನ್ನೋವೇಟಿವ್ ಫಿಲ್ಮ್ ಸಿಟಿಯ ಮೇಣದ ಮ್ಯೂಸಿಯಂನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬಳಿಕ 'ಬಿಗ್ ಬಾಸ್' ಮನೆಗೂ ಬೆಂಕಿ ತಗುಲಿದೆ. ಪರಿಣಾಮ, ಮೇಣದ ಮ್ಯೂಸಿಯಂ ಹಾಗೂ 'ಬಿಗ್ ಬಾಸ್' ಮನೆ ಸಂಪೂರ್ಣವಾಗಿ ಭಸ್ಮ ಆಗಿದೆ.
ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ 'ಬಿಗ್ ಬಾಸ್' ಮನೆ ನಿರ್ಮಿಸಲಾಗಿತ್ತು. ಆದ್ರೆ, ಅದೆಲ್ಲವೂ ಒಮ್ಮೆಲೆ ಬೆಂಕಿಗೆ ಆಹುತಿ ಆಗಿದೆ. ಅಗ್ನಿಶಾಮಕ ಸಿಬ್ಬಂದಿ ಎಷ್ಟೇ ಹರಸಾಹಸ ಪಟ್ಟರೂ, ಬೆಂಕಿ ನಂದಿಸಲು ಸಾಧ್ಯವಾಗುತ್ತಿಲ್ಲ. 'ಬಿಗ್ ಬಾಸ್' ಮನೆ ಹಾಗೂ ಅದರಲ್ಲಿ ಇದ್ದ ಪೀಠೋಪಕರಣ, ಎಡಿಟಿಂಗ್ ರೂಮ್.. ಎಲ್ಲವೂ ಸುಟ್ಟು ಕರಕಲಾಗಿದೆ.
ಬೆಳ್ಳಂಬೆಳಗ್ಗೆ 'ಬಿಗ್ ಬಾಸ್' ಮನೆಗೆ ಬೆಂಕಿ ಬಿದ್ದಿರುವ ಸುದ್ದಿ ಕೇಳಿ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಮಾಧ್ಯಮಗಳ ಜೊತೆಗೆ 'ಬಿಗ್ ಬಾಸ್' ಮನೆ ಬಗ್ಗೆ ಸ್ಪರ್ಧಿಗಳು ಹೇಳಿದ್ದು ಹೀಗೆ -

ಚಂದನ್ ಶೆಟ್ಟಿಗೆ ಶಾಕ್
''ಓ ಮೈ ಗಾಡ್... ತುಂಬಾ ಶಾಕಿಂಗ್ ಇದು. 'ಬಿಗ್ ಬಾಸ್' ಮನೆ ಒಂದು ಡ್ರೀಮ್ ಲ್ಯಾಂಡ್ ತರಹ. ಅದಕ್ಕೆ ಬೆಂಕಿ ಬಿದ್ದಿದೆ ಅಂದ್ರೆ, ಯಾರ ಕೆಟ್ಟ ಕಣ್ಣು ಬಿತ್ತೋ ಗೊತ್ತಿಲ್ಲ. ಆರೇಳು ತಿಂಗಳು ಟೈಮ್ ತಗೊಂಡು ಮನೆ ಚೆನ್ನಾಗಿ ಕಾಣುವ ಹಾಗೆ ಮಾಡಿರುತ್ತಾರೆ. ನಾವು ಒಳಗೆ ಇರುವಾಗ ಒಬ್ಬರಿಗೂ ಒಂದೂ ತೊಂದರೆ ಆಗಿರಲಿಲ್ಲ. ಯಾರೂ ಕೂಡ ಹುಷಾರು ತಪ್ಪಿರಲಿಲ್ಲ. ನಾವು ಇದ್ದ ಮನೆ ಬೆಂಕಿಯಲ್ಲಿ ಸುಟ್ಟು ಹೋಯ್ತಲ್ಲ ಅಂತ ಬೇಸರ ಆಗುತ್ತಿದೆ. ಅಲ್ಲಿ ಕಳೆದಿರುವ ಒಂದೊಂದು ಕ್ಷಣವನ್ನೂ ಮರೆಯಲು ಆಗಲ್ಲ. ಆ ಮನೆಯಲ್ಲಿ ಇರಬೇಕು ಅಂತ ಎಷ್ಟೋ ಜನಕ್ಕೆ ಆಸೆ ಇರುತ್ತೆ. ಆದ್ರೆ ಕೆಲವರಿಗೆ ಮಾತ್ರ ಚಾನ್ಸ್ ಸಿಗುತ್ತೆ. ಈಗ ಹೀಗೆ ಆಗಿರುವುದು ಮನಸ್ಸಿಗೆ ನೋವಾಗಿದೆ'' - ಚಂದನ್ ಶೆಟ್ಟಿ, 'ಬಿಗ್ ಬಾಸ್ ಕನ್ನಡ-5' ವಿನ್ನರ್

ಬೇಸರಗೊಂಡ ಅಕುಲ್ ಬಾಲಾಜಿ
''ಯಾರಿಗೂ ಏನೂ ಆಗಿಲ್ಲ ಅನ್ನೋದು ಒಂದು ಖುಷಿ ಸುದ್ದಿ. ಆದ್ರೆ, ಇಡೀ ಮನೆ ಬೆಂಕಿಗೆ ಆಹುತಿ ಆಗಿರುವುದು ಬೇಸರ ಆಗುತ್ತಿದೆ. ಅದೊಂದು ಬ್ಯೂಟಿಫುಲ್ ಪ್ಲೇಸ್'' - ಅಕುಲ್ ಬಾಲಾಜಿ, 'ಬಿಗ್ ಬಾಸ್ ಕನ್ನಡ-2' ವಿನ್ನರ್

ಕಣ್ಣೀರಿಟ್ಟ ನಿವೇದಿತಾ ಗೌಡ
''ಅದು ನನ್ನ ಡ್ರೀಮ್ ಪ್ಲೇಸ್. ಅದಕ್ಕೆ ಬೆಂಕಿ ಬಿದ್ದಿರುವುದು ನನಗೆ ತುಂಬಾ ಬೇಜಾರು ಆಗುತ್ತಿದೆ. ನನಗೆ ನಂಬುವುದಕ್ಕೆ ಆಗುತ್ತಿಲ್ಲ. ತುಂಬಾ ನೋವಾಗುತ್ತಿದೆ. ಆ ಮನೆಯಲ್ಲಿ ಎಷ್ಟೋ ನೆನಪುಗಳಿವೆ. ಈಗ ತುಂಬಾ ಶಾಕ್ ಆಗುತ್ತಿದೆ'' ಎಂದು ನಿವೇದಿತಾ ಗೌಡ ಕಣ್ಣೀರಿಟ್ಟರು

ಶಾಕಿಂಗ್ ನ್ಯೂಸ್ ಎಂದ ಜೆಕೆ
''ಇದು ನಿಜಕ್ಕೂ ಶಾಕಿಂಗ್ ನ್ಯೂಸ್. ಒಳಗಡೆ ತುಂಬಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದ್ದರು. ಗ್ಯಾಸ್ ಆಫ್ ಮಾಡುವ ಬಗ್ಗೆ ಪ್ರತಿ ಬಾರಿ ಎಚ್ಚರಿಕೆ ನೀಡುತ್ತಿದ್ದರು. ಆದ್ರೀಗ ಹೀಗೆ ಆಗಿರುವುದು ಶಾಕ್ ಆಗುತ್ತಿದೆ. ಇಡೀ 'ಬಿಗ್ ಬಾಸ್' ಮನೆ ಮಾಡಿರುವುದು ವುಡ್ (ಮರ)ದಿಂದ. ಅಲ್ಲಿ ಜನ ಇದ್ದಾಗ ಹೀಗೆ ಆಗಿದಿದ್ರೆ, ದೊಡ್ಡ ದುರಂತವೇ ನಡೆದು ಹೋಗುತ್ತಿತ್ತು. ಆದ್ರೆ, ಪ್ರೊಡಕ್ಷನ್ ಟೀಮ್ ತುಂಬಾ ಎಚ್ಚರಿಕೆ ವಹಿಸಿತ್ತು. ಈಗ ಹೇಗೆ ಇದೆಲ್ಲ ಆಯ್ತೋ ಗೊತ್ತಿಲ್ಲ. ಮೇಣದ ಮ್ಯೂಸಿಯಂ ಬೇರೆ ಪಕ್ಕದಲ್ಲೇ ಇರುವುದರಿಂದ ಬೆಂಕಿ ನಂದಿಸಲು ಕಷ್ಟ ಆಗುತ್ತಿರಬೇಕು'' - ಜಯರಾಂ ಕಾರ್ತಿಕ್, 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿ

ಶೀತಲ್ ಶೆಟ್ಟಿ ಏನಂದರು.?
''ಶಾಕ್ ಆಗಿದ್ದೀನಿ. ಅದೊಂಥರಾ ಮಜಾ ಮನೆ. ಅಲ್ಲಿನ ಪ್ರತಿಯೊಂದು ಕ್ಷಣವನ್ನೂ ಮರೆಯಲು ಆಗಲ್ಲ. ಅದು ತುಂಬಾ ಒಳ್ಳೆ ಫೀಲಿಂಗ್ ಕೊಟ್ಟ ಮನೆ'' - ಶೀತಲ್ ಶೆಟ್ಟಿ, 'ಬಿಗ್ ಬಾಸ್ ಕನ್ನಡ-4' ಸ್ಪರ್ಧಿ

ಕಿರಿಕ್ ಕೀರ್ತಿ ಹೇಳಿದಿಷ್ಟು
''ಸಖತ್ ಬೇಜಾರು ಆಗುತ್ತಿದೆ. ನಾನು ಆ ಮನೆಯಲ್ಲಿ 116 ದಿನ ಇದ್ದೆ. ಅದು ಸೆಟ್ ಇರಬಹುದು. ಆದ್ರೆ, ಆ ಮನೆಯೊಳಗೆ ನಮಗೆ ತುಂಬಾ ಭಾವನೆಗಳಿದೆ. ಈ ಘಟನೆ ಆಗಬಾರದಿತ್ತು. ಅಪಾರ ನಷ್ಟ ಆಗಿರುವ ಹಾಗಿದೆ'' - ಕಿರಿಕ್ ಕೀರ್ತಿ, 'ಬಿಗ್ ಬಾಸ್ ಕನ್ನಡ-4' ರನ್ನರ್ ಅಪ್


Click it and Unblock the Notifications











