ಮುಂದಿನ ವಾರ ಗೋಲ್ಡನ್ ಗೂಡಿನಲ್ಲಿ 'ಮುಂಗಾರು ಮಳೆ' ಸಂಭವ: ಸ್ನೇಹಲೋಕಕ್ಕೆ ಹೊಸ ಮೆರುಗು
ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿರುವುದು ಅವರ ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಜೀ ಕನ್ನಡದಲ್ಲಿ ಈಗಾಗಲೇ ಗಣೇಶ್ ನಿರೂಪಣೆಯ ಹೊಚ್ಚ ಹೊಸ ಶೋ 'ಗೋಲ್ಡನ್ ಗ್ಯಾಂಗ್' ಪ್ರಸಾರ ಆಗಿದೆ. ಮೊದಲ ಎಪಿಸೋಡ್ ಕಿರುತೆರೆ ವೀಕ್ಷಕರಿಗೆ ಹೊಸ ಅನುಭವ ಹಾಗೂ ಮನರಂಜನೆ ಎರಡೂ ನೀಡಿದೆ.
ಸ್ನೇಹಿತರಿಗಾಗಿಯೇ ಅಂತ ಕಾರ್ಯಕ್ರಮವೊಂದನ್ನು ರೂಪಿಸಿರುವುದು ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಇದೇ ಮೊದಲು. ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರುವ ಜೀ ಕನ್ನಡದ 'ಗೋಲ್ಡನ್ ಗ್ಯಾಂಗ್' ಮೊದಲನೇ ವಾರವೇ ಚಿಂದಿ ಉಡಾಯಿಸಿದೆ. ಅದೇ ಎರಡನೇ ವಾರ ಮತ್ತಷ್ಟು ಕುತೂಹಲ ಕೆರಳಿಸಿದೆ. ಯಾಕಂದ್ರೆ, ಗೋಲ್ಡನ್ ಅಡ್ಡಾದಲ್ಲಿ ಈ ಬಾರಿ ಜೋರಾಗಿ 'ಮುಂಗಾರು ಮಳೆ' ಸುರಿಯಲಿದೆ.

ಗೋಲ್ಡನ್ ಗ್ಯಾಂಗ್ನಲ್ಲಿ 'ಮುಂಗಾರು ಮಳೆ' ಸದ್ದು
ನಟ ಗಣೇಶ್ಗೆ ಗೋಲ್ಡನ್ ಸ್ಟಾರ್ ಪಟ್ಟ ಕೊಟ್ಟ ಸಿನಿಮಾ 'ಮುಂಗಾರು ಮಳೆ'. ಈ ಸಿನಿಮಾ ಕನ್ನಡ ಚಿತ್ರರಂಗ ಗತಿಯನ್ನಷ್ಟೇ ಬದಲಿಸಿಲ್ಲ. ಹಲವರ ಬದುಕನ್ನೇ ಬದಲಿಸಿತ್ತು. ನಿರ್ದೇಶಕ ಯೋಗರಾಜ್ ಭಟ್, ಕ್ಯಾಮರಾ ಮ್ಯಾನ್ ಕೃಷ್ಣ, ಸ್ಕ್ರೀನ್ ಪ್ಲೇ ರೈಟರ್ ಪ್ರೀತಂಗುಬ್ಬಿ, ಸಂಗೀತ ನಿರ್ದೇಶಕ ಮನೋಮೂರ್ತಿಗೆ ಸೂಪರ್ ಸಕ್ಸಸ್ ಕೊಟ್ಟ ಸಿನಿಮಾವಿದು. ಇದೇ ತಂಡ ಎರಡನೇ ವಾರ ಗೋಲ್ಡನ್ ಗ್ಯಾಂಗ್ಗೆ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ ಗೋಲ್ಡನ್ ಅಡ್ಡಾದಲ್ಲಿ ಮತ್ತೆ ಮುಂಗಾರು ಮಳೆ ಅನುಭವ ಆಗುವುದು ಗ್ಯಾರಂಟಿ.

ಮುಂದಿನ ವಾರದ ಅತಿಥಿಗಳು ಯಾರು?
ಮುಂದಿನ ವಾರ ಗೋಲ್ಡನ್ ಗೂಡು ರಂಗೇರುವುದರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ, ನಿರೂಪಣೆ ಮಾಡುತ್ತಿರುವ ಗಣೇಶ್ ಕೂಡ ಇಲ್ಲಿ ಅತಿಥಿಯೇ. ಕಿರುತೆರೆಯಲ್ಲಿ ಗಣೇಶ್ ಈ ಬಾರಿ ಡಬಲ್ ರೋಲ್ ನಿಭಾಯಿಸಲಿದ್ದಾರೆ. ಮುಂಗಾರು ಮನೆ ನಿರ್ದೇಶಕ ಯೋಗರಾಜ್ ಭಟ್, ಪ್ರೀತಂ ಗುಬ್ಬಿ, ಮುಂಗಾರು ಮಳೆಗೆ ಕ್ಯಾಮರಾಮ್ಯಾನ್ ಆಗಿದ್ದ ನಿರ್ದೇಶಕ ಕೃಷ್ಣ, ಸಂಗೀತ ನಿರ್ದೇಶಕ ಮನೋಮೂರ್ತಿ ಭಾಗವಹಿಸಲಿದ್ದಾರೆ. ಹೀಗಾಗಿ ಗೋಲ್ಡನ್ ಗೂಡಿನಲ್ಲಿ ಮಳೆಯ ವಾತಾವರಣವಿದ್ದರೂ, ಕಲರ್ಫುಲ್ ಆಗಿರುವುದಂತೂ ಪಕ್ಕಾ.

2ನೇ ವಾರ ಗೋಲ್ಡನ್ ಗ್ಯಾನ್ ಹೈಲೈಟ್ ಏನು?
'ಗೋಲ್ಡನ್ ಗ್ಯಾಂಗ್'ನಲ್ಲಿ ಮೋಜು ಮಸ್ತಿ ಎಲ್ಲವೂ ಇರುತ್ತೆ. ಜೊತೆ 'ಮುಂಗಾರು ಮಳೆ' ಚಿತ್ರೀಕರಣದ ನೆನಪುಗಳ ಮೆಲುಕು, ಕಾಮಿಡಿ, ಇನ್ಸೈಡ್ ಸ್ಟೋರಿ, ಗೆಲ್ಲುವುದಕ್ಕೂ ಮುನ್ನ ಎದುರಿಸಿದ ಕಷ್ಟದ ದಿನಗಳು ನೋಡಬಹುದು. ಜೊತೆಗೆ ಮೋಜು-ಮಸ್ತಿ, ಆಟ-ಪಾಠ ಕೂಡ ಇರಲಿವೆ. ವೀಕೆಂಡ್ ಮೂಡ್ನಲ್ಲಿ ಲಾಕ್ ಆದವರಿಗೆ ಭರಪೂರ ಮನರಂಜನೆ ನೀಡಲು ಗೋಲ್ಡನ್ ಗ್ಯಾಂಗ್ ಸಜ್ಜಾಗಿ ನಿಂತಿದೆ. ಮುಂಗಾರು ಮಳೆಯಲ್ಲಿ ಮಿಂದೆದ್ದಿದ್ದ ಗಣೇಶ್ ಆ ಸುಂದರ ಕ್ಷಣಗಳಿಗೆ ಮತ್ತಷ್ಟು ಮೆರುಗು ನೀಡಲಿದ್ದಾರೆ.

ಗೋಲ್ಡನ್ ಗೂಡಿಗೆ ಬಂದಿದ್ದ ಶರಣ್, ತರುಣ್, ಪ್ರೇಮ್
ಗಣೇಶ್ ನಿರೂಪಣೆ ಮಾಡುತ್ತಿರುವ 'ಗೋಲ್ಡನ್ ಗ್ಯಾಂಗ್' ಮೊದಲ ಎಪಿಸೋಡ್ನಲ್ಲಿ ಮೂವರು ಸ್ನೇಹಿತರು ಎಂಟ್ರಿ ಕೊಟ್ಟಿದ್ದಾಗಿದೆ. ಮೊದಲ ಸಂಚಿಕೆಯ ಮೊದಲ ಎಪಿಸೋಡ್ನಲ್ಲಿ ಸ್ಯಾಂಡಲ್ವುಡ್ನ ಅಧ್ಯಕ್ಷ ಶರಣ್, ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟ ನೆನಪಿರಲಿ ಪ್ರೇಮ್ ಭಾಗವಹಿಸಿದ್ದಾರೆ. ಈ ಮೂವರ ಸ್ನೇಹಲೋಕ ವೀಕೆಂಡ್ನಲ್ಲಿ ಅನಾವರಣಗೊಂಡಿದೆ. ಶನಿವಾರ ಹಾಗೂ ಭಾನುವಾರ ಮೂವರು ಸ್ನೇಹಿತರ ಗ್ಯಾಂಗ್ ಪರಿಚಯ ಮಾಡಿಕೊಟ್ಟಿದೆ. ಮುಂದಿನವಾರ 'ಮುಂಗಾರು ಮಳೆ' ತಂಡದ ಆಸಕ್ತಿದಾಯಕ ವಿಷಯ ಅನಾವರಣಗೊಳ್ಳಲಿದೆ.


Click it and Unblock the Notifications











