'ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್'ಗೆ ಗ್ರಾಂಡ್ ಫಿನಾಲೆ; ಯಾವಾಗ? ಎಲ್ಲಿ?
ಜೀ ಸಂಸ್ಥೆ ಇತ್ತೀಚೆಗೆ ದೇಶದ ಮೊದಲ ಬಹುಭಾಷಾ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಿತ್ತು. 'ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್' ಘೋಷಣೆ ಮಾಡುತ್ತಿದ್ದಂತೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಯುವ ಬರಹಗಾರರು ಹಾಗೂ ಫಿಲ್ಮ್ ಮೇಕರ್ಸ್ ಅನ್ನು ಚಿತ್ರರಂಗದತ್ತ ಸೆಳೆಯುವ ನಿಟ್ಟಿನಲ್ಲಿ ಈ ಸ್ಪರ್ಧೆಉನ್ನು ಘೋಷಿಸಲಾಗಿತ್ತು. ದೇಶಾದ್ಯಂತ ಉದಯೋನ್ಮುಖ ಪ್ರತಿಭೆಗಳು ತಮ್ಮ ಸ್ಮಾರ್ಟ್ಫೋನ್ಗಳಲ್ಲೇ ಕಿರು ಚಿತ್ರವನ್ನು ಚಿತ್ರೀಕರಿಸಿ ಕಳುಹಿಸಿದ್ದರು.
ಯಂಗ್ ಫಿಲ್ಮ್ ಮೇಕರ್ಸ್ ವೇದಿಕೆ ಕಲ್ಪಿಸಿಕೊಟ್ಟಿರುವ ಈ 'ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್' ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಭಾರತದ ಒಟ್ಟು 8 ಭಾಷೆಗಳಲ್ಲಿ ಈ ಸ್ಪರ್ಧೆ ನಡೆದಿತ್ತು. ಇದರ ಪ್ರಮುಖ ಉದ್ದೇಶ ಸಿನಿಮಾ ನಿರ್ಮಾಣ ಕೆಲವೇ ಕೆಲವರಿಗಷ್ಟೇ ಸೀಮಿತವಾಗದೆ, ದೇಶದ ಮೂಲೆ ಮೂಲೆಯಲ್ಲಿರುವ ವಿಭಿನ್ನ ಸಂಸ್ಕೃತಿ ಹಾಗೂ ವಿಶಿಷ್ಟ ಕಥೆಗಳಿಗೆ ಸೂಕ್ತ ಮನ್ನಣೆ ಸಿಗುವಂತೆ ಮಾಡುವ ಪ್ರಯತ್ನ ಎಂದು ಜೀ ಸಂಸ್ಥೆ ಹೇಳಿಕೊಂಡಿತ್ತು.

'ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್' ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕರನ್ನೊಳಗೊಂಡ ಜ್ಯೂರಿ ಸಮಿತಿಯು ವಿಜೇತರ ಆಯ್ಕೆ ಮಾಡಿದೆ. ಈ ಆಯ್ಕೆ ಸಮಿತಿಯಲ್ಲಿ ಅನುರಾಗ್ ಕಶ್ಯಪ್ (ಹಿಂದಿ), ರವಿ ಜಾಧವ್ (ಮರಾಠಿ), ನಾಗ್ ಅಶ್ವಿನ್ (ತೆಲುಗು), ಸೃಜಿತ್ ಮುಖರ್ಜಿ (ಬೆಂಗಾಲಿ), ಪಿ. ಸಮುದ್ರಖಣಿ (ತಮಿಳು), ಕನ್ನಡದಿಂದ ನಿರ್ದೇಶಕ ಹೇಮಂತ್ ರಾವ್ ಹಾಗೂ ಲಿಜೋ ಜೋಸ್ ಪೆಲ್ಲಿಸ್ಸೆರಿ (ಮಲಯಾಳಂ) ಇದ್ದಾರೆ.
ಜೂನ್ 5ರಂದು ಮುಂಬೈನ ಪ್ರತಿಷ್ಠಿತ ಹೋಟೆಲ್ನಲ್ಲಿ ಈ ಗ್ರ್ಯಾಂಡ್ ಫಿನಾಲೆ ನಡೆದಿದೆ. ಇದರಲ್ಲಿ ಖ್ಯಾತ ಪತ್ರಕರ್ತ ರಾಜೀವ್ ಮಸಂದ್ ಜೊತೆ ಜ್ಯೂರಿ ಸದಸ್ಯರು ವಿಶೇಷ ಸಂವಾದ ನಡೆಸಲಾಗಿದೆ. ಈ ವೇಳೆ ಕಥೆ ಹೇಳುವ ಶೈಲಿ, ಪ್ರಾದೇಶಿಕ ಸಿನಿಮಾಗಳು ಮತ್ತು ಭಾರತೀಯ ಚಿತ್ರರಂಗದ ಭವಿಷ್ಯದ ಕುರಿತು ಚರ್ಚೆ ನಡೆದಿದೆ. ಇದರಲ್ಲಿ ಚಿತ್ರರಂಗದ ಗಣ್ಯರು, ಯುವ ನಿರ್ದೇಶಕರು ಒಂದೆಡೆ ಸೇರಿ ಚರ್ಚಿಸಿದ್ದಾರೆ. ಎಂಟು ಭಾಷೆಯ ವಿವಿಧ ವಿಭಾಗಗಳ ವಿಜೇತರನ್ನು ಘೋಷಿಸಲಾಗಿದೆ. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಕಲನ, ಅತ್ಯುತ್ತಮ ಕಥೆ, ಅತ್ಯುತ್ತಮ ಸಂಗೀತ, ಅತ್ಯುತ್ತಮ ಹಾಸ್ಯನಟ ಜೊತೆಗೆ ಜ್ಯೂರಿಗಳ ವಿಶೇಷ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಆಯ್ಕೆಯಾದ ಕಿರುಚಿತ್ರಗಳ ಪ್ರಸಾರದ ಹಕ್ಕನ್ನು ಜೀ ಸಂಸ್ಥೆ ಪಡೆದುಕೊಂಡಿದೆ. ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ಜೀ ಈ ನಿರ್ಧಾರ ತೆಗೆದುಕೊಂಡಿದೆ. ಈ ಎಲ್ಲಾ ಕಿರು ಚಿತ್ರಗಳನ್ನು ಜೀ ತನ್ನ ಜೀ5 ಓಟಿಟಿ ವೇದಿಕೆಗಳಲ್ಲಿ ಸ್ಟ್ರೀಮಿಂಗ್ ಮಾಡಲಿದೆ. ಜೀ ಟಿವಿ, ಜೀ ಕನ್ನಡ, ಜೀ ಮರಾಠಿ, ಜೀ ಬಾಂಗ್ಲಾ, ಜೀ ತೆಲುಗು, ಜೀ ತಮಿಳು, ಜೀ ಕೇರಳಂ, ಜೀ ಜೆಸ್ಟ್ ಮತ್ತು ಜಿಂಗ್ ವಾಹಿನಿಗಳಲ್ಲಿಯೂ ಪ್ರಸಾರವಾಗಲಿವೆ.
ಜೀ ಸಂಸ್ಥೆ ಯುವ ಕಥೆಗಾರರಿಗೆ ತನ್ನದೇ ಡಿಜಿಟಲ್ ಹಾಗೂ ಟಿವಿ ಎರಡೂ ವೇದಿಕೆಗಳಲ್ಲಿ ದೊಡ್ಡ ಮಟ್ಟದ ವೇದಿಕೆ ರೆಡಿಯಾಗಿದೆ. ಇಷ್ಟೇ ಅಲ್ಲದೆ, ಪ್ರತಿ ಭಾಷೆಯ ವಿಭಾಗದಲ್ಲಿ ಒಬ್ಬ ವಿಜೇತರಿಗೆ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗಿದೆ. ಇನ್ನು "ಪ್ರಯೋಗಗಳನ್ನು ಮಾಡುತ್ತಾ ಸೋಲು ಗೆಲುವುಗಳ ನಡುವೆ ತಮ್ಮ ವಿಭಿನ್ನ ಶೈಲಿಯ ಕಥೆಗಳನ್ನು ಹೇಳಲು ಕಿರುಚಿತ್ರಗಳು ಸಹಕಾರಿಯಾಗಿವೆ. ಈ ಸ್ಪರ್ಧೆಯು ಮುಕ್ತ ಅಭಿವ್ಯಕ್ತಿಗೆ ರಾಷ್ಟ್ರ ಮಟ್ಟದ ವೇದಿಕೆ ಕಲ್ಪಿಸಿದೆ" ಎಂದು ಅನುರಾಗ್ ಕಶ್ಯಪ್ ಅಭಿಪ್ರಾಯ ಪಟ್ಟಿದ್ದಾರೆ.
ಹಾಗೇ ನಿರ್ದೇಶಕ ಹೇಮಂತ್ ರಾವ್ "ಹೊಸ ಪ್ರಯೋಗಗಳನ್ನು ನಾವು ಎಷ್ಟು ಧೈರ್ಯದಿಂದ ಬೆಂಬಲಿಸುತ್ತೇವೆಯೋ, ಅದರ ಮೇಲೆ ಚಿತ್ರರಂಗದ ಭವಿಷ್ಯ ನಿಂತಿದೆ. ಈ ವೇದಿಕೆಯು ಯುವ ನಿರ್ದೇಶಕರಿಗೆ ಯಾವುದೇ ಕಟ್ಟುಪಾಡುಗಳಿಲ್ಲದೆ ತಮ್ಮ ಕಥೆಗಳನ್ನು ಹೇಳಲು ಆತ್ಮವಿಶ್ವಾಸ ನೀಡಿದೆ" ಎಂದು ಹೇಮಂತ್ ರಾವ್ ಅಭಿಪ್ರಾಯ ಪಟ್ಟಿದ್ದಾರೆ.
"ಈ ಬಾರಿ ದೇಶದಲ್ಲೇ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಬಹುಭಾಷಾ ಕಿರುಚಿತ್ರ ಸ್ಪರ್ಧೆಯನ್ನು 'ಜೀ ಶಾರ್ಟ್ ಫಿಲ್ಮ್ ಕಾಂಟೆಸ್ಟ್' ಆಯೋಜಿಸಲಾಗಿತ್ತು .ಈ ಪ್ರಯತ್ನಕ್ಕೆ ಚಿತ್ರರಂಗದ ಖ್ಯಾತ ನಿರ್ದೇಶಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೇ ಜನರಿಂದ ಕೂಡ ಅತ್ಯುತ್ತಮ ಪ್ರತಿಕ್ರಿಯೆ ಬಂದಿರುವ ಸಂತಸ ನಮಗಿದೆ" ಎಂದು ದೀಪಕ್ ಶ್ರೀರಾಮುಲು, ಚೀಫ್ ಚಾನೆಲ್ ಆಫೀಸರ್ - ಜೀ ಕನ್ನಡ ಹಾಗೂ ಜೀ 5 ಬ್ಯುಸಿನೆಸ್ ಹೆಡ್ ಹೇಳಿದ್ದಾರೆ.


Click it and Unblock the Notifications