"ಬ್ರಾಹ್ಮಿನ್ ಕೆಫೆ'ಯಲ್ಲಿ ಯಾರಿಗೂ ನೋವುಂಟು ಮಾಡೋದಿಲ್ಲ": ಕ್ಲಾರಿಟಿ ಕೊಟ್ಟ ತಂಡ
ಇತ್ತೀಚೆಗೆ ಸಿರಿ ಕನ್ನಡ ಹೊಚ್ಚ ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಿದೆ. ಹೊಸ ಅಭಿರುಚಿ ಇರುವ ಧಾರಾವಾಹಿಗಳನ್ನು ತಮ್ಮ ವೀಕ್ಷಕರಿಗೆ ನೀಡುತ್ತಿದೆ. ಇದರಲ್ಲೊಂದು ಧಾರಾವಾಹಿ 'ಬ್ರಾಹ್ಮಿನ್ ಕಫೆ'.
ಜೂನ್ 5ನೇ ತಾರೀಕಿನಿಂದ ಸಿರಿ ಕನ್ನಡದಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿದೆ. ಹಿರಿಯ ನಿರ್ದೇಶಕ ಸಂಜೀವ್ ತಗಡೂರು 'ಬ್ರಾಹ್ಮಿನ್ ಕಥೆ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಧಾರಾವಾಹಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಸಿರಿ ಕನ್ನಡ ಹೇಳಿಕೊಂಡಿದೆ. ಇದೇ ವೇಳೆ ಕೆಲವರು ಅಸಮಧಾನ ವ್ಯಕ್ತಪಡಿಸುತ್ತಿದ್ದು, ಅದಕ್ಕೆ ತಂಡ ಕ್ಲಾರಿಟಿ ಕೊಟ್ಟಿದೆ.

ಸೋಶಿಯಲ್ ಮೀಡಿಯಾದಲ್ಲಿ 'ಬ್ರಾಹ್ಮಿನ್ ಕಫೆ' ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆಂತೆ. ಅಲ್ಲದೆ ಈಮೇಲ್ ಮೂಲಕ, ಪೋನ್ ಕಾಲ್ ಮೂಲಕ ಕೆಲವರು ತಮ್ಮ ಜನಾಂಗವನ್ನು ನಿಂದಿಸುವ ಸನ್ನಿವೇಶಗಳಿವೆ ಎಂದು ಟೀಕಿಸುತ್ತಿದ್ದಾರಂತೆ. ಈ ಕುರಿತು ಧಾರಾವಾಹಿ ತಂಡ ಇತ್ತೀಚೆಗೆ ಸ್ಪಷ್ಟನೆ ನೀಡಿದೆ.
"ನಾನು ಸುಮಾರು 25 ವರ್ಷಗಳಿಂದ ಕಿರುತೆರೆಯಲ್ಲಿದ್ದೇನೆ. ಧಾರಾವಾಹಿ ವೀಕ್ಷಿಸುವವರ ಮನಸ್ಸನ್ನು ಅರಿತಿದ್ದೇನೆ. 'ಬ್ರಾಹ್ಮಿನ್ಸ್ ಕೆಫೆ' ಧಾರಾವಾಹಿಯಲ್ಲಿ ಬ್ರಾಹ್ಮಣರನ್ನು ಅವಮಾನಿಸುವ ಯಾವುದೇ ಸನ್ನಿವೇಶಗಳಿಲ್ಲ. ಕೆಲವರು ಪೂರ್ತಿ ಧಾರಾವಾಹಿ ನೋಡದೆ, ಸಾಮಾಜಿಕ ಜಾಲತಾಣಗಳಲ್ಲಿ ಬರುವ ತುಣುಕುಗಳನ್ನು ನೋಡಿ, ನಮ್ಮ ಜನಾಂಗಕ್ಕೆ ಅವಮಾನ ಮಾಡುತ್ತಿದ್ದೀರ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೆ ಕರೆ ಮಾಡಿ, ನೀವು ಈ ರೀತಿ ಮಾಡುತ್ತಿರುವುದು ತಪ್ಪು. ನಿಮ್ಮ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದೂ ಹೇಳುತ್ತಿದ್ದಾರೆ." ಎಂದು ನಿರ್ದೇಶಕ ಸಂಜೀವ್ ತಗಡೂರು ಹೇಳಿದ್ದಾರೆ.
ಅಲ್ಲದೆ ಈ ಧಾರಾವಾಹಿ ಅಂತಹ ಯಾವುದೇ ಸನ್ನಿವೇಶಗಳು ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ. " ಖಂಡಿತವಾಗಿಯೂ ಯಾರ ಮನಸ್ಸಿಗೂ ನೋವುಂಟು ಮಾಡುವುದಾಗಲಿ, ಯಾರದೇ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಾಗಲಿ ನಮಗಿಲ್ಲ. ಪೂರ್ತಿ ಧಾರಾವಾಹಿ ನೋಡದೆ ಕೆಲವರು ಮಾಡುತ್ತಿರುವ ಆರೋಪವಷ್ಟೇ ಇದು. ಈವರೆಗಿನ ಸಂಚಿಕೆಯಲ್ಲೂ ಯಾವ ಜನಾಂಗವನ್ನೂ ನಿಂದಿಸುವ ಸನ್ನಿವೇಶಗಳು ಇರಲಿಲ್ಲ. ಮುಂದಿನ ಸಂಚಿಕೆಗಳಲ್ಲೂ ಇರುವುದಿಲ್ಲ" ಎಂದು ನಿರ್ದೇಶಕ ಸಂಜೀವ್ ತಗಡೂರು ಸ್ಪಷ್ಟನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಿರಿಕನ್ನಡದ ಪರವಾಗಿ ರಾಜೇಶ್ ರಾಜಘಟ್ಟ, ಸಂಭಾಷಣೆ ಬರೆದಿರುವ ಎಂ ಎಲ್ ಪ್ರಸನ್ನ ಹಾಗೂ ಧಾರಾವಾಹಿಯ ಕಲಾವಿದರಾದ ಶ್ರೀನಾಥ್ ವಸಿಷ್ಠ ಸೇರಿದಂತೆ ಇಡೀ ತಂಡ ಈ ಬಗ್ಗೆ ಸ್ಪಷ್ಟನೆ ನೀಡಿದೆ.


Click it and Unblock the Notifications











