Anushree Wedding: ಗೆಳೆಯ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟ ಆಂಕರ್ ಅನುಶ್ರೀ
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಇಂದು (ಆಗಸ್ಟ್ 28) ಬೆಂಗಳೂರಿನಲ್ಲಿ ಕೊಡಗಿನ ರೋಷನ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕನ್ನಡ ಕಿರುತೆರೆಯ ಮಾತಿನ ಮಲ್ಲಿ ಎಂದೇ ಜನಪ್ರಿಯರಾಗಿರುವ ಅನುಶ್ರೀ ಮದುವೆ ಬಗ್ಗೆ ಕಳೆದ ಕೆಲವು ದಿನಗಳಿಂದ ಸುದ್ದಿ ಹರಿದಾಡುತ್ತಲೇ ಇತ್ತು. ಮದುವೆ ಬಗ್ಗೆ ಸುಳಿವು ನೀಡಿ, ಯಾವಾಗ ಅನ್ನೋದನ್ನು ಗೌಪ್ಯವಾಗಿಯೇ ಇಟ್ಟಿದ್ದರು. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಆಂಕರ್ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಆಂಕರ್ ಅನುಶ್ರೀಗೆ ಅವರ ಅಭಿಮಾನಿಗಳು ಮದುವೆ ಮಾಡುತ್ತಲೇ ಇದ್ದರು. ಅದಕ್ಕೆ ಅನುಶ್ರೀ ಕೂಡ ಸಮಾಧಾನದಿಂದಲೇ ಉತ್ತರ ನೀಡುತ್ತಿದ್ದರು. ಆದರೆ, ಎಂದಿಗೂ ತಾವು ಮದುವೆ ಆಗುತ್ತಿರುವ ಹುಡುಗನ ಬಗ್ಗೆ ಚಿಕ್ಕದೊಂದು ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇನ್ನೇನು ಮದುವೆಗೆ ಕೆಲವೇ ದಿನಗಳು ಬಾಯಿ ಉಳಿದಿವೆ ಎನ್ನುವಾಗ ಪತಿ ರೋಷನ್ ಜೊತೆ ಕಾಣಿಸಿಕೊಂಡಿದ್ದರು. ಇದೀಗ ಆಗಸ್ಟ್ 28 ರಂದು ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸುವ ಮೂಲಕ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಪಕ್ಕಾ ಹಿಂದೂ ಸಂಪ್ರದಾಯದಂತೆ ಆಂಕರ್ ಅನುಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಮಂಟಪದಿಂದ ಹಿಡಿದು ವಧು-ವರರು ಧರಿಸಿದ ಉಡುಪುಗಳು ಕೂಡ ಟ್ರೆಡಿಷನಲ್ ಆಗಿದ್ದವು. ಗೌರಿ ಹಾಗೂ ಗಣೇಶ ಹಬ್ಬ ಮುಗಿಯುತ್ತಿದ್ದಂತೆ ಆಂಕರ್ ಅನುಶ್ರೀ ವೈವಾಹಿಕ ಜೀವನಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಗಣೇಶ ಹಬ್ಬದಂದು ಮದುವೆ ಸಂಭ್ರಮಗಳು ಜೋರಾಗಿದ್ದವು. ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್ನಲ್ಲಿ ಹಳದಿ ಶಾಸ್ತ್ರ ನಡೆದಿತ್ತು.
ಆಂಕರ್ ಅನುಶ್ರೀ ತಮ್ಮ ಬಹು ಕಾಲದ ಗೆಳೆಯನನ್ನು ಇಂದು (ಆಗಸ್ಟ್ 28) ಬೆಳಗ್ಗೆ 10.56 ಸುಮಾರಿಗೆ ಮದುವೆ ಆಗಿದ್ದಾರೆ. ಈ ಮುಹೂರ್ತದಲ್ಲಿ ರೋಷನ್ ಅವರು ಅನುಶ್ರೀಯವರಿಗೆ ಮಂಗಲ್ಯ ಧಾರಣೆ ಮಾಡಿದ್ದಾರೆ. ತಮ್ಮ ಮದುವೆ ಸಿನಿಮಾ ಹಾಗೂ ಕಿರುತೆರೆ ಕ್ಷೇತ್ರದ ಆತ್ಮೀಯರಿಗೆ ಆಹ್ವಾನ ನೀಡಿದ್ದರು. ಹೀಗಾಗಿ ಸ್ಯಾಂಡಲ್ವುಡ್ನ ತಾರೆಯರು ಹಾಗೂ ಆಪ್ತರು ಭಾಗಿಯಾಗಿದ್ದರು. ನಟ ರಾಜ್ ಬಿ. ಶೆಟ್ಟಿ, ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಕಾವ್ಯಾ ಶಾ, ಚೈತ್ರಾ ಜೆ. ಆಚಾರ್, ಶರಣ್, ಸೋನಲ್ ಮೊಂಥೆರೋ ಸೇರಿದಂತೆ ಹಲವು ಸೆಲೆಬ್ರೆಟಿಗಳು ಬಂದು ನವಜೋಡಿಗೆ ಶುಭ ಹಾರೈಸಿದರು.
ಅನುಶ್ರೀ ವಿವಾಹವಾಗಿರುವ ಹುಡುಗ ಕೊಡಗು ಮೂಲದವರು. ರಾಮಮೂರ್ತಿ ಹಾಗೂ ಸಿಸಿಲಿಯಾ ಎಂಬುವವರ ಪುತ್ರ. ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಅದ್ದೂರಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 37 ವರ್ಷದ ಅನುಶ್ರೀ ಮದುವೆಯನ್ನು ನೋಡುವುದಕ್ಕೆ ಅವರ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದರು.

ಅನುಶ್ರೀ ಕನ್ನಡ ಕಿರುತೆರೆಯಲ್ಲಿ ನಿರೂಪಕಿಯಾಗಿ ಜನಪ್ರಿಯ ಫೇಸ್. ಹಲವು ಟಿವಿ ಕಾರ್ಯಕ್ರಮಗಳು, ಸಿನಿಮಾ ಇವೆಂಟ್ಗಳನ್ನು ನಿರೂಪಿಸುವುದರಲ್ಲಿ ಫೇಮಸ್. ಜೊತೆಗೆ 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು. ಬಿಗ್ ಬಾಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.
ಅನುಶ್ರೀ ಚಿಕ್ಕ ವಯಸ್ಸಿನಲ್ಲಿ ಜವಾಬ್ಧಾರಿಯನ್ನು ಹೊರಬೇಕಾದ ಅನಿವಾರ್ಯತೆ ಇತ್ತು. ತಂದೆ ಕುಟುಂಬವನ್ನು ತೊರೆದ ನಂತರ ತಾಯಿ ಅನುಶ್ರೀ ಮತ್ತು ಅವರ ಸಹೋದರನನ್ನು ಬೆಳೆಸಿದರು. ಅನುಶ್ರೀ ಚಿಕ್ಕ ವಯಸ್ಸಿನಲ್ಲೇ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡು ದುಡಿಯಲು ಪ್ರಾರಂಭಿಸಿದರು. ಈ ನಿರೂಪಕಿ ತಮ್ಮ ದುಡಿಮೆಯಿಂದ ತಾಯಿಗಾಗಿ ಮನೆ ಕಟ್ಟಿಸಿಕೊಟ್ಟಿದ್ದಾರೆ. ಸಹೋದರ ಹೋಟೆಲ್ ಉದ್ಯಮ ಪ್ರಾರಂಭಿಸಿದ್ದಾರೆ. ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ, ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


Click it and Unblock the Notifications











