ಅತ್ತೆ- ಸೊಸೆ ಜಗಳಕ್ಕೆ ಬ್ರೇಕ್; ಕಿರುತೆರೆಯಲ್ಲಿ ಹಾರರ್ ಸ್ಟೋರಿ ಪರ್ವ ಶುರು?
ಕಳೆದ ಕೆಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಪ್ರಯೋಗಳು ಅಂತ ನಡೆದಿದ್ದು ತೀರಾ ವಿರಳ. ಸಂಸಾರದ ಕಥೆಗಳನ್ನು ಕಿರುತೆರೆಗೆ ತಂದಿದ್ದೇ ಹೆಚ್ಚು. ಒಂದು ಕಾಲದಲ್ಲಿಸ ಅತ್ತೆ ಸೊಸೆ ಜಗಳವೇ ಪ್ರಧಾನವಾಗಿತ್ತು. ಆ ಬಳಿಕ ಸಂಸಾರದ ತಾಪತ್ರೆಯಗಳು, ಗೋಳು, ಅಸೂಯೆ ಇಂತಹದ್ದೇ ಒಂದಿಷ್ಟು ಕತೆಯ ಎಳೆಗಳನ್ನು ಇಟ್ಟುಕೊಂಡು ನೂರಾರು ಎಪಿಸೋಡ್ಗಳನ್ನು ಪ್ರಸಾರ ಮಾಡಲಾಗಿತ್ತು.
ಕೆಲವೊಮ್ಮೆ ಕಿರುತೆರೆಯಲ್ಲೂ ಪ್ರಯೋಗಗಳು ಆಗಬಾರದೇ ಅಂತ ಅನಿಸಿದ್ದು ಇದೆ. ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಸಾಂಸಾರಿಕ ಧಾರಾವಾಹಿಗಳನ್ನೇ ಹೆಚ್ಚು ನಿರ್ಮಾಣ ಮಾಡಲಾಗುತ್ತಿದೆ. ಹಿಂದೆ ಪತ್ತೆಧಾರಿ ಧಾರಾವಾಹಿಗಳು, ಕೋರ್ಟ್ ಹಿನ್ನೆಲೆಯ ಕಥೆಯುಳ್ಳ ಧಾರಾವಾಹಿಗಳು ಬಂದಿದ್ದು ಇದೆ. ಇದೇ ಒಂದೂವರೆ ಎರಡು ದಶಕಗಳ ಹಿಂದೆ ಹಾಸ್ಯ ಪ್ರಧಾನ ಧಾರಾವಾಹಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿತ್ತು. ಆದ್ರೀಗ ಅದೂ ಕೂಡ ಕಣ್ಮರೆಯಾಗಿದೆ.

ಕೆಲವು ವರ್ಷಗಳ ಹಿಂದೆ 'ನಾಗಿಣಿ' ಅಂತಹ ಧಾರಾವಾಹಿ ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿದ್ದವು. ಇತ್ತೀಚೆಗೆ ಧಾರಾವಾಹಿ ಮೇಕಿಂಗ್ಗೆ ಹೆಚ್ಚು ಗಮನವನ್ನು ನೀಡಲಾಗುತ್ತಿದೆ. ಶ್ರೀಮಂತರು, ಬಡವರು, ಮದುವೆ, ವಿಚ್ಚೇದನ, ಮೋಸ, ಅಸೂಯೆ ಅಂತಹ ಅಂಶಗಳ ಮೇಲೆ ಕಥೆಯನ್ನು ಹೆಣೆಯಾಗಿದೆ. ಇದು ಸಾಕು ಅಂತ ಅನಿಸುವ ವೇಳೆ ಧಾರಾವಾಹಿಗಳಿಗೆ ಹೊಸ ರೂಪವನ್ನು ನೀಡಲಾಗಿದೆ. ವೀಕ್ಷಕರು ಮರತೇ ಹೋಗಿದ್ದ ಹಾರರ್ ಜಾನರ್ ಮತ್ತೆ ತೆರೆಮೇಲೆ ಬರುತ್ತಿದೆ.
ಸ್ಟಾರ್ ಸುವರ್ಣ ಈಗಾಗಲೇ ಪ್ರಸಾರ ಆಗುತ್ತಿದ್ದ 'ಅವನು ಮತ್ತೆ ಶ್ರಾವಣಿ'ಯ ದಾಟಿಯನ್ನು ಬದಲಿಸಿದೆ. ಅದೇ ಹೆಸರು, ಅದೇ ಪಾತ್ರವರ್ಗವನ್ನು ಇಟ್ಟುಕೊಂಡು ಧಾರಾವಾಹಿಗೆ ಹಾರರ್ ಟಚ್ ಕೊಟ್ಟಿದೆ. ಹಾರರ್ ಪ್ರಿಯರಿಗೆ ಈ ಸುದ್ದಿ ಖುಷಿಕೊಟ್ಟಿರೋದಂತೂ ನಿಜ. ಈಗಾಗಲೇ ಚಾಲನೆಯಲ್ಲಿದ್ದ ಧಾರಾವಾಹಿಗಳಿಗೆ ಹೊಸ ರೂಪ ಕೊಟ್ಟು ರೀ ಲಾಂಚ್ ಮಾಡಿದ್ದು ತೀರಾ ವಿರಳ. ಇತ್ತೀಚೆಗೆ ಸ್ಟಾರ್ ಅಂತಹ ಸಾಹಸಕ್ಕೆ ಕೈ ಹಾಕಿದೆ.

ಈ ಬೆನ್ನಲ್ಲೇ ಜೀ ಕನ್ನಡ ಕೂಡ ಆತ್ಮದ ಕಥೆಯನ್ನು ಹೇಳುವುದಕ್ಕೆ ಹೊರಟಿದೆ. ಇದು ಹಾರರ್ ಅಲ್ಲದೇ ಹೋದರೂ, ಆತ್ಮದ ಕತೆಯಾಗಿರುವುದರಿಂದ ಹೊಸ ಪ್ರಯತ್ನ ಎಂದು ಹೇಳಬಹುದು. 'ನಾ ನಿನ್ನ ಬಿಡಲಾರೆ' ಧಾರಾವಾಹಿ ಇದೇ ತಿಂಗಳು ಜನವರಿ 27ರಿಂದ ಪ್ರಸಾರ ಆಗಲಿದೆ. ಅಂದ್ಹಾಗೆ ಈ ಧಾರಾವಾಹಿಯಲ್ಲಿ ಶರತ್ ಮತ್ತು ಅಂಬಿಕಾ ದಂಪತಿಗೆ ಮಗಳು ಹಿತಾನೇ ಎಲ್ಲ. ಈ ಸಂಸಾರಕ್ಕೆ ಮಾಯಾ ಅನ್ನುವ ಹೆಣ್ಣಿನ ಕೆಟ್ಟ ದೃಷ್ಟಿ ಬೀಳುತ್ತೆ. ಶರತ್ನನ್ನು ಬಯಸಿ ಅಂಬಿಕಾಳನ್ನು ಕೊಲ್ಲುತ್ತಾಳೆ. ಈಗ ಮಗಳು ಹಿತಾಳನ್ನು ಮುಗಿಸುವುದಕ್ಕೆ ಹೊರಟಿದ್ದಾರೆ.
ಇತ್ತ ಮಗಳನ್ನು ರಕ್ಷಿಸಲು ಸತ್ತು ಹೋಗಿದ್ದ ಅಂಬಿಕಾ ಆತ್ಮ ಆಕೆಯ ಸುತ್ತವೇ ಸುತ್ತಾಡುತ್ತೆ. ಮಾಯಾಳಿಂದ ಮಗಳನ್ನು ರಕ್ಷಿಸುತ್ತಿರುತ್ತೆ. ಹೀಗಾಗಿ ಧಾರಾವಾಹಿಯಲ್ಲಿ ಆತ್ಮದ್ದೇ ಪ್ರಮುಖ ಪಾತ್ರ. ಈ ಪಾತ್ರದಲ್ಲಿ 'ವಿಕ್ರಾಂತ್ ರೋಣ' ಸಿನಿಮಾದ ನಟಿ ನೀತಾ ಅಶೋಕ್ ನಟಿಸಿದ್ದಾರೆ. ವಿವಾಹದ ಬಳಿಕ ಮತ್ತೆ ನೀತಾ ಅಶೋಕ್ ಕಿರುತೆರೆಗೆ ಮರಳಿದ್ದಾರೆ. ಅಂಬಿಕಾ ಪತಿಯಾಗಿ 'ಪಾರು' ಧಾರಾವಾಹಿ ಖ್ಯಾತಿಯ ಶರತ್ ಪದ್ಮನಾಭ್ ನಟಿಸಿದ್ದರೆ, ಮಗಳಾಗಿ ಮಹಿತಾ, ಮತ್ತೊಬ್ಬ ನಾಯಕಿಯಾಗಿ ರಿಷಿಕಾ, ಮಾಯಾ ಪಾತ್ರದಲ್ಲಿ ರುಹಾನಿ ಶೆಟ್ಟಿ ನಟಿಸಿದ್ದಾರೆ.
ಕಿರುತೆರೆಯಲ್ಲಿ ಈ ಎರಡು ಧಾರಾವಾಹಿಗಳು ಸದ್ಯ ಪ್ರಯೋಗಕ್ಕೆ ನಿಂತಿವೆ. ಒಂದೇ ತರಹದ ಧಾರಾವಾಹಿಗಳನ್ನು ನೋಡಿ ಬೇಸರವಾದವರಿಗೆ 'ನಾ ನಿನ್ನ ಬಿಡಲಾರೆ' ಹಾಗೂ 'ಅವನು ಮತ್ತೆ ಶ್ರಾವಣಿ' ಮನರಂಜನೆಯನ್ನು ನೀಡಬಹುದು. ಈ ಎರಡು ಧಾರಾವಾಹಿಗಳು ಗೆದ್ದರೆ, ಕನ್ನಡ ಕಿರುತೆರೆಯಲ್ಲಿ ಈ ವರ್ಷ ಹೊಸ ಹೊಸ ಪ್ರಯೋಗಗಳು ಆಗುವ ಸಾಧ್ಯತೆಯಿದೆ. ಕಿರುತೆರೆಯಲ್ಲಿ ಈ ವರ್ಷದ ಆರಂಭದಲ್ಲಿಯೇ ಹೊಸ ಹೊಸ ಪ್ರಯೋಗಗಳು ಆರಂಭ ಆಗಿವೆ. ಹೀಗೆ ಆದರೆ, ಸಿನಿಮಾಗಳಿಗೂ ಕಿರುತೆರೆ ಪೈಪೋಟಿ ನೀಡಬಹುದು.


Click it and Unblock the Notifications











