'ಅಪ್ಪು ಅಮರ' ಕಾರ್ಯಕ್ರಮದಲ್ಲಿ ಕಿರುತೆರೆ ಕಲಾವಿದರಿಂದ ಪುನೀತ್ ಸಿನಿಜರ್ನಿ ಮೆಲುಕು
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನವೆಂಬರ್ 28 ರಂದು ನಮ್ಮೆಲ್ಲರನ್ನೂ ಅಗಲಿದ ನಟ ಪವರ್ಸ್ಟಾರ್ ಪುನೀತ್ ರಾಜ್ ಕುಮಾರ್ಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಿದೆ. 'ಅಪ್ಪು ಅಮರ' ಅನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಿನಿಜರ್ನಿಯನ್ನು ನೆನೆಯಲಿದ್ದಾರೆ.
'ಅಪ್ಪು ಅಮರ' ಕಾರ್ಯಕ್ರಮದ ಹಿನ್ನೆಲೆಯಲ್ಲಿ ನವೆಂಬರ್ 28ರಂದು ಕಿರುತೆರೆಯ ಎಲ್ಲಾ ಚಟುವಟಿಗಳು ಸ್ಥಗಿತಗೊಳ್ಳಲಿವೆ. ಎಲ್ಲಾ ಧಾರಾವಾಹಿಗಳ ಚಿತ್ರೀಕರಣವನ್ನು ಸ್ಥಗಿತಗೊಳಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಎಲ್ಲಾ ನಿರ್ಮಾಣ ಸಂಸ್ಥೆಯ ಮುಖ್ಯಸ್ಥರಿಗೆ ಮನವಿ ಮಾಡಿದ್ದಾಗಿದೆ. ಈಗಾಗಲೇ ಕಿರುತೆರೆಯ ಕಲಾವಿದರು ಹಾಗೂ ತಂತ್ರಜ್ಞರು ಕಾರ್ಯಕ್ರಮಕ್ಕೆ ಸಂಪೂರ್ಣ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.

'ಅಪ್ಪು ಅಮರ' ಕಾರ್ಯಕ್ರಮಕ್ಕೆ ಶಿವಣ್ಣ, ರಾಘಣ್ಣ
ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಆಯೋಜಿಸಿರುವ 'ಅಪ್ಪು ಅಮರ' ನಮನ ಕಾರ್ಯಕ್ರಮಕ್ಕೆ ಅಣ್ಣಾವ್ರ ಕುಟುಂಬಕ್ಕೆ ಆಹ್ವಾನ ನೀಡಲಾಗಿದೆ. ಟೆಲಿವಿಷನ್ ಅಸೋಸಿಯೇಷನ್ ಸದಸ್ಯರು ಹಾಗೂಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಅವರು ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಸೇರಿದಂತೆ ಕುಟುಂಬದ ಎಲ್ಲಾ ಸದಸ್ಯರಿಗೂ ಆಹ್ವಾನ ನೀಡಿದ್ದಾರೆ.

ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರಿಗೆ ಅಪ್ಪು ಅಮರ ಪ್ರಿವಿಲೇಜ್ ಕಾರ್ಡ್
'ಅಪ್ಪು ಅಮರ' ಕಾರ್ಯಕ್ರಮ ಸಾಮಾನ್ಯ ಕಾರ್ಯಕ್ರಮ ಆಗಿರುವುದಿಲ್ಲ. ಕನ್ನಡ ಕಿರುತೆರೆಯಲ್ಲಿ ಕೆಲಸ ಮಾಡುವ ಕಲಾವಿದರು ಹಾಗೂ ತಂತ್ರಜ್ಞರಿಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಶನ್ ಮಹತ್ವದ ಕೆಲಸಕ್ಕೆ ಕೈ ಹಾಕಿದೆ. ಅಲ್ಲದೆ ಬೆಂಗಳೂರಿನ ಪ್ರತಿಷ್ಟಿತ ಕಾವೇರಿ ಆಸ್ಪತ್ರೆ ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರಿಗೆ ಅಪ್ಪು ಅಮರ ಪ್ರಿವಿಲೇಜ್ ಕಾರ್ಡ್ ವಿತರಿಸಲಿದೆ. ಇದರಿಂದ ಉಚಿತ ಆರೋಗ್ಯ ತಪಾಸಣೆ ರಿಯಾಯಿತಿಯಲ್ಲಿ ಚಿಕಿತ್ಸೆ ಸಿಗಲಿದೆ. ಇದರಿಂದ ಸುಮಾರು 4000 ಕ್ಕೂ ಹೆಚ್ಚು ಸದಸ್ಯರು ಈ ಲಾಭ ಪಡೆಯಲಿದ್ದಾರೆ ಎಂದು ಟಿವಿ ಅಸೋಸಿಯೇಷನ್ ಹೇಳಿದೆ.

ಶಕ್ತಿಧಾಮ ಸದಸ್ಯರ ಆರೋಗ್ಯ ನೋಡಿಕೊಳ್ಳಲಿದೆ ಕಾವೇರಿ ಆಸ್ಪತ್ರೆ
ಕಾವೇರಿ ಆಸ್ಪತ್ರೆಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಡಾ.ವಿಜಯಭಾಸ್ಕರನ್ ಸುಂದರರಾಜು ಅವರು ಪುನೀತ್ ರಾಜ್ಕುಮಾರ್ ನಡೆಸುತ್ತಿದ್ದ ಶಕ್ತಿಧಾಮದ ಸದಸ್ಯರ ಆರೋಗ್ಯ ಸಂಬಂಧಿತ ಜವಾಬ್ದಾರಿಯನ್ನು ತೆಗೆದುಕೊಳ್ಳಲಿದ್ದಾರೆ. ನವೆಂಬರ್ 28ರಂದು ಎಚ್.ಎನ್ ಕಲಾಕ್ಷೇತ್ರದಲ್ಲಿ ನಡೆಯಲಿರುವ ಈ 'ಅಪ್ಪು ಅಮರ' ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಕಿರುತೆರೆ ಸದಸ್ಯರು ನೇತ್ರದಾನ ಮಾಡಲು ಮುಂದಾಗಿದ್ದಾರೆ.

ಅಪ್ಪು ಸಿನಿಜರ್ನಿಯ ಮೆಲುಕು ಹಾಕಲಿದೆ ಕಿರುತೆರೆ
"ಈ 'ಅಪ್ಪು ಅಮರ' ಕಾರ್ಯಕ್ರಮ ಅಶ್ರುತರ್ಪಣ, ನುಡಿನಮನಕ್ಕೂ ಮೀರಿದ ಪರಿಕಲ್ಪನೆಯಾಗಿದೆ ಎಂದು ಟಿವಿ ಅಸೋಸಿಯೇಷನ್ ಹೇಳಿದೆ. ಪುನೀತ್ ರಾಜ್ಕುಮಾರ್ ಹಾಕಿಕೊಟ್ಟ ಮಾರ್ಗದಲ್ಲಿ ಹೆಜ್ಜೆಯಿಡುವ ಸಂಕಲ್ಪ ಮಾಡಿದ್ದು, ಬಾಲ ಕಲಾವಿದರಾಗಿದ್ದಾಗಿನಿಂದ ಅಗಲುವವರೆಗೆ ಅವರ ಆಯ್ದ ಚಲನಚಿತ್ರದ ಹಾಡು, ದೃಶ್ಯವನ್ನು ಕಿರುತೆರೆ ಕಲಾವಿದರು ವೇದಿಕೆಯ ಮೇಲೆ ತರಲಿದ್ದಾರೆ." ಎಂದು ಕರ್ನಾಟಕದ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್ ವಿ ಶಿವಕುಮಾರ್ ತಿಳಿಸಿದ್ದಾರೆ.


Click it and Unblock the Notifications










