"ಅಕ್ಕನಿಗೆ ಬೇಗ ಮದುವೆ ಆದರೆ, ನಾನು ಆಗ್ಬಹುದು"; 'ಕರ್ಣ'ನ ಕನಸಲ್ಲಿರೋ ಭವ್ಯಾ ಗೌಡಗೆ ಮದ್ವೆ ಕನಸು!
ಕನ್ನಡದ ಕಿರುತೆರೆಯಲ್ಲಿ 'ಕರ್ಣ'ನ ಹವಾ ಶುರುವಾಗಿದೆ. 'ಕನ್ನಡತಿ' ಧಾರಾವಾಹಿ ಮೂಲಕ ಕಿರುತೆರೆಯ ಸೂಪರ್ಸ್ಟಾರ್ ಆಗಿ ಹೊರಹೊಮ್ಮಿರುವ ಕಿರಣ್ ರಾಜ್ ಮತ್ತೊಂದು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅದುವೇ 'ಕರ್ಣ'. ಉದ್ಯಮಿಯಾಗಿ ಜನರ ಮನಸ್ಸು ಗೆದ್ದಿದ್ದ ಕಿರಣ್ ರಾಜ್ ಈ ಬಾರಿ ವೈದ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಇಂದಿನಿಂದ (ಜುಲೈ 3) ಜೀ ಕನ್ನಡದಲ್ಲಿ 'ಕರ್ಣ'ನ ಜರ್ನಿ ಗ್ರ್ಯಾಂಡ್ ಆಗಿ ಶುರುವಾಗುತ್ತಿದೆ.
ಕಿರಣ್ ರಾಜ್ ಜೊತೆ ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ, ನಮ್ರತಾ ಗೌಡ ಪ್ರಮುಖ ಪ್ರಾತ್ರದಲ್ಲಿ ಮಿಂಚುತ್ತಿದ್ದಾರೆ. ಭವ್ಯಾ ಗೌಡ, ನಮ್ರತಾ ಗೌಡ ಇಬ್ಬರೂ ಅಕ್ಕ ತಂಗಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರುತಿ ನಾಯ್ಡು ನಿರ್ಮಿಸುತ್ತಿರುವ 'ಕರ್ಣ' ಧಾರಾವಾಹಿ ಪ್ರಸಾರಕ್ಕೂ ಮುನ್ನವೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಒಂದಿಷ್ಟು ಡೆ ತಡೆಗಳನ್ನು ಎದುರಿಸಿ, ಕೊನೆಗೂ ಪ್ರಸಾರ ಕಾಣುತ್ತಿದೆ.

ಈ ಸಂದರ್ಭದಲ್ಲಿ ಭವ್ಯಾ ಗೌಡ ತನ್ನ ಚಿಕ್ಕ ಕುಟುಂಬವನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಮನೆಯಲ್ಲಿ ಅಜ್ಜಿ, ಅಕ್ಕ ಹಾಗೂ ಇವರನ್ನು ಸೇರಿ ಮೂರೇ ಮಂದಿ ಇರೋದು. ಮನೆಯಲ್ಲಿ ಮೂರು ಮಂದಿ ಇದ್ದರೆ, ಮನಸ್ಸಿನಲ್ಲಿ ಇನ್ನೊಬ್ಬರಿಗೆ ಜಾಗ ಕೊಟ್ಟಿದ್ದಾರೆ. ಅಜ್ಜಿಗೂ ಅಕ್ಕ ಬೇಗ ಮದುವೆ ಆಗಬೇಕು ಅಂತ ಆಸೆ. ಇವರಿಗೂ ಅಕ್ಕ ಬೇಗೆ ಮದುವೆ ಆಗ್ಬೇಕು ಅಂತ ಆಸೆ. ಯಾಕಂದ್ರೆ ಅಕ್ಕ ಲೈನ್ ಕ್ಲಿಯರ್ ಆದರೆ, ತಂಗಿನೂ ಇಷ್ಟ ಪಟ್ಟವರನ್ನು ಮದುವೆ ಆಗಬಹುದು ಅಲ್ಲವೇ? 'ಕರ್ಣ' ಮೊದಲ ಎಪಿಸೋಡ್ ಆರಂಭಕ್ಕೂ ಮುನ್ನವೇ ತಮ್ಮ ಪುಟ್ಟ ಕುಟುಂಬದ ಬಗ್ಗೆ ಒಂದಿಷ್ಟು ಮಾಹಿತಿ ರಿವೀಲ್ ಮಾಡಿದ್ದಾರೆ. ಅವರೇನು ಹೇಳಿದ್ದಾರೆ ಕೇಳಿ.
ಭವ್ಯಾ ಗೌಡ ಈಗಾ ತಾನೇ ಬಿಗ್ ಬಾಸ್ನಿಂದ ಹೊರ ಬಂದು ಹೊಚ್ಚ ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆಗಲೇ ಮದುವೆ ಆಗ್ತಿದ್ದಾರಾ? ಅಂತ ಅಂದುಕೊಳ್ಳಬೇಡಿ. ಭವ್ಯಾ ಗೌಡ ಹೇಳೋಕೆ 'ಕರ್ಣ' ಧಾರಾವಾಹಿ ಬಗ್ಗೆನೇ. ಹೊಸ ಸೀರಿಯಲ್ ಬಗ್ಗೆ ಉತ್ಸುಕರಾಗಿರುವ ನಟಿ ಈ ಧಾರಾವಾಹಿಯಲ್ಲಿ ತನ್ನ ಜೊತೆ ಯಾರೆಲ್ಲ ಇರುತ್ತಾರೆ ಅನ್ನೋದನ್ನು ಒಂದು ವಿಡಿಯೋ ಮೂಲಕ ರಿವೀಲ್ ಮಾಡಿದ್ದಾರೆ. ಅದರಲ್ಲಿ ಏನು ಹೇಳಿದ್ದಾರೆ ಅಂದರೆ,
"ನನ್ನದು ಚಿಕ್ಕ ಕುಟುಂಬ. ಇದರಲ್ಲಿ ಇರೋದು ನನ್ನ ಅಜ್ಜಿ ಶಾಂತಿ, ನನ್ನ ಅಕ್ಕ ನಿತ್ಯಾ. ಹಾಗಂತ ನನ್ನ ಪುಟ್ಟ ಪ್ರಪಂಚದಲ್ಲಿ ಇಷ್ಟೇ ಜನ ಇದ್ದಾರೆ ಅಂತ ಅಂದುಕೊಳ್ಳಬೇಡಿ. ಮನೆಯಲ್ಲಿ ಇಬ್ಬರು ಇದ್ದರೆ, ನನ್ನ ಮನಸ್ಸಿನಲ್ಲಿ ಒಬ್ಬರು ಇದ್ದಾರೆ. ಟೋಟಲ್ ಆಗಿ ನನ್ನ ಪುಟ್ಟ ಪ್ರಪಂಚದಲ್ಲಿ ನಾಲ್ಕು ಜನ ಇದ್ದೀವಿ. ನನ್ನ ಇಷ್ಟ ಕಷ್ಟದಲ್ಲಿ ಜೊತೆಯಾಗಿ ನಿಲ್ಲೋದು ನನ್ನ ಅಕ್ಕ ನಿತ್ಯಾ. ಮನಸ್ಸಿನಲ್ಲಿ ಇರೋದನ್ನು ಮುಲಾಜಿಲ್ಲದೆ ಮಾತಾಡುತ್ತಾಳೆ. ಅವಳಿಗೆ ಏನು ಬೇಕು? ಏನು ಬೇಡ ಅನ್ನೋದೆಲ್ಲ ಪರ್ಫೆಕ್ಟ್ ಆಗಿ ಗೊತ್ತು. ಅವಳು ಆದಷ್ಟು ಬೇಗ ಮದುವೆ ಆಗಬೇಕು ಅನ್ನೋದು ನಮ್ಮ ಅಜ್ಜಿ ಕನಸು ಮಾತ್ರ ಅಲ್ಲ. ನನ್ನ ಕನಸು ಕೂಡ ಹೌದು." ಎಂದು ಕುಟುಂಬ ಹಾಗೂ ಆಸೆ ಎರಡನ್ನೂ ಹೇಳಿಕೊಂಡಿದ್ದಾರೆ.
ಇನ್ನು ಅಕ್ಕ ಬೇಗ ಮದುವೆ ಆಗ್ಬೇಕು ಅನ್ನುವುದಕ್ಕೆ ಕಾರಣ 'ಕರ್ಣ'. "ಅಕ್ಕ ಬೇಗ ಮದುವೆ ಆದರೆ, ನನ್ನ ಕರ್ಣ ಸರ್ನ ಬೇಗ ಮದುವೆ ಆಗಬಹುದು. ಕರ್ಣ ಸರ್ ಸ್ಮೈಲ್ಗೆ, ಸ್ಟೈಲ್ಗೆ ದೊಡ್ಡ ಫ್ಯಾನ್ ಬೇಸ್ ಇದೆ. ಏನೇ ಕಷ್ಟ ಬಂದರೂ ನಗುನಗುತ್ತಾ ಹುಡುಕುವ ನಮ್ಮ ಕರ್ಣ ಸರ್ ನಿಜವಾಗಲೂ ಹೀರೋನೇ. ಸಾಕು ನಮ್ಮ ಹುಡುಗನನ್ನು ಜಾಸ್ತಿ ಹೊಗಳಿದರೆ, ದೃಷ್ಟಿಯಾಗುತ್ತೆ. ನನ್ನ ಎಂಬಿಬಿಎಸ್ ಡಿಗ್ರಿ ಜೊತೆಗೆ ಡಾಕ್ಟರ್ ಅನ್ನೂ ಎತ್ತಾಕೊಂಡು ಹೋಗ್ತಾ ಇರೋದೇ." ಎಂದು ಭವ್ಯಾ ಗೌಡ ಅಲ್ಲ ನಿತ್ಯಾ ಹೇಳಿದ್ದಾರೆ.
ಇಂದಿನಿಂದ (ಜುಲೈ 3) 'ಕರ್ಣ' ಜರ್ನಿ ಕಿರುತೆರೆಯಲ್ಲಿ ಶುರುವಾಗುತ್ತಿದೆ. ಜೂನ್ 16ಕ್ಕೆ ಈ ಧಾರಾವಾಹಿ ಪ್ರಸಾರ ಆಗಬೇಕಿತ್ತು. ಆದರೆ, ಭವ್ಯಾ ಗೌಡ ಬಿಗ್ ಬಾಸ್ ವೇಳೆ ಅಗ್ರಿಮೆಂಟ್ ಅನ್ನು ಗಾಳಿಗೆ ತೂರಿಸಿದ್ದರಿಂದ ಕಲರ್ಸ್ ಕನ್ನಡ ಕಾನೂನು ಮೊರೆ ಹೋಗಿತ್ತು. ಹೀಗಾಗಿ ತಾತ್ಕಾಲಿಕವಾಗಿ ಧಾರಾವಾಹಿ ಪ್ರಸಾರಕ್ಕೆ ತಡೆ ಬಂದಿತ್ತು. ನಿನ್ನೆ (ಜುಲೈ 2) ಕೋರ್ಟ್ 'ಕರ್ಣ' ಧಾರಾವಾಹಿ ಪ್ರಸಾರಕ್ಕೆ ಅನುಮತಿಯನ್ನು ನೀಡಿದೆ. ಹೀಗಾಗಿ ಇಂದು (ಜುಲೈ 3) ಮೊದಲ ಎಪಿಸೋಡ್ ಪ್ರಸಾರ ಆಗುತ್ತಿದೆ.


Click it and Unblock the Notifications











