ಹತಾಶರಾಗಿ 'ಕ್ವಾಟ್ಲೆ ಕಿಚನ್' ಸ್ಪರ್ಧೆಯಿಂದ ಹೊರನಡೆದರೇ ವಿಧಾನಸೌಧದ ಕೆಂಪಮ್ಮ?
ವಿಧಾನ ಸೌಧ ಸಮೀಪ ಕೆ.ಆರ್ ಸರ್ಕಲ್ ವೃತ್ತದ ಬಳಿ ಪಿಡಬ್ಲ್ಯೂಡಿ ಕಚೇರಿ ಹತ್ತಿರ ಹೋಗಿ 'ಕೆಂಪಮ್ಮ ಮೆಸ್' ಎಲ್ಲಿ ಅಂತ ಕೇಳಿದರೆ, ಯಾರು ಬೇಕಾದರೂ ಹೇಳುತ್ತಾರೆ. ಆ ಮಟ್ಟಿಗೆ ಈ 'ಕೆಂಪಮ್ಮ ಮೆಸ್' ಫೇಮಸ್. ಪಿಡಬ್ಲ್ಯೂಡಿ ಕಚೇರಿ ಒಳಗೆ ಹೋದರೆ, ಅಲ್ಲಿ ನಿಮಗೆ ಕೆಂಪಮ್ಮ ಮೆಸ್ ಎಲ್ಲಿಯೂ ಕಾಣಿಸುವುದಿಲ್ಲ. ಆದರೆ, ಅನ್ನಪೂರ್ಣೇಶ್ವರಿ ಹೋಟೆಲ್ ಅನ್ನೋ ಬೋರ್ಡ್ ಕಾಣಿಸಿದರೆ ಅಲ್ಲಿ ಎಂಟ್ರಿ ಕೊಟ್ಟರೆ ಆಯ್ತು. ಅದುವೇ ದಿ ಫೇಮಸ್ ಕೆಂಪಮ್ಮ ಹೋಟೆಲ್.
ಸರ್ಕಾರಿ ನೌಕರರಿಗೆ, ಆಟೋ ಡ್ರೈವರ್ಗಳಿಗೆ, ಕಚೇರಿ ಕೆಲಸಕ್ಕೆಂದು ವಿಧಾನ ಸೌಧ, ಎಂಎಸ್ ಬಿಲ್ಡಿಂಗ್ಗೆ ಬರುವವರಿಗೆ 'ಕೆಂಪಮ್ಮ ಮೆಸ್' ಚಿರಪರಿಚಿತ. ಬೆಂಗಳೂರಿನ ಹೃದಯ ಭಾಗದಲ್ಲಿ ಕಡಿಮೆ ಬೆಲೆಗೆ ಸುಮಾರು ಇಪ್ಪತ್ತೈದು ವರ್ಷಗಳಿಂದ ಶುಚಿ-ರುಚಿಯ ಊಟವನ್ನ ಉಣಬಡಿಸಿ ಖ್ಯಾತಿ ಕೆಂಪಮ್ಮ ಅವರದ್ದು. ಇವರು ಇತ್ತೀಚೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ರಿಯಾಲಿಟಿ ಶೋ 'ಕ್ವಾಟ್ಲೆ ಕಿಚನ್'ಗೆ ಎಂಟ್ರಿ ಕೊಟ್ಟಿದ್ದರು.

ವೀಕೆಂಡ್ನಲ್ಲಿ ಪ್ರಸಾರ ಆಗುತ್ತಿರುವ 'ಕ್ವಾಟ್ಲೆ ಕಿಚನ್' ರಿಯಾಲಿಟಿ ಶೋನಲ್ಲಿ ಕೆಂಪಮ್ಮ ಪ್ರಮುಖ ಆಕರ್ಷಣೆಯಾಗಿದ್ದರು. ಅಡುಗೆ ಜೊತೆ ಜೊತೆಗೆ ನಗೆಯ ಹಬ್ಬವನ್ನೂ ಬಡಿಸುವ ವಿಶೇಷ ಕಾರ್ಯಕ್ರಮವಿದು. ಆದರೆ, ಕೆಂಪಮ್ಮ ಕಳೆದ ಭಾನುವಾರ ನಡೆಯುತ್ತಿದ್ದ ಶೂಟ್ನಿಂದ ದಿಢೀರ್ ಆಚೆ ನಡೆದಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಕಾರಣವೇನು ಅನ್ನೋದು ಕೂಡ ರಿವೀಲ್ ಆಗಿದೆ.
ವಿಧಾನಸೌಧದ ಕೆಂಪಮ್ಮ ಕಲರ್ಸ್ ಕನ್ನಡದ ವೀಕೆಂಡ್ ರಿಯಾಲಿಟಿ ಶೋ 'ಕ್ವಾಟ್ಲೆ ಕಿಚನ್'ನಲ್ಲಿ ಕುಕ್ ಆಗಿ ಜನಪ್ರಿಯರಾಗಿದ್ದರು. ಕಿರಿತೆರೆ ಎಂಟ್ರಿ ಕೊಟ್ಮೇಲೆ ಇವರ ಕೈ ರುಚಿ ಬಗ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಕೆಂಪಮ್ಮ ಈ ರಿಯಾಲಿಟಿ ಶೋ ಮೂಲಕ ಕರ್ನಾಟಕದಾದ್ಯಂತ ಮನೆಮಾತಾಗಿದ್ದರು. ವೀಕ್ಷಕರು ಕೆಂಪಮ್ಮ ಅವರನ್ನು ಇಷ್ಟ ಪಡುವುದಕ್ಕೆ ಇವರ ಕೈ ರುಚಿ ಅಷ್ಟೇ ಅಲ್ಲ. ಇವರ ನಡೆದು ಬಂದ ಸಂಕಷ್ಟದ ಹಾದಿ ಮನಕಲುಕಿತ್ತು.
ಪ್ರತಿದಿನವೂ ಎರಡು ಸಾವಿರಕ್ಕೂ ಹೆಚ್ಚು ಜನಕ್ಕೆ ರುಚಿಯಾದ ಊಟ ಬಡಿಸುವ ಕೆಂಪಮ್ಮ ಯಾವತ್ತೂ ಶಾಲೆಗೆ ಹೋಗಿಲ್ಲ, ಅಕ್ಷರ ಕಲಿತಿಲ್ಲ. ತನ್ನ ಕುಟುಂಬದಲ್ಲಿ ಯಾರ ಸಹಾಯವೂ ಇಲ್ಲದೇ ಬದುಕನ್ನು ಕಟ್ಟಿಕೊಂಡವರು. ತುಂಬಾ ಎಳೆಯ ವಯಸ್ಸಿನಲ್ಲೇ ಪತಿಯನ್ನ ಕಳೆದುಕೊಂಡಿದ್ದ ಕೆಂಪಮ್ಮ ಏಕಾಂಗಿಯಾಗಿ ನಿಂತು ಮೆಸ್ ನಡೆಸಿಕೊಂಡು ಬಂದಿದ್ದಾರೆ. ಇಂದು ಮಧ್ಯಮ ವರ್ಗದ ಪಾಲಿಗೆ ಹಸಿವನ್ನು ನೀಗಿಸುವ ಮೆಸ್ ಆಗಿದೆ. ಕ್ವಾಟ್ಲೆ ಕಿಚನ್ನಲ್ಲಿ ಕುಕ್ ಆಗಿ ತಮ್ಮ ಕೈಚಳಕ ತೋರಿಸಿದ್ದ ಕೆಂಪಮ್ಮನ ಮುಗ್ಧತೆ ಕಿರುತೆರೆ ವೀಕ್ಷಕರಿಗೆ ಇಷ್ಟ ಆಗಿತ್ತು.

ಜಡ್ಜ್ ಶೃತಿ, ಶೆಫ್ ಕೌಶಿಕ್ ಸೇರಿದಂತೆ ಕಿಚನ್ನಲ್ಲಿ ಎಲ್ಲರಿಗೂ ಕೆಂಪಮ್ಮ ಅಚ್ಚುಮೆಚ್ಚು. ಜೊತೆಗೆ ಒಮ್ಮೆ 'ಕುಕ್ ಆಫ್ ದ ವೀಕ್' ಎಂದು ಮೆಚ್ಚುಗೆಯನ್ನೂ ಪಡೆದುಕೊಂಡಿದ್ದರು. ಕ್ವಾಟ್ಲೆ ಕಿಚನ್ ಅವರ ಗಟ್ಟಿತನ ನೋಡಿದ್ದಷ್ಟಲ್ಲೇ ಅಲ್ಲ. ಅವರ ಕಷ್ಟದ ಹಾದಿ ಕೂಡ ಮನಕಲುಕಿತ್ತು. ಮುದ್ದೆ, ಅನ್ನ, ಸಾರು ಮಾಡುತ್ತಿದ್ದವರು ಕ್ವಾಟ್ಲೆ ಕಿಚನ್ನಲ್ಲಿ ನೂಡಲ್ಸ್, ಬರ್ಗರ್ ಮಾಡಿಯೂ ಸೈ ಎನಿಸಿಕೊಂಡವರು.
ಕೆಂಪಮ್ಮ ಕಳೆದ ಭಾನುವಾರ ನಡೆಯುತ್ತಿದ್ದ ಎಲಿಮಿನೇಷನ್ ರೌಂಡಲ್ಲಿ ಡೇಂಜರ್ ಜೋನ್ಗೆ ಎಂಟ್ರಿ ಕೊಟ್ಟಿದ್ದರು. ಇದರಿಂದ ಹತಾಶರಾಗಿ ಕ್ವಾಟ್ಲೆ ಕಿಚನ್ ಸ್ಪರ್ಧೆಯಿಂದಲೇ ಹೊರನಡೆದಿದ್ದಾರೆ. ಇವರಿಗೂ ಮುನ್ನವೇ ಸೋನಿಯಾ ಪೊನ್ನಮ್ಮ ಹಾಗೂ ಪ್ರೇರಣಾ ಕಂಬಂ ಈ ಶೋನಿಂದ ಎಲಿಮಿನೇಟ್ ಆಗಿದ್ದಾರೆ. ಕೆಂಪಮ್ಮ ಹೊರ ನಡೆದ ಬಳಿಕ ವಾರದಿಂದ ವಾರಕ್ಕೆ ಈ ಸ್ಪರ್ಧೆ ಕುತೂಹಲ ಘಟ್ಟವನ್ನು ತಲುಪಿದೆ. ಸದ್ಯ ಏಳು ಜನ ಕುಕ್ಗಳು, ಕ್ವಾಟ್ಲೆಗಳ ಕಿರಿಕ್ ಅನ್ನು ಸಹಿಸಿಕೊಂಡು ತಮ್ಮ ಕಿಚನ್ನಲ್ಲಿ ಮಾಡಿರೋ ಅಡುಗೆಗೆ ಜಡ್ಜ್ಗಳ ಮೆಚ್ಚುಗೆ ಪಡೆಯಬೇಕು. ಕೊನೆಯ ಹಂತದಲ್ಲಿ ಸ್ಪರ್ಧೆಯ ಕಾವೇರುತ್ತಿದೆ, ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ರೋಚಕ ಹಂತದಲ್ಲಿರುವ 'ಕ್ವಾಟ್ಲೆ ಕಿಚನ್' ರಿಯಾಲಿಟಿ ಶೋ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ.


Click it and Unblock the Notifications











