ಚಿತ್ರರಂಗದ ಯಾರ ಮೇಲೆ ಕಿಚ್ಚ ಸುದೀಪ್ ಹರಿಹಾಯ್ದಿದ್ದು

ಮಕರ ಸಂಕ್ರಾಂತಿಯ ದಿನದಂದು ಜನಶ್ರೀ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮ ಸುದೀಪ್ ತನ್ನ ಬೇಸರ ವ್ಯಕ್ತ ಪಡಿಸಲು ವೇದಿಕೆಯಾಗಿ ಪರಿಣಮಿಸಿತು. ಹಬ್ಬ ಹರಿದಿನದ ಮೇಲೆ ತನಗಿರುವ ನಂಬಿಕೆ, ಹೊಸವರ್ಷಾಚರಣೆ, ಮುಂದಿನ ಪ್ರಾಜೆಕ್ಟಿನ ಬಗ್ಗೆ ಸಾಗುತ್ತಿದ್ದ ಮಾತು ಸಿಸಿಎಲ್ 2013ನತ್ತ ಉರುಳಿತು.
ಸಿಸಿಎಲ್ ಆರಂಭವಾಗುವ ಮುನ್ನ ಅಂಬರೀಶಣ್ಣ ನನ್ನನ್ನು ಕರೆದು 'ನೋಡು, ಈ ನಾಯಕತ್ವದ ಜವಾಬ್ದಾರಿಯನ್ನು ನಿನಗೆ ನೀಡುತ್ತಿದ್ದೇನೆ. ಚೆನ್ನಾಗಿ ಆಡು, ತಂಡವನ್ನು ಮುನ್ನಡೆಸು ಮತ್ತು ನಮ್ಮ ಚಿತ್ರರಂಗದ ಮರ್ಯಾದೆ ಉಳಿಸು ಎಂದಿದ್ದರು'.
ಅವರಿಗೆ 'ನೀವು ಹೇಳಿದಂತೆ ಆಗಲಿ, ನಮ್ಮ ಚಿತ್ರರಂಗ ತಲೆತಗ್ಗಿಸುವಂತೆ ಮಾಡುವುದಿಲ್ಲ' ಎಂದು ಭರವಸೆ ನೀಡಿದ್ದೆ. ಅದರಂತೆ ತಂಡವನ್ನು ಮುನ್ನಡೆಸಿ ನಡೆದು ಕೊಂಡು ಬಂದಿದ್ದೇನೆ. ಹಿಂದಿನ ಎರಡೂ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ನಲ್ಲಿ ಸೋತಿದ್ದೇವೆ.
ನಮ್ಮ ತಂಡದ ಫರ್ಫಾರ್ಮೆನ್ಸ್ ನನಗೆ ತೃಪ್ತಿ ತಂದಿದೆ. ನಾವು ಇಲ್ಲಿ ಆಡಲು ಬಂದಿರೋದು, ಚಾರಿಟಿ ಶೋಗಲ್ಲ. ಕ್ರಿಕೆಟ್ ಗೊತ್ತಿಲ್ಲದವರನ್ನು ತಂಡಕ್ಕೆ ಸೇರಿಸಿಕೊಳ್ಳುವಷ್ಟು ದಡ್ಡನಲ್ಲ ನಾನು ಎಂದು ಸುದೀಪ್ ಗರಂ ಆಗಿ ಹೇಳಿಕೆ ನೀಡಿದ್ದಾರೆ. ಒಂದರ್ಥದಲ್ಲಿ ಬ್ಯಾಟ್ ಹಿಡಿಯೋಕೆ ಬರದವರು, ಪ್ಯಾಡ್ ಕಟ್ಟೋಕೆ ಬರದವರು ಅನ್ನೋ ರೀತಿಯಲ್ಲಿತ್ತು ಅವರ ಹೇಳಿಕೆ.
ಸಿಸಿಎಲ್ ಪಂದ್ಯಕ್ಕಾಗಿ ನಾನು ಬೆವರು ಸುರಿಸಿದ್ದೇನೆ, ಹಣವನ್ನು ನೀರಿನಂತೆ ಖರ್ಚು ಮಾಡಿದ್ದೇನೆ. ಸಮಯ ವಿನಿಯೋಗಿಸಿದ್ದೇನೆ, ಮೂಳೆ ಮುರ್ಕೊಂಡಿದ್ದೇನೆ. ಇದೆಲ್ಲಾ ಯಾತಕ್ಕಾಗಿ ನಾನು ಮತ್ತು ನನ್ನ ತಂಡ ಮಾಡಿದ್ದು 'ನನ್ನ ಕನ್ನಡ ಚಿತ್ರರಂಗದ ಗೌರವ ಕಮ್ಮಿಯಾಗಬಾರದು, ನಮ್ಮನ್ನು ಕಂಡು ಯಾರೂ ಗೇಲಿ ಮಾಡಬಾರದು ಎನ್ನುವ ಉದ್ದೇಶಕ್ಕಾಗಿ ಎಂದು ಸುದೀಪ್ ಪರೋಕ್ಷವಾಗಿ ಯಾರನ್ನೋ ಟಾರ್ಗೆಟ್ ಮಾಡಿದರು.
ಈ ಬಾರಿ ದರ್ಶನ್ ಸಂಪೂರ್ಣವಾಗಿ ಸಿಸಿಎಲ್ 2013ಕ್ಕೆ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಅವನೊಬ್ಬ ದೊಡ್ಡ ಸೆಲೆಬ್ರಿಟಿ, ಪ್ರಾಕ್ಟೀಸ್ ನಲ್ಲಿ ಅವನು ಭಾಗವಹಿಸುತ್ತಿರುವುದೇ ಎಲ್ಲರಿಗೂ ಒಂದು ಸ್ಫೂರ್ತಿ. ಬೆಳಗ್ಗೆ 4.30ಕ್ಕೆ ಎದ್ದು ಮೈದಾನಕ್ಕೆ ಹೋಗುತ್ತಿದ್ದೇವೆ.
ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದೇವೆ. ಇದು ಸೆಲೆಬ್ರಿಟಿ ಕ್ರಿಕೆಟ್ ಲೀಗ್ 'ಸ್ಟಾರ್ ಕ್ರಿಕೆಟ್ ಲೀಗ್ ಅಲ್ಲ' ಬರೀ ಸಿನಿಮಾ ನಟರು ಮಾತ್ರ ಇದರಲ್ಲಿ ಭಾಗವಹಿಸಬೇಕೆಂದಿಲ್ಲ, ಟಿವಿಯಲ್ಲಿ ಕಾರ್ಯಕ್ರಮ ನಡೆಸಿಕೊಡುವ ನಿರೂಪಕ/ಕಿಯರೂ ಸೆಲೆಬ್ರಿಟಿಗಳೇ ಎಂದು ಸುದೀಪ್ ಹೇಳಿದ್ದಾರೆ.
ಕಾರ್ಯಕ್ರಮದ ಉದ್ದಕ್ಕೂ ಸುದೀಪ್ ಸಿಟ್ಟು ಯಾರ ಮೇಲೆ ಅನ್ನೂ ಸಂಗತಿಗೆ ಉತ್ತರ ಸಿಗದೇ ಮರೀಚಿಕೆಯಾಗಿಯೇ ಉಳಿಯಿತು.
ಸಿಸಿಎಲ್ ಮೂರನೇ ಆವೃತ್ತಿ ಫೆಬ್ರವರಿ 9, 2013ರಂದು ಆರಂಭವಾಗಲಿದೆ. ಕೇರಳ ಸ್ತ್ರೈಕರ್ಸ್ ಮತ್ತು ಮುಂಬೈ ಹೀರೋಸ್ ನಡುವಣ ಮೊದಲ ಪಂದ್ಯ ಶಾರ್ಜಾದಲ್ಲಿ ಅಂದು ನಡೆಯಲಿದೆ. ಈ ಬಾರಿ ಸಿಸಿಎಲ್ ಲೀಗಿಗೆ 'ವೀರ್ ಮರಾಠಿ' ಮತ್ತು 'ಭೋಜಪುರಿ ದಬಂಗ್ಸ್' ತಂಡ ಸೇರ್ಪಡೆಯಾಗಿದೆ.
ಕಿಚ್ಚ ಸುದೀಪ್ ನಾಯಕತ್ವದ, ಅಶೋಕ್ ಖೇಣಿ ಮಾಲೀಕತ್ವದ ಕರ್ನಾಟಕ ಬುಲ್ಡೋಜರ್ಸ್ ಸೇರಿ ಒಟ್ಟು ಎಂಟು ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದೆ.


Click it and Unblock the Notifications











