ಹುಟ್ಟುವ ಮೊದಲೇ ಶಾಪಗ್ರಸ್ತನಾಗಿದ್ದ ಈ 'ಕರ್ಣ'; ಭವ್ಯಾ ಗೌಡ ಸೀರಿಯಲ್ಗೆ ಪ್ರಸಾರ ಸಿಕ್ಕಿತು ಗ್ರೀನ್ ಸಿಗ್ನಲ್!
ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಜೀ ಕನ್ನಡದಲ್ಲಿ 'ಕರ್ಣ' ಇಷ್ಟೊತ್ತಿಗಾಗಲೇ ಪ್ರಸಾರ ಆಗಬೇಕಿತ್ತು. ಜೂನ್ 16ರಂದೇ 'ಕರ್ಣ' ಧಾರಾವಾಹಿ ಪ್ರಸಾರಕ್ಕೆ ವಾಹಿನಿ ಕೂಡ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಆದರೆ, ದಿಢೀರನೇ ಈ ಧಾರಾವಾಹಿ ಪ್ರಸಾರವನ್ನು ಸ್ಥಗಿತಗೊಳಿಸಲಾಗಿತ್ತು. ಕಲರ್ಸ್ ಕನ್ನಡ ವಾಹಿನಿ ನಟಿ ಭವ್ಯಾ ಗೌಡ ವಿರುದ್ಧ ಕಾನೂನು ಮೊರೆ ಹೋಗಿದ್ದರಿಂದ 'ಕರ್ಣ' ಪ್ರಸಾರಕ್ಕೂ ಮುನ್ನವೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಗಿತ್ತು.
'ಕರ್ಣ' ಧಾರಾವಾಹಿಯ ನಟಿ ಭವ್ಯಾ ಗೌಡ ಬಿಗ್ ಬಾಸ್ ಅಗ್ರಿಮೆಂಟ್ ಅನ್ನು ಮುರಿದಿದ್ದಾರೆ. ಒಪ್ಪಂದ ಮುಗಿಯುವ ಮುನ್ನವೇ ಮತ್ತೊಂದು ಮನರಂಜನಾ ವಾಹಿನಿಯ ಧಾರಾವಾಹಿಯಲ್ಲಿ ಭವ್ಯಾ ಗೌಡ ನಟಿಸುತ್ತಿದ್ದಾರೆಂಬ ಆರೋಪ ಮಾಡಲಾಗಿತ್ತು. ಈ ಸಂಬಂಧ ಭವ್ಯಾ ಗೌಡ ವಿರುದ್ಧ ಕಲರ್ಸ್ ಕನ್ನಡ ಕೋರ್ಟ್ ಮೆಟ್ಟಿಲಿತ್ತು. ಹೀಗಾಗಿ ತಾತ್ಕಾಲಿಕವಾಗಿ 'ಕರ್ಣ' ಧಾರಾವಾಹಿಯನ್ನು ಪ್ರಸಾರ ಮಾಡದಂತೆ ನೋಟಿಸ್ ನೀಡಲಾಗಿತ್ತು.

ಕೊನೆಗೂ 'ಕರ್ಣ' ಧಾರಾವಾಹಿ ಪ್ರಸಾರ ಮಾಡುವುದಕ್ಕೆ ಕೋರ್ಟ್ ಅನುಮತಿಯನ್ನು ನೀಡಿದೆ. ಹುಟ್ಟುವ ಮೊದಲೇ ಶಾಪಗ್ರಸ್ತನಾದ ಈ 'ಕರ್ಣ' ಈಗ ಶಾಪ ಮುಕ್ತನಾಗಿದ್ದಾನೆ. ತನ್ನ ಮುಂದೆ ಇದ್ದ ಎಲ್ಲಾ ಅಡೆತಡೆಗಳನ್ನು ಎದುರಿಸಿ ಕೊಟ್ಟ ಮಾತಿಗೆ ತಪ್ಪದೆ ವೀಕ್ಷಕರ ಮನರಂಜಿಸಲು ಸಜ್ಜಾಗಿದ್ದಾನೆ. ಹಾಗಿದ್ದರೆ, ಜೀ ಕನ್ನಡದಲ್ಲಿ 'ಕರ್ಣ' ಎಂದಿನಿಂದ ಪ್ರಸಾರ ಆಗುತ್ತೆ? ಎಷ್ಟು ಗಂಟೆಗೆ ತಿಳಿಯುವುದಕ್ಕೆ ಮುಂದೆ ಓದಿ.
ಶಾಪ ಮುಕ್ತನಾದ 'ಕರ್ಣ'
ಜೀ ಕನ್ನಡದ ಬಹುನಿರೀಕ್ಷಿತ ಧಾರಾವಾಹಿ 'ಕರ್ಣ' ಪ್ರಸಾರಕ್ಕೂ ಮುನ್ನವೇ ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು. ಅದಕ್ಕೆ ಕಾರಣ ಸ್ಟಾರ್ಕಾಸ್ಟ್. ಕಿರಣ್ ರಾಜ್, ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೇ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಕಮ್ ನಟ ನಾಗಾಭರಣ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕುತೂಹಲವನ್ನು ಹೆಚ್ಚಿಸಿತ್ತು. ಇನ್ನೇನು ಜೂನ್ 16ಕ್ಕೆ ಟೆಲಿಕಾಸ್ಟ್ ಆಗಬೇಕಿತ್ತು. ಅಷ್ಟರಲ್ಲಿ ಭವ್ಯಾ ಗೌಡ ವಿರುದ್ಧ ಕಲರ್ಸ್ ಕನ್ನಡ ಕಾನೂನು ಸಮರ ಹೂಡಿತ್ತು. ಹೀಗಾಗಿ ಧಾರಾವಾಹಿ ಸ್ಥಗಿತಗೊಂಡಿತ್ತು.
ಭವ್ಯಾ ಗೌಡ ವಿವಾದವೇನು?
ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಪಡೆಯುವುದಕ್ಕೂ ಮುನ್ನ ಸ್ಪರ್ಧಿಗಳಿಂದ ಅಗ್ರಿಮೆಂಟ್ಗೆ ಸಹಿ ಹಾಕಿಸಲಾಗಿರುತ್ತೆ. ಆರು ತಿಂಗಳು ಕಲರ್ಸ್ ಕನ್ನಡದ ಶೋಗಳಲ್ಲಿ ಭಾಗವಹಿಸಬೇಕು. ಜೊತೆಗೆ ಬೇರೆ ಮನರಂಜನಾ ವಾಹಿನಿಯ ಯಾವುದೇ ಶೋ, ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವಂತಿಲ್ಲ ಎಂದು ಅಗ್ರಿಮೆಂಟ್ನಲ್ಲಿ ಹೇಳಲಾಗಿದೆ. ಆದರೆ, ಭವ್ಯಾ ಗೌಡ ಕಲರ್ಸ್ ಕನ್ನಡ ಶೋಗಳಲ್ಲಿ ಭಾಗವಹಿರಲಿಲ್ಲ. ಜೊತೆಗೆ ಜೀ ಕನ್ನಡ 'ಕರ್ಣ' ಧಾರಾವಾಹಿಯಲ್ಲಿ ನಟಿಸಿದ್ದರು. ಈ ಕಾರಣಕ್ಕೆ ಭವ್ಯಾ ಗೌಡ ವಿರುದ್ಧ ಕಾನೂನು ಸಮರ ಸಾರಲಾಗಿತ್ತು. ಈಗ ಕೋರ್ಟ್ನಲ್ಲಿ ಸೀರಿಯಲ್ ಪ್ರಸಾರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
'ಕರ್ಣ' ಎಂದಿನಿಂದ ಪ್ರಸಾರ?
ಪ್ರಸಾರಕ್ಕೂ ಮುನ್ನವೇ 'ಕರ್ಣ' ಧಾರಾವಾಹಿ ಸ್ಥಗಿತಗೊಂಡಿತ್ತು. ಆದರೆ, ಈಗ ಕೋರ್ಟ್ನಿಂದ ಪ್ರಸಾರ ಅನುಮತಿ ಸಿಕ್ಕಿದೆ. ಹೀಗಾಗಿ ನಾಳೆಯಿಂದಲೇ (ಜುಲೈ 3) 'ಕರ್ಣ' ಧಾರಾವಾಹಿ ಜೀ ಕನ್ನಡದಿಂದ ಪ್ರಸಾರ ಆಗುತ್ತಿದೆ. ರಾತ್ರಿ 8 ರಿಂದ ಸೋಮವಾರದಿಂದ ಶುಕ್ರವಾರ ಜೀ ಕನ್ನಡದಲ್ಲಿ 'ಕರ್ಣ' ಧಾರಾವಾಹಿಯನ್ನು ವೀಕ್ಷಕರು ವೀಕ್ಷಿಸಬಹುದು ಎಂದು ವಾಹಿನಿ ತಿಳಿಸಿದೆ. ಈ ಮೂಲಕ ನಿರೀಕ್ಷೆಗಿಂತ ಮುನ್ನವೇ 'ಕರ್ಣ' ಧಾರಾವಾಹಿ ಪ್ರಸಾರ ಆಗುತ್ತಿದೆ.
ಕ್ಷಮೆ ಕೋರಿದ್ದ ತಾರೆಯರು
'ಕರ್ಣ' ಧಾರಾವಾಹಿ ಪ್ರಸಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದ್ದಂತೆ ಪ್ರಮುಖ ತಾರೆಯರು ಕ್ಷಮೆ ಕೋರಿದ್ದರು. ನಾಯಕ ಕಿರಣ್ ರಾಜ್ ಹಾಗೂ ನಮ್ರತಾ ಗೌಡ ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದರು. ಕೊನೆಗೂ ತನ್ನ ಕಾನೂನು ಸಮಸ್ಯೆಗಳನ್ನು ಸರಿಪಡಿಸಿಕೊಂಡು ವೀಕ್ಷಕರ ಮುಂದೆ ಕರ್ಣ ಹಾಜರಾಗುತ್ತಿದ್ದು, ಯಾವ ರೀತಿಯ ಪ್ರತಿಕ್ರಿಯೆ ಸಿಗುತ್ತೆ ಎನ್ನುವುದನ್ನು ನೋಡಬೇಕಿದೆ.


Click it and Unblock the Notifications











