ಹೀರೋ ಆಗ್ಬಿಟ್ರು 'ಲಕ್ಷ್ಮಿ ನಿವಾಸ' ಧಾರಾವಾಹಿಯ ಸಿದ್ದೇಗೌಡ್ರು; ಚೊಚ್ಚಲ ಸಿನಿಮಾದ ಹೈಲೈಟ್ಸ್ ಏನು?
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ನಿವಾಸ'. ಈ ಧಾರಾವಾಹಿಯಲ್ಲಿ ಸಿದ್ದೇಗೌಡರ ಪಾತ್ರ ಕಿರುತೆರೆ ವೀಕ್ಷಕರ ಅಚ್ಚು ಮೆಚ್ಚಿನ ಪಾತ್ರ. ಈ ಸಿದ್ಧೇಗೌಡನ ಪಾತ್ರದಲ್ಲಿ ಲವಲವಿಕೆಯಿಂದ ನಟಿಸುತ್ತಿರೋ ನಟ ಧನಂಜಯ. ತನ್ನ ಅಭಿನಯದಿಂದಲೇ ಕನ್ನಡಿಗರ ಮನೆ ಮಾತಾಗಿರುವ ಈ ನಟ ಈಗ ಪೂರ್ಣ ಪ್ರಮಾಣದ ನಾಯಕನಾಗಿ ಎಂಟ್ರಿ ಸ್ಯಾಂಡಲ್ವುಡ್ಗೆ ಕೊಡುತ್ತಿದ್ದಾರೆ.
ಹಾಗಂತ 'ಲಕ್ಷ್ಮಿ ನಿವಾಸ'ದ ಧನಂಜಯ್ಗೆ ಇದು ಮೊದಲ ಸಿನಿಮಾವೇನಲ್ಲ. ಈ ಹಿಂದೆ ಕೂಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಿರಲಿಲ್ಲ. ಈಗ 'ಲಕ್ಷ್ಮಿ ನಿವಾಸ' ಸೀರಿಯಲ್ನಲ್ಲಿ ತಮ್ಮ ಪಾತ್ರದಿಂದ ಗಮನ ಸೆಳೆದ ನಟನಿಗೆ ನಾಯಕನಾಗಿ ನಟಿಸುವ ಅವಕಾಶ ಸಿಕ್ಕಿದೆ. ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾ ಅನೌನ್ಸ್ ಆಗಿದೆ.

ಧನಂಜಯ್ ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಆರ್ಟಿಸ್ಟ್ ಆಗಿ, ಡ್ಯಾನ್ಸರ್ ಆಗಿ ಎಂಟ್ರಿ ಕೊಟ್ಟಿದ್ದರು. ಈಗಾಗಲೇ 'ವಾಸಂತಿ ನಲಿದಾಗ', 'ಥಗ್ ಆಫ್ ರಾಮಘಡ' ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೀಗ ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿ ಪರದೆಗೆ ಎಂಟ್ರಿ ಕೊಡುತ್ತಿದ್ದಾರೆ. ಹಾಗಿದ್ದರೆ, ಸಿನಿಮಾದ ಟೈಟಲ್ ಏನು? ಹೇಗಿದೆ ಫಸ್ಟ್ ಲುಕ್ ತಿಳಿಯುವುದಕ್ಕೆ ಮುಂದೆ ಓದಿ.
ಹೀರೋ ಆದ ಸಿದ್ದೇಗೌಡರು
ಕನ್ನಡದ ಧಾರಾವಾಹಿಗಳಲ್ಲಿ ನಟಿಸಿದ್ದ ನಟರು ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು ಹೀರೋ ಆಗಿರುವ ಉದಾಹರಣೆಗಳು ಸಾಕಷ್ಟಿವೆ. ಕಿರುತೆರೆ ಎಷ್ಟೋ ಯುವ ನಟರ ಕನಸನ್ನು ಈಡೇರಿಸಿದೆ. ಈಗ 'ಲಕ್ಷ್ಮಿ ನಿವಾಸ' ಧಾರಾವಾಹಿಯ ಸಿದ್ದೇಗೌಡ ಉರ್ಫ್ ಧನಂಜಯ್ ಅವರ ಸರದಿ. ಇವರಿಗೂ ಸ್ಯಾಂಡಲ್ವುಡ್ನಲ್ಲಿ ಅದೃಷ್ಟ ಒಲಿಯುತ್ತಾ? ಅನ್ನೋ ಕುತೂಹಲವಿದೆ. ಆದರೆ, ಕಿರುತೆರೆ ವೀಕ್ಷಕರು ಹಾಗೂ ಧನಂಜಯ್ ಅಭಿಮಾನಿಗಳು ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ.
ಸಿನಿಮಾದ ಟೈಟಲ್ ಏನು?
ಸಿದ್ಧೇಗೌಡ (ಧನಂಜಯ್) ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸುತ್ತಿರುವ ಸಿನಿಮಾಗೆ 'ಶುಭಕೃತ್ ನಾಮ ಸಂವತ್ಸರ' ಎಂದು ಟೈಟಲ್ ಇಡಲಾಗಿದೆ. ಅಲ್ಲದೇ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನೂ ರಿಲೀಸ್ ಮಾಡಲಾಗಿದೆ. ಇಂದು (ಸೆಪ್ಟೆಂಬರ್ 17) ಧನಂಜಯ್ ಅವರ ಹುಟ್ಟುಹಬ್ಬವಿರುವುದರಿಂದ ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ. ಈ ಮೂಲಕ ಮತ್ತೊಬ್ಬ ಕಿರುತೆರೆ ನಟ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಂತಾಗಿದೆ.

'ಫೋರ್ ವಾಲ್ಸ್' ಎಂಬ ಸಿನಿಮಾ ನಿರ್ದೇಶಿಸಿರುವ ಎಸ್ ಎಸ್ ಸಜ್ಜನ್ 'ಶುಭಕೃತ್ ನಾಮ ಸಂವತ್ಸರ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಸಜ್ಜನ್ ಅವರ ಹೊಸ ಪ್ರಯತ್ನ. ಟೈಟಲ್ ಹೇಳುವಂತೆ ಇದೊಂದು ಹಬ್ಬದ ಹಿನ್ನೆಲೆಯಲ್ಲಿ ಸಾಗುವ ಕೌಟುಂಬಿಕ ಕಥೆ. ಆದರೆ ಈ ಕತೆಗೆ ಕ್ರೈಮ್-ಥ್ರಿಲ್ಲರ್ ಟಚ್ ಕೊಟ್ಟು ಸಜ್ಜನ್ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಈ ಸಿನಿಮಾಗೆ ಫೋರ್ ವಾಲ್ಸ್ ನಿರ್ಮಾಣ ತಂಡ ಸಾಥ್ ಕೊಡುತ್ತಿದೆ. ಎಸ್.ವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಗೆ ಬರುತ್ತಿದೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ಶೂಟಿಂಗ್ ಮಾಡುವುದಕ್ಕೆ ಚಿತ್ರತಂಡ ಈಗಾಗಲೇ ಪ್ಲಾನ್ ಮಾಡಿಕೊಂಡಿದೆ.
ಪ್ಯಾನ್ ಇಂಡಿಯಾ ಟೀಮ್
'ಶುಭಕೃತ್ ನಾಮ ಸಂವತ್ಸರ' ಸಿನಿಮಾಗೆ ಟಾಲಿವುಡ್ನಲ್ಲಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ತೆಲುಗಿನಲ್ಲಿ 'ರುದ್ರಮದೇವಿ', 'ಗರುಡವೇಗ'ದಂತಹ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವ ಇರುವ ದೇವೇಂದ್ರ ವಡ್ಡೆ ಛಾಯಾಗ್ರಾಹಕರಾಗಿದ್ದಾರೆ. ತೆಲುಗು ಸಿನಿಮಾಗಳಲ್ಲಿಯೇ ಕೆಲಸ ಮಾಡಿರುವ ಸಂಗೀತ ನಿರ್ದೇಶಕ ಸುಧಾ ಶ್ರೀನಿವಾಸ್ ಟ್ಯೂನ್ ಹಾಕುತ್ತಿದ್ದಾರೆ. ಇದೇ ನವೆಂಬರ್ ತಿಂಗಳಿನಿಂದ ಶೂಟಿಂಗ್ ಆರಂಭ ಆಗುತ್ತಿದೆ. ಒಟ್ನಲ್ಲಿ ಮತ್ತೊಬ್ಬ ನಟ ಸ್ಯಾಂಡಲ್ವುಡ್ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಇವರ ಪಾತ್ರ ಏನಾಗುತ್ತೆ? ಅನ್ನೋದು ಸದ್ಯಕ್ಕೆ ಕುತೂಹಲ.


Click it and Unblock the Notifications











