'ಲಕ್ಷ್ಮಿ ನಿವಾಸ'ಕ್ಕೆ 'ಅಜಗಜಾಂತರ'ದ ಮಾಧುರಿ ಎಂಟ್ರಿ: ಇಷ್ಟು ದಿನ ಈ ನಟಿ ನಟನೆಯಿಂದ ದೂರ ಉಳಿದಿದ್ದೇಕೆ?
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ನಿವಾಸ'. ಪಕ್ಕಾ ಕೌಟುಂಬಿಕ ಧಾರಾವಾಹಿಗೆ ಕರ್ನಾಟಕದಾದ್ಯಂತ ಅಭಿಮಾನಿಗಳು ಇದ್ದಾರೆ. ಆದರೆ, ಇತ್ತೀಚೆಗೆ ಈ ಧಾರಾವಾಹಿಯಿಂದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಶ್ವೇತಾ ಹೊರ ಹೋಗಿದ್ದರು. ಇಲ್ಲಿಂದ ಈ ಸ್ಥಾನವನ್ನು ತುಂಬುವುದಕ್ಕೆ ಯಾರು ಬರುತ್ತಾರೆ? ಎಂದು ವೀಕ್ಷಕರು ಎದುರು ನೋಡುತ್ತಿದ್ದರು. ಈ ಧಾರಾವಾಹಿ ತಂಡಕ್ಕೆ ಒಬ್ಬ ನಟಿ ಸಿಕ್ಕೇ ಬಿಟ್ಟರು ಎಂದು ಕಿರುತೆರೆಯಲ್ಲಿ ಸುದ್ದಿಯೊಂದು ಹರಿದಾಡುತ್ತಿದೆ.
ಇತ್ತಿಚೆಗೆ ಕಿರುತೆರೆಯಲ್ಲಿ ಒಂದು ಟ್ರೆಂಡ್ ಶುರುವಾಗಿದೆ. ಸಿನಿಮಾದಲ್ಲಿ ಜನಪ್ರಿಯರಾಗಿದ್ದ ತಾರೆಯರನ್ನು ಕಿರುತೆರೆಗೆ ಕರೆದುಕೊಂಡು ಬರುತ್ತಾರೆ. ಅದರಲ್ಲೂ ಒಂದು ಕಾಲದಲ್ಲಿ ಸಿನಿಮಾ ಹಾಗೂ ಸೀರಿಯಲ್ನಲ್ಲಿ ಸ್ಟಾರ್ ಆಗಿ ಮೆರೆದಿದ್ದ ನಟಿಯರನ್ನೇ ಹುಡುಕಿ ಧಾರಾವಾಹಿಯಲ್ಲಿ ನಟಿಸಲಾಗುತ್ತದೆ. ಕನ್ನಡದ ಎಲ್ಲಾ ಧಾರಾವಾಹಿಗಳು ಇದೇ ಫಾಲೋ ಮಾಡಿಕೊಂಡು ಬರುತ್ತಿವೆ. ಈಗ 'ಲಕ್ಷ್ಮಿ ನಿವಾಸ' ತೊರೆದಿರುವ ಶ್ವೇತಾ ಅವರ ಜಾಗಕ್ಕೆ ಯಾರು ಬರಬಹುದು ಎಂದುಕೊಂಡವರಿಗೆ ಕಡೆಗೂ ಉತ್ತರ ಸಿಕ್ಕಿದೆ.

'ಲಕ್ಷ್ಮಿ ನಿವಾಸ' ಧಾರಾವಾಹಿಗೆ ಹಿರಿಯ ನಟಿ ಮಾಧುರಿ ಎಂಟ್ರಿ ಕೊಡುತ್ತಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಬಹುತೇಕ ಇವರೇ ಶ್ವೇತಾ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆಂಬ ಸುದ್ದಿಯಂತೂ ಬಲವಾಗಿದೆ. ಇನ್ನು ಕನ್ನಡ ಸಿನಿಮಾ ಹಾಗೂ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಮಾಧುರಿ ಯಾಕೆ ನಟಿಸಲಿಲ್ಲ? ಅವರಿಗೆ ಅಂತಹ ಕಹಿ ಘಟನೆ ಏನಾಗಿತ್ತು? ತಿಳಿಯುವುದಕ್ಕೆ ಮುಂದೆ ಓದಿ.
ಮಾಧುರಿ ಕನ್ನಡ ಸಿನಿಮಾ ಪ್ರಿಯರಿಗೆ ಹಾಗೂ ಕಿರುತೆರೆ ಪ್ರೇಮಿಗಳಿಗೆ ಚೆನ್ನಾಗಿಯೇ ಪರಿಚಯವಿದೆ. ಕಾಶೀನಾಥ್ ನಿರ್ದೇಶಿಸಿದ 'ಅಜಗಜಾಂತರ' ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಎಂಟ್ರಿ ಕೊಟ್ಟಿದ್ದ ಮಾಧುರಿ ಬಹುಬೇಡಿಕೆಯ ನಟಿಯಾಗಿದ್ದರು. ಚೆಲುವು ಹಾಗೂ ಅಭಿನಯ ಎರಡೂ ಇದ್ದ ಈ ನಟಿಗೆ ಸಿಕ್ಕಾಪಟ್ಟೆ ಬೇಡಿಕೆ ಇತ್ತು. ಆದರೆ, ಇದ್ದಕ್ಕಿದ್ದ ಹಾಗೇ ಮಾಧುರಿ ನಟನೆಯಿಂದಲೇ ದೂರ ಉಳಿಯುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ಅಷ್ಟಕ್ಕೂ ಅಷ್ಟೊಂದು ಬೇಡಿಕೆಯಲ್ಲಿದ್ದ ನಟಿಗೆ ಅಂತಹದ್ದೇನಾಯ್ತು? ಯಾಕೆ ಆ ನಿರ್ಧಾರ ತೆಗೆದುಕೊಂಡರು? ಅನ್ನೋದನ್ನು ರಘುರಾಮ್ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ್ದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದರು.
ನಟಿ ಮಾಧುರಿ ಮೂಲತ: ಬೆಂಗಳೂರಿನವರೇ. ಆದರೆ, ಬಡ ಕುಟುಂಬದಿಂದ ಬಂದಿದ್ದ ಇವರಿಗೆ ನಟನೆ ಬಗ್ಗೆ ಒಲವು ಇರಲಿಲ್ಲ. ಸಿನಿಮಾ, ಸೀರಿಯಲ್ ಪರಿಕಲ್ಪನೆಯೇ ಇರಲಿಲ್ಲ. ಐಎಎಸ್ ಮಾಡಬೇಕು ಎಂದು ಕನಸು ಕಾಣುತ್ತಿದ್ದ ಈ ನಟಿಗೆ ಸಿನಿಮಾರಂಗ ಎಳೆದುಕೊಂಡು ಬಂದಿತ್ತು. ಆಕಸ್ಮಿಕವಾಗಿ ಕಾಶಿನಾಥ್ ಅವರ 'ಅಜಗಜಾಂತರ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೇ ಬಿಟ್ಟರು. ಇಲ್ಲಿಂದ ಮಾಧುರಿಯವರು ಯಶಸ್ಸು ಅವರನ್ನು ಹುಡುಕಿಕೊಂಡ ಬರ ತೊಡಗಿತ್ತು.

ಸಿನಿಮಾ, ಕಿರುತೆರೆ ಅಂತ ಬ್ಯುಸಿಯಾಗಿದ್ದ ಮಾಧುರಿ ಜರ್ನಿ ಚೆನ್ನಾಗಿಯೇ ಇತ್ತು. ಹಿಂದಿ ಸೀರಿಯಲ್ಗಳಲ್ಲೂ ಮಾಧುರಿ ನಟಿಸುವುದಕ್ಕೆ ಶುರು ಮಾಡಿದ್ದರು. ಇಲ್ಲಿಂದಲೇ ಅಸಲಿಗೆ ಅವರಿಗೆ ಸಂಕಷ್ಟ ಎದುರಾಗಿತ್ತು. ಇವರ ಯಶಸ್ಸು ಅಸಹಿಸದವರೊಬ್ಬರು ಸುಳ್ಳು ಸುದ್ದಿಯನ್ನು ಹಬ್ಟಿಸುವುದಕ್ಕೆ ಶುರು ಮಾಡಿದ್ದರು. ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ನಟಿಯ ವಿರುದ್ಧ ಚಿತ್ರರಂಗದವರೇ ಕಿರುಕುಳ ಕೊಡುವುದಕ್ಕೆ ಶುರು ಮಾಡಿದ್ದರು. ಇವರ ಬೆಳವಣಿಗೆಯನ್ನು ಸಹಿಸದವರು ಬೇಕಂತಲೇ ಮಾಧುರಿ ಬಿ ಗ್ರೇಡ್ ನಟಿ ಎಂದು ಬರೆಸುತ್ತಿದ್ದರು. ಇದು ಅವರಿಗೆ ಸಿಕ್ಕಾಪಟ್ಟೆ ನೋವುಂಟು ಮಾಡಿತ್ತು.
ಹೀಗಾಗಿ ಮಗುವಾದ ಬಳಿಕ ಮಾಧುರಿ ಸಿನಿಮಾರಂಗದಿಂದಲೇ ದೂರ ಉಳಿಯುವುದಕ್ಕೆ ನಿರ್ಧರಿಸಿದ್ದರು. ಫ್ಯಾಮಿಲಿಗಾಗಿ ಈ ನಟಿ ಹೆಚ್ಚು ಕಾಲವನ್ನು ಮೀಸಲಿಟ್ಟಿದ್ದರು. ಈಗ ಮತ್ತೆ ಮಾಧುರಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲು ಸಜ್ಜಾಗುತ್ತಿದ್ದಾರೆ. 'ಲಕ್ಷ್ಮಿ ನಿವಾಸ' ಧಾರಾವಾಹಿಯ ಮೂಲಕ ಮಾಧುರಿಯವರೇ ಮತ್ತೆ ಕಿರಿತೆರೆಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿ ತುಂಬಾನೇ ಜೋರಾಗಿಯೇ ಹರಿದಾಡುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಹೊರಬೀಳಬೇಕಿದೆ.


Click it and Unblock the Notifications











