ಮಜಾ ಟಾಕೀಸ್ನಲ್ಲಿ ಭಟ್ರ ಹೊಸ ಸಿನೆಮಾ 'ಮನದ ಕಡಲು' ಜೊತೆ 'ಮುಂಗಾರು ಮಳೆ' ತಂಡದ ಮಹಾ ಸಮ್ಮಿಲನ
ಯುಗಾದಿ ಹಬ್ಬಕ್ಕೆ ಅಪ್ಪಟ ಕನ್ನಡದ ಸಿನಿಮಾ 'ಮನದ ಕಡಲು' ನಾಳೆ (ಮಾರ್ಚ್ 27) ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. 'ಮುಂಗಾರು ಮಳೆ' ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಈ ಕೃಷ್ಣಪ್ಪ ಮತ್ತೆ ಜೊತೆಯಾಗಿ ಯೂತ್ಫುಲ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಯೋಗರಾಜ್ ಭಟ್ಟರು ಮತ್ತೆ ಹೊಸ ಮುಖಗಳ ಮೊರೆ ಹೋಗಿದ್ದಾರೆ.
ಒಂದ್ಕಡೆ 'ಮನದ ಕಡಲು' ರಿಲೀಸ್.. ಇನ್ನೊಂದ್ಕಡೆ ಯುಗಾದಿ ಹಬ್ಬ ಈ ಎರಡೂ ವಿಶೇಷ ಸಂದರ್ಭಗಳನ್ನು ಇಟ್ಟುಕೊಂಡು ಕಲರ್ಸ್ ಕನ್ನಡದ ಮಜಾ ಟಾಕೀಸ್ ಶೊ ಮಹಾಸಂಚಿಕೆ ಪ್ಲ್ಯಾನ್ ಮಾಡಿದೆ. ಸೃಜನ್ ಲೋಕೇಶ್ ನಿರೂಪಣೆ ಮಾಡುವ ಈ ಶೋನಲ್ಲಿ ಯೋಗರಾಜ್ ಭಟ್ ಕೂಡ ಸೇರಿಕೊಂಡಿದ್ದಾರೆ. ಹೀಗಾಗಿ 'ಮನದ ಕಡಲು' ಜೊತೆ 'ಮುಂಗಾರು ಮಳೆ' ಕುಟುಂಬದ ಮಹಾ ಸಮ್ಮಿಲನ ಆಗುತ್ತಿದೆ.

ಈಗಾಗಲೇ ಮಜಾ ಟಾಕೀಸ್ ವೀಕೆಂಡ್ನಲ್ಲಿ ಕಿರುತೆರೆ ವೀಕ್ಷಕರಿಗೆ ಮಸ್ತ್ ಮನರಂಜನೆ ನೀಡುತ್ತಿದೆ. ಸೃಜನ್ ಲೋಕೇಶ್, ಕುರಿ ಪ್ರತಾಪ್ ಸೇರಿದಂತೆ ಹಲವು ಕಲಾವಿದರು ಸೇರಿಕೊಂಡು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದಾರೆ. ಈ ಶೋ ಈ ವೀಕೆಂಡ್ನಲ್ಲಿ ಎರಡು ಸಿನಿಮಾ ತಂಡಗಳನ್ನು ಒಟ್ಟಿಗೆ ಸೇರಿಸಿ ಮಹಾ ಸಂಚಿಕೆಯನ್ನು ಪ್ರಸಾರ ಮಾಡುತ್ತಿದೆ.
ಸ್ಯಾಂಡಲ್ವುಡ್ನ ವಿಕಟಕವಿ ಯೋಗರಾಜ್ ಭಟ್ ನಿರ್ದೇಶಿಸಿದ 'ಮುಂಗಾರು ಮಳೆ' ಕನ್ನಡ ಚಿತ್ರರಂಗಕ್ಕೆ ಮರು ಜೀವ ಕೊಟ್ಟ ಸಿನಿಮಾ. ಈ ಸಿನಿಮಾ ರಿಲೀಸ್ ಆಗಿ ಒಂದೂವರೆ ದಶಕಗಳಲಾಗಿವೆ. ಹೀಗಿದ್ದರೂ ಈ ಸಿನಿಮಾವನ್ನು ಸಿನಿಪ್ರಿಯರು ಮೊಮೊರಿಯಲ್ಲಿ ಕಳೆದು ಹೋಗಿಲ್ಲ. ಹೀಗಿರುವಾಗಲೇ ಯೋಗರಾಜ್ ಭಟ್ರು ಮಳೆಯ ಜೊತೆ ಜೊತೆಗೆ ಕಡಲಿನ ಕಡೆಗೆ ವಾಲಿದ್ದಾರೆ.

ಈ ವಿಶೇಷ ಸಂದರ್ಭದಲ್ಲಿ ಕಲರ್ಸ್ ಕನ್ನಡ ತಮ್ಮ ಜನಪ್ರಿಯ ಶೋ 'ಮಜಾ ಟಾಕೀಸ್'ನಲ್ಲಿ ಮುಂಗಾರು ಮಳೆಯ ನೆನಪನ್ನು ಮರುಕಳಿಸುವುದಕ್ಕೆ ಹೊರಟಿದೆ. ಅದಕ್ಕೆ ಪ್ರಮುಖ ಕಾರಣವೇ ಭಟ್ರ ಹೊಸ ಸಿನಿಮಾ 'ಮನದ ಕಡಲು'. ಈ ಎರಡೂ ತಂಡಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದೆ. ಯುಗಾದಿ ಹಬ್ಬಕ್ಕೆ ಕಿರುತೆರೆಯ ವೀಕ್ಷಕರನ್ನು ರಂಜಿಸುವುದಕ್ಕೆ ಈ ಎರಡು ತಂಡಗಳ ಮಹಾ ಸಮ್ಮಿಲನ ರೆಡಿಯಾಗಿದೆ.
ಇದೇ ಶನಿವಾರ (ಮಾರ್ಚ್ 29) ಸಂಜೆ 7.30ಕ್ಕೆ ಈ ವಿಶೇಷ ಮಹಾ ಸಂಚಿಕೆ ಮಹಾ ಟಾಕೀಸ್ ಪ್ರಸಾರ ಆಗುತ್ತಿದೆ. ಬರೋಬ್ಬರಿ ಮೂರು ಗಂಟೆಗಳ ಈ ಮಹಾ ಸಂಚಿಕೆಯಲ್ಲಿ ಮನೆಮಂದಿಗೆ ಮನರಂಜನೆಯ ಮಳೆಯನ್ನೇ ಹರಿಸಲಿದೆ. ಒಂದ್ಕಡೆ ಯುವ ಪ್ರತಿಭೆಗಳು. ಇನ್ನೊಂದು ಕಡೆ ಅನುಭವಿ ಪ್ರತಿಭೆಗಳು ಸೇರಿಕೊಂಡು ಕಿರುತೆರೆ ವೀಕ್ಷಕರಿಗೆ ಕಿಕ್ ಕೊಡಲಿದ್ದಾರೆ.
'ಮನದ ಕಡಲು' ಸಿನಿಮಾದ ಕಲಾವಿದರಾದ ಸುಮುಖ್, ಅಂಜಲಿ ಅನೀಶ್, ರಿಷಿಕಾ ಶೆಟ್ಟಿ ಹಾಗೇ 'ಮುಂಗಾರು ಮಳೆ' ಸಿನಿಮಾದ ಪೂಜಾ ಗಾಂಧಿ, ದಿಗಂತ್, ನೀನಾಸಂ ಅಶ್ವಥ್, ಸುಧಾ ಬೆಳವಾಡಿ, ಪದ್ಮಜಾ ರಾವ್, ಸಂಚಿತಾ ಶೆಟ್ಟಿಯವರು ಈ ಮಹಾ ಸಂಚಿಕೆಯಲ್ಲಿ ಭಾಗವಹಿಸಿದ್ದಾರೆ. ಹಾಗೆ 'ಮನದ ಕಡಲು' ಸಿನಿಮಾದಲ್ಲಿ ನಟಿಸಿರುವ ರಂಗಾಯಣ ರಘು, ನಿರ್ಮಾಪಕ ಈ ಕೃಷ್ಣಪ್ಪ, ಕಾರ್ಯಕಾರಿ ನಿರ್ಮಾಪಕ ಗಂಗಾಧರ್ ಈ ಮಹಾ ಸಂಚಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈ ಮಹಾ ಸಂಚಿಕೆಯಲ್ಲಿ 'ಮುಂಗಾರು ಮಳೆ' ಹಾಗೂ 'ಮನದ ಕಡಲು' ಸೂತ್ರಧಾರ ಯೋಗರಾಜ್ ಭಟ್ ಅವರ ಪಂಚರಂಗಿ ಮಾತುಗಳು, ಮುಂಗಾರು ಮಳೆ ಯೋಗ ಬದಲಿಸಿದ್ದು, ಮನದ ಕಡಲು ಸೃಷ್ಟಿಯಾಗಿದ್ದು ಇಲ್ಲಿ ರಿವೀಲ್ ಆಗುತ್ತಿದೆ. ಯೋಗರಾಜ್ ಭಟ್ಟರಿಂದ ಪ್ರೇಮ್ ಕಹಾನಿ ಕೂಡ ತೆರೆದುಕೊಳ್ಳಲಿದೆ. ಹಾಗೇ ರಂಗಾಯಣ ರಘು ಈ ಎರಡು ಚಿತ್ರಗಳ ರಸಮಯ ಕ್ಷಣಗಳನ್ನು ಹಂಚಿಕೊಂಡಿರುವುದು ಮಜಾ ಟಾಕೀಸ್ನ ಮಹಾ ಸಂಚಿಕೆಯ ಹೈಲೈಟ್.


Click it and Unblock the Notifications











