ಕಿರುತೆರೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವೃತ್ತಿ ಬದುಕು? ಸೇತುರಾಮ್ 'ಯುಗಾಂತರ'ದ ಕಥೆಯೇನು?
ಕರ್ನಾಟಕದ ಖಡಕ್ ಐಎಎಸ್ ಅಧಿಕಾರಿ ಎಂದೇ ಜನಪ್ರಿಯರಾಗಿರುವುದು ರೋಹಿಣಿ ಸಿಂಧೂರಿ. ಆದರೆ, ಇತ್ತೀಚೆಗಿನ ದಿನಗಳಲ್ಲಿ ರೋಹಿಣಿ ಸಿಂಧೂರಿ ವಿವಾದದಿಂದಲೇ ಸುದ್ದಿಯಲ್ಲಿದ್ದಾರೆ. ಅದರಲ್ಲೂ ಮೈಸೂರಿನ ಜಿಲ್ಲಾಧಿಕಾರಿಯಾಗಿದ್ದಾಗ ರೋಹಿಣಿ ಸಿಂಧೂರಿಯವರ ಮೇಲೆ ಸ್ಥಳೀಯ ರಾಜಕೀಯ ಮುಖಂಡರು ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು. ಸದ್ಯ ಮುಜರಾಯಿ ಇಲಾಖೆ ಆಯುಕ್ತೆಯಾಗಿ ರೋಹಿಣಿ ಸಿಂಧೂರಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಮೇಲೆ ಕೇಳಿ ಬಂದಿದ್ದ ಆರೋಪಗಳ ಸತ್ಯಾಸತ್ಯತೆಗಳನ್ನು ತಿಳಿಯಲು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಮುಜರಾಯಿ ಇಲಾಖೆಯ ಆಯುಕ್ತೆಯಾಗಿರುವ ರೋಹಿಣಿ ಸಿಂಧೂರಿ ಮೇಲೆ ಹಲವು ಆರೋಪಗಳು ಕೇಳಿ ಬಂದಿದ್ದವು. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ವೇಳೆ ಮಾರುಕಟ್ಟೆ ಬೆಲೆಗಿಂತಲೂ ಅಧಿಕ ಹಣ ನೀಡಿ ಪರಿಸರ ಸ್ನೇಹಿ ಬ್ಯಾಗ್ ಖರೀದಿ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿತ್ತು. ಜಿಲ್ಲಾಧಿಕಾರಿಗಳ ನಿವಾಸದಲ್ಲಿ 50 ಲಕ್ಷ ರೂ. ವೆಚ್ಚ ಮಾಡಿ ಅನಧಿಕೃತ ಈಜುಕೊಳ, ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸಂಭವಿಸಿದ ಸಾವುಗಳಿಗೆ ಸಿಂಧೂರಿ ನಿರ್ಧಾರ ಕಾರಣ ಎಂದು ಆರೋಪಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಕಿರುತೆರೆಯಲ್ಲಿ ರೋಹಿಣಿ ಸಿಂಧೂರಿಯವರ ವೃತ್ತಿ ಬದುಕನ್ನೇ ಆಧರಿಸಿ ಧಾರಾವಾಹಿಯನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತಿದೆ. ಕನ್ನಡದ ಮನೋರಂಜನಾ ವಾಹಿನಿ ಸಿರಿ ಕನ್ನಡದಲ್ಲಿ ಇಂದಿನಿಂದ ( ಮೇ 23) ಪ್ರಸಾರವಾಗಲಿರುವ 'ಯುಗಾಂತರ' ಧಾರಾವಾಹಿ ರೋಹಿಣಿ ಸಿಂಧೂರಿಯವರ ವೃತ್ತಿ ಬದುಕನ್ನೇ ಆಧರಿಸಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ಸಿರಿ ಕನ್ನಡ ರಿಲೀಸ್ ಮಾಡಿರುವ ಪ್ರೋಮೊಗಳೂ ಪುಷ್ಠಿ ನೀಡುತ್ತಿವೆ.

'ಯುಗಾಂತರ' ಸಿರೀಯಲ್ನ ಕಥೆಯೇನು?
ಇಂದಿನಿಂದ ( ಮೇ 23) ಸಿರಿ ಕನ್ನಡದಲ್ಲಿ 'ಯುಗಾಂತರ' ಎಂಬ ಧಾರಾವಾಹಿ ಪ್ರಸಾರವಾಗುತ್ತಿದೆ. 'ಮಾಯಾಮೃಗ'ದಂತಹ ಎವರ್ಗ್ರೀನ್ ಧಾರಾವಾಹಿಯಲ್ಲಿ ನಾರಾಯಣ ಮೂರ್ತಿ ಪಾತ್ರದಲ್ಲಿ ನಟಿಸಿದ್ದ ಎಸ್ ಎನ್ ಸೇತುರಾಂ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ತಂಡವೇ ಹೇಳಿರುವಂತೆ ಇದು ಅರುಂಧತಿ ಎಂಬ ಜಿಲ್ಲಾಧಿಕಾರಿ ಪಾತ್ರದ ಸುತ್ತ ನಡೆಯುವ ಸಾಮಾಜಿಕ ಹಾಗೂ ಭಾವ ಸಂಘರ್ಷದ ಸುತ್ತ ನಡೆಯುವ ಕಥೆ. ಈ ಕಾರಣಕ್ಕೆ 'ಯುಗಾಂತರ' ಧಾರಾವಾಹಿಯಲ್ಲಿ ರೋಹಿಣಿ ಸಿಂಧೂರಿಯವರ ಹಿನ್ನೆಲೆ ಇದೆ ಎನ್ನಲಾಗಿದೆ. ಅಲ್ಲದೆ ಕೆಲವು ಸನ್ನಿವೇಶಗಳು ಇದು ರೋಹಿಣಿ ಸಿಂಧೂರಿಯ ಕಥೆಯೇ ಎಂದು ಸಾರಿ ಹೇಳುವಂತಿದೆ.
ಜಿಲ್ಲಾಧಿಕಾರಿ ಪಾತ್ರವೇ ಪ್ರಮುಖ
ಎಸ್ ಎನ್ ಸೇತುರಾಂ ನಿರ್ದೇಶಿಸುತ್ತಿರುವ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ದಿವ್ಯ ಕಾರಂತ್ ಕಾಣಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಅರುಂಧತಿ ಎಂಬ ಜಿಲ್ಲಾಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರದ ವೇಷ- ಭೂಷಣ ಕೂಡ ರೋಹಿಣಿ ಸಿಂಧೂರಿಯವರನ್ನೇ ಹೋಲುತ್ತಿದೆ. ಹೀಗಾಗಿ ಇಂಡಸ್ಟ್ರಿಯಲ್ಲಿ ಈ ಧಾರಾವಾಹಿಯ ರೋಹಿಣಿ ಸಿಂಧೂರಿಯವರ ವೃತ್ತಿ ಬದುಕಿನಿಂದ ಪ್ರೇರಣೆಯಿಂದ ನಿರ್ಮಿಸಲಾಗಿದೆ ಎನ್ನುತ್ತಿದ್ದಾರೆ.

ಡೈಲಾಗ್ಗಳೇ ನೀಡುತ್ತಿವೆಯಾ ಸುಳಿವು?
"ಸರ್ಕಾರಿ ಸೇವೆಯಲ್ಲಿದ್ದೀಯಾ.. ಆ ವ್ಯಕ್ತಿಯ ವೈಯಕ್ತಿಕ ಒಡೆತನದಲ್ಲಿ ಇಲ್ಲ. ಆ ವ್ಯಕ್ತಿಯ ಮನೆ ಹೋಗಬೇಡ." ಎನ್ನು ತಾಯಿ. "ಪುಂಡ ಪೋಕರಿಗಳ ಊರಿದು.. ಒಂಟಿ ಹೆಂಗಸು ಕಷ್ಟವಾಗುತ್ತೆ." ಎನ್ನುವ ರಾಜಕೀಯ ವ್ಯಕ್ತಿ. "ನಾನು ಜಿಲ್ಲಾಧಿಕಾರಿ ಮಾತ್ರ ಅಲ್ಲ. ದಂಡಾಧಿಕಾರಿ ಕೂಡ, ನಾನು ಬಂದಿರುವುದು ಕಾಯೋಕೆ ಮೇಯೋಕೆ ಅಲ್ಲ" ಎನ್ನುವ ಐಎಎಸ್ ಅಧಿಕಾರಿ ಅರುಂಧತಿಯ ಡೈಲಾಗ್ಗಳು ಪ್ರೋಮೊದಲ್ಲಿವೆ. ಇವನೆಲ್ಲಾ ನೋಡಿದರೆ, ಇದು ರೋಹಿಣಿ ಸಿಂಧೂರಿ ಹಾಗೂ ಮೈಸೂರಿನ ಸ್ಥಳೀಯ ಶಾಸಕರ ನಡುವಿನ ಸಂಘರ್ಷ ಎಂದು ಎನಿಸುತ್ತೆ.
ಮೈಸೂರಿನಲ್ಲಿ 'ಯುಗಾಂತರ' ಪ್ರೆಸ್ ಮೀಟ್
ಎಸ್ ಎನ್ ಸೇತುರಾಂ ಅವರ ಕಥೆ, ಸಂಭಾಷಣೆಯ ಚಮತ್ಕಾರವೇ ಅದು. ಅದು ಈಗ ಬರುತ್ತಿರುವ ಧಾರಾವಾಹಿಗಳಂತಲ್ಲ. ಡೈಲಾಗ್ಗಳು ಹರಿತವಾಗಿರುತ್ತವೆ. ಒಂದೊಂದು ದೃಶ್ಯವೂ ಅಂತರಾಳದ ಕಥೆಯನ್ನು ಹೇಳುತ್ತವೆ. ಈ ಧಾರಾವಾಹಿ ಆರಂಭಕ್ಕೂ ಮುನ್ನ ಮೈಸೂರಿನಲ್ಲಿ ಪ್ರೆಸ್ ಮೀಟ್ ಮಾಡಲಾಗಿತ್ತು. ಈ ಧಾರಾವಾಹಿ ಪ್ರಸಾರವಾಗುತ್ತಿರುವ ಮುಖ್ಯಸ್ಥ ಕೂಡ ಮೈಸೂರಿನವರೇ. ಹೀಗಾಗಿ ರೋಹಿಣಿ ಸಿಂಧೂರಿಯವರ ಕಾರ್ಯವೈಖರಿಯಿಂದ ಪ್ರೇರಣೆ ಪಡೆದು ಈ ಧಾರಾವಾಹಿ ನಿರ್ಮಿಸಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಆದರೆ, ಪ್ರೆಸ್ ಮೀಟ್ಗಳಲ್ಲಿ ನಿರ್ದೇಶಕ ಎಸ್ ಎನ್ ಸೇತುರಾಂ ಆಗಲಿರಲಿ ಅಥವಾ ಸಿರಿ ಕನ್ನಡದವರಾಗಲಿ ಈ ಬಗ್ಗೆ ಎಲ್ಲೂ ಹೇಳಿಲ್ಲ. ಈ ಎಲ್ಲೆಡೆ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ಚಾನೆಲ್ ಮುಖ್ಯಸ್ಥರು ಪ್ರತಿಕ್ರಿಯೆ ನೀಡುತ್ತಾರಾ? ಅನ್ನೋದು ಕಾದು ನೋಡಬೇಕಿದೆ.


Click it and Unblock the Notifications











