'ಯುಗಾಂತರ' ಧಾರಾವಾಹಿಗೆ ಪ್ರಾಮಾಣಿಕ ಐಎಎಸ್ ಅಧಿಕಾರಿ ಪ್ರೇರಣೆ: ವಾಹಿನಿ ಮುಖ್ಯಸ್ಥರ ಸ್ಪಷ್ಟನೆಯೇನು?
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತೆ ಸುದ್ದಿಯಲ್ಲಿರೋದಂತೂ ನಿಜ. ಒಂದು ಕಡೆ ಸರ್ಕಾರ ರೋಹಿಣಿ ಸಿಂಧೂರಿಯವರ ಮೇಲಿನ ಆರೋಪಗಳಿಗೆ ತನಿಖೆ ನಡೆಸುವಂತೆ ಆದೇಶಿಸಿದೆ. ಈ ಬೆಳವಣಿಗೆಯ ಬಳಿಕ ಜನರು ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಇದೇ ವೇಳೆ ಮನೋರಂಜನಾ ವಾಹಿನಿಯಲ್ಲಿ ರೋಹಿಣಿ ಸಿಂಧೂರಿಯವರ ವೃತ್ತಿ ಬದುಕಿನಿಂದ ಪ್ರೇರಣೆ ಪಡೆದು ಧಾರಾವಾಹಿ ಮಾಡಿದ್ದಾರೆ ಸುದ್ದಿ ಕೂಡ ಚರ್ಚೆಯಲ್ಲಿದೆ.
ಅಸಲಿಗೆ ಸಿರಿ ಕನ್ನಡದಲ್ಲಿ ಪ್ರಸಾರ ಆಗುವ ಧಾರಾವಾಹಿ 'ಯುಗಾಂತರ' ಇಂತಹದ್ದೊಂದು ಹಲ್ಚಲ್ ಎಬ್ಬಿಸಿದೆ. ರೋಹಿಣಿ ಸಿಂಧೂರಿಯವರ ಕಾರ್ಯ ವೈಖರಿಯಿಂದ ಪ್ರೇರಣೆ ಪಡೆದು ಈ ಸೀರಿಯಲ್ ಮಾಡುತ್ತಿದ್ದಾರೆ ಎಂದು ಗುಲ್ಲೆದ್ದಿದೆ. ಅದಕ್ಕೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿರುವುದು 'ಮಾಯಾಮೃಗ'ದಂತಹ ಧಾರಾವಾಹಿಯಲ್ಲಿ ನಟಿಸಿರುವ ಎಸ್ ಎನ್ ಸೇತುರಾಮ್. ಈ ಎಲ್ಲಾ ಗೊಂದಲಗಳಿಗೆ ಮನೋರಂಜನಾ ವಾಹಿನಿಯ ಮುಖ್ಯಸ್ಥರೇ ಫಿಲ್ಮಿ ಬೀಟ್ಗೆ ಸ್ಪಷ್ಟನೆ ನೀಡಿದ್ದಾರೆ.

'ಯುಗಾಂತರ' ಧಾರಾವಾಹಿಯ ಕಥೆಯೇನು?
ಯುಗಾಂತರ ರೋಹಿಣಿ ಸಿಂಧೂರಿ ವೃತ್ತಿ ಬದುಕನ್ನು ಆಧರಿಸಿದ ಕಥೆ ಎಂದು ಸುದ್ದಿ ಹಬ್ಬಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಿರಿ ಕನ್ನಡ ವಾಹಿನಿಯ ಮುಖ್ಯಸ್ಥ ರಾಜೇಶ್ ರಾಜಘಟ್ಟ ಸ್ಪಷ್ಟನೆ ನೀಡಿದ್ದಾರೆ. "ರೋಹಿಣಿ ಸಿಂಧೂರಿ ಹಾಗೂ ನಮ್ಮ ಸೀರಿಯಲ್ಗೂ ಸಂಬಂಧವಿಲ್ಲ. ಇಡೀ ಕಥೆಯಲ್ಲಿ ಒಂದು ಹೆಣ್ಣು, ಐಎಎಸ್ ಮಟ್ಟದಲ್ಲಿ ಬೆಳೆದಿರುವವರಿಗೆ ಏನೆಲ್ಲಾ ಸಂಕಷ್ಟ ಎದುರಾಗುತ್ತೆ ಹೇಳಲಾಗಿದೆ. ಸೇತುರಾಮ್ ಸರ್ ಕೂಡ ಇದನ್ನೇ ಹೇಳಲು ಹೊರಟಿದ್ದಾರೆ. ಅದರಲ್ಲೂ ಸುಂದರವಾದ ಹೆಣ್ಣು ಒಂದೊಳ್ಳೆ ಪೊಸಿಷನ್ಗೆ ಹೋಗುತ್ತಾರೆ ಎಂದರೆ, ಖಂಡಿತಾ ಅದನ್ನು ಇನ್ನೂ ಸಹಿಸಿಕೊಳ್ಳುವುದಿಲ್ಲ. ತುಂಬಾ ಪ್ರಾಮಾಣಿಕರಿಗೆ ತುಳಿಯುವುದಕ್ಕೆ ಟ್ರೈ ಮಾಡುತ್ತಾರೆ ಎನ್ನುವುದನ್ನು ಹೇಳಲು ಹೊರಟಿದ್ದಾರೆ." ಎನ್ನುತ್ತಾರೆ.

ಹೆಣ್ಣು ಮಕ್ಕಳೇ ಪ್ರೇರಣೆ
"ಪ್ರೇರಣೆ ಅಂದರೆ, ಎಲ್ಲಾ ಹೆಣ್ಣು ಮಕ್ಕಳು ಐಎಎಸ್ ಆಫೀಸರ್ನಿಂದ ಹಿಡಿದು, ಎಲ್ಲಾ ಪೊಸಿಷನ್ನಲ್ಲಿ ಇರುವವರೇ 'ಯುಗಾಂತರ'ಕ್ಕೆ ಪ್ರೇರಣೆ. ಎಲ್ಲಾ ಕಡೆನೂ ಇಂತಹದ್ದೇ ಒಂದು ರೂಮರ್ ಹಬ್ಬಿತ್ತು. ನಾವು ಸೀರಿಯಲ್ ಶುರು ಮಾಡಬೇಕಾದರೆನೇ ಹಬ್ಬಿತ್ತು. ರೋಹಿಣಿ ಸಿಂಧೂರಿಯವರ ಫ್ಯಾನ್ಸ್ ಪೇಜ್ನಲ್ಲಿ ನಮ್ಮ ನಾಯಕಿ ಪಾತ್ರದ ಮಾಡುತ್ತಿರುವ ದಿವ್ಯ ಕಾರಂತ್ ಅವರಿಗೆ ಮೆಸೇಜ್ ಮಾಡಿದ್ದಾರೆ. 'ಯುಗಾಂತರ' ಸೀರಿಯಲ್ ಪೇಜ್ ಇದೆ. ಅದಕ್ಕೂ ಕೂಡ ಮೆಸೇಜ್ ಮಾಡಿ ಇದು ರೋಹಿಣಿ ಸಿಂಧೂರಿಯವರ ಕಥೆನಾ ಅಂತ ಹೇಳಿದ್ದಾರೆ."

ಐಎಎಸ್ ಆಫೀಸರ್ಗಳೇ ಕೇಳಿದ್ರು
"ಐಎಎಸ್ ಆಫೀಸರ್ ಅಂತ ತೋರಿಸುತ್ತಿದ್ದರಿಂದ ಕೆಲವರು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳೂ ಕೂಡ ಇದು ರೋಹಿಣಿ ಸಿಂಧೂರಿಯವರ ಕಥೆನಾ ಅಂತ ಕೇಳಿದ್ದೂ ಇದೆ. ನಾವು ಇಲ್ಲಾ ಅಂತ ಹೇಳಿದರೂ, ಆ ಡೌಟ್ ಇದ್ದೇ ಇದೆ. ಇದಕ್ಕೆ ಉತ್ತರ ಸೀರಿಯಲ್ ನೋಡಿದ ಮೇಲೆ ಗೊತ್ತಾಗುತ್ತೆ. ಆದರೆ, ಬಹಳಷ್ಟು ಮಂದಿಗೆ ಈ ಅನುಮಾನ ಇದ್ದೇ ಇದೆ. ಈಗ ತಾನೇ ಶುರುವಾಗಿದೆ. ಯಾರಿಗೇ ಎಷ್ಟೇ ಕ್ಲಾರಿಟಿ ಕೊಟ್ಟರೂ ನಂಬುತ್ತಿಲ್ಲ. ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ ಅನಿಸುತ್ತೆ. ಎಲ್ಲರಿಗೂ ಇನ್ನೂ ಆ ಡೌಟ್ ಇದ್ದೇ ಇದೆ. ಸೇತುರಾಮ್ ಸರ್ ಕೂಡ ಯಾರನ್ನೂ ಇಟ್ಟುಕೊಂಡು ಸೀರಿಯಲ್ ಮಾಡಿಲ್ಲ. ಆದರೆ, ಸಮಾಜದಲ್ಲಿ ಪ್ರಸ್ತುತ ಏನು ನಡೆಯುತ್ತಿದೆಯೋ, ಅದನ್ನೇ ಇಟ್ಟುಕೊಂಡು ಕಥೆ ಮಾಡಿದ್ದಾರೆ. ಆದರೆ, ಮೈಸೂರಿನಲ್ಲೇ ಪ್ರೆಸ್ ಮಾಡಿದ್ದು, ಇಷ್ಟೆಲ್ಲಾ ಅನುಮಾನಕ್ಕೆ ಕಾರಣ ಅಂತ ಅನಿಸುತ್ತಿದೆ."

'ಯುಗಾಂತರ' ಸಿಕ್ಕ ಪ್ರತಿಕ್ರಿಯೆ ಏನು?
"ನೀವು ಮಾಡಿದ ಆರ್ಟಿಕಲ್ ತುಂಬಾನೇ ಇಂಪ್ಯಾಕ್ಟ್ ಆಗಿದೆ. ನಮ್ಮ ಧಾರಾವಾಹಿಯಲ್ಲಿ ಐಎಎಸ್ ಅಧಿಕಾರಿ ಪಾತ್ರ ಮಾಡುತ್ತಿರುವ ದಿವ್ಯ ಕಾರಂತ್ ಅವರೂ ಕೇಳಿದ್ದರು. ಹೀಗೆ ಬರೆದಿದ್ದಾರೆ ಅಂತ. ಮತ್ತೆ ಕೆಲವರು ಕೇಳುತ್ತಿದ್ದಾರೆ. ಬೆದರಿಕೆ ಕರೆಗಳನ್ನು ಬಂದರೆ ನಿಲ್ಲಿಸುತ್ತೀರಾ ಅಂತ. ನಮಗೆ ಇದೂವರೆಗೂ ಅಂತ ಕರೆಗಳು ಬಂದಿಲ್ಲ. ಬಂದರೂ ಕೂಡ ನಾವು ನಿಲ್ಲಿಸುವುದಿಲ್ಲ. ಒಂದಂತೂ ಸತ್ಯ ಇದು ಯಾರಿಗೂ ಸಂಬಂಧಪಟ್ಟಿದ್ದಲ್ಲ." ಎಂದು ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











