ಮಹಾಶಿವರಾತ್ರಿಗೆ ಕಿರುತೆರೆಯಲ್ಲಿ ನೋಡಿ ಕ್ಷೇತ್ರಪತಿ; ಎಲ್ಲಿ? ಯಾವಾಗ? ಇಲ್ಲಿದೆ ಡಿಟೈಲ್ಸ್
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿದ್ದು ನವೀನ್ ಶಂಕರ್. 'ಗುಲ್ಟು' ಮೂಲಕ ವಿಭಿನ್ನ ಸಿನಿಮಾಗಳನ್ನು ಪರಿಚಯಿಸುತ್ತಲೇ ಮುಂದೆ ಸಾಗುತ್ತಿದ್ದಾರೆ. ನವೀನ್ ಶಂಕರ್ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಸದ್ದು ಮಾಡದೇ ಹೋದರೂ, ಅವರ ಸಿನಿಮಾಗಳನ್ನು ಒಂದು ವರ್ಗವನ್ನಂತೂ ತಲುಪುತ್ತಿವೆ. ಅಂತಹ ಸಿನಿಮಾಗಳಲ್ಲಿ 'ಕ್ಷೇತ್ರಪತಿ' ಕೂಡ ಒಂದು.
'ಕ್ಷೇತ್ರಪತಿ' ಸಿನಿಮಾದಲ್ಲಿ ನವೀನ್ ಶಂಕರ್ ಪರ್ಫಾಮೆನ್ಸ್ಗೆ ಪ್ರೇಕ್ಷಕರು ಭೇಷ್ ಎಂದಿದ್ದರು. ಸಿನಿಮಾದಲ್ಲಿ ರೈತರ ಗಂಭೀರ ವಿಷಯಗಳನ್ನು ಜನರ ಮುಂದೆ ಇಡಲಾಗಿತ್ತು. ಇತ್ತೀಚೆಗೆ ಬರುತ್ತಿರುವ ಸಿನಿಮಾಗಳು ಮನರಂಜನೆಗೆ ಹೆಚ್ಚು ಒತ್ತು ಕೊಡುತ್ತಿವೆ. ಆದರೆ, ನವೀನ್ ಸಿನಿಮಾಗಳು ಮನರಂಜನೆಯ ಜೊತೆ ಜೊತೆಗೆ ಗಂಭೀರ ವಿಷಯಗಳನ್ನೂ ಚರ್ಚೆ ಮಾಡುತ್ತೆ.

'ಕ್ಷೇತ್ರಪತಿ' ಅಪ್ಪಟ ಕನ್ನಡದ ಸಿನಿಮಾ. ಇಲ್ಲಿನ ಮಣ್ಣಿನ ಮಕ್ಕಳ ಸಿನಿಮಾ. ಅವರ ಸಂಕಷ್ಟಗಳನ್ನು ಎತ್ತಿ ತೋರಿಸಿದ ಸಿನಿಮಾ. 'ಕ್ಷೇತ್ರಪತಿ'ಯ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ನವೀನ್ ಶಂಕರ್ ಪರ್ಫಾಮೆನ್ಸ್ ನೋಡಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಜನರು ಕಾಮೆಂಟ್ ಮಾಡಿದಂತೆ ಥಿಯೇಟರ್ಗೆ ಬಂದು ನೋಡಿ ಮೆಚ್ಚುಗೆ ಸೂಚಿಸಿದ್ದು ಕಡಿಮೆ. ಆದರೆ, ಯಾರೆಲ್ಲ ಈ ಸಿನಿಮಾವನ್ನು ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡಿದ್ದಿರೋ ಅವರಿಗೆಲ್ಲ ಮತ್ತೊಂದು ನೋಡುವ ಅವಕಾಶವಿದೆ.
ನವೀನ್ ಶಂಕರ್ಗೆ ಚಿತ್ರರಂಗದಲ್ಲಿ ಹೊಸ ಇಮೇಜ್ ಕೊಟ್ಟ ಸಿನಿಮಾ 'ಕ್ಷೇತ್ರಪತಿ' ಕಿರುತೆರೆಯಲ್ಲಿ ಪ್ರಸಾರ ಆಗಲಿದೆ. ಕಲರ್ಸ್ ಕನ್ನಡದಲ್ಲಿ ಶಿವರಾತ್ರಿ ಹಬ್ಬಕ್ಕೆ ಈ ಸಿನಿಮಾವನ್ನು ಪ್ರಸಾರ ಮಾಡುವ ಬಗ್ಗೆ ಪ್ರೋಮೋ ಕೂಡ ರಿಲೀಸ್ ಆಗಿದೆ. ನವೀನ್ ಶಂಕರ್ ಜೊತೆಗೆ ಕೆ ಜಿ ಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ನೀಡಿದ್ದಾರೆ.

'ಕ್ಷೇತ್ರಪತಿ' ಸಿನಿಮಾ ಕಲರ್ಸ್ ಕನ್ನಡದಲ್ಲಿ ಶಿವರಾತ್ರಿ ಹಬ್ಬದಂದು ಮಧ್ಯಾಹ್ನ ಎರಡು ಗಂಟೆಗೆ ಪ್ರಸಾರ ಆಗಲಿದೆ. ಶ್ರೀಕಾಂತ ಕಟಗಿ ನಿರ್ದೇಶನದ ಈ ಸಿನಿಮಾ ರೈತರ ಸಮಸ್ಯೆಗಳ ಬಗ್ಗೆ ಸಮಾಜದ ಗಮನ ಸೆಳೆದಿದೆ. ರೈತ ಪರವಾಗಿ ನಿಂತಿರುವ ಸಿನಿಮಾ ಎಂದು ವಿಮರ್ಶಕರಿಂದ ಜನ ಮನ್ನಣೆಯನ್ನು ಪಡೆದುಕೊಂಡಿತ್ತು. ಇಂತಹ ಉತ್ತಮ ಸಿನಿಮಾವನ್ನು ಮನೆಯಲ್ಲಿಯೇ ನೋಡಿ ಆನಂದಿಸಬಹುದು.
ಇನ್ನು 'ಕ್ಷೇತ್ರಪತಿ' ಕಥೆಯ ಕಡೆಗೆ ಬರೋದಾರೆ, ಕಥಾನಾಯಕ ಬಸವ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಅಮೆರಿಕದಲ್ಲಿ ಬದುಕು ಕಟ್ಟಿಕೊಳ್ಳುವ ಆಸೆ. ತಂದೆಯ ಸಾವು ಅವನನ್ನು ಮತ್ತೆ ತನ್ನ ಗ್ರಾಮಕ್ಕೆ ಕರೆದುಕೊಂಡು ಬರುವಂತೆ ಮಾಡುತ್ತೆ. ಬಸನ ತಂದೆ ಬೆಳೆದ ಬೆಳೆ ಈರುಳ್ಳಿ ಬೆಲೆ ಕುಸಿಯುತ್ತೆ. ಇದರಿಂದ ಬ್ಯಾಂಕ್ನಲ್ಲಿ ಮಾಡಿದ ಸಾಲವನ್ನು ತೀರಿಸುವುದಕ್ಕೆ ಆಗುವುದಿಲ್ಲ. ಸಾಲಕ್ಕೆ ಹೆದರಿ ಬಸವನ ತಂದೆ ಉರುಳು ಹಾಕಿಕೊಳ್ಳುತ್ತಾರೆ. ಈ ಘಟನೆ ಬಸವನ ನಿರ್ಧಾರವನ್ನು ಬದಲಿಸುತ್ತೆ.
ಬಸವ ಇಂಜಿನಿಯರಿಂಗ್ ಶಿಕ್ಷಣಕ್ಕೆ ಗುಡ್ಬಾಯ್ ಹೇಳುವುದಕ್ಕೆ ನಿರ್ಧರಿಸುತ್ತಾನೆ. ಹಳ್ಳಿಯಲ್ಲಿಯೇ ಉಳಿದುಕೊಂಡು ಕೃಷಿ ಮಾಡುವುದಕ್ಕೆ ಮುಂದಾಗುತ್ತಾನೆ. ಬಸವನ ಈ ನಿರ್ಧಾರಕ್ಕೆ ಆತನ ಸುತ್ತಮುತ್ತ ಇರುವವರೆಲ್ಲರೂ ವಿರೋಧ ವ್ಯಕ್ತಪಡಿಸುತ್ತಾರೆ. ಆದರೂ ದಿಟ್ಟ ನಿರ್ಧಾರ ಮಾಡುವ ಬಸವನ ಮುಂದಿನ ಹಾದಿ ಹೇಗಿರುತ್ತೆ? ಏನೆಲ್ಲ ಬದಲಾವಣೆಗಳು ಆಗುತ್ತವೆ ಅನ್ನೋದು ಸಿನಿಮಾದ ಕಥೆ.
ಇದೇ ಸಿನಿಮಾದಲ್ಲಿ ಬಸವ ಕೇಳುವ ಪ್ರಶ್ನೆಯೇ ಹೈಲೈಟ್. "ರೈತ ನಮ್ಮ ದೇಶದ ಬೆನ್ನೆಲುಬು, ಲಿವರ್, ಕಿಡ್ನಿ, ಜಠರ ಎಂದೆಲ್ಲ ಹೇಳಿ ನಮ್ಮನ್ನು ಉಬ್ಬಿಸಿ ಬಿಟ್ಟಿದ್ದಾರೆ. ಆದರೆ ನಮಗೇನು ಬೇಕು ಎಂದು ಈವರೆಗೆ ಯಾರಾದ್ರೂ ನಮ್ಮನ್ನು ಕೇಳಿದ್ದರೇನು?' ಎನ್ನುವ ಪ್ರಶ್ನೆ ಸಿನಿಮಾ ನೋಡಿದ ಬಳಿಕವೂ ಕಾಡುತ್ತೆ. ಉತ್ತರ ಕರ್ನಾಟಕದ ಜವಾರಿ ಭಾಷೆಯನ್ನು ಇಲ್ಲಿ ನೋಡಬಹುದು. ಇದೇ ಶಿವರಾತ್ರಿಗೆ ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು 'ಕ್ಷೇತ್ರಪತಿ' ಸಿನಿಮಾವನ್ನು ಟಿವಿಯಲ್ಲಿ ನೋಡಿ.


Click it and Unblock the Notifications











