Kichcha Sudeep: ಬಿಗ್ಬಾಸ್ಗೆ ಗುಡ್ಬೈ ಹೇಳಲು ನಿರ್ಧರಿಸಿದ್ದ ಕಿಚ್ಚ ಸುದೀಪ್.. ಆ ಸೀಸನ್ ಯಾವುದು? ಅಂದು ಆಗಿದ್ದೇನು?
ಬಿಗ್ಬಾಸ್ ಕನ್ನಡ ಸೀನಸ್ 10 ರಿಯಾಲಿಟಿ ಶೋಗೆ ಇನ್ನೇನು ದಿನಗಣನೆ ಶುರುವಾಗಿದೆ. ಅಕ್ಟೋಬರ್ 8ರಿಂದ ಬಿಗ್ಬಾಸ್ ಸೀಸನ್ 10 ಅದ್ಧೂರಿಯಾಗಿಯೇ ಆರಂಭ ಆಗುತ್ತಿದೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಬಿಗ್ ಬಾಸ್ ಸೀಸನ್ 10 ವಿಭಿನ್ನವಾಗಿರುತ್ತೆ ಅನ್ನೋದನ್ನು ಕಲರ್ಸ್ ಕನ್ನಡ ಈಗಾಗಲೇ ಹೇಳಿದೆ. ಕಿಚ್ಚ ಸುದೀಪ್ ಕೂಡ ಖುಷಿ ಖುಷಿಯಿಂದಲೇ ನಿರೂಪಣೆ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ, ಒಮ್ಮೆ ಬಿಗ್ ಬಾಸ್ ಬಿಡೋಣ ಅಂತ ನಿರ್ಧರಿಸಿದ್ದರಂತೆ. ಅದ್ಯಾವ ಸೀಸನ್? ಬಿಟ್ಟು ಬಿಡೋಣ ಅಂತ ನಿರ್ಧರಿಸಿದ್ದು ಯಾಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಬಿಟ್ಟರೆ ಬೇರೆ ಯಾರೂ ಬಿಗ್ಬಾಸ್ ನಿರೂಪಣೆ ಮಾಡುವುದಕ್ಕೆ ಸಾಧ್ಯವೇ ಇಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ಸುದೀಪ್ ಜಾಗದಲ್ಲಿ ನಿಂತು ಇಂತಹ ರಿಯಾಲಿಟಿ ಶೋವನ್ನು ಯಾರು ನಡೆಸಿಕೊಡಬಹುದು ಅನ್ನೋದನ್ನು ಅಂದಾಜು ಮಾಡುವುದಕ್ಕೂ ಸಾಧ್ಯವಿಲ್ಲ. ಆದರೂ, ಸುದೀಪ್ ಬಿಗ್ಬಾಸ್ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಖುಷಿ ಖುಷಿಯಿಂದ ಸೆಟ್ಟಿಗೆ ಹೋಗುತ್ತಿದ್ದೆ"
ಕಿಚ್ಚ ಸುದೀಪ್ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಪ್ರೀತಿ ನಡೆಸಿಕೊಡುತ್ತಾರೆ ಅನ್ನೋದೇ ಎಲ್ಲರ ಅಭಿಪ್ರಾಯ. ಅವರು ಕೂಡ ಖುಷಿ ಖುಷಿಯಿಂದ ಬಿಗ್ ಬಾಸ್ ನಿರೂಪಣೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. "ನಾನು ಯಾವಾಗಲೂ ಖುಷಿ ಖುಷಿಯಿಂದ ಸೆಟ್ಟಿಗೆ ಓಡುತ್ತಿದೆ. ನಾನು ಹೈದರಾಬಾದ್, ಚೆನ್ನೈ, ಮುಂಬೈ ಎಲ್ಲೇ ಇರಲಿ. ಅಲ್ಲಿಂದ ನಾನು ಖುಷಿ ಖುಷಿಯಾಗಿಯೇ ಹೋಗುತ್ತಿದೆ. ಅದ್ಯಾಕೋ ಆ ಸೀಸನ್ ಆದ್ಮೇಲೆ ಅದೇನೋ ನನಗೆ ಬೇಡ ಸಾಕು ಅಂತ ಅನಿಸಿಬಿಟ್ಟಿತ್ತು." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಬಿಗ್ ಬಾಸ್ ಬಿಡಬೇಕು ಅನಿಸಿದ್ದೇಕೆ?
"ಆ ಸೀಸನ್ನಲ್ಲಿ ಆದ ಗಲಾಟೆ ಇರಬಹುದು. ಇನ್ನೊಂದು ಇರಬಹುದು. ಅದೇನೋ ಮುಗಿಯುತ್ತಲೇ ಇರಲಿಲ್ಲ. ನನಗೆ ತಿವಿದಂತೆ ಆಗುತ್ತಿತ್ತು. ನಾನು ಪರಂ ಜೊತೆ ಕೂತು ಈ ಮಾತು ಹೇಳಿದ್ದೆ. ಆಗ ಪರಂ ಏನೂ ಉತ್ತರ ಕೊಡದೇ ಹೋಗಿದ್ದೂ ಇದೆ. ಮುಂದಿನ ಸೀಸನ್ ಒಪ್ಪಿಸುವುದಕ್ಕೆ ಬಂದಾಗ ಬಹಳ ಟೈಮ್ ತೆಗೆದುಕೊಂಡಿದ್ದಾರೆ. ಆದರೆ, ನಾನು ಒಪ್ಪಿರಲಿಲ್ಲ." ಎಂದು ಕಿಚ್ಚ ಸುದೀಪ್ ಆ ದಿನವನ್ನು ನೆನೆದಿದ್ದಾರೆ.
ಯಾವುದು ಆ ಸೀಸನ್?
ಕಿಚ್ಚನಿಗೆ ಒಂದು ಸೀಸನ್ ತುಂಬಾನೇ ಒತ್ತಡ ಹೇರಿತ್ತು. ಅದಕ್ಕೆ ಬಿಗ್ ಬಾಸ್ ಅನ್ನು ಬಿಡುವುದಕ್ಕೆ ನಿರ್ಧರಿಸಿದ್ದರು. "ಸೀಸನ್ 6 ಮುಗಿದಾಗ ಪರಮೇಶ್ವರ್ ಗುಂಡ್ಕಲ್ಗೆ ಹೇಳಿದ್ದೆ. ನನಗೆ ಸಾಕಿದು ಅಂದಿದ್ದೆ. ನಾನು ಇದನ್ನು ಓಪನ್ ಆಗಿಯೇ ಹೇಳುತ್ತಿದ್ದೇನೆ. ಇದರ ಅರ್ಥ ಆ ಸೀಸನ್ನಲ್ಲಿದ್ದ ಸ್ಪರ್ಧಿಗಳ ಬಗ್ಗೆ ಕೆಟ್ಟ ಅಭಿಪ್ರಾಯವಿದೆ ಅಂತಲ್ಲ. ನನಗೆ ಗೊತ್ತಿಲ್ಲ ಯಾವುದೋ ಕಾರಣಕ್ಕೆ ಆ ಸೀಸನ್ ನನಗೆ ತುಂಬಾನೇ ಒತ್ತಡ ಕೊಡ್ತು." ಎಂದಿದ್ದಾರೆ.
ಸೀಸನ್ 7 ನಿಂದ ಎಲ್ಲವೂ ವಿಭಿನ್ನ
"ಆದರೆ, ಮತ್ತೆ ಬಂದಿದ್ದಕ್ಕೆ ನನಗೆ ಖುಷಿಯಿದೆ. ಸೀಸನ್ 7 ತುಂಬಾನೇ ಚೆನ್ನಾಗಿತ್ತು. ಅಲ್ಲಿಂದ ಇಲ್ಲಿವರೆಗೂ ವಿಭಿನ್ನತೆ ಅನ್ನೋದು ಇದೆ. ಹಾಗೇ ಸ್ಪರ್ಧಿಗಳಿಗೂ ಆ ಕ್ರೆಡಿಟ್ ಕೊಟ್ಟೇ ಕೊಡುತ್ತೇನೆ. ಒಮ್ಮೆ ಆಗಿತ್ತು. ಇಲ್ಲ ಅಂತ ಹೇಳುತ್ತಿಲ್ಲ. ಆದರೆ, ಅದು ನನ್ನ ಕೆಲಸದಿಂದ, ಸುಸ್ತಾಗಿತ್ತು ಅಂತ ಹೇಳುವುದಕ್ಕೆ ಆಗುವುದಿಲ್ಲ. ನನಗೆ ಕೆಲಸ ಮಾಡಿ ಸುಸ್ತಾಗುವುದು ಎಂದರೆ ಇಷ್ಟ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.


Click it and Unblock the Notifications











