'ಸರಿಗಮಪ ಚಾಂಪಿಯನ್ಸ್' ಗೆದ್ದವರಿಗೆ ಮ್ಯೂಸಿಕ್ ಮಾಂತ್ರಿಕ ಎ ಆರ್ ರೆಹಮಾನ್ ಶುಭಾಶಯ
ಜೀ ಕನ್ನಡದ ಮ್ಯೂಸಿಕ್ ರಿಯಾಲಿಟಿ ಶೋ 'ಸರಿಗಮಪ ಚಾಂಪಿಯನ್ಸ್' ಗ್ರ್ಯಾಂಡ್ ಫಿನಾಲೆ ಮುಗಿದಿದೆ. ಫೆಬ್ರವರಿ 26ರಂದು ಅದ್ಧೂರಿ ವೇದಿಕೆ ಮೇಲೆ ಈ ಸಂಗೀತ ಸಮಯವನ್ನು ನೇರಪ್ರಸಾರ ಮಾಡಲಾಗಿತ್ತು. ಆರು ತಂಡಗಳು ನೇರ ಪ್ರಸಾರದಲ್ಲಿ ಗೆಲುವಿಗಾಗಿ ಸಂಗೀತ ಸುಧೆಯನ್ನೇ ಹರಿಸಿದ್ದರು. ವೀಕೆಂಡ್ನಲ್ಲಿ ಸಂಗೀತದ ಜೊತೆ ಜೊತೆಗೆ ಮನರಂಜನೆ ಕೂಡ ಸಿಕ್ಕಿತ್ತು.
ಜೀ ಕನ್ನಡ 'ಸರಿಗಮಪ ಚಾಂಪಿಯನ್ಸ್' ಎಂದಿನಂತೆ ಪ್ರತಿವರ್ಷ ಈ ಕಾರ್ಯಕ್ರಮ ನಡೆಸುತ್ತಾ ಬಂದಿದೆ. ಜೀ ಕನ್ನಡಕ್ಕೆ ಈ ಬಾರಿ 'ಸರಿಗಮಪ ಚಾಂಪಿಯನ್ಸ್' ವಿಶೇಷ. ವಿಶ್ವದ ಶ್ರೇಷ್ಟ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ಎ ಆರ್ ರೆಹಮಾನ್ ಈ 'ಸರಿಗಮಪ ಚಾಂಪಿಯನ್ಸ್'ನಲ್ಲಿ ಗೆದ್ದವರಿಗೆ ಶುಭ ಕೋರಿದ್ದಾರೆ. ಸಂಗೀತ ಕಾರ್ಯಕ್ರಮದ ಗಾಯಕರು ಸೇರಿದಂತೆ, ಜೀ ಕನ್ನಡ ಈ ಅನಿರೀಕ್ಷಿತ ಶುಭಾಶಯ ಕಂಡು ಥ್ರಿಲ್ ಆಗಿದೆ.

'ಚಾಂಪಿಯನ್ಸ್'ಗೆ ರೆಹಮಾನ್ ಶುಭಾಶಯ
ಫೆಬ್ರವರಿ 26ರಂದು ನಡೆದ 'ಸರಿಗಮಪ ಚಾಂಪಿಯನ್ಸ್' ಗ್ರ್ಯಾಂಡ್ ಫಿನಾಲೆಯಲ್ಲಿ ಆರು ತಂಡಗಳಿಂದ 36 ಸ್ಪರ್ಧಿಗಳು ಭಾಗವಹಿಸಿದ್ದರು. ಇವರಲ್ಲಿ ಒಂದು ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದರು. ಎರಡು ತಂಡಗಳು ಮೊದಲನೇ ರನ್ನರ್ ಅಪ್ ಹಾಗೂ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿವೆ. ಅಲ್ಲದೆ ಇಬ್ಬರು ಗಾಯಕರಿಗೆ ವಿಶೇಷ ಪ್ರಶಸ್ತಿಯನ್ನು ನೀಡಲಾಗಿತ್ತು. ಇವರೆಲ್ಲರಿಗೂ ಎ.ಆರ್ ರೆಹಮಾನ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. " ಜೀ ಕನ್ನಡದ ಸರಿಗಮಪ ಗ್ರ್ಯಾಂಡ್ ಫಿನಾಲೆಯಲ್ಲಿ ಗೆದ್ದವರಿಗೆಲ್ಲರಿಗೂ ಶುಭಾಶಯಗಳು. ಹಾಗೇ ಈ ಇಡೀ ಸೀಸನ್ನಲ್ಲಿ ಈ ಕಾರ್ಯಕ್ರಮದ ಭಾಗವಾಗಿದ್ದ ದಿ ಸನ್ ಶೈನ್ ಆರ್ಕೆಸ್ಟ್ರಾಗೂ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ.

ಜೀ ಕನ್ನಡ ಪ್ರತಿಕ್ರಿಯೆ
ಸರಿಗಮಪ ಚಾಂಪಿಯನ್ಸ್ಗೆ ಶುಭಕೋರಿದ ಸಂಗೀತ ದಿಗ್ಗಜ ಎ. ಆರ್ ರೆಹಮಾನ್ಗೆ ಟ್ವೀಟ್ಗೆ ಜೀ ಕನ್ನಡ ಪ್ರತಿಕ್ರಿಯಿಸಿದೆ. "ಸರಿಗಮಪ ಚಾಂಪಿಯನ್ ಶಿಪ್ Winnersಗೆ congratulations ಹೇಳಿದ ಭಾರತೀಯ ಸಂಗೀತ ದಿಗ್ಗಜ, ಆಸ್ಕರ್ ಪ್ರಶಸ್ತಿ ವಿಜೇತ ಎ.ಆರ್.ರೆಹಮಾನ್ ಅವರಿಗೆ ಧನ್ಯವಾದಗಳು. ಸರಿಗಮಪ ಚಾಂಪಿಯನ್ ಶಿಪ್ನ complete season ಜೊತೆಯಾಗಿದ್ದ ಅರುಣ್ ಡ್ರಮ್ಮರ್ ಬ್ಯಾಂಡ್ ಮತ್ತು Sunshine Orchestra ತಂಡಕ್ಕೆ ನಮ್ಮ ಜೀ ಕನ್ನಡದ ವತಿಯಿಂದ ಧನ್ಯವಾದಗಳು." ಎಂದು ಜೀ ಕನ್ನಡ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿದೆ.

'ಸರಿಗಮಪ ಚಾಂಪಿಯನ್ಸ್' ಗೆದ್ದಿದ್ಯಾರು?
ಫೆಬ್ರವರಿ 26ರಂದು ನಡೆದ 'ಸರಿಗಮಪ ಚಾಂಪಿಯನ್ಸ್' ಗ್ರ್ಯಾಂಡ್ ಫಿನಾಲೆಯಲ್ಲಿ ಗಾಯಕಿ ನಂದಿತಾ ಟೀಮ್ ವಿನ್ನರ್ ಆಗಿ ಗೆಲುವಿನ ನಗೆ ಬೀರಿತ್ತು. ಇವರೊಂದಿಗೆ ಗಾಯಕಿ ಅನುರಾಧ ಭಟ್ ಟೀಮ್ ರನ್ನರ್ ಅಪ್ ಆಗಿ ಹೊರಹೊಮ್ಮಿತ್ತು. ಹಾಗೇ ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಇಂದು ನಾಗರಾಜ್ ತಂಡ ಗೆದ್ದುಕೊಂಡಿತ್ತು. ಇದರ ಜೊತೆನೇ ಕಂಬದ ರಂಗಯ್ಯ ಎಂಟರ್ಟೈನರ್ ಆಫ್ ದಿ ಸೀಸನ್, ಹಾಗೂ ಶ್ರೀ ಹರ್ಷ ಪರ್ಫಾಮೆನ್ಸ್ ಆಫ್ ದಿ ಸೀಸನ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಎರಡು ರಿಯಾಲಿಟಿ ಶೋ ಆರಂಭ
ಸರಿಗಮಪ ಚಾಂಪಿಯನ್ಸ್ ಮುಗಿಯುತ್ತಿದ್ದಂತೆ ಜೀ ಕನ್ನಡದಲ್ಲಿ ಈಗಾಗಲೇ ಜನಪ್ರಿಯಾಗಿರುವ ಎರಡು ರಿಯಾಲಿಟಿ ಶೋಗಳು ಆರಂಭ ಆಗಲಿವೆ. 'ಡಾನ್ಸ್ ಕರ್ನಾಟಕ ಡಾನ್ಸ್' ಹಾಗೂ 'ಕಾಮಿಡಿ ಕಿಲಾಡಿಗಳು' ಸೀಸನ್ 4 ಶುರುವಾಗಲಿದೆ. ಈ ಎರಡೂ ರಿಯಾಲಿಟಿ ಶೋಗಳಿಗೂ ಈಗಾಗಲೇ ಆಡಿಷನ್ ಆರಂಭ ಆಗಿದೆ. ಇದರೊಂದಿಗೆ ಡ್ರಾಮ ಜೂನಿಯರ್ಸ್ ಕೂಡ ಇನ್ನು ಕೆಲವೇ ದಿನಗಳಲ್ಲಿ ಆರಂಭ ಆಗಲಿದೆ.


Click it and Unblock the Notifications











