ಇಂಡಸ್ಟ್ರಿ ಆಳುವವರು ನಾವಲ್ಲ, ಐ ಮೀನ್ ಇಟ್: ಪುನೀತ್
ರಾಜಕುಮಾರ್ ಮಗನಾಗಿ ಮೇಲೆ ಬಂದವನು ನಾನು, ಹಾಗೆಯೇ ಮುಂದುವರಿಯಲು ಇಷ್ಟ ಪಡುತ್ತೇನೆ. ಕನ್ನಡ ಚಿತ್ರರಂಗ ಆಳುವವರು ನಾವಲ್ಲ ಎಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೀಟಿವಿ ಶೋನಲ್ಲಿ ಹೇಳಿದ್ದಾರೆ.
ಜೀಟಿವಿ ಕನ್ನಡದಲ್ಲಿ ಇದೇ ಶನಿವಾರ ಮತ್ತು ಭಾನುವಾರದಿಂದ (ಆ 3) ಆರಂಭವಾದ ಪ್ರತಿಭಾನ್ವಿತ ರಮೇಶ್ ಅರವಿಂದ್ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ಟಿವಿ ಶೋನ ಮೊದಲ ಎಪಿಸೋಡ್ ನಲ್ಲಿ ಮಾತನಾಡುತ್ತಿದ್ದ ಪುನೀತ್, ನಾವು ಇಂಡಸ್ಟ್ರಿ ಆಳುವವರಲ್ಲ, ಇಂಡಸ್ಟ್ರಿಯಲ್ಲಿ ನಾನೂ ಒಬ್ಬ, ಐ ಮೀನ್ ಇಟ್ ಎಂದು ರಮೇಶ್ ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ. (ನಟ ರಮೇಶ್ ಕಿರುತೆರೆಗೆ ರೀ ಎಂಟ್ರಿ)
ರಮೇಶ್ ಅರವಿಂದ್ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ಪುನೀತ್, ಚಿತ್ರರಂಗದಲ್ಲಿ ಎಲ್ಲರೂ ಚೆನ್ನಾಗಿ ಇರಬೇಕೆಂದು ಬಯಸುವವರು ನಾವು. ಎಲ್ಲರು ಚೆನ್ನಾಗಿ ಇದ್ದರೆ ನಮ್ಮ ಚಿತ್ರೋದ್ಯಮವೂ ಚೆನ್ನಾಗಿರುತ್ತದೆ. ಇಲ್ಲಿ ಯಾರು ಯಾರನ್ನೂ ಆಳುವವರಲ್ಲ, ಎಲ್ಲರೂ ಒಂದೇ, ಎಲ್ಲಾ ಕಲಾವಿದರೂ ಒಂದೇ ಎಂದಿದ್ದಾರೆ. (ವೀಕೆಂಡ್ ವಿತ್ ರಮೇಶ್ ವಿಡಿಯೋ - 1)
ಸಾಧಕರ ಮನದಾಳದ ಮಾತಿನಾಧಾರಿತ ಕಾರ್ಯಕ್ರಮವಾಗಿರುವ ಈ ಶೋನಲ್ಲಿ ಪುನೀತ್ ಕುಟುಂಬದವರು, ಅವರ ಸ್ನೇಹಿತರು, ಪರಮಾಪ್ತರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಾನು ಬೆಳೆದು ಬಂದ ರೀತಿ, ತಂದೆಯವರ ಜೊತೆಗಿನ ಒಡನಾಟದ ಬಗ್ಗೆ ಪುನೀತ್ ಮನಬಿಚ್ಚಿ ಮಾತನಾಡಿದ್ದಾರೆ. (ವೀಕೆಂಡ್ ವಿತ್ ರಮೇಶ್ ವಿಡಿಯೋ - 2)

ಚೆನ್ನೈನ ಮರೀನಾ ಬೀಚಿನ ಬಳಿಯಿರುವ ಆಸ್ಪತ್ರೆ
ಚೆನ್ನೈ ಮರೀನಾ ಬೀಚ್ ಬಳಿಯಿರುವ ಕಲ್ಯಾಣಿ ಆಸ್ಪತ್ರೆಯಲ್ಲಿ ಗ್ರೇಸಿ ಮೆಡ್ ಫರ್ಡ್ ಎನ್ನುವ ಇಂಗ್ಲೆಡ್ ಮೂಲದ ವೈದ್ಯೆಯ ಮುಖವನ್ನು ನೀವು ಹುಟ್ಟಿದಾಗ ಮೊದಲು ನೋಡಿದ್ದು, ಮತ್ತು ನಿರ್ದೇಶಕ ಭಗವಾನ್ ಮೊದಲು ನಿಮ್ಮನ್ನು ಎತ್ತಿಕೊಂಡಿದ್ದು. ಅಣ್ಣಾವ್ರು ಆ ಸಮಯದಲ್ಲಿ ಶೂಟಿಂಗ್ ನಲ್ಲಿದ್ದರು ಎನ್ನುವ ಮಾಹಿತಿಯನ್ನು ರಮೇಶ್ ಕಾರ್ಯಕ್ರಮದಲ್ಲಿ ಪುನೀತ್ ಗೆ ನೀಡಿದಾಗ, ಈ ವಿಚಾರವನ್ನು ಅಮ್ಮ ನನಗೆ ಹೇಳಲೇ ಇಲ್ಲ ಎಂದು ಆಶ್ಚರ್ಯ ವ್ಯಕ್ತ ಪಡಿಸಿದರು.

ಸೋದರ ಸಂಬಂಧಿ ಬಗ್ಗೆ ಮಾತನಾಡಿದ ಪುನೀತ್
ತನ್ನ ಸೋದರಿ ಸಂಬಂಧಿ ರಾಜೇಶ್ವರಿ ಬಗ್ಗೆ ಮಾತನಾಡಿದ ಪುನೀತ್, ವಸಂತಗೀತ ಚಿತ್ರದಲ್ಲಿ ನನಗೆ ಡ್ಯಾನ್ಸ್ ಮಾಡಲು ಕಲಿಸಿದ್ದು ರಾಜೇಶ್ವರಿ. ಅವರು ಡ್ಯಾನ್ಸ್ ಮಾಡಿ ತೋರಿಸಿದರೆ ಮಾತ್ರ ನಾನು ಡ್ಯಾನ್ಸ್ ಮಾಡುತ್ತಿದ್ದೆ. ಚಿಕ್ಕ ವಯಸ್ಸಿನಲ್ಲಿ ಆಕೆಯ ಫ್ರಾಕ್ ನನ್ನು ಧರಿಸುತ್ತಿದ್ದೆ ಎಂದು ಪುನೀತ್ ಹಿಂದಿನ ನೆನಪನ್ನು ಮೆಲುಕು ಹಾಕಿದ್ದಾರೆ.

ಹೊನ್ನವಳ್ಳಿ ಕೃಷ್ಣ ಜೊತೆಗೆ ನನ್ನ ಒಡನಾಟ
ಹೊನ್ನವಳ್ಳಿ ಕೃಷ್ಣ ನನಗೆ ಗೆಳೆಯ, ಗೈಡ್ ಎಲ್ಲಾ. ಚಿಕ್ಕಂದಿನಲ್ಲಿ ಕೃಷ್ಣ ಡ್ಯಾನ್ಸ್ ಮಾಡಿದ್ರೆ ಮಾತ್ರ ನಾನು ಡ್ಯಾನ್ಸ್ ಮಾಡುತ್ತಿದ್ದೆ. ಅವರು ಹೇಳಿದಂತೆ ಕುಣಿಯುತ್ತಿದ್ದೆ. ಭಕ್ತ ಪ್ರಹ್ಲಾದ ಚಿತ್ರದಲ್ಲಿ ಅಪ್ಪಾಜಿಯ ಮುಂದೆ ನನಗೆ ನಟಿಸಲು ಭಯವಾಗುತ್ತಿತ್ತು.

ದನ ಮೇಯಿಸುತ್ತಿದ್ದ ಪುನೀತ್
ದೊಡ್ಡಗಾಜನೂರಿನ ಮನೆಯಲ್ಲಿ ದನ ಮೇಯಿಸುವುದು, ಎತ್ತಿನ ಮೇಲೆ ಕೂರುವುದು, ಗೋಲಿ ಆಡುವುದು ಇದನ್ನೆಲ್ಲಾ ಪುನೀತ್ ಮಾಡುತ್ತಿದ್ದ. ನನ್ನ ಹತ್ತಿರ ಇದ್ದರೆ ಅಪ್ಪು ಮನೆಗೇ ಹೋಗುತ್ತಿರಲಿಲ್ಲ ಎಂದು ಕುಳ್ಳ ನಾಗರಾಜ್ ತನ್ನ ನೆನಪನ್ನು ಹೊರಹಾಕಿದ್ದಾರೆ.

ಗೆಳೆಯರ ಬಗ್ಗೆ ಮಾತನಾಡಿದ ಅಪ್ಪು
ನನ್ನ ಗೆಳೆಯರ ಗ್ರೂಪಿನಲ್ಲಿ ಎಲ್ಲರೂ ಇದ್ದಾರೆ, ಎಲ್ಲಾ ಜಾತಿಯವರೂ ಇದ್ದಾರೆ. ಗೆಳೆಯರ ಜೊತೆಗಿರುವಾಗ ಸಿನಿಮಾದ ಬಗ್ಗೆ ಆಗಲಿ, ಅಥವಾ ಕೆಲಸದ ಬಗ್ಗೆಯಾಗಲಿ ಮಾತೇ ಬರುತ್ತಿರಲಿಲ್ಲ. ಅಪ್ಪುಗೆ ಬೆಣ್ಣೆ ಮಸಾಲದೋಸೆಯೆಂದರೆ ತುಂಬಾ ಇಷ್ಟ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಗೆಳೆಯರು ಹೇಳಿದ್ದಾರೆ.

ರಾಘಣ್ಣ ಜೊತೆ ಭಾವೋದ್ವೇಗಕ್ಕೊಳಗಾದ ಪುನೀತ್
ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಜೊತೆಗೆ ಅಪ್ಪು ದೂರವಾಣಿ ಮೂಲಕ ಮಾತನಾಡಿದರು. ರಾಘಣ್ಣ ನನಗೆ ತಂದೆಗೆ ಸಮಾನ. ಅವರು ಆಸ್ಪತ್ರೆಯಲ್ಲಿ ಇದ್ದಾಗ ಬಹಳಷ್ಟು ನೋವು ಅನುಭವಿಸಿದ್ದೆ. ರಾಘಣ್ಣ ಮತ್ತು ಅಪ್ಪು ಮಾತನಾಡುತ್ತಿರ ಬೇಕಾದ ಇಬ್ಬರೂ ಸಹೋದರರು ಭಾವೋದ್ವೇಗಕ್ಕೊಳಗಾದರು.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ವಿಡಿಯೋ - 1
ಶನಿವಾರ (ಆ 2) ಜೀ ಟಿವಿ ಕನ್ನಡದಲ್ಲಿ ಪ್ರಸಾರವಾದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ವಿಡಿಯೋ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ವಿಡಿಯೋ - 2
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮುಂದುವರಿದ ಭಾಗ ಭಾನುವಾರ ರಾತ್ರಿ 9 ರಿಂದ 10ಕ್ಕೆ ಪ್ರಸಾರವಾಯಿತು.


Click it and Unblock the Notifications











