9 ವರ್ಷಗಳ ಬಳಿಕ ಜೀ ಕನ್ನಡ ತೊರೆದಿದ್ದೇಕೆ ರಕ್ಷಿತಾ ಪ್ರೇಮ್; 'ಕಾಮಿಡಿ ಕಿಲಾಡಿಗಳು','ಡಿಕೆಡಿ'ಗೆ ಗುಡ್ ಬೈ
ಕನ್ನಡ ಕಿರುತೆರೆಯ ನಂ 1 ಮನರಂಜನಾ ವಾಹಿನಿ ಜೀ ಕನ್ನಡ ಹಲವು ಜನಪ್ರಿಯ ಶೋಗಳನ್ನು ವೀಕ್ಷಕರಿಗೆ ನೀಡುತ್ತಿದೆ. ಅದರಲ್ಲಿ 'ಕಾಮಿಡಿ ಕಿಲಾಡಿಗಳು' ಹಾಗೂ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಕೂಡ ಸೇರಿಕೊಂಡಿದೆ. 'ಕಾಮಿಡಿ ಕಿಲಾಡಿಗಳು ಹಾಸ್ಯ ಪ್ರಿಯರನ್ನು ರಂಜಿಸಿದರೆ, 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ನೃತ್ಯ ಪ್ರಿಯರ ಫೇವರಿಟ್ ಶೋ ಆಗಿದೆ. ಈ ಎರಡೂ ಶೋಗಳಲ್ಲಿದ್ದ ಮೂವರು ತೀರ್ಪುಗಾರರಲ್ಲಿ ರಕ್ಷಿತಾ ಪ್ರೇಮ್ ಕೂಡ ಒಬ್ಬರಾಗಿರುತ್ತಿದ್ದರು.
ನಾಳೆಯಿಂದ (ಅಕ್ಟೋಬರ್ 25) ಕಾಮಿಡಿ ಕಿಲಾಡಿಗಳು ಸೀಸನ್ 5 ಆರಂಭ ಆಗುತ್ತಿದೆ. ಆದರೆ, ಈ ಬಾರಿ 'ಕಾಮಿಡಿ ಕಿಲಾಡಿಗಳು' ಶೋನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲಿ ಜಡ್ಜ್ಗಳು ಕೂಡ ಬದಲಾಗಿದ್ದಾರೆ. ಈ ಶೋನಲ್ಲಿ ಪ್ರತಿವರ್ಷ ತೀರ್ಪುಗಾರರಾಗಿ ರಕ್ಷಿತಾ ಪ್ರೇಮ್ ಕಾಣಿಸಿಕೊಳ್ಳುತ್ತಿದ್ದರು. ಈ ಬಾರಿ ಪ್ರೋಮೊದಲ್ಲಿ ಅವರು ಮಿಸ್ಸಿಂಗ್. ಅವರ ಸ್ಥಾನಕ್ಕೆ ಕನ್ನಡದ ಹಿರಿಯ ನಟಿ ತಾರಾ ಅನುರಾಧಾ ಎಂಟ್ರಿ ಕೊಟ್ಟಿದ್ದಾರೆ.

ಹಲವು ವರ್ಷಗಳಿಂದ ಜೀ ಕನ್ನಡದ ಎರಡು ಪ್ರಮುಖ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದ ರಕ್ಷಿತಾ ಪ್ರೇಮ್ ಅವರನ್ನು ವೀಕ್ಷಕರು ಮಿಸ್ ಮಾಡಿಕೊಳ್ಳೋದು ಗ್ಯಾರಂಟಿ. ಆದರೆ, ರಕ್ಷಿತಾ ಜೀ ಕನ್ನಡದ ಶೋಗಳಿಂದ ಹೊರ ಬಂದಿದ್ದು ಏಕೆ? 9 ವರ್ಷಗಳ ಜೀ ಕನ್ನಡದೊಂದು ಬಾಂಧವ್ಯಕ್ಕೆ ಬ್ರೇಕ್ ಹಾಕಿದ್ದೇಕೆ? ಅನ್ನೋ ಪ್ರಶ್ನೆ ಹುಟ್ಟಿಕೊಂಡಿತ್ತು. ಇತ್ತ ರಕ್ಷಿತಾ ಪ್ರೇಮ್ ಕೂಡ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಈ ವಿಷಯವನ್ನು ಕನ್ಫರ್ಮ್ ಮಾಡಿದ್ದಾರೆ. ಅಷ್ಟಕ್ಕೂ ರಕ್ಷಿತಾ ಏನು ಹೇಳಿದ್ದಾರೆ? ತಿಳಿಯುವುದಕ್ಕೆ ಮುಂದೆ ಓದಿ.
'ಕಾಮಿಡಿ ಕಿಲಾಡಿಗಳು' ಸೀಸನ್ 5ನ ಪ್ರೋಮೋಗಳು ಹೊರಬಿದ್ದಿವೆ. ಈ ಶೋನ ಜಡ್ಜ್ಗಳನ್ನು ಪ್ರೋಮೊ ಮೂಲಕ ರಿವೀಲ್ ಮಾಡಲಾಗಿತ್ತು. ಈ ಪ್ರೋಮೊದಲ್ಲಿ ಎಂದಿನಂತೆ ನವರಸ ನಾಯಕ ಜಗ್ಗೇಶ್ ತೀರ್ಪುಗಾರರಾಗಿ ಮುಂದುವರೆದಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಈ ಶೋಗೆ ಕಮ್ಬ್ಯಾಕ್ ಮಾಡಿದ್ದಾರೆ. ರಕ್ಷಿತಾ ಪ್ರೇಮ್ ಮಿಸ್ ಆಗಿದ್ದರು. ಅವರ ಸ್ಥಾನಕ್ಕೆ ತಾರಾ ಅನುರಾಧಾ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಹಾಗೇ ನಿರೂಪಕರಾಗಿದ್ದ ಮಾಸ್ಟರ್ ಆನಂದ್ ಕೂಡ ಬದಲಾಗಿದ್ದು ಅವರ ಸ್ಥಾನಕ್ಕೆ ನಿರಂಜನ್ ದೇಶಪಾಂಡೆ ಬಂದಿದ್ದಾರೆ.
ತೀರ್ಪುಗಾರರ ಪ್ರೋಮೋ ರಿಲೀಸ್ ಆಗುತ್ತಿದ್ದಂತೆ ರಕ್ಷಿತಾ ಪ್ರೇಮ್ ತಮ್ಮ ಇನ್ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ಜೀ ಕನ್ನಡ ಹಾಗೂ ಕಾಮಿಡಿ ಕಿಲಾಡಿಗಳು ಹೆಸರನ್ನು ಹೇಳದೆ ಇನ್ಮುಂದೆ ಜೀ ಕನ್ನಡದ ಭಾಗವಾಗಿರುವುದಿಲ್ಲ ಎಂದು ಹೇಳಿದ್ದಾರೆ. 9 ವರ್ಷದ ಜರ್ನಿಯನ್ನು ಅಂತ್ಯಗೊಳಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

"ನಾನು ಕಳೆದ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಒಂದು ಪರ್ಟಿಕ್ಯೂಲರ್ ಚಾನಲ್ನ ಒಂದು ಪರ್ಟಿಕ್ಯೂಲರ್ ಶೋಗೆ ಟ್ಯಾಗ್ ಮಾಡುತ್ತಿರೋ ಎಲ್ಲರಿಗೂ ನಾನು ಒಂದು ಸ್ಪಷ್ಟನೆ ಕೊಡುವುದಕ್ಕೆ ಇಷ್ಟ ಪಡುತ್ತೇನೆ. ನನ್ನ ಜೀವನದಲ್ಲಿ ಬದಲಾವಣೆಯನ್ನು ಬಯಸಿದ್ದು, ಹಾಗೂ ಹೊಸದನ್ನೇನಾದರೂ ಪ್ರಯತ್ನಿಸಲು ನಾನು ಇನ್ನು ಮುಂದೆ ಆ ಚಾನೆಲ್ನ ಭಾಗವಾಗಿರುವುದಿಲ್ಲ.
ಇಷ್ಟು ವರ್ಷ ಆ ಶೋಗಳಲ್ಲಿ ಸಂತೋಷದಿಂದ ನನ್ನನ್ನು ನೋಡಿ ಬೆಂಬಲಿಸಿದ್ದೀರಿ. ಈ 9 ವರ್ಷದ ಜರ್ನಿಯಲ್ಲಿ ಅನೇಕ ಸುಂದರ ದಿನಗಳನ್ನು ನೀಡಿದ ನಿಮಗೂ ಮತ್ತು ಆ ದೇವರಿಗೂ ಹೃದಯಪೂರ್ವಕ ಧನ್ಯವಾದಗಳು. ನಾನು ಯಾವುದೇ ಕೆಲಸ/ ಸಿನಿಮಾನಲ್ಲಿ ಮತ್ತೆ ನಿಮ್ಮ ಮುಂದೆ ಬಂದರೂ ಇದೇ ರೀತಿಯ ಪ್ರೀತಿ ಮತ್ತು ಪ್ರೋತ್ಸಾಹ ನನ್ನ ಮೇಲೆ ಇರುತ್ತೆ ಎಂದು ಭಾವಿಸುತ್ತೇನೆ." ಎಂದು ರಕ್ಷಿತಾ ಪ್ರೇಮ್ ತನ್ನ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಜೀ ಕನ್ನಡ ಹಾಗೂ ರಕ್ಷಿತಾ ಪ್ರೇಮ್ ಮಧ್ಯೆ ಏನಾದರೂ ಭಿನ್ನಾಬಿಪ್ರಾಯಗಳು ಮೂಡಿದೆಯೇ? ಈ ಕಾರಣಕ್ಕೆ ಶೋನಿಂದ ಹೊರ ನಡೆದಿದ್ದಾರಾ? ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.


Click it and Unblock the Notifications











