ವರ್ಲ್ಡ್ ಬಾಕ್ಸಾಫೀಸ್ ದೋಚಿದ 'ಕಾಂತಾರ ಚಾಪ್ಟರ್ 1' ಕಿರುತೆರೆಗೆ ಎಂಟ್ರಿ: ಯಾವಾಗ? ಎಲ್ಲಿ? ಎಷ್ಟೊತ್ತಿಗೆ?
ಭಾರತದ ಬಾಕ್ಸಾಫೀಸ್ನಲ್ಲಿ ದಾಖಲೆ ಬರೆದ 'ಕಾಂತಾರ ಚಾಪ್ಟರ್ 1' ಸ್ವಲ್ಪದರಲ್ಲಿಯೇ ನಂ 1 ಸ್ಥಾನವನ್ನು ಮಿಸ್ ಮಾಡಿಕೊಂಡಿತ್ತು. ರಿಷಬ್ ಶೆಟ್ಟಿ ನಿರ್ದೇಶಿಸಿ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಸಾವಿರ ಕೋಟಿ ಗಡಿ ದಾಟಲು ಕೆಲವೇ ಕೋಟಿಗಳು ಕಮ್ಮಿ ಬಂದಿದ್ದವು. ಆದರೆ, ಭಾರತದಾದ್ಯಂತ ಈ ಸಿನಿಮಾ ಮೆಚ್ಚುಗೆಯನ್ನು ಪಡೆದುಕೊಂಡಿತ್ತು.
'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಬಾಕ್ಸಾಫೀಸ್ನಲ್ಲಿ ₹950 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಸುಮಾರು 50 ದಿನಗಳ ಕಾಲ ಕಾಂತಾರ ಖದರ್ ಜೋರಾಗಿಯೇ ಇತ್ತು. ಮತ್ತೆ ಕನ್ನಡ ಚಿತ್ರರಂಗ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಶೈನ್ ಆಗುವಂತೆ ಮಾಡಿತ್ತು. ಈ ಸಿನಿಮಾವೀಗ ಓಟಿಟಿಗೆ ಎಂಟ್ರಿ ಕೊಟ್ಟು, ಅಲ್ಲೂ ಸದ್ದು ಮಾಡಿತ್ತು. ಈಗ ಕಿರುತೆರೆಗೆ ಎಂಟ್ರಿ ಕೊಡುವುದಕ್ಕೆ ಸಜ್ಜಾಗಿದೆ.

ಕನ್ನಡ ಕಿರುತೆರೆಯ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿರುವ ಜೀ಼ ಕನ್ನಡದಲ್ಲಿ 'ಕಾಂತಾರ ಚಾಪ್ಟರ್ 1' ಪ್ರಸಾರ ಆಗುತ್ತಿದೆ. ಧಾರಾವಾಹಿಗಳು, ರಿಯಾಲಿಟಿ ಶೋಗಳ ಜೊತೆಗೆ ಸಿನಿಮಾಗಳನ್ನು ಪ್ರಸಾರ ಮಾಡುತ್ತಿರುವ ಜೀ ಕನ್ನಡ ವೀಕೆಂಡ್ನಲ್ಲಿ ವೀಕ್ಷಕರಿಗೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಪ್ರಸಾರ ಮಾಡುತ್ತೆ. ಅದರಲ್ಲಿ ಈಗ 'ಕಾಂತಾರ ಚಾಪ್ಟರ್ 1' ಸೇರ್ಪಡೆಯಾಗಿದೆ.
ಹೌದು, ಜೀ಼ ಕನ್ನಡ ವಾಹಿನಿ ತನ್ನ ವೀಕ್ಷಕರಿಗೆ ಈ ವೀಕೆಂಡ್ನಲ್ಲಿ ಮತ್ತೊಂದು ಗುಡ್ ನ್ಯೂಸ್ ಕೊಡಲು ಮುಂದಾಗಿದೆ. ಬಾಕ್ಸ್ ಆಫೀಸ್ನಲ್ಲಿ ಅತೀ ಹೆಚ್ಚು ಯಶಸ್ಸು ಕಂಡಿರುವ 'ಕಾಂತಾರ: ಚಾಪ್ಟರ್ 1' ಇದೇ ಜನವರಿ 24ರಂದು ಸಂಜೆ 7 ಗಂಟೆಗೆ ಜೀ಼ ಕನ್ನಡದಲ್ಲಿ ಪ್ರಸಾರ ಕಾಣುತ್ತಿದೆ. ಈ ಮೂಲಕ ವೀಕೆಂಡ್ನಲ್ಲಿ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುವುದಕ್ಕೆ ಮುಂದಾಗಿದೆ.

'ಕಾಂತಾರ: ಚಾಪ್ಟರ್ 1' ಸಿನಿಮಾ 4ನೇ ಶತಮಾನದ ಕದಂಬ ರಾಜವಂಶದ ಐತಿಹಾಸಿಕ ಕಥೆಯಾಗಿದೆ. ಕಾಂತಾರ ಎಂಬ ಪ್ರದೇಶದ ನಾಯಕ ಬೇರ್ಮೆ ಮತ್ತು ಬಾಂಗ್ರಾ ರಾಜ ಮನೆತನದ ನಡುವಿನ ಸಂಘರ್ಷವನ್ನೇ ಪ್ರಮುಖ ವಿಷಯವನ್ನಾಗಿಟ್ಟುಕೊಂಡು 'ಕಾಂತಾರ ಚಾಪ್ಟರ್ 1' ಅನ್ನು ತೆರೆಮೇಲೆ ತರಲಾಗಿತ್ತು. ಅಷ್ಟೇ ಅಲ್ಲದೇ ಕಾಂತಾರ ಎನ್ನುವ ಅದ್ಭುತ ಕಾಲ್ಪನಿಕ ಕಾನನದ ಹುಟ್ಟಿನ ಕಥೆಯನ್ನು ಈ ಸಿನಿಮಾ ಹೇಳುತ್ತದೆ.
ಕಾಂತಾರವನ್ನು ರೂಪಿಸಿದ ಅಲ್ಲಿನ ಸಂಪ್ರದಾಯಗಳು, ನಂಬಿಕೆ ಹಾಗೂ ಜನಪದ ಕಥೆಗಳನ್ನೂ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಸಾಂಸ್ಕೃತಿಕ, ಭಾವನಾತ್ಮಕ ಹಾಗೂ ಜಾನಪದ ಅಂಶಗಳಿಂದ ಪ್ರೇಕ್ಷಕರ ಮನಗೆದ್ದ 'ಕಾಂತಾರ ಚಾಪ್ಟರ್ 1' ಭಾರತದ ಬಾಕ್ಸಾಫೀಸ್ನಲ್ಲಿ ಹೊಸ ಚರಿತ್ರೆಯನ್ನೇ ಸೃಷ್ಟಿಸಿತ್ತು. ರಿಷಬ್ ಶೆಟ್ಟಿ ಮತ್ತೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದರು.
ರಿಷಬ್ ಶೆಟ್ಟಿಯ 'ಕಾಂತಾರ: ಚಾಪ್ಟರ್ 1'ನ ಅದ್ಬುತ ಸ್ಟಾರ್ ಕಾಸ್ಟ್ ಸಿನಿಮಾದ ಯಶಸ್ಸಿಗೆ ಮತ್ತೊಂದು ಕಾರಣ. ರಿಷಬ್ ಶೆಟ್ಟಿ ಈ ಸಿನಿಮಾದಲ್ಲಿ ಬೇರ್ಮೆ ಹಾಗೂ ಮಾಯಕಾರ ಎಂಬ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ಯುವರಾಣಿ ಕನಕಾವತಿ ಪಾತ್ರದಲ್ಲಿ ನಟಿಸಿ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಗಮನ ಸೆಳೆದಿದ್ದರು. ಹಾಗೇ ಮಲಯಾಳಂನ ಸೂಪರ್ ಸ್ಟಾರ್ ಜಯರಾಮ್ 'ಕಾಂತಾರ ಚಾಪ್ಟರ್ 1'ರ ಅಸಲಿ ವಿಲನ್. ರಾಜ ರಾಜಶೇಖರನ ಪಾತ್ರದಲ್ಲಿ ಗಮನ ಸೆಳೆದಿದ್ದರು.
'ಕಾಂತಾರ: ಚಾಪ್ಟರ್ 1' ಸಿನಿಮಾದ ಮೂಲಕ ಕನ್ನಡದವರೇ ಆದ ಬಾಲಿವುಡ್ನ ವರ್ಸಟೈಲ್ ನಟ ಗುಲ್ಶನ್ ದೇವಯ್ಯ ಕುಲಶೇಖರ ಎಂಬ ರಾಜನ ಪಾತ್ರದಲ್ಲಿ ನಟಿಸಿ ಗಮನ ಸೆಳೆದ್ದಾರೆ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರೋದು ಮತ್ತೊಂದು ವಿಶೇಷ. ಇನ್ನು ಇವರೊಂದಿಗೆ ಪ್ರಮೋದ್ ಶೆಟ್ಟಿ ಕೂಡ ಭೋಗೇಂದ್ರ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಹಾಸ್ಯ ಪಾತ್ರದಲ್ಲಿ ದಿವಂಗತ ನಟ ರಾಕೇಶ್ ಪೂಜಾರಿ ಕೂಡ ಗಮನ ಸೆಳೆದಿದ್ದಾರೆ.
ಭಾರತೀಯರ ಮನಸ್ಸು ಗೆದ್ದ ಈ ಸಿನಿಮಾವನ್ನು ಜೀ ಕನ್ನಡದಲ್ಲಿ ಪ್ರಸಾರ ಮಾಡುತ್ತಿರುವುದಕ್ಕೆ ಬ್ಯುಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. "ಕಾಂತಾರ:ಚಾಪ್ಟರ್ 1 ಒಂದು ಸಿನಿಮಾ ಮಾತ್ರವಲ್ಲ. ಇದು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬ. ಈ ಸಿನೆಮಾಟಿಕ್ ಮಾಸ್ಟರ್ಪೀಸ್ ಸಿನಮಾವನ್ನು ಜೀ ಕನ್ನಡದಲ್ಲಿ ಪ್ರಸಾರ ಮಾಡಲು ನಮಗೆ ಹೆಮ್ಮೆ ಇದೆ. ನಮ್ಮ ವಾಹಿನಿಯ ಮೂಲಕ ಮನೆಮಂದಿಯೆಲ್ಲ ಒಟ್ಟಾಗಿ ಕುಳಿತು ಈ ಸಿನಿಮಾವನ್ನು ನೋಡಬಹುದು" ಎಂದು ಜೀ ಕನ್ನಡ ಮತ್ತು ಕನ್ನಡ ZEE5 ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಹೇಳಿದ್ದಾರೆ. ಕಾಂತಾರ: ಚಾಪ್ಟರ್ 1 ಇದೇ ಜನವರಿ 24 ರಂದು ಸಂಜೆ 7 ಗಂಟೆಗೆ ವೀಕ್ಷಿಸಿ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದೆ.


Click it and Unblock the Notifications











