'ಡ್ರಾಮಾ ಜೂನಿಯರ್ಸ್' ಕಿರೀಟ ಗೆದ್ದ ಕುಂದಾಪುರದ ಬೆಡಗಿ!
ದೊಡ್ಡವರಿಗಷ್ಟೇ ಡ್ರಾಮ ಮಾಡೋಕೆ ಬರೋಲ್ಲ. ಚಿಣ್ಣರಿಗೂ ಡ್ರಾಮ ಮಾಡೋಕೆ ಬರುತ್ತೆ ಅಂತ ತೋರಿಸಿಕೊಟ್ಟ ರಿಯಾಲಿಟಿ ಶೋ 'ಡ್ರಾಮ ಜೂನಿಯರ್ಸ್'. ಈ ರಿಯಾಲಿಟಿ ಶೋ ಈಗ ನಾಲ್ಕು ಸೀಸನ್ಗಳನ್ನು ಪೂರೈಸಿದ್ದು, ಮಕ್ಕಳ ಈ ರಿಯಾಲಿಟಿ ಶೋಗೆ ಕರ್ನಾಟಕದಾದ್ಯಂತ ಜನಮನ್ನಣೆ ಸಿಕ್ಕಿದೆ.
ಚಿಣ್ಣರ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಸೀಸನ್ 4 ಗ್ರಾಂಡ್ ಫಿನಾಲೆಗೆ ಅದ್ಧೂರಿಯಾಗಿ ತೆರೆ ಬಿದ್ದಿದೆ. ಸತತ 23 ವಾರಗಳ ಕಾಲ 'ಡ್ರಾಮ ಜೂನಿಯರ್ಸ್' ಇಡೀ ಕರುನಾಡನ ಡ್ರಾಮ ಪ್ರಿಯರಿಗೆ ಮನರಂಜನೆ ನೀಡಿದೆ. ಇದು ಕರ್ನಾಟಕದ ಮನೆಮನಗಳ ಫೇವರೀಟ್ ಕಾರ್ಯಕ್ರಮವಾಗಿದೆ. ಡ್ರಾಮ ಜೂನಿಯರ್ಸ್ ಸೀಸನ್ 4ರ ವಿಜೇತರಾಗಿ ಕುಂದಾಪುರದ ಸಮೃದ್ಧಿ ಎಸ್ ಮೊಗವೀರ್ ಹೊರಹೊಮ್ಮಿದ್ದಾರೆ.
'ಡ್ರಾಮ ಜೂನಿಯರ್ಸ್' ರಿಯಾಲಿಟಿ ಶೋ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದೆ. ಈ ಕಾರ್ಯಕ್ರಮ ಆರಂಭ ಆದಲ್ಲಿಂದ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ತಮ್ಮ ಅದ್ಭುತ ಅಭಿನಯದ ಮೂಲಕ ಕಿರುತೆರೆ ವೀಕ್ಷಕರನ್ನು ಸೆಳೆದಿರೋ 15 ಪ್ರತಿಭೆಗಳನ್ನು ಫೈನಲ್ಗೆ ಆಯ್ಕೆ ಮಾಡಲಾಗಿತ್ತು. ಈ 15 ಮಂದಿ ಸ್ಪರ್ಧಿಗಳಲ್ಲಿ ನಾಲ್ಕು ಪ್ರತಿಭೆಗಳು ಪ್ರಶಸ್ತಿ ಫೈನಲ್ ಹಂತಕ್ಕೆ ತಲುಪಿದ್ದರು.

'ಡ್ರಾಮ ಜೂನಿಯರ್ಸ್' ಸೀಸನ್ 4ರ ತೀರ್ಪುಗಾರರಾಗಿದ್ದ ಡಾ.ರವಿಚಂದ್ರನ್, ಹಿರಿಯ ನಟಿ ಲಕ್ಷ್ಮಿ, ರಚಿತಾ ರಾಮ್ ಕೂಡ ಈ ಶೋನಾ ಎಂಜಾಯ್ ಮಾಡಿದ್ದರು. ಮಕ್ಕಳ ಪ್ರತಿಭೆಯನ್ನು ಕಂಡು ದಂಗಾಗಿದ್ದರು. ಈ ಫಿನಾಲೆಯಲ್ಲಿ 15 ಮಂದಿ ಉತ್ತಮ ಸ್ಪರ್ಧಿಗಳಲ್ಲಿ ಅದ್ಭುತ ಪ್ರತಿಭೆ ನೀಡಿದವರನ್ನು ವಿಜೇತರನ್ನಾಗಿ ಘೋಷಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಯೊಬ್ಬ ಮಗುವಿಗೂ ಪದಕ ನೀಡುವ ಮೂಲಕ ಉಳಿದ 11 ಪ್ರತಿಭೆಗಳನ್ನು ಗೌರವಿಸಿದ್ದಾರೆ,
ಇಂದಿನ ಸಂಚಿಕೆಯಲ್ಲಿ ಆರ್ಯವರ್ಧನ್ ಇರೋದಿಲ್ವಾ? 'ಜೊತೆ ಜೊತೆಯಲಿ' ಕಥೆಯೇನು?
'ಡ್ರಾಮ ಜೂನಿಯರ್ಸ್' ಸೀಸನ್ 4ರಲ್ಲಿ ಅಚ್ಚರಿ ವಿಷಯ ನಡೀತು. ಇಬ್ಬರು ಪ್ರತಿಭೆಗಳು ಸಮಬಲ ಸಾಧಿಸಿದ್ದರು. ಚಾಮರಾಜನಗರದ ಗೌತಮ್ ರಾಜ್ ಹಾಗೂ ಉಡುಪಿಯ ಸಾನಿಧ್ಯ ಆಚಾರ್ ನಡುವೆ ಎರಡನೇ ಸ್ಥಾನಕ್ಕೆ ಟೈ ಆಗಿತ್ತು. ಹೀಗಾಗಿ ಇಬ್ಬರೂ ಎರಡನೇ ಸ್ಥಾನ ಪಡೆದು, ತಲಾ ಮೂರು ಲಕ್ಷ ರೂಪಾಯಿ ಬಹುಮಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಹಾಗೇ ಮಂಗಳೂರಿನ ವೇದಿಕ್ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಸೀಸನ್ ವಿಶಿಷ್ಟ ಪ್ರತಿಭೆಯಾಗಿ ವೇದಿಕೆಗೆ ಆಗಮಿಸಿದ ರಾಯಚೂರಿನ ಕುಳ್ಳ ಸಿಂಗಂ ಖ್ಯಾತಿಯ ಅರುಣ್ ಅವರಿಗೆ ವಿಶೇಷ ಬಹುಮಾನವಾಗಿ ಒಂದು ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ. ಇದು ಕಾರ್ಯಕ್ರಮದ ಅತ್ಯುತ್ತಮ ಕ್ಷಣಗಳಲ್ಲೊಂದು. ಇನ್ನೊಂದು ವಿಶೇಷ ಅಂದರೆ, ಜೀ ಕನ್ನಡ ರಿಯಾಲಿಟಿ ಶೋನಿಂದ ಸಿಕ್ಕಿದ ಈ ಎಲ್ಲಾ ಬಹುಮಾನಗಳು ಆ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಕೆ ಆಗುತ್ತಿರುವುದು ವಿಶೇಷ.
'ಡ್ರಾಮ ಜೂನಿಯರ್ಸ್' ಸೀಸನ್ 4 ಯಶಸ್ಸಿಯಾಗಿ ಮುಗಿಯುತ್ತಿದ್ದಂತೆ ಜೀ ಕನ್ನಡ ಮತ್ತೊಂದು ಕಾರ್ಯಕ್ರಮವನ್ನು ಘೋಷಿಸಿದೆ. ವೀಕ್ಷಕರನ್ನು ನಕ್ಕು ನಗಿಸಲು ಕಾಮಿಡಿ ಕಿಲಾಡಿಗಳು ಸೀಸನ್ 4 ಶೀಘ್ರದಲ್ಲೇ ಶುರುವಾಗಲಿದೆ. ಈ ಕಾರ್ಯಕ್ರಮದ ತೀರ್ಪುಗಾರರಾಗಿ ನಿರ್ದೇಶಕ ಯೋಗರಾಜ್ ಭಟ್, ನವರಸನಾಯಕ ಜಗ್ಗೇಶ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಮುಂದುವರೆಯಲಿದ್ದಾರೆ. ಹಾಗೆಯೇ ಮಾಸ್ಟರ್ ಆನಂದ್ ನಿರೂಪಣೆ ಮಾಡಲಿದ್ದಾರೆ.


Click it and Unblock the Notifications











