ಹಿರಿಯ ನಟ ಅವಿನಾಶ್ ಕಿರುತೆರೆಗೆ ರೀ ಎಂಟ್ರಿ; 'ವಸುದೇವ ಕುಟುಂಬ' ಎಂದಿನಿಂದ ಆರಂಭ
ಕಿರುತೆರೆಯಲ್ಲಿ ಹಳೆ ಧಾರಾವಾಹಿಗಳು ಅಂತ್ಯವಾಗುತ್ತಿವೆ. ಹೊಸ ಹೊಸ ಸೀರಿಯಲ್ಗಳನ್ನು ಲಾಂಚ್ ಮಾಡಲಾಗುತ್ತಿದೆ. ಕನ್ನಡದ ಪ್ರಮುಖ ಮನರಂಜನಾ ವಾಹಿನಿಗಳು ಸದ್ಯಕ್ಕೀಗ ಇದೇ ಹಾದಿಯಲ್ಲಿ ಸಾಗುತ್ತಿವೆ. ಇತ್ತೀಚೆಗೆ ಹಲವು ಧಾರಾವಾಹಿಗಳು ಅಂತ್ಯ ಕಂಡಿದ್ದು, ಹೊಸ ಧಾರಾವಾಹಿಗಳು ಅನೌನ್ಸ್ ಆಗುತ್ತಿವೆ. ಜೊತೆಗೆ ರಿಯಾಲಿಟಿ ಶೋಗಳು ಕೂಡ ಆರಂಭ ಆಗುತ್ತಿವೆ. ಈ ಸಾಲಿನಲ್ಲಿ ಸ್ಟಾರ್ ಸುವರ್ಣ ಕೂಡ ಸೇರಿಕೊಂಡಿದೆ.
ಸ್ಟಾರ್ ಸುವರ್ಣ ತನ್ನ ವಿಭಿನ್ನ ಕಂಟೆಂಟ್ಗಳಿಂದ ವೀಕ್ಷಕರನ್ನು ಸೆಳೆಯುತ್ತಿದೆ. ಜನರ ಮನ ಸೆಳೆಯುವ ಧಾರಾವಾಹಿಗಳು ಹಾಗೂ ಕಾರ್ಯಕ್ರಮಗಳ ಮೂಲಕ ಸದಾಕಾಲ ವೀಕ್ಷಕರನ್ನು ರಂಜಿಸುತ್ತಿದೆ. ಈಗ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಮತ್ತೊಂದು ಹೊಸ ಧಾರಾವಾಹಿ ಆರಂಭ ಆಗುತ್ತಿದೆ. ಅಪ್ಪನಿಲ್ಲದ ಒಂದು ಕುಟುಂಬದ ಕಥೆಯನ್ನು ತೆರೆಮೇಲೆ ತರುವುದಕ್ಕೆ ಹೊರಟಿದೆ. ಅದುವೇ 'ವಸುದೇವ ಕುಟುಂಬ'.

ಇನ್ನೇ ಕಿರುತೆರೆ ವೀಕ್ಷಕರನ್ನು ಸೆಳೆಯುವುದಕ್ಕೆ ರೆಡಿಯಾಗಿರುವ 'ವಸುದೇವನ ಕುಟುಂಬ' ಧಾರಾವಾಹಿಯ ಕಥೆ ಎಮೋಷನಲ್ ಆಗಿದೆ. ಸಮಾಜದಲ್ಲಿ ಅಪಾರ ಪ್ರೀತಿ, ಗೌರವವನ್ನು ಪಡೆದಿರುವ ಕುಟುಂಬವಿದು. ಹಳ್ಳಿಯಲ್ಲಿ ಊರ ಹಬ್ಬದ ಸಡಗರ ಜೊತೆಗೆ ಹಿರಿಮಗಳ ಮದುವೆ ಸಿದ್ಧತೆಯು ವಿಜೃಂಭಣೆಯಿಂದ ಸಾಗುತ್ತಿರುತ್ತೆ. ಆದರೆ, ಇಡೀ ಕುಟುಂಬ ಸಂತೋಷದಿಂದ ಇರುವಾಗಲೇ ಆಕಸ್ಮಿಕವಾಗಿ ಸಂಭವಿಸುವಂತಹ ಆ ಒಂದು ದುರ್ಘಟನೆಯು ಅವರ ಜೀವನವನ್ನು ತಲೆಕೆಳಗಾಗುವಂತೆ ಮಾಡುತ್ತದೆ. ಇದು ಆ ಕುಟುಂಬವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳುತ್ತೆ.
ಇಂತಹ ಸಂಕಷ್ಟದ ವೇಳೆ 'ವಸುದೇವ ಕುಟುಂಬ' ಧಾರಾವಾಹಿಯ ಕಥಾನಾಯಕಿ ಸ್ವಾತಿ, ತನ್ನ ತಾಳ್ಮೆ ಮತ್ತು ಧೈರ್ಯದಿಂದ ತಾಯಿ ಹಾಗೂ ಅಕ್ಕ-ತಂಗಿಯರಿಗೆ ಹೇಗೆ ಆಧಾರವಾಗಿ ನಿಲ್ಲುತ್ಥಾಳೆ? ತಾನು ಅನುಭವಿಸುತ್ತಿರುವ ದುಃಖವನ್ನು ಮರೆತು ಕುಟುಂಬದ ಸದಸ್ಯರ ಬದುಕನ್ನು ಮರು ಕಟ್ಟುವಲ್ಲಿ ಸ್ವಾತಿ ಯಶಸ್ವಿಯಾಗ್ತಾಳಾ? 'ವಸುದೇವ ಕುಟುಂಬ'ದ ಮಾನ-ಗೌರವವನ್ನು ಹೇಗೆ ಕಾಪಾಡ್ತಾಳೆ? ಎಂಬುದೇ ಈ ಧಾರಾವಾಹಿಯ ಮುಖ್ಯ ಆಶಯ.
ಇದು ಕಥೆಯ ಬಗ್ಗೆ ಆದರೆ, ಈ ಧಾರಾವಾಹಿಯ ಪ್ರಮುಖ ಆಕರ್ಷಣೆ ಸ್ಯಾಂಡಲ್ವುಡ್ನ ಹಿರಿಯ ನಟ ಅವಿನಾಶ್. ಬಹಳ ವರ್ಷಗಳ ಬಳಿಕ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸ್ಟಾರ್ ಸುವರ್ಣ ವಾಹಿನಿಯ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. 'ವಸುದೇವ ಕುಟುಂಬ'ದ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ. ಬಹುಭಾಷಾ ನಟ ಅವಿನಾಶ್ ವಸುದೇವ ಎಂಬ ಪಾತ್ರದಲ್ಲಿ 'ವಸುದೇವ ಕುಟುಂಬ' ಧಾರಾವಾಹಿಯಲ್ಲಿ ವೀಕ್ಷಕರ ಮುಂದೆ ಎದುರಾಗಲಿದ್ದಾರೆ.
ಅವಿನಾಶ್ ಪ್ರಮುಖ ಆಕರ್ಷಣೆಯಾಗಿದ್ದರೆ, ಇನ್ನೊಂದು ಕಡೆ ಕನ್ನಡದ ಚಿತ್ರರಂಗದ ಮತ್ತೊಬ್ಬ ಜನಪ್ರಿಯ ನಟಿ ಅಂಜಲಿ ಕೂಡ ನಟಿಸಿದ್ದಾರೆ. ನಾಲ್ಕು ಹೆಣ್ಣು ಮಕ್ಕಳ ತಾಯಿಯ ಪಾತ್ರದಲ್ಲಿ ಅಂಜಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರೊಂದಿಗೆ ಭಾವನಾ ಪಾಟೀಲ್, ಚೈತ್ರಾ ತೋಟದ್, ಬೃಂದಾ ಕಶ್ಯಪ್, ಆರಾಧ್ಯ, ಹಂಸ, ಭಗತ್ ಹಾಗು ಆರ್.ಜೆ ಅನೂಪ ಸೇರಿದಂತೆ ಇನ್ನು ಅನೇಕ ಜನಪ್ರಿಯ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. 'ಕೋರಮಂಗಲ ಟಾಕೀಸ್' ಎಂಬ ಸಂಸ್ಥೆಯ ಮೂಲಕ ನಿರ್ದೇಶಕ ಅನಿಲ್ ಕೋರಮಂಗಲ ಈ ಧಾರಾವಾಹಿಯನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಿಸುತ್ತಿದ್ದಾರೆ.
'ವಸುದೇವ ಕುಟುಂಬ' ಧಾರಾವಾಹಿ ಒಂದೇ ಬೇರು, ಕವಲು ನೂರು ಎಂಬ ಅಡಿಬರಹದೊಂದಿಗೆ ಶುರುವಾಗಿದೆ. 'ವಸುದೇವ ಕುಟುಂಬ' ಈ ಹೊಸ ಕಥೆಯ ಧಾರಾವಾಹಿ ಇದೇ ಸೋಮವಾರದಿಂದ (ಸೆಪ್ಟೆಂಬರ್ 15) ಪ್ರತಿದಿನ ರಾತ್ರಿ 8.30 ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











