ಎರಡು ತದ್ವಿರುದ್ಧ ಮನಸುಗಳ ಹೊಚ್ಚ ಹೊಸ ಧಾರಾವಾಹಿ 'ನೀ ಇರಲು ಜೊತೆಯಲ್ಲಿ'; ವೀಕ್ಷಕರಿಗೆ ಮಸ್ತ್ ಮನರಂಜನೆ
ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳ ಪರ್ವ ಶುರುವಾಗಿದೆ. ಕನ್ನಡದ ಮನರಂಜನಾ ವಾಹಿನಿಗಳು ಹೊಸ ಹೊಸ ಸೀರಿಯಲ್ಗಳನ್ನು ವೀಕ್ಷಕರ ಮುಂದೆ ತರುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಈಗಾಗಲೇ ಅದರ ಪ್ರಚಾರವನ್ನು ಭರ್ಜರಿಯಾಗಿ ಶುರು ಮಾಡಿದ್ದಾರೆ. ಹೊಸ ಧಾರಾವಾಹಿಗಳನ್ನು ಪರಿಚಯಿಸುತ್ತಿರುವ ವಾಹಿನಿಯಲ್ಲಿ ಸ್ಟಾರ್ ಸುವರ್ಣ ಕೂಡ ಮುಂದಿದೆ.
ಕನ್ನಡ ಕಿರುತೆರೆ ವೀಕ್ಷಕರಿಗೆ ಉತ್ತರ ಕಥೆಯುಳ್ಳ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅದುವೇ 'ನೀ ಇರಲು ಜೊತೆಯಲ್ಲಿ'. ಶೀಘ್ರದಲ್ಲಿಯೇ ಈ ಧಾರಾವಾಹಿ ಕನ್ನಡಿಗರ ಪ್ರತಿಯೊಬ್ಬರ ಮನೆಯನ್ನು ತಲುಪಲಿದೆ. ಅದಕ್ಕೆ ಈಗಾಗಲೇ ವೇದಿಕೆ ಕೂಡ ಸಜ್ಜಾಗಿದೆ.

'ನೀ ಇರಲು ಜೊತೆಯಲ್ಲಿ' ಧಾರಾವಾಹಿಯ ಪ್ರೋಮೋ ಈಗಾಗಲೇ ರಿಲೀಸ್ ಆಗಿದೆ. ಈ ಪ್ರೋಮೊ ವೀಕ್ಷಕರನ್ನು ಸೆಳೆದಿದೆ. ಸೀರಿಯಲ್ ಹೀರೋ ಸೇರಿದಂತೆ ಸ್ಟಾರ್ ಕಾಸ್ಟ್ ವೀಕ್ಷಕರಿಗೆ ಇಷ್ಟ ಆಗಿದೆ. ಇನ್ನು ಧಾರಾವಾಹಿಯ ಕಥೆಯ ಮೇಲೆ ವೀಕ್ಷಕರ ಕುತೂಹಲ ನೆಟ್ಟಿದೆ. ಕಿರುತೆರೆಯಲ್ಲಿ ಈಗಾಗಲೇ ಇರುವ ಪೈಪೋಟಿಗಳ ಮಧ್ಯೆ ಈ ಹೊಸ ಧಾರಾವಾಹಿ ವಿಭಿನ್ನವಾಗಿ ನಿಲ್ಲಬೇಕಿದೆ.
ಅಂದ್ಹಾಗೆ ಈ ಧಾರಾವಾಹಿಯ ಕಥೆ ಕಡೆಗೆ ಬರೋದಾದರೇ, ತುಂಟತನದಿಂದ ಮಾತಾಡುವ ಕಥಾನಾಯಕ ಕೃಷ್ಣ. ಈತ ಸ್ವಾತಂತ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯುಳ್ಳವನು. ಈತ ಕೆಲಸದಲ್ಲಿ ಜಾಣ್ಮೆ ಹಾಗೂ ನಿಪುಣತೆ ಹೊಂದಿರುವ ವ್ಯಕ್ತಿ. ಇನ್ನು ತಂತ್ರದಲ್ಲಿ ಕಪಟಿಯಾಗಿದ್ದರೂ ಮಾಡಿರುವ ಸಹಾಯಕ್ಕೆ ಪ್ರತಿಫಲವನ್ನು ನಿರೀಕ್ಷೆಯನ್ನೇ ಮಾಡದ ಅಧುನಿಕ ಕಾಲದ ಶ್ರೀ ಕೃಷ್ಣನೀತ.
ಆದರೆ, ಆಧುನಿಕ ಕಾಲದ ಕೃಷ್ಣನಾಗಿ ಕಾಣಿಸಿಕೊಳ್ಳುತ್ತಿರುವ ನಟನಿಗೆ ಕಾಟ ಕೊಡೋಳು ಅತ್ತಿಗೆ ಊರ್ಮಿಳಾ ದಿವಾನ್. ಇಲ್ಲಿ ನನ್ನದೇ ನಡಿಬೇಕು, ನನ್ನಿಂದಲೇ ಎಲ್ಲಾ ಎಂಬ ಅಹಂಕಾರದಿಂದ ಊರ್ಮಿಳಾ ಮೆರೆಯುತ್ತಿರುತ್ತಾಳೆ. ಅವಳ ಅಹಂಕಾರವನ್ನೇ ಒಡವೆಯನ್ನಾಗಿ ಮಾಡಿಕೊಂಡು ಮನೆಮಂದಿಯನ್ನೆಲ್ಲಾ ತನ್ನ ಕೈಗೊಂಬೆಯಾಗಿಸಿಕೊಂಡಿದ್ದಾಳೆ. ಹೀಗಾಗಿ ಆಧುನಿಕ ಕೃಷ್ಣನಂತಿರುವ ಧಾರಾವಾಹಿಯ ಹೀರೋ ಕಂಡೆ ಆಗುವುದಿಲ್ಲ.

ಇನ್ನು ಈ ಧಾರಾವಾಹಿಯ ನಾಯಕಿ ರಚನಾ ಪಟೇಲ್ ತಂದೆಯ ಮುದ್ದಿನ ಮಗಳು. ಶಿಕ್ಷಣದಲ್ಲಿಸ ಈಕೆ ಅತ್ಯಂತ ಪ್ರತಿಭಾವಂತೆ. ಯಾರನ್ನು ನೋಯಿಸದ ಮಾತೃ ಹೃದಯಿ. ಸೌಂದರ್ಯವನ್ನು ಕೇವಲ ಮುಖದಲ್ಲಿ ಅಷ್ಟೇ ನಡವಳಿಕೆಯಲ್ಲಿಯೂ ಇಟ್ಟುಕೊಂಡಿರುವವಳು. ಜೊತೆಗೆ ಎಲ್ಲರನ್ನೂ ಒಗ್ಗೂಡಿಸಿರುವ ಈಕೆಗೆ, ಸಾಧನೆಯ ಶಿಖರವೇರಿರುವ ಊರ್ಮಿಳಾ ದಿವಾನ್ ಅವರೇ ಆದರ್ಶ. ಆಕೆಯಂತೆ ಏನನ್ನಾದರೂ ಸಾಧಿಸಬೇಕೆಂಬ ಛಲ ರಚನಾಳಿಗೆ ಹುಟ್ಟಿಕೊಡಿದವೆ.
ಇನ್ನು ಸೊಕ್ಕಿನಿಂದ ಮೆರಿತಿರೋ ಊರ್ಮಿಳಾಗೆ ಮುಂದಿನ ದಿನಗಳಲ್ಲಿ ಈ ಆಧುನಿಕ ಕೃಷ್ಣ ತಕ್ಕ ಪಾಠ ಕಲಿಸಬಹುದೇ? ಎರಡು ತದ್ವಿರುದ್ಧ ಭಾವಗಳನ್ನು ಹೊಂದಿರುವ ಕೃಷ್ಣ,ರಚನಾ ಹೇಗೆ ಒಂದಾಗುತ್ತಾರಾ? ಚನಾಗೆ ಆದರ್ಶವಾಗಿರೋ ಊರ್ಮಿಳಾ ಒಂದಾಗುತ್ತಾರಾ? ಕನ್ನಡ ಕಿರುತೆರೆಯಲ್ಲಿ ಸುವರ್ಣದಲ್ಲಿ ಇತಿಹಾಸ ಬರೆದಿರೋ 'ಅಮೃತವರ್ಷಿಣಿ' ಧಾರಾವಾಹಿ ಖ್ಯಾತಿಯ ರಜಿನಿ, ವರ್ಷಗಳ ಬಳಿಕ ಈ ಕಥೆಯ ಮೂಲಕ ಸುವರ್ಣ ವಾಹಿಗೆ ಕಮ್ ಬ್ಯಾಕ್ ಆಗಿದ್ದು, ಊರ್ಮಿಳಾ ದಿವಾನ್ ಎಂಬ ಮುಖ್ಯ ಖಳನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಯಕನಾಗಿ ಪವನ್ ರವೀಂದ್ರ ಹಾಗೂ ನಾಯಕಿಯಾಗಿ ಸಲೋಮಿ ಡಿಸೋಜಾ ಬಣ್ಣ ಹಚ್ಚಿದ್ದಾರೆ. ಜೊತೆಗೆ ನಟ ಮೋಹನ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ನಟ-ನಟಿಯರು ಅಭಿನಯಿಸುತ್ತಿದ್ದಾರೆ.
ಮುದ್ದುಲಕ್ಷ್ಮಿ, ಮರಳಿ ಬಂದಳು ಸೀತೆ, ಮರಳಿ ಮನಸಾಗಿದೆ ಸೇರಿದಂತೆ ಇನ್ನೂ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿರುವ ಧರಣಿ ಜಿ.ರಮೇಶ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ 'ನೀ ಇರಲು ಜೊತೆಯಲ್ಲಿ' ಧಾರಾವಾಹಿ ಮೂಡಿ ಬರಲಿದೆ.


Click it and Unblock the Notifications











