ಪೈಲ್ವಾನನ ಪ್ರೀತಿಯ ಕಥೆ 'ಮರ್ಯಾದೆ ರಾಮಣ್ಣ' ಕಿರುತೆರೆ ಎಂಟ್ರಿ ಮುಹೂರ್ತ ಫಿಕ್ಸ್; ಯಾವಾಗ? ಎಲ್ಲಿ?
ಕಿರುತೆರೆಯಲ್ಲಿ ವೀಕ್ಷಕರನ್ನು ಮನರಂಜಿಸುವುದಕ್ಕೆ ಒಂದಲ್ಲ ಒಂದು ಹೊಸ ಧಾರಾವಾಹಿಗಳು ಪ್ರಸಾರ ಆಗುತ್ತಲೇ ಇರುತ್ತವೆ. ಕನ್ನಡದ ವಾಹಿನಿಗಳು ಕೂಡ ಪೈಪೋಟಿಗೆ ಬಿದ್ದು ಹೊಸ ಸೀರಿಯಲ್ಗಳನ್ನು ಪ್ರಸಾರ ಮಾಡುತ್ತಿರುತ್ತವೆ. ಸ್ಟಾರ್ ಸುವರ್ಣ ಕೂಡ ಹೊಚ್ಚ ಹೊಸ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಕಿಕ್ ಕೊಡುವುದಕ್ಕೆ ರೆಡಿಯಾಗಿದೆ. ಮುಂದಿನ ವಾರದಿಂದ ಹೊಸ ಸೀರಿಯಲ್ ಪ್ರಸಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.
ಕನ್ನಡ ಕಿರುತೆರೆ ವೀಕ್ಷಕರಿಗೆ ಸ್ಟಾರ್ ಸುವರ್ಣ ವಾಹಿನಿಯು ವಿನೂತನ ರೀತಿಯ ಧಾರಾವಾಹಿಗಳನ್ನು ನೀಡುತ್ತಲೇ ಇದೆ. ಈ ಹಿಂದೆ ಕೂಡ ಪೌರಾಣಿಕ, ಕೌಟುಂಬಿಕ ಧಾರಾವಾಹಿಗಳಿಂದ ಹಿಡಿದು ಭಕ್ತಿ ಪ್ರಧಾನ ಸೀರಿಯಲ್ ಅನ್ನೂ ಪ್ರಸಾರ ಮಾಡಿದೆ. ಈಗ ಈ ಸಾಲಿಗೆ ಹೊಚ್ಚ ಹೊಸ ಸೀರಿಯಲ್ ಸೇರ್ಪಡೆಯಾಗುತ್ತಿದೆ. ಅದುವೇ 'ಮರ್ಯಾದೆ ರಾಮಣ್ಣ'. ಈಗಾಗಲೇ ಈ ಸೀರಿಯಲ್ನ ತುಣುಕುಗಳು ವೀಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ.

'ಮರ್ಯಾದೆ ರಾಮಣ್ಣ' ಧಾರಾವಾಹಿ ಮೂಲಕ ನಟ ಚೇತನ್ ಚಂದ್ರ ಮತ್ತೆ ಕಿರುತೆರೆ ಕಮ್ಬ್ಯಾಕ್ ಮಾಡುತ್ತಿದ್ದಾರೆ. ಈ ಸೀರಿಯಲ್ನ ಪ್ರಮುಖ ಪಾತ್ರ ಪೈಲ್ವಾನ್ ರಾಮಣ್ಣನ ಪಾತ್ರದಲ್ಲಿ ಚೇತನ್ ಚಂದ್ರ ಕಾಣಿಸಿಕೊಳ್ಳುತ್ತಿದ್ದಾರೆ. ಕಿರುತೆರೆಯಲ್ಲಿ ಕುಸ್ತಿಪಟುವಿನ ಕಥೆಯನ್ನು ಪ್ರಸಾರ ಆಗಿದ್ದು ತೀರಾ ವಿರಳ. ಹೀಗಾಗಿ ಈ ಧಾರಾವಾಹಿ ಪ್ರೇಕ್ಷಕರನ್ನು ಸೆಳೆಯುವ ಎಲ್ಲಾ ಲಕ್ಷಣಗಳು ಇವೆ. ಹಾಗಿದ್ದರೆ, ಈ ಸೀರಿಯಲ್ ಯಾವಾಗ? ಎಲ್ಲಿ? ಪ್ರಸಾರ ಆಗಲಿದೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಕಥಾನಾಯಕ ರಾಮಣ್ಣ ಅಖಾಡಕ್ಕೆ ಇಳಿದ್ರೆ ಯಾರಿಗೂ ಜಗ್ಗದ ಮಲ್ಲಿಗೆಪುರದ ಪೈಲ್ವಾನ. ಅಮ್ಮನ ಮಾತಿನ ಚಾಚೂ ತಪ್ಪದೆ ಪಾಲಿಸೋ ಈತ ಆಕಾಶವೇ ತಲೆ ಮೇಲೆ ಬಿದ್ದರೂ ಅಮ್ಮನ ಮಾತು ಮೀರುವುದಿಲ್ಲ. ರಾಮಣ್ಣ ಪಕ್ಕಾ ಹಳ್ಳಿ ಹೈದ. ತೊಡೆ ತಟ್ಟಿ ಕುಸ್ತಿ ಗೆಲ್ಲೊ ರಾಮಣ್ಣ ಅಮ್ಮ ಜಯಮ್ಮನ ಮಾತಿಗೆ ಕಟ್ಟು ಬಿದ್ದು ಬ್ರಹ್ಮಚಾರಿಯಾಗಿ ಉಳಿದಿದ್ದಾನೆ. ಜಯಮ್ಮನ ಮರ್ಯಾದೆಗೆ ಕಿಂಚಿತ್ತೂ ಕುತ್ತು ಬರದಂತೆ ಕಾಯೋ ಮುದ್ದಿನ ಮಗ. ಮರ್ಯಾದೆ ಉಳಿಸೋಕೆ ಇನ್ನೊಂದು ಹೆಸರೇ ರಾಮಣ್ಣ.
ಬಿಕಿನಿಯಲ್ಲಿ ಮೌನ ಗುಡ್ಡೆಮನೆ ಬಿಂದಾಸ್ ಅವತಾರಕ್ಕೆ ಪಡ್ಡೆ ಹೈಕ್ಳು ಫಿದಾ; ವಿಡಿಯೋ ಫುಲ್ ವೈರಲ್
ಅಮ್ಮನ ಮಾತಿನಂತೆ ಬ್ರಹ್ಮಚರ್ಯೆ ಪಾಲಿಸುತ್ತಿರೋ ರಾಮಣ್ಣನ ಕಥಾನಾಯಕಿ ಐಶ್ವರ್ಯಾ. ಶ್ರೀಮಂತಿಕೆಯಲ್ಲಿ ಬೆಳೆದಿರೋ ಅಪ್ಸರೆಯಂಥಾ ಹುಡುಗಿ. ತನ್ನ ಮಾತನ್ನೇ ಎಲ್ಲರೂ ಕೇಳುವಂತೆ ಮಾಡೋ ಅಪ್ಪನ ಮುದ್ದಿನ ಮಗಳು. ತಾನು ಸ್ವಂತ ಕಾಲಿನ ಮೇಲೆ ನಿಂತು, ವಿದೇಶಕ್ಕೆ ಹೋಗಿ ಸೆಟಲ್ ಆಗಬೇಕು ಅನ್ನೋದು ಆಸೆ. ಇದೇ ನನ್ನ ಲೈಫು ಅನ್ಕೊಂಡಿರೋ ಪ್ಯಾಟೆ ಹುಡುಗಿ. ಈಕೆ ನೋಡೋಕೆ ಮುದ್ದು, ಆದರೆ ಸಿಕ್ಕಾಪಟ್ಟೆ ಸಿಡಿಮದ್ದು.

ಇತ್ತ ಮದ್ವೆನೇ ಆಗಲ್ಲ ಅಂತ ಬ್ರಹ್ಮಚಾರಿ ಆಗಿರುವ ರಾಮಣ್ಣನ ಬಾಳಿಗೆ ಐಶ್ವರ್ಯಾ ಸುಂಟರಗಾಳಿ ಹಾಗೆ ಎಂಟ್ರಿ ಕೊಟ್ಟರೆ ಮುಂದೆ ಏನಾಗ್ಬಹುದು? ಅಮ್ಮನಿಗೆ ಕೊಟ್ಟಿರೋ ಮಾತನ್ನು ರಾಮಣ್ಣ ಹೇಗೆ ನಿಭಾಯಿಸಬಹುದು? ಅಮ್ಮ ಹಾಗೂ ಐಶ್ವರ್ಯಾ ನಡುವೆ ಸಿಕ್ಕಿಕೊಂಡು ಪರದಾಡಬಹುದೇ? ಮುಂದೆ ಈ ಧಾರಾವಾಹಿಯ ಯಾವ ರೂಪ ಪಡೆದುಕೊಳ್ಳಬಹುದು ಎಂಬುವುದೇ ಈ ಧಾರಾವಾಹಿಯ ಮುಖ್ಯ ಕಥಾ ಹಂದರ.
'ಮರ್ಯಾದೆ ರಾಮಣ್ಣ' ಸೀರಿಯಲ್ ಸ್ಟಾರ್ ಕಾಸ್ಟ್ ಅದ್ಭುತವಾಗಿದೆ. ಈ ಸೀರಿಯಲ್ನ ನಾಯಕನಾಗಿ ಚೇತನ್ ಚಂದ್ರ ನಟಿಸಿದ್ದಾರೆ. ರಾಮಣ್ಣ ಅವತಾರದಲ್ಲಿ ಮತ್ತೆ ಕಿರುತೆರೆ ವೀಕ್ಷಕರನ್ನು ಸೆಳೆಯುವುದಕ್ಕೆ ಬರುತ್ತಿದ್ದಾರೆ. ಇವರಿಗೆ ನಾಯಕಿಯಾಗಿ ಜೀವಿತಾ ವಸಿಷ್ಠ ನಟಿಸುತ್ತಿದ್ದಾರೆ. ರಾಮಣ್ಣ ಅಮ್ಮನಾಗಿ ವೀಣಾಸುಂದರ್ ನಟಿಸುತ್ತಿದ್ದಾರೆ. ಇವರೊಂದಿಗೆ ಸುಂದರ್, ವಿದ್ಯಾ ಮೂರ್ತಿ, ಶ್ರೀಕಾಂತ್ ಹೆಬ್ಳಿಕರ್, ಸೌಮ್ಯಲತ, ವಿಠ್ಠಲ್ ಕಾಮತ್, ಯದು ಗಿರೀಶ್ ಸೇರಿದಂತೆ ಅನುಭವಿ ಕಲಾವಿದರ ದೊಡ್ಡ ಬಳಗವೇ ಈ ಸೀರಿಯಲ್ನಲ್ಲಿ ನಟಿಸಿದ್ದಾರೆ.
ತಾಯಿಗಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಿರೋ ಪೈಲ್ವಾನನ ಪ್ರೀತಿಯ ಕಥೆ 'ಮರ್ಯಾದೆ ರಾಮಣ್ಣ' ಇದೇ ಮೇ 25 ರಿಂದ ಆರಂಭ ಆಗುತ್ತಿದೆ. ಈ ಧಾರಾವಾಹಿ ಪ್ರತಿ ದಿನ ರಾತ್ರಿ 9 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹಾಗೂ ಜಿಯೋಹಾಟ್ಸ್ಟಾರ್ನಲ್ಲಿ ಪ್ರಸಾರ ಆಗುತ್ತಿದೆ. ಕನ್ನಡ ಕಿರುತೆರೆಯಲ್ಲಿ ಮತ್ತೊಂದು ಲವ್ ಹಾಗೂ ಕೌಟುಂಬಿಕ ಹಿನ್ನೆಲೆಯುಳ್ಳ ಕಥೆ ವೀಕ್ಷಕರನ್ನು ಸೆಳೆಯುವುದಕ್ಕೆ ಬರುತ್ತಿದೆ.


Click it and Unblock the Notifications