'ಗೌರಿ ಶಂಕರ','ನೀ ಇರಲು ಜೊತೆಯಲ್ಲಿ','ಶಾರದೆ';ಒಂದರಲ್ಲೇ ಮೂರು ಸೀರಿಯಲ್.. ಇದು ತ್ರಿವೇಣಿ ಸಂಗಮ
ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಸೀರಿಯಲ್ಗಳು ಪ್ರಸಾರ ಆಗುತ್ತಲೇ ಇರುತ್ತವೆ. ಇನ್ನು ಕೆಲವೊಮ್ಮೆ ಸೀರಿಯಲ್ಗಳಲ್ಲಿ ನಾನಾ ರೀತಿಯ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಇತ್ತೀಚೆಗೆ ಎರಡು ಸೀರಿಯಲ್ಗಳನ್ನು ಒಟ್ಟಿಗೆ ಸೇರಿ 'ಮಹಾ ಸಂಗಮ'ದ ಪರಿಕಲ್ಪನೆ ಇದೆ. ಸಾಮಾನ್ಯವಾಗಿ ಒಂದೇ ವಾಹಿನಿಯ ಎರಡು ಸೀರಿಯಲ್ಗಳನ್ನು ಒಟ್ಟಿಗೆ ಸೇರಿಸಿ, ಮೆಗಾ ಎಪಿಸೋಡ್ (ಒಂದು ಗಂಟೆ) ಪ್ಲಾನ್ ಮಾಡಲಾಗುತ್ತೆ. ಇದು ಕಿರುತೆರೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದೆ.
ಆದ್ರೀಗ ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಮೂರು ಸೀರಿಯಲ್ಗಳನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಮಾಡಲಾಗಿದೆ. ಸಾಮಾನ್ಯವಾಗಿ ಎರಡು ಧಾರಾವಾಹಿಗಳು ಒಟ್ಟಿಗೆ ಸೇರಿದರೆ ಅದನ್ನು ಮಹಾ ಸಂಗಮ ಎಂದು ಹೇಳುತ್ತೇವೆ. ಈಗ ಸುವರ್ಣದಲ್ಲಿ ಮೂರು ಕಥೆಗಳನ್ನು ಸೇರಿಸಿ ತ್ರಿವೇಣಿ ಸಂಗಮ ಮಾಡುವುದಕ್ಕೆ ಹೊರಟಿದೆ. ಈ ಪ್ರಯೋಗ ಕನ್ನಡ ಕಿರುತೆರೆಯಲ್ಲಿಯೇ ಮೊದಲು ಎಂದು ಹೇಳಲಾಗುತ್ತಿದೆ.

ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿ 'ಗೌರಿ ಶಂಕರ', 'ನೀ ಇರಲು ಜೊತೆಯಲ್ಲಿ' ಹಾಗೂ 'ಶಾರದೆ' ಮೆಗಾ ಸಂಚಿಕೆಯಾಗಿ ಪ್ರಸಾರ ಆಗುತ್ತಿದೆ. ಈ ಮೂರು ಕಥೆಗಳು ಒಂದೇ ಸ್ಲಾಟ್ನಲ್ಲಿ ಬರಲಿಕ್ಕೆ ಇದೆ. ಇದೇ ಸೋಮವಾರದಿಂದ ಸಂಜೆ 6 ಗಂಟೆಯಿಂದ 7.30ರವರೆಗೆ ಪ್ರಸಾರ ಆಗುತ್ತಿದೆ. ಹಾಗಿದ್ದರೆ, ಸದ್ಯ ಮೂರು ಸೀರಿಯಲ್ನಲ್ಲಿ ಏನು ನಡೀತಿದೆ? ಈ ಮೂರು ಕಥೆಗಳನ್ನು ಹೇಗೆ ಸಿಂಕ್ ಮಾಡಲಾಗಿದೆ ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಗೌರಿ ಶಂಕರ
ಸ್ಟಾರ್ ಸುವರ್ಣ ಜನಪ್ರಿಯ ಧಾರಾವಾಹಿಗಳಲ್ಲಿ 'ಗೌರಿ ಶಂಕರ' ಕೂಡ ಒಂದು. ಈ ಸೀರಿಯಲ್ನಲ್ಲಿ ಸದ್ಯಕ್ಕೆ ಶಂಕರ, 'ಅಣ್ಣ' ಎನ್ನುವ ಮತ್ತೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂಥರಾ ಇದನ್ನು ದ್ವಿಪಾತ್ರ ಎಂದು ಹೇಳಬಹುದು. ಒಂದು ಕಡೆ ಶಂಕರನಾಗಿ ಕಂಡರೆ, ಇನ್ನೊಂದು ಕಡೆ ಅಣ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಅಣ್ಣ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾನೆ. ಹಾಗೇ ಎಲ್ಲಿ ಕೆಟ್ಟದು ನಡೆಯುತ್ತೋ ಅದನ್ನು ಸರಿ ಪಡಿಸುತ್ತಾನೆ. ಯಾರಿಗೂ ಗೊತ್ತಾಗದ ಹಾಗೆ ಅಣ್ಣನಾಗಿ ಸಹಾಯ ಮಾಡುತ್ತಿದ್ದಾನೆ.

ನೀ ಇರಲು ಜೊತೆಯಲ್ಲಿ
ಗೌರಿ ಶಂಕರದ ಅಣ್ಣ 'ನೀ ಇರಲು ಜೊತೆಯಲ್ಲಿ' ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾನೆ. ಇಲ್ಲಿ ಮದುವೆ ಸೀಕ್ವೆನ್ಸ್ ನಡೆಯುತ್ತಿದೆ. ಕೃಷ್ಣನಿಗೂ ಹಾಗೂ ರಾಧಾನಿಗೂ ಮದುವೆ ಮಾಡಬೇಕು ಎಂದು ನಿರ್ಧಾರ ಮಾಡಲಾಗಿರುತ್ತೆ. ಈ ಮದುವೆಯನ್ನು ನಿಲ್ಲಿಸುವುದಕ್ಕಾಗಿ ಅಣ್ಣ (ಶಂಕರ) ಸಮಾರಂಭಕ್ಕೆ ಬಂದಿರುತ್ತಾನೆ. ಆದರೆ, ಅಲ್ಲಿಗೆ ಬಂದ ಮೇಲೆ ಈ ಮದುವೆ ನಡೆಯಲೇಬೇಕು ಅನ್ನೋ ಅರಿವಿಗೆ ಬರುತ್ತಾನೆ. ಕೊನೆಯಲ್ಲಿ ಅವನೇ ಮದುವೆ ಮಾಡಿಸುವುದಕ್ಕೆ ರೆಡಿಯಾಗಿರುತ್ತಾನೆ.
ಶಾರದೆ
ಇನ್ನೊಂದು ಕಡೆ ಶಾರದೆ. ಇಲ್ಲಿ ಹೀರೋ-ಹೀರೋಯಿನ್ ಇಬ್ಬರೂ ಕ್ಯಾಟರಿಂಗ್ ಅನ್ನು ಮಾಡುತ್ತಿರುತ್ತಾರೆ. ನೀ ಇರಲು ಜೊತೆಯಲಿ ಧಾರಾವಾಹಿಯಲ್ಲಿ ನಡೆಯುತ್ತಿರುವ ಮದುವೆಗೆ ಕ್ಯಾಟರಿಂಗ್ ವ್ಯವಸ್ಥೆ ಅವರದ್ದೇ ಆಗಿರುತ್ತೆ. ಹೀಗಾಗಿ ಶಾರದೆ ಫ್ಯಾಮಿಲಿಯವರು, ಗೌರಿ ಶಂಕರ ಟೀಮ್ನವರು ನೀ ಇರಲು ಜೊತೆಯಲಿ ಮದುವೆಗೆ ಬಂದಿರುತ್ತಾರೆ. ಈ ಮೂರು ಧಾರಾವಾಹಿ ಒಂದೇ ಸನ್ನಿವೇಶದಲ್ಲಿ ಕಾಣಿಸಿಕೊಳ್ಳಿದ್ದು, ಕಿರುತೆರೆ ವೀಕ್ಷಕರಿಗೆ ಭರಪೂರ ಮನರಂಜನೆ ಸಿಗೋದು ಗ್ಯಾರಂಟಿ.
ಈ ಮದುವೆ ಎಪಿಸೋಡ್ ಒಂದು ವಾರ ನಡೆಯಲಿದೆ. ಕೃಷ್ಣ ಮತ್ತು ರಾಧಾ ಮದುವೆ ಸೀಕ್ವೆನ್ಸ್ ಜೊತೆಗೆ ಅದರಲ್ಲಿ ಬರುವ ಒಂದಿಷ್ಟು ವಿಘ್ನಗಳನ್ನು ಮೀರಿ ಅವರು ಯಾವ ರೀತಿ ಮದುವೆ ಆಗುತ್ತಾರೆ? ಮದುವೆಗೆ ಎರಡು ಕುಟುಂಬಗಳು ಹೇಗೆ ಜೊತೆಯಾಗುತ್ತವೆ? ಅನ್ನೋದು ಗೊತ್ತಾಗುತ್ತೆ. ಈ ಕಾರಣಕ್ಕೆ ಮೂರೂ ಧಾರಾವಾಹಿಯವರು ಒಂದು ಕಡೆ ಸೇರಿಕೊಂಡಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಯಿಂದ 7.30ರವರೆಗೆ ಪ್ರಸಾರ ಆಗಲಿದೆ.


Click it and Unblock the Notifications
