ಕ್ರಿಸ್ಮಸ್-ಹೊಸ ವರ್ಷದ ಸಂಭ್ರಮ; ಕಂಠಪೂರ್ತಿ ಕುಡಿದು ವ್ಯಕ್ತಿಯ ಪ್ರಾಣ ಬಲಿ ಪಡೆದ ನಟ-ಹೆಚ್ಚಾಯ್ತು ಸಂಕಷ್ಟ
ವಾಹನ ಚಾಲನೆ ಸೂಕ್ಷ್ಮ ಜವಾಬ್ದಾರಿ. ಈ ಸಮಯದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಚೂರು ಯಾಮಾರಿದರೂ ಕೂಡ ಅಪಾಯ ಕಟ್ಟಿಟ್ಟ ಬುತ್ತಿ. ನೀವು ಅಥವಾ ನಿಮ್ಮ ಎದುರು ಇರುವವರಲ್ಲಿ ಯಾರೇ ತಪ್ಪು ಮಾಡಿದರೂ ಕೂಡ ಸಂಕಷ್ಟ ತಪ್ಪಿದ್ದಲ್ಲ. ಆದರೂ ಕೂಡ ಕೆಲವರು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ. ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದರ ಜೊತೆಯಲ್ಲಿ ಬೇರೆಯವರ ಸಾವು ನೋವಿಗೂ ಕೂಡ ಕಾರಣವಾಗುತ್ತಾರೆ.
ಇನ್ನೂ ಕೆಲವರು ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿ ಅಮಾಯಕರ ಪ್ರಾಣವನ್ನು ಬಲಿ ಪಡೆಯುತ್ತಾರೆ. ಉದಾಹರಣೆಗೆ ಸಿದ್ದಾರ್ಥ್ ಪ್ರಭು ಅವರ ಪ್ರಕರಣವನ್ನೇ ತೆಗೆದುಕೊಳ್ಳಿ. ಹೌದು, ಸಿದ್ಧಾರ್ಥ್ ಪ್ರಭು .. ಮಲಯಾಳಂನ ಕಿರುತೆರೆಯ ಸ್ಟಾರ್. ''ಥತ್ತೀಮ್ ಮುತ್ತೀಮ್'' ಮತ್ತು ''ಉಪ್ಪುಮ್ ಮುಲಕುಮ್'' ಅಂತಹ ಧಾರಾವಾಹಿಗಳ ಮೂಲಕ ಕೇರಳಿಗರ ಹೃದಯವನ್ನು ಗೆದ್ದವರು ಇವರು.

ಇಂಥಾ ಸಿದ್ಧಾರ್ಥ್ ಪ್ರಭು ಕಳೆದ ವರ್ಷದ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಕಂಠಪೂರ್ತಿ ಎಣ್ಣೆ ಕುಡಿದಿದ್ದರು. ಎಣ್ಣೆ ಹೊಡೆದು ಕಾರು ಚಲಾಯಿಸಿಕೊಂಡು ಬಂದ ಸಿದ್ದಾರ್ಥ್ ಕೇರಳದ ನಟ್ಟಕಂ ಕಾಲೇಜ್ ಜಂಕ್ಷನ್ ಬಳಿ ಲಾಟರಿ ಟಿಕೆಟ್ ಮಾರುತ್ತಿದ್ದ 60 ವರ್ಷದ ತಂಗರಾಜ್ ಅವರಿಗೆ ಕಾರನ್ನು ಗುದ್ದಿದ್ದರು.
ಈ ಅಪಘಾತದಲ್ಲಿ ತಂಗರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ತಂಗರಾಜ್ಗೆ ಸಹಾಯ ಮಾಡಲು ಓಡಿ ಬಂದ ಹಲವರು ಇದೇ ಸಮಯದಲ್ಲಿ ಸಿದ್ದಾರ್ಥ್ ಅವರನ್ನು ಸುತ್ತುವರೆದು ಗಲಾಟೆ ಮಾಡಲು ಶುರು ಮಾಡಿದರು. ಮೊದಲೇ ಕುಡಿದ ಮತ್ತಿನಲ್ಲಿದ್ದ ಸಿದ್ದಾರ್ಥ್ ಜನರ ಆಕ್ರೋಶಕ್ಕೆ ಮಣಿಯುವ ಬದಲು ಹೆದರುವ ಬದಲು ಇನ್ನೂ ಕೆರಳಿದರು. ಸಾರ್ವಜನಿಕರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡುವ ಪ್ರಯತ್ನವನ್ನು ಕೂಡ ಮಾಡಿದ್ದರು.
ಆ ನಂತರ ಸಿದ್ದಾರ್ಥ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಡ್ರಿಂಕ್ & ಡ್ರೈವ್, ಅತಿವೇಗದ ಚಾಲನೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಸಿದ್ಧಾರ್ಥ್ ಪ್ರಭು ಅವರ ಈ ವರ್ತನೆಯನ್ನು ಬಿಂಬಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾರ್ವತ್ರಿಕ ವಲಯದಲ್ಲಿ ಆಕ್ರೋಶಕ್ಕೆ ಕೂಡ ಕಾರಣವಾಗಿತ್ತು.
ಇದೀಗ ಅಪಘಾತ ನಡೆದ ಒಂದು ವಾರದ ನಂತರ ಗಂಭೀರವಾಗಿ ಗಾಯಗೊಂಡು ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂಗರಾಜ್ ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದಾರೆ.

ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪೊಲೀಸರು ಪ್ರತಿಕ್ರಿಯೆಯನ್ನು ನೀಡಿದ್ದು ಬಂಧನದ ನಂತರವೂ ಕೂಡ ಸಿದ್ಧಾರ್ಥ್ ಪ್ರಭು ಪೊಲೀಸ್ ಠಾಣೆಯಲ್ಲಿ ತೊಂದರೆಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಎಣ್ಣೆಯ ಅಮಲಿನಲ್ಲಿ ಸಿದ್ದಾರ್ಥ್ ಪ್ರಭು ಇದ್ದಿದ್ದು ದೃಢವಾಗಿದೆ ಎಂದು ಕೂಡ ಪೊಲೀಸರು ಹೇಳಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಥಂಗರಾಜ್ ಅವರ ತಲೆಗೆ ಗಂಭೀರ ಗಾಯ ಆಗಿತ್ತು ಎಂದು ಕೂಡ ಹೇಳಿರುವ ಪೊಲೀಸರು, ಅಪಘಾತದ ನಂತರ ಅವರನ್ನು ಕೊಟ್ಟಾಯಂನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜನವರಿ 1 ರಂದು ಅವರು ಮೃತ ಪಟ್ಟರು ಎಂದು ಹೇಳಿದ್ದಾರೆ.
ಥಂಗರಾಜ್ ನಿಧನದ ಹಿನ್ನೆಲೆ ಈ ಸಿದ್ಧಾರ್ಥ್ ಪ್ರಭುಗೆ ಸಂಕಷ್ಟ ಹೆಚ್ಚಾಗಿದ್ದು, ಮೊದಲು ಅಜಾಗರೂಕತೆ ಮತ್ತು ಅತಿವೇಗದ ಚಾಲನೆ, ಡ್ರಿಂಕ್ & ಡ್ರೈವ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಈಗ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಬೇರೆ ಬೇರೆ ಆರೋಪವನ್ನು ಕೂಡ ಹೊರಿಸುವ ನಿರೀಕ್ಷೆ ಇದೆ. ಥಂಗರಾಜ್ ಸಾವಿಗೆ ಸಿದ್ಧಾರ್ಥ್ ಪ್ರಭು ಕಾರಣವಾದ ಹಿನ್ನೆಲೆ ಆಕ್ಸಿಡೆಂಟ್ ಮತ್ತು ಸಾವಿಗೆ ಕಾರಣವಾದ ಆರೋಪವನ್ನು ಕೂಡ ಹೊರಿಸುವ ಸಾಧ್ಯತೆ ಇದೆ ಎಂದು indiatvnews ವರದಿ ಮಾಡಿದೆ. ಬಂಧನಕ್ಕೊಳಗಾದ ನಂತರ ಜಾಮೀನು ಪಡೆದು ಹೊರ ಬಂದಿದ್ದ ಸಿದ್ಧಾರ್ಥ್ ಪ್ರಭು ಅವರನ್ನು ಮತ್ತೆ ಬಂಧಿಸುವ ಸಾಧ್ಯತೆ ಕೂಡ ಇದೆ.


Click it and Unblock the Notifications











