'ರಾಮಾಯಣ'ದಲ್ಲಿ ರಾವಣನ ಹತ್ಯೆ ಬಳಿಕ ಪ್ರಸಾರವಾಗಲಿದೆ 'ಉತ್ತರ ರಾಮಾಯಣ': ಯಾವಾಗ?
ಲಾಕ್ಡೌನ್ ಆರಂಭವಾಗುತ್ತಿದ್ದಂತೆಯೇ ದೂರದರ್ಶನ 80ರ ದಶಕದ ಜನಪ್ರಿಯ ಧಾರಾವಾಹಿ ದಯಾನಂದ ಸಾಗರ್ ನಿರ್ದೇಶನದ 'ರಾಮಾಯಣ'ದ ಮರುಪ್ರಸಾರ ಆರಂಭಿಸಿತ್ತು. ದಿನದ ಎರಡು ಸಮಯಗಳಲ್ಲಿ ಒಂದು ಗಂಟೆ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ನಿರೀಕ್ಷೆಗೂ ಮೀರಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಇದರ ಜತೆಗೆ ಮರುಪ್ರಸಾರ ಕಂಡಿರುವ 'ಮಹಾಭಾರತ'ಕ್ಕೂ ಜನರಿಂದ ಅಮೋಘ ಪ್ರತಿಕ್ರಿಯೆ ಸಿಕ್ಕಿದೆ.
ಈ ಎರಡು ಮಹಾಕಾವ್ಯಗಳನ್ನು ಆಧರಿಸಿದ ಧಾರಾವಾಹಿಗಳು ಮನೆಯಲ್ಲಿಯೇ ಕುಳಿತ ಜನರಿಗೆ ಮುದ ನೀಡುತ್ತಿವೆ. ಈಗ ರಮಾನಂದ ಸಾಗರ್ ಅವರ 'ರಾಮಾಯಣ'ದ ಕಥೆ ಒಂದು ಹಂತಕ್ಕೆ ತಲುಪಿದೆ. ಶ್ರೀರಾಮ ಮತ್ತು ರಾವಣನ ನಡುವೆ ಯುದ್ಧ ನಡೆದು ರಾವಣನನ್ನು ಕೊಂದು ಶ್ರೀರಾಮ ಸೀತಾ ದೇವಿಯನ್ನು ಮನೆಗೆ ಕರೆತರುವ ಎಪಿಸೋಡ್ ಸಮೀಪಿಸಿದೆ. ಮುಂದೆ ಓದಿ...

ಭಾನುವಾರ ರಾತ್ರಿಯಿಂದ ಪ್ರಸಾರ
'ರಾಮಾಯಣ'ದ ಪ್ರಮುಖ ಘಟ್ಟದಲ್ಲಿ ಸಂಭ್ರಮಾಚರಣೆಗಳು ಪೂರ್ಣಗೊಂಡ ಬಳಿಕ ಆ ಧಾರಾವಾಹಿಯ ಜಾಗದಲ್ಲಿ 'ಉತ್ತರ ರಾಮಾಯಣ' ಧಾರಾವಾಹಿ ಪ್ರಸಾರವಾಗಲಿದೆ. ಏಪ್ರಿಲ್ 19ರ ಭಾನುವಾರದಿಂದ ಡಿಡಿ ನ್ಯಾಷನಲ್ನಲ್ಲಿ ರಾತ್ರಿ 9 ಗಂಟೆಗೆ 'ಉತ್ತರ ರಾಮಾಯಣ' ಪ್ರಸಾರ ಆರಂಭವಾಗಲಿದೆ.

ರಮಾನಂದ ಸಾಗರ್ ಉತ್ತರ ರಾಮಾಯಣ
ದೂರದರ್ಶನ ವಾಹಿನಿ ಈ ಬಗ್ಗೆ ಟ್ವೀಟ್ ಮಾಡಿದ್ದು, 'ಉತ್ತರ ರಾಮಾಯಣ'ದ ಪ್ರಸಾರದ ಮಾಹಿತಿ ನೀಡಿದೆ. 'ಲವ್ ಕುಶ್' ಹೆಸರಿನಿಂದಲೇ ಹೆಸರಾಗಿದ್ದ 'ಉತ್ತರ ರಾಮಾಯಣ' ಕೂಡ ರಮಾನಂದ ಸಾಗರ್ ಅವರದ್ದು. 'ರಾಮಾಯಣ'ದಲ್ಲಿ ನಟಿಸಿದ್ದ ಬಹುತೇಕ ಕಲಾವಿದರು 'ಉತ್ತರ ರಾಮಾಯಣ'ದಲ್ಲಿಯೂ ನಟಿಸಿದ್ದರು.

ಉತ್ತರಕಾಂಡ ಕೃತಿಯ ಆಧಾರ
1988ರಲ್ಲಿ ಪ್ರಸಾರವಾಗಿದ್ದ 'ಲವ್ ಕುಶ್' ಉತ್ತರಕಾಂಡ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಸೃಷ್ಟಿಯಾಗಿತ್ತು. 'ರಾಮಾಯಣ'ದ ಬಳಿಕ ಇದು ಪ್ರಸಾರವಾಗಿತ್ತು. ಆ ಧಾರಾವಾಹಿ ಈಗ ದೂರದರ್ಶನದಲ್ಲಿ ಮತ್ತೆ ಪ್ರಸಾರವಾಗಲಿದ್ದು, 'ರಾಮಾಯಣ' ಮುಗಿಯಲಿದೆ ಎಂಬ ಬೇಸರವನ್ನು ಹೋಗಲಾಡಿಸಲಿದೆ.

ಅಂತಿಮ ಭಾಗ ಮರುಪ್ರಸಾರ
'ಯುದ್ಧ ಕಾಂಡ'ದ ಮುಖ್ಯ ಕಥನದ ಅಂತಿಮ ಭಾಗವನ್ನು ಭಾನುವಾರ ಬೆಳಿಗ್ಗೆ 9 ಗಂಟೆಗೆ ಮರು ಪ್ರಸಾರ ಮಾಡಲಾಗುತ್ತದೆ. ರಾತ್ರಿ 9 ಗಂಟೆಯಿಂದ ಉತ್ತರಕಾಂಡದ ಕಥನಕ್ಕೆ ಸಾಗಲಿದ್ದೇವೆ. ಇಲ್ಲಿಂದ ಉತ್ತರ ರಾಮಾಯಣ ಆರಂಭವಾಗಲಿದೆ' ಎಂದು ಪ್ರಸಾರ ಭಾರತಿ ಸಿಇಓ ಶಶಿ ಶೇಖರ್ ತಿಳಿಸಿದ್ದಾರೆ.


Click it and Unblock the Notifications











