Mandya Ramesh: ಶೂಟಿಂಗ್ ವೇಳೆ ಅವಘಡ, ಹಿರಿಯ ನಟ ಮಂಡ್ಯ ರಮೇಶ್ಗೆ ತೀವ್ರ ಗಾಯ
ಹಿರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಅವರು ಧಾರಾವಾಹಿ ಚಿತ್ರೀಕರಣದ ವೇಳೆ ಕಾಲು ಜಾರಿ ಬಿದ್ದಿದ್ದು, ತೀವ್ರಗಾಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ಧಾರಾವಾಹಿ ಶೂಟಿಂಗ್ ವೇಳೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಈ ಘಟನೆ ನಡೆದಿದೆ. ನಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರ ಕಾಣಲಿರುವ ಹೊಸ ಧಾರಾವಾಹಿ 'ಆಸೆ' ಶೂಟಿಂಗ್ ವೇಳೆ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಲ್ಲು ಕ್ವಾರಿಯಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಮೇಶ್ ಕಾಲು ಜಾರಿ ಬಿದ್ದಿದ್ದಾರೆ. ಘಟನೆಯಲ್ಲಿ ನಟ ಮಂಡ್ಯ ರಮೇಶ್ ಅವರ ಕಾಲು ಮತ್ತು ಮುಂಗೈ ಮುರಿತವಾಗಿದೆ ಎಂದು ವರದಿಯಾಗಿದೆ.

ನಟ ಮಂಡ್ಯ ರಮೇಶ್ ಅವರು ನಟ ರಮೇಶ್ ಅರವಿಂದ್ ನಿರ್ಮಾಣ ಮಾಡುತ್ತಿರುವ 'ಆಸೆ' ಸೀರಿಯಲ್ನಲ್ಲಿ ಪ್ರಮುಖ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಶೂಟಿಂಗ್ ಬೆಂಗಳೂರಿನ ರಾಜರಾಜೇಶ್ವರಿ ನಗರದ ಹೊರಭಾಗದಲ್ಲಿರುವ ಕಲ್ಲು ಕ್ವಾರಿಯ ಬಳಿ ನಡೆಯುತ್ತಿತ್ತು, ಈ ವೇಳೆ ದುರ್ಘಟನೆ ನಡೆದಿದೆ.
ಕಲ್ಲು ಕ್ವಾರಿಯಲ್ಲಿ ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯರು ಕಾಲಿಗೆ ಎರಡು ಆಪರೇಷನ್ ಮಾಡಿದ್ದಾರೆ ಎಂದು ವರದಿಯಾಗಿದೆ. ಶೂಟಿಂಗ್ ಸ್ಥಳದಲ್ಲಿ ಮೇಲಿಂದ ಬಿದ್ದ ಕಾರಣ ಮುಂಗೈ ಮತ್ತು ಬಲಗಾಲಿಗೆ ತೀವ್ರಗಾಯವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.
ರಮೇಶ್ ಅರವಿಂದ್ ನಿರ್ಮಾಣದ 'ಆಸೆ'
ಕನ್ನಡದ ಸ್ಟಾರ್ ಸುವರ್ಣದಲ್ಲಿ 'ಆಸೆ' ಧಾರಾವಾಹಿ ಪ್ರಸಾರವಾಗಲಿದ್ದು, ಇದನ್ನು ನಟ, ನಿರೂಪಕ ರಮೇಶ್ ಅರವಿಂದ್ ನಿರ್ಮಾಣ ಮಾಡುತ್ತಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪುಣ್ಯವತಿ' ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪದ್ಮಿನಿಯಾಗಿ ನಟಿಸಿದ್ದ ನಟಿ ಪ್ರಿಯಾಂಕಾ 'ಆಸೆ'ಯಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಮತ್ತೆ ಕಿರುತೆರೆಗೆ ಮರಳಿದ್ದಾರೆ.

ಆಸೆ' ಧಾರಾವಾಹಿ ನಾಯಕನಾಗಿ 'ನಾಗಿಣಿ 2' ಖ್ಯಾತಿಯ ನಿನಾದ್ ಹರಿತ್ಸ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಂಡ್ಯ ರಮೇಶ್, ನಾಗೇಂದ್ರ ಶಾ, ಸ್ನೇಹ ನಂದೀಶ್, ಛಾಯಾ ಮುಂತಾದವರು ತಾರಾಗಣದಲ್ಲಿದ್ದಾರೆ. ಸೀರಿಯಲ್ ಪ್ರೊಮೋ ಬಿಡುಗಡೆಯಾಗಿದೆ. ಈ ಅವಘಡದಿಂದಾಗಿ ಮಂಡ್ಯ ರಮೇಶ್ ಅವರು 25 ದಿನ ರೆಸ್ಟ್ ತೆಗೆದುಕೊಳ್ಳಬೇಕಿದೆ.


Click it and Unblock the Notifications











