ಕನ್ನಡದ ಈ ಧಾರಾವಾಹಿ ಕಥೆಗಳಲ್ಲಿ ಬಾಡಿಗೆ ತಾಯ್ತನ ಹೈಲೈಟ್ ಆಗುತ್ತಿರೋದೇಕೆ?
ಪ್ರತಿಯೊಂದು ದಂಪತಿಗೂ ತಮಗೆ ಮಕ್ಕಳಾಗಬೇಕೆಂಬ ಆಸೆ ಇರುತ್ತದೆ. ಕಾರಣಾಂತರಗಳಿಂದ ಆಸೆ ಫಲಕಾರಿ ಆಗದಾಗ ಇಂದಿನ ವೈದ್ಯಕೀಯ ತಂತ್ರಜ್ಞಾನ ಬಳಸಿ ಬಾಡಿಗೆ ತಾಯ್ತನ ಇತ್ಯಾದಿಗಳ ಮೂಲಕ ಮಕ್ಕಳನ್ನು ಪಡೆಯುತ್ತಾರೆ.
ಇದು ಇಂದು ಸಮಾಜದಲ್ಲಿ ಬಹಳ ಸಾಮಾನ್ಯ ಎಂಬಂತಾಗುತ್ತಿದೆ. ಇದನ್ನೇ 10 ವರ್ಷಗಳ ಹಿಂದೆ 'ಜೋಗುಳ' ಎನ್ನುವ ಧಾರಾವಾಹಿಯಲ್ಲಿ ಮೂಲಕ ತೋರಿಸಲಾಗಿತ್ತು. ಈಗ ಧಾರಾವಾಹಿಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತಿದೆ.

ಕಲಾವಿದರಾದ ಜ್ಯೋತಿ ರೈ, ನಂದಿನಿ ಗೌಡ, ಅಪರ್ಣ ವಸ್ತಾರೆ, ಮಧು ಹೆಗಡೆ, ಮಂಜುನಾಥ್ ಹೆಗಡೆ, ಸುರೇಶ್ ರೈ, ಗ್ರೀಷ್ಮ, ನಿಶಿತಾ ಗೌಡ, ಹಿರಣ್ಣಯ್ಯ ಮುಂತಾದವರು ಅಭಿನಯಿಸಿದ್ದರು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ, 300ಕ್ಕೂ ಹೆಚ್ಚಿನ ಸಂಚಿಕೆಗಳ ಮೂಲಕ ವಿಭಿನ್ನ ಕಥಾ ಹೊಂದಿರದೊಂದಿಗೆ ಕನ್ನಡ ಕಿರುತೆರೆಯಲ್ಲೇ ಹೊಸ ಸಂಚಲನ ಮೂಡಿಸಿತ್ತು.
ಯಶೋಧ ಹಾಗೂ ನಂದಕಿಶೋರ ಎಂಬ ದಂಪತಿಗೆ ಮದುವೆಯಾಗಿ 9 ವರ್ಷಗಳಾದರೂ ಮಕ್ಕಳಾಗಿಲ್ಲ ಎಂಬ ಕೊರಗಿರುವಾಗಲೇ ದೇವಕಿ ಎಂಬ ಹುಡುಗಿ ಹಣದ ಅವಶ್ಯಕತೆ ಇರುವುದರಿಂದ ಬಾಡಿಗೆ ತಾಯಿಯಾಗಲು ಒಪ್ಪುತ್ತಾಳೆ. ಆದರೆ, ಮಗು ಹೆತ್ತ ಮೇಲೆ ಆಕೆಗೆ ಮಗುವಿನ ಮೇಲಿನ ಮೋಹ ಆ ಮಗುವನ್ನು ಈ ದಂಪತಿಗೆ ಕೊಡಲು ಬಿಡುವುದಿಲ್ಲ. ತಮ್ಮದೇ ಮಗು ಇನ್ನೊಬ್ಬಳ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಎಂದು ಮಗು ಹುಟ್ಟುವುದಕ್ಕೆ ಕಾದ ಆ ದಂಪತಿಗೆ ಬಹಳ ದೊಡ್ಡ ಶಾಕ್ ಆಗುತ್ತದೆ. ನಂತರ ಇವರೆಲ್ಲರ ನಡುವೆ ನಡೆಯುವ ಸಂಘರ್ಷಗಳು ಭಾವನಾತ್ಮಕವಾಗಿ ಕನ್ನಡ ಕಿರುತೆರೆ ಪ್ರೇಕ್ಷಕರ ಮನ ಸೆಳೆದಿತ್ತು. ದಶಕದ ಹಿಂದೆ ಪ್ರಸಾರವಾದ ಈ ಧಾರಾವಾಹಿ ಜೀ ಕನ್ನಡದ ಸೂಪರ್ ಹಿಟ್ ಧಾರಾವಾಹಿಯಾಗಿತ್ತು.
ಮದುವೆಯಾಗಿ 9 ವರ್ಷಗಳಾದರೂ ತಾಯಿಯಾಗದ ಹೆಣ್ಣೊಬ್ಬಳು ಬಾಡಿಗೆ ತಾಯ್ತನದ ಮೊರೆ ಹೋಗುತ್ತಾಳೆ. ಮನೆಯಲ್ಲಿ ಹಲವಾರು ಕಷ್ಟಗಳಿರುವ ಹೆಣ್ಣು ಒಬ್ಬಳು ಬೆಂಗಳೂರು ಸೇರಿ ಹಣ ಮಾಡಬೇಕೆಂಬ ಆಸೆ ಹೊಂದಿರುತ್ತಾಳೆ. ಎಷ್ಟೇ ಕಷ್ಟಪಟ್ಟರೂ ಹಣ ಹೊಂದಿಸಲು ಸಾಧ್ಯವಾಗದಾಗ ಬಾಡಿಗೆ ತಾಯಿಯಾಗಲು ಒಪ್ಪುತ್ತಾಳೆ. ಈ ರೀತಿ ಎರಡು ಅಸಹಾಯಕ ಹೆಣ್ಣು ಜೀವಿಗಳ ನಡುವೆ ಆಗುವ ಒಪ್ಪಂದ ಅವರ ಮುಂದಿನ ಜೀವನಕ್ಕೆ ಗೊತ್ತಾಗುತ್ತದೆ. ಬೇರೆಯವರ ಮಗುಆಗಿದ್ದರೂ ತನ್ನ ಗರ್ಭದಲ್ಲಿ ಒಂಬತ್ತು ತಿಂಗಳು ಹೊತ್ತು ಹೆತ್ತು ಆ ಮಗುವನ್ನು ಇನ್ನೊಬ್ಬರಿಗೆ ಕೊಡುವಲ್ಲಿ ಮನಸಾಗದ ಆ ತಾಯಿಯ ತೊಳಲಾಟ, ಇತ್ತ ತಾನು ಹೆರದಿದ್ದರೂ ಮಗುವನ್ನು ತಾಯಿಯಂತೆ ನೋಡಿಕೊಳ್ಳಲು ಸಿದ್ಧಳಾಗಿರುವ ಹೆಣ್ಣೊಬ್ಬಳ ಹಪಾಹಪಿ! ಎಲ್ಲವನ್ನು ಬಹಳ ಚೆನ್ನಾಗಿ ತೆರೆ ಮೇಲೆ ಹಿಡಿದು ಕೊಟ್ಟಿದ್ದರು, ನಿರ್ದೇಶಕ ವಿನು ಬಳಂಜ. ತೆರೆ ಮೇಲೆ ಬರಿಯ ಕಥೆಯಾಗಿ ಕಾಣುವ ಇಂತಹ ಸನ್ನಿವೇಶಗಳು ನಿಜ ಜೀವನದಲ್ಲೂ ಹಲವಾರು ಜನರ ವ್ಯಥೆಯಾಗಿರುವುದಿದೆ.
ಈ ರೀತಿಯ ವಿಭಿನ್ನ ಕಥಾಹಂದರ ದಶಕದ ಹಿಂದೆ ಬಂದು ಬಹಳ ಸಂಚಲನ ಮೂಡಿಸಿದ್ದರೂ ನಂತರ ಯಾವುದೇ ಧಾರಾವಾಹಿಯು ಈ ವಿಚಾರವನ್ನು ಆಧಾರವಾಗಿಟ್ಟುಕೊಂಡು ಯಾವ ಹೊಸ ಕಥೆಯನ್ನು ರೂಪಿಸಲಿಲ್ಲ. ಆದರೆ, ಇತ್ತೀಚೆಗೆ ಪ್ರಸಾರವಾಗುತ್ತಿರುವ 'ಸೀತಾರಾಮ' ಧಾರಾವಾಹಿ ಕೂಡ ಬಾಡಿಗೆ ತಾಯ್ತನದ ಕಷ್ಟಗಳನ್ನು ನವೀನ ರೀತಿಯಲ್ಲಿ ಜನರಿಗೆ ತೋರಿಸಿದೆ.
ಕಲಾವಿದರಾದ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ಮುಖ್ಯಮಂತ್ರಿ ಚಂದ್ರು, ಪವಿತ್ರ ಲೋಕೇಶ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿರುವ ಈ ಧಾರಾವಾಹಿಯಲ್ಲಿಯೂ ಬಾಡಿಗೆ ತಾಯಿಯಾದ ಸೀತಾ ತನ್ನ ಮಗುವಿನ ಮೇಲಿಟ್ಟಿರುವ ಪ್ರೀತಿಯನ್ನು ಬಹಳ ಅಚ್ಚುಕಟ್ಟಾಗಿ ತೋರಿಸಿದ್ದಾರೆ.
ಸದ್ಯ ಕೋರ್ಟ್ ಮೆಟ್ಟಿಲೇರಿ ಸಿಹಿಯನ್ನು ತಮ್ಮ ಮಗುವಾಗಿ ಪಡೆದ ಸೀತಾ ಹಾಗೂ ರಾಮ್ ಇನ್ನೇನು ಸಿಹಿಯೊಂದಿಗೆ ಮತ್ತೆ ತಮ್ಮ ಜೀವನವನ್ನು ಕಳೆಯಬೇಕೆನ್ನುವಷ್ಟರಲ್ಲಿ ಸಿಹಿ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿದ್ದಾಳೆ. ಸೀತಾಗೆ ಮಾತ್ರ ಸಿಹಿ ತನ್ನೊಂದಿಗಿಲ್ಲ ಎಂಬುದನ್ನ ಒಪ್ಪಿಕೊಳ್ಳಲು ಆಗದೆ ಮಾನಸಿಕವಾಗಿ ಅಸ್ವಸ್ಥಳಾಗಿದ್ದಾಳೆ. ಪ್ರಸ್ತುತ ಸೀತಾರಾಮ ಧಾರಾವಾಹಿಯಲ್ಲಿನ ಹೃದಯವಿದ್ರಾವಕ ದೃಶ್ಯಗಳು, ಭಾವನಾತ್ಮಕ ಕಥೆ ಜನಗಮನ ಸೆಳೆದು ಬಿಟ್ಟಿದೆ.


Click it and Unblock the Notifications











