ಅಪ್ಪು ಜರ್ನಿ ಸಂಭ್ರಮಿಸಿದ 'ಕರುನಾಡ ರತ್ನ'ಕ್ಕೆ ದಾಖಲೆ ಟಿಆರ್ಪಿ: ಮತ್ತೊಂದು ಕಾರ್ಯಕ್ರಮಕ್ಕೆ ಸಜ್ಜು
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ 46 ವರ್ಷಗಳ ಸಿನಿ ಜರ್ನಿಯನ್ನು ಜೀ ಕನ್ನಡದಲ್ಲಿ ಸಂಭ್ರಮಿಸಲಾಗಿತ್ತು. ಅಪ್ಪು ಬದುಕಿನ 46 ವರ್ಷದ ಒಂದೊಂದು ಕ್ಷಣವನ್ನು ಸೆರೆ ಹಿಡಿಯಲಾಗಿತ್ತು. ಈ ವಿಶಿಷ್ಟ ಕಾರ್ಯಕ್ರಮಕ್ಕೆ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಹಂಸಲೇಖ ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರಿಂದ ಪುನೀತ್ ಅಗಲಿವವರೆಗಿನ ಅವರ ಅಪರೂಪದ ಘಳಿಗೆಗಳನ್ನು ಸಂಭ್ರಮಿಸಲಾಗಿತ್ತು.
ರಾಜನಂತೆ ರಾಜವಂಶದಲ್ಲಿ ಹುಟ್ಟಿದ ರಾಜಕುಮಾರ ಪುನೀತ್ ರಾಜ್ಕುಮಾರ್. ಆದರೂ, ಸಾಮಾನ್ಯ ಜನರಿಗೆ ಮಿಡಿಯುತ್ತಿದ್ದ ಅಪ್ಪು ವಿಶೇಷ ಗುಣಗಳ ಗುಣಗಾನ ಮಾಡಲಾಗಿತ್ತು. ನಾಲ್ಕು ದಶಕಗಳ ಸಿನಿಯಾನದಲ್ಲೇ ಅಣ್ಣಾವ್ರಷ್ಟೇ ಹೆಸರು ಮಾಡಿದ್ದರು. ಕರ್ನಾಟಕ ರತ್ನ ಅಪ್ಪು ನಡೆದು ಬಂದ 46 ವರ್ಷಗಳ ಹಾದಿಯನ್ನು ಜೀ ಕನ್ನಡದಲ್ಲಿ ಸಂಭ್ರಮಿಸಲಾಗಿದ್ದು, ಈ ಕಾರ್ಯಕ್ರಮವನ್ನು ಅತೀ ಹೆಚ್ಚು ಜನರು ವೀಕ್ಷಿಸಿದ್ದಾರೆ.

ವೀಕ್ಷಣೆಯಲ್ಲಿ ದಾಖಲೆ ಬರೆದ 'ಕರುನಾಡ ರತ್ನ'
ಪುನೀತ್ ರಾಜ್ಕುಮಾರ್ ನಾಲ್ಕೂವರೆ ದಶಕದ ಜರ್ನಿಯನ್ನು ಮೂರು ಗಂಟೆಗಳ ಕಾರ್ಯಕ್ರಮದಲ್ಲಿ ಕಟ್ಟಿಕೊಡಲಾಗಿತ್ತು. ಡಿಸೆಂಬರ್ 19, ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ ಕರುನಾಡ ರತ್ನ ಕಾರ್ಯಕ್ರಮ ಪ್ರಸಾರವಾಗಿತ್ತು. ಈ ಕಾರ್ಯಕ್ರಮದ ರೇಂಟಿಂಗ್ ರಿವೀಲ್ ಆಗಿದ್ದು, ದಾಖಲೆಯ ಬರೆದಿದೆ. ಕಳೆದ ಎರಡು ವರ್ಷಗಳಲ್ಲಿ ಇಂತಹ ಇವೆಂಟ್ಗೆ ಈ ಮಟ್ಟಿಗೆ ವೀಕ್ಷಕರು ಪ್ರತಿಕ್ರಿಯೆ ನೀಡಿರಲಿಲ್ಲ. ಕಳೆದ ಎರಡು ವರ್ಷಗಳಲ್ಲೇ ಅತೀ ಹೆಚ್ಚು ಟಿಆರ್ಪಿ ಪಡೆದ ಕಾರ್ಯಕ್ರಮವಾಗಿದ್ದು, 12.3 ಟಿವಿಆರ್ ಪಡೆದುಕೊಂಡಿದೆ.

ಅಪ್ಪು ಹುಟ್ಟುಹಬ್ಬಕ್ಕೆ ಅದ್ಧೂರಿ ಕಾರ್ಯಕ್ರಮ
ಪುನೀತ್ ರಾಜ್ಕುಮಾರ್ ಜರ್ನಿಯನ್ನು ಮೆಲುಕು ಹಾಕಿದ್ದ ಕಾರ್ಯಕ್ರಮ 'ಕರುನಾಡ ರತ್ನ' ಜನರಿಗೆ ಇಷ್ಟ ಆಗಿದೆ. ಜೀ಼ ಕನ್ನಡ ವಾಹಿನಿ ಹಾಗೂ GKGS ಟ್ರಸ್ಟ್ ಜೊತೆ ಕೈ ಜೋಡಿಸಿ ವರುಣ್ ಸ್ಟುಡಿಯೋಸ್ ಈ ಕಾರ್ಯಕ್ರಮವನ್ನು ನಿರ್ಮಿಸಿತ್ತು. ಕನ್ನಡದ ಜನತೆಯಿಂದ ಸಿಕ್ಕಿರುವ ಪ್ರತಿಕ್ರಿಯೆಯಿಂದ ಪುನೀತ್ ಹುಟ್ಟುಹಬ್ಬಕ್ಕೆ ಮತ್ತೊಂದು ಕಾರ್ಯಕ್ರಮ ರೂಪಿಸಲು ಸಿದ್ಧತೆಗಳು ನಡೆಯುತ್ತಿವೆ. 'ಕರುನಾಡ ರತ್ನ' ಕಾರ್ಯಕ್ರಮಕ್ಕಿಂತಲೂ ದೊಡ್ಡ ಮಟ್ಟದ ಕಾರ್ಯಕ್ರಮಕ್ಕೆ ವರುಣ್ ಸ್ಟುಡಿಯೋ ಸಜ್ಜಾಗುತ್ತಿದೆ.

ಅಪ್ಪು ಹಾಡು ಹಾಡಿದ್ದ ಶಿವಣ್ಣ
'ಕರುನಾಡ ರತ್ನ' ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ 46 ವರ್ಷಗಳ ಜರ್ನಿಯನ್ನು ಅವರ ಅಪರೂಪದ ಫೋಟೊಗಳ ಮೂಲಕ ಅನಾವರಣ ಮಾಡಲಾಗಿತ್ತು. ವೇದಿಕೆ ಮೇಲೆ ಗಣ್ಯರು ಅಪ್ಪು ಸಾಧನೆಯ ಗುಣಗಾನ ಮಾಡಲಾಗಿತ್ತು. ಪುನೀತ್ ಬಾಲನಟನಾಗಿ ನಟಿಸಿ, ಹಾಡಿದ್ದ 'ಬಾನ ದಾರಿಯಲ್ಲಿ..' ಹಾಡನ್ನು ಶಿವಣ್ಣ ಹಾಡಿದ್ದರು. ಇದರೊಂದಿಗೆ ಪುನೀತ್ ರಾಜ್ಕುಮಾರ್ ಹೃದಯ ತುಂಬಿ ಹಾಡುತ್ತಿದ್ದ ಹಿಂದಿಯ ಬಾಬಿ ಸಿನಿಮಾದ 'ಮೇ ಶಾಯರ್ ತೋ ನಹಿ' ಹಾಡಿಗೆ ಧ್ವನಿಯಾಗಿದ್ದರು.

ಹಂಸಲೇಖ, ಕ್ರೇಜಿಸ್ಟಾರ್ ಹಾಡು
ಪುನೀತ್ ಅಗಲಿಕೆಯ ನೋವಿನ ಬಗ್ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹಲವು ಬಾರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಪ್ಪು ಜೊತೆ ಕಳೆದ ನೆನಪಿನಲ್ಲೇ ರವಿಚಂದ್ರನ್ ಸಾಹಿತ್ಯ ರಚಿಸಿದ್ದರು. ಈ ಹಾಡನ್ನು ಅಪ್ಪು ಫೋಟೊ ಮುಂದೆ ಮಂಡಿಯೂರಿ ಹಾಡಿದ್ದರು. ಇನ್ನು ನಾದಬ್ರಹ್ಮ ಹಂಸಲೇಖ ಕೂಡ ಹಾಡೊಂದಕ್ಕೆ ಟ್ಯೂನ್ ಹಾಕಿ, ಸಾಹಿತ್ಯ ರಚಿಸಿದ್ದರು. ಆ ಟ್ಯೂನ್ಗೆ ಕಂಬದ ರಂಗಯ್ಯ ಧ್ವನಿಯಾಗಿದ್ದರು.


Click it and Unblock the Notifications











