ಜೀ ಕನ್ನಡದಲ್ಲಿ ಅಪ್ಪು 46 ವರ್ಷದ ಅಮೋಘ ಸಿನಿ ಜರ್ನಿ: 3 ಗಂಟೆ ಕಾರ್ಯಕ್ರಮದ ವಿಶೇಷತೆಯೇನು?
ಪುನೀತ್ ರಾಜ್ಕುಮಾರ್ 46 ವರ್ಷಗಳ ಸಿನಿ ಜರ್ನಿ ನಿಜಕ್ಕೂ ಅವರಷ್ಟೇ ಪವರ್ಫುಲ್. ಪುನೀತ್ ಬದುಕಿನ 46 ವರ್ಷವೂ ರೋಚಕ ಬದುಕು. ಬಾಲ ನಟನಾಗಿ ನಟನೆಗಿಳಿದು ರಾಷ್ಟ್ರ ಪ್ರಶಸ್ತಿ ಪಡೆದಿದ್ದ ನಟ. ನಾಲ್ಕು ದಶಕಗಳ ಸಿನಿಮಾ ಯಾನದಲ್ಲೇ ಅಪ್ಪನಷ್ಟೇ ಹೆಸರು ಮಾಡಿದ ಪ್ರತಿಭೆ. ಸದಾ ಒಳ್ಳೆ ಕೆಲಸಗಳಿಗೆ ಕೈ ಚಾಚುತ್ತಿದ್ದ ಪವರ್ಸ್ಟಾರ್ ನಿಜಕ್ಕೂ ಕನ್ನಡ ಚಿತ್ರರಂಗದ ರತ್ನ. ಕನ್ನಡಿಗರ ಹೃದಯಗಳಿಗೆ ಕರ್ನಾಟಕ ರತ್ನ. ಅಪ್ಪು ನಡೆದ 46 ವರ್ಷಗಳ ಅಮೋಘ ಜರ್ನಿಯನ್ನು ಜೀ ಕನ್ನಡದಲ್ಲಿ ಸೆಲೆಬ್ರೆಟ್ ಮಾಡಲಾಗುತ್ತಿದೆ.
46 ವರ್ಷ ಸಿನಿಮಾರಂಗದಲ್ಲಿಯೇ ಕಳೆದ ಅಪ್ಪು ಸಾಧನೆ, ಕನ್ನಡ ಚಿತ್ರೋದ್ಯಮಕ್ಕೆ ಅವರು ನೀಡಿರುವ ಕೊಡುಗೆಯ ಬಗ್ಗೆ ಜೀ ಕನ್ನಡದಲ್ಲಿ ವಿಶೇಷವಾದ ಕಾರ್ಯಕ್ರಮ ಪ್ರಸಾರ ಆಗಲಿದೆ. ನಾಳೆ (ಡಿಸೆಂಬರ್ 19) ಜೀ ಕನ್ನಡದಲ್ಲಿ ಸುಮಾರು 3 ಗಂಟೆಗಳ ಕಾಲ 'ಕರುನಾಡ ರತ್ನ' ಕಾರ್ಯಕ್ರಮ ಪ್ರಸಾರವಾಗಲಿದ್ದು, ಈಗಾಗಲೇ ಪ್ರೋಮೊಗಳ ಮೂಲಕ ಕಾರ್ಯಕ್ರಮದ ಝಲಕ್ ಅನ್ನು ಜೀ ಕನ್ನಡ ಕರುನಾಡಿನ ಜನತೆಗೆ ತೋರಿಸಿದೆ. ಹಾಗಿದ್ದರೆ. ಈ ಮೂರು ಗಂಟೆಗಳ ಕಾರ್ಯಕ್ರಮದ ವಿಶೇಷತೆಯೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

'ಕರುನಾಡ ರತ್ನ' ಕಾರ್ಯಕ್ರಮದಲ್ಲಿ ಶಿವಣ್ಣ-ರಾಘಣ್ಣ
ಅಪ್ಪನಷ್ಟೇ ಸಾಧನೆ ಮಾಡಿ, ಎತ್ತರಕ್ಕೆ ಬೆಳೆದು ಕಣ್ಮರೆಯಾದ ಕನ್ನಡಿಗರ ಪಾಲಿನ ಕರ್ನಾಟಕ ರತ್ನ ಪುನೀತ್. ಇವರ 46 ವರ್ಷಗಳ ಅಮೋಘ ಸಿನಿ ಜರ್ನಿವನ್ನು ಜೀ ಕನ್ನಡ ವಾಹಿನಿ ಗೌರವದಿಂದ ಸಂಭ್ರಮಿಸಿದೆ. ಅಪ್ಪು ಜರ್ನಿಯಲ್ಲಿ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹಾಗೂ ಅವರ ಕುಟುಂಬದ ಉಪಸ್ಥಿತಿ ಇತ್ತು. 'ಕರುನಾಡ ರತ್ನ' ಕಾರ್ಯಕ್ರಮದಲ್ಲಿ ಡಾ. ರಾಜ್ಕುಮಾರ್ ಕುಟುಂಬವಷ್ಟೇ ಅಲ್ಲದೇ ಚಿತ್ರರಂಗದ ಗಣ್ಯರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದಾರೆ.

ಶಿವಣ್ಣ, ಕ್ರೇಜಿಸ್ಟಾರ್, ಹಂಸಲೇಖರಿಂದ ಅಪ್ಪು ಹಾಡು
ಈ ಕಾರ್ಯಕ್ರಮದಲ್ಲಿ ಅಪ್ಪು ಅಪರೂಪದ ಫೋಟೊಗಳ ಅನಾವರಣ ಆಗಲಿದೆ. ಅಲ್ಲದೆ ವೇದಿಕೆ ಮೇಲೆ ಶಿವರಾಜ್ಕುಮಾರ್ ಬಾಲನಟನಾಗಿ ಅಪ್ಪು ನಟಿಸಿ, ಹಾಡಿದ್ದ 'ಬಾನ ದಾರಿಯಲ್ಲಿ..' ಹಾಡನ್ನು ಹಾಡಿದ್ದಾರೆ. ಜೊತೆಗೆ ಪುನೀತ್ ರಾಜ್ಕುಮಾರ್ ಇಷ್ಟ ಪಟ್ಟು ಹಾಡುತ್ತಿದ್ದ ಬಾಲಿವುಡ್ನ ಬಾಬಿ ಸಿನಿಮಾದ 'ಮೇ ಶಾಯರ್ ತೋ ನಹಿ' ಹಾಡನ್ನು ಕೇಳಬಹುದಾಗಿದೆ. ಅಪ್ಪುಗಾಗಿ ಸ್ವತಃ ಕ್ರೇಜಿಸ್ಟಾರ್ ರವಿಚಂದ್ರನ್ ಸಾಹಿತ್ಯ ರಚಿಸಿದ್ದು, ಅಪ್ಪು ಮುಂದೆ ಮಂಡಿಯೂರಿ ಹಾಡಿದ್ದಾರೆ. ನಾದಬ್ರಹ್ಮ ಹಂಸಲೇಖ ಕೂಡ ಒಂದು ಟ್ಯೂನ್ ಹಾಕಿ, ಸಾಹಿತ್ಯ ರಚಿಸಿದ್ದು, ಕಂಬದ ರಂಗಯ್ಯ ಧ್ವನಿಯಾಗಿದ್ದಾರೆ.

ಗಮನ ಸೆಳೆಯುತ್ತಿದೆ ವೈದ್ಯ ಭುಜಂಗಯ್ಯ ಶೆಟ್ಟಿಯ ಮಾತು
ಅಪ್ಪು ನಿಧನದ ಬಳಿಕ ಅವರ ಕಣ್ಣುಗಳನ್ನು ಡಾ. ಭುಜಂಗಯ್ಯ ಶೆಟ್ಟಿ ನಾಲ್ಕು ಮಂದಿಗೆ ಜೋಡಿಸಿದ್ದಾರೆ. ಅಪ್ಪು ಕಣ್ಣುಗಳನ್ನು ದಾನ ಮಾಡಿದ ಬಳಿಕ 320 ಕಣ್ಣುಗಳನ್ನು ದಾನ ಮಾಡಲಾಗಿದೆ ಎಂದು ವೈದ್ಯ ಭುಜಂಗಯ್ಯ ಶೆಟ್ಟಿ ಅವರು ಜೀ ಕನ್ನಡ ಬಿಟ್ಟಿರುವ ಪ್ರೋಮೊದಲ್ಲಿ ತಿಳಿಸಿದ್ದಾರೆ. ಇನ್ನೊಂದು ಕಡೆ ಪುಟಾಣಿ ಮಕ್ಕಳು ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನೆನೆದು ಭಾವುಕರಾಗಿದ್ದಾರೆ.

ಅಪ್ಪು ಅಭಿಮಾನಿ ವರುಣ್ ಅವರಿಂದ ಕಾರ್ಯಕ್ರಮ
ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಜರ್ನಿಯನ್ನು ಅದ್ದೂರಿಯಾಗಿ ಜೀ ಕನ್ನಡದಲ್ಲಿ ಮೂಡಿ ಬರಲು ಕಾರಣ ಪುನೀತ್ ಅಭಿಮಾನಿ ವರುಣ್. 2009ರಿಂದ ಪುನೀತ್ ರಾಜ್ಕುಮಾರ್ ಅವರೊಂದಿಗೆ ಒಡನಾಟದಲ್ಲಿ ವರುಣ್, ತಮ್ಮ ನೆಚ್ಚಿನ ನಟನಿಗೆ ಗೌರವ ಸೂಚಿಸಲು ಮುಂದಾಗಿದ್ದಾರೆ. ಅಪ್ಪು ನೆನಪುಗಳನ್ನು ಶ್ರೀಮಂತಗೊಳಿಸಲು ಜೀ಼ ಕನ್ನಡ ವಾಹಿನಿ ಹಾಗೂ GKGS ಟ್ರಸ್ಟ್ ಜೊತೆ ಕೈ ಜೋಡಿಸಿ 'ಕರುನಾಡ ರತ್ನ' ಕಾರ್ಯಕ್ರಮವನ್ನು ನಿರ್ಮಾಣ ಮಾಡಿದ್ದಾರೆ. ಇದೇ ಡಿಸೆಂಬರ್ 19, ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.


Click it and Unblock the Notifications











